Fraud Case: 3.56 ಲಕ್ಷಕ್ಕೆ ಸರ್ಕಾರಿ ಪ್ಲಾಟ್‌ ಪಡೆದು 20 ಲಕ್ಷಕ್ಕೆ ಮಾರಾಟ?

By Kannadaprabha NewsFirst Published Sep 3, 2022, 8:56 AM IST
Highlights

ಯಾದಗಿರಿ ನಗರಸಭೆಯಿಂದ ನಿವೇಶನ ಪಡೆದ ಪತ್ರಕರ್ತರಿಂದಲೇ ಸರ್ಕಾರಕ್ಕೆ ವಂಚನೆ, ಪತ್ರಕರ್ತರಲ್ಲದವರಿಗೂ ನಿವೇಶನ?

ಯಾದಗಿರಿ(ಸೆ.03):  ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ, ಅಂಕುಡೊಂಕುಗಳನ್ನು ತಿದ್ದಿ ತೀಡಬೇಕಾದ ಪತ್ರಕರ್ತರೇ ಇಲ್ಲಿ ಸರ್ಕಾರಕ್ಕೆ ವಂಚಿಸಿದ ಆರೋಪ ಕೇಳಿಬರುತ್ತಿದೆ. ಶಹಾಪುರ ನಗರಸಭೆ ವತಿಯಿಂದ ವಸತಿರಹಿತ ಪತ್ರಕರ್ತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಡಿಮೆ ದರದಲ್ಲಿ ನಗರಸಭೆ ನಿವೇಶನ ನೀಡಿದರೆ, ಅವಿನ್ನೂ ಕಾನೂನಾತ್ಮಕವಾಗಿ ದಾಖಲೆಯಾಗುವ ಮುನ್ನವೇ ಹೆಚ್ಚಿನ ದರಕ್ಕೆ ಅವುಗಳನ್ನು ಮಾರಾಟ ಮಾಡಿದ್ದಾರೆನ್ನಲಾಗುತ್ತಿದೆ. ಅಲ್ಲದೆ, ಪತ್ರಕರ್ತರಲ್ಲದವರಿಗೂ ಸಹ ನಿವೇಶನ ನೀಡಲಾಗಿದೆ ಎಂಬ ಆರೋಪಗಳು ಇದೀಗ ಕಾರ‍್ಯನಿರತ ಪತ್ರಕರ್ತರ ವಲಯದಲ್ಲೇ ಕೇಳಿಬರುತ್ತಿವೆ.

ಶಹಾಪುರ ತಾಲೂಕಿನಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಐ.ಡಿ.ಎಸ್‌.ಎಂ.ಟಿ. ಬಡಾವಣೆಯಲ್ಲಿ ಇರುವ 30/40ರ ಅಳತೆಯ ನಿವೇಶನವನ್ನು ಉಪನೋಂದಣಾಧಿಕಾರಿಗಳು 2022-23ನೇ ಸಾಲಿನ ಮಾರುಕಟ್ಟೆಬೆಲೆ 3,56,400 ರು.ಗಳ ನಗರಸಭೆಗೆ ಸಂದಾಯ ಮಾಡಿಕೊಂಡು, ನೋಂದಣಿ ಮಾಡಿಕೊಳ್ಳಲು ನಗರಸಭೆ ಶಹಾಪುರದಿಂದ ಸೂಚಿಸಲಾಗಿತ್ತು. 14 ಜನರ ಪತ್ರಕರ್ತರಿಗೆ ಅನುಕೂಲ ಮಾಡಿಕೊಡಲಾಗಿತ್ತು.

ಯಾದಗಿರಿ ಮಂದಿಗೆ ಕುಡಿಯಲು ಚರಂಡಿ ನೀರೇ ಗತಿ..!

ಆದರೆ, ನೋಂದಣಿ ಮಾಡಿಕೊಂಡ ಕೆಲವೇ ದಿನಗಳಲ್ಲಿ ಪತ್ರಕರ್ತರ ವಲಯದಲ್ಲಿ ಅಸಮಾಧಾನ ಭುಗಿಲೆದ್ದು, ಪತ್ರಕರ್ತರಲ್ಲದ ಕೆಲವರಿಗೆ ನಗರಸಭೆ ನಿವೇಶನ ನೀಡಲಾಗಿದೆ ಎಂಬ ಆರೋಪಗಳು ಕಾರ್ಯನಿರತ ವಲಯದಲ್ಲಿ ಕೇಳಿಬಂದವು. ಮುಂದಿನ ದಿನಗಳಲ್ಲಿ ಮತ್ತಷ್ಟೂನಗರಸಭೆಯ ಪ್ಲಾಟುಗಳ ಪಡೆಯಲೆಂದೆ ಕೆಲವರು ಪತ್ರಕರ್ತರ ಸೋಗು ಹಾಕಿದ್ದಾರೆಂಬ ದೂರುಗಳು ಪ್ರತಿಧ್ವನಿಸಿದ್ದವು.

ಅಚ್ಚರಿಯೆಂದರೆ, ನಗರಸಭೆಯ ಈ ನಿವೇಶನಗಳ ಪಡೆಯುವ ಮುನ್ನವೇ ಕೆಲವರು ಮಾರಾಟದ ಒಪ್ಪಂದ ಮಾಡಿಕೊಂಡು, ಅವರಿಂದಲೇ ಹಣ ಪಡೆದು ನಗರಸಭೆಗೆ ಪಾವತಿಸಿ, ನಿವೇಶನ ಪಡೆದ ನಂತರ, ಇದೀಗ ಎಲ್ಲ ದಾಖಲೀಕರಣ ಆಗುವುದಕ್ಕಾಗಿ ಮುಂಗಡ ಪಡೆದಿದ್ದಾರೆನ್ನಲಾಗಿದೆ.

ಸಣ್ಣ ಮತ್ತು ಮಧ್ಯಮ ವರ್ಗದ ಅಭಿವೃದ್ಧಿ (ಐ.ಡಿ.ಎಸ್‌.ಎಂ.ಟಿ.) ಲೇಔಟ್‌ನಲ್ಲಿ ಉಳಿದಿರುವ ಕೆಲವು ಖಾಲಿ ನಿವೇಶನಗಳನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ಪತ್ರಕರ್ತರಿಗೆ ಹಂಚಿಕೆ ಮಾಡಲಾಗಿತ್ತು. ಶಹಾಪುರ ನಗರಸಭೆಯಿಂದ ಇದೇ ಮಾಚ್‌ರ್‍ 22ರಂದು ಪತ್ರಕರ್ತರಿಗೆ ಮಾಹಿತಿ ಪತ್ರ ನೀಡಿ ಒಂದು ವಾರದಲ್ಲಿ ಹಣ ಪಾವತಿಸಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು.

ಸುರಪುರ: ವರಾಹಕ್ಕೆ ಹಾಲುಣಿಸಿದ ಗೋಮಾತೆ..!

ನಗರಸಭೆಯಲ್ಲಿ ಈ ಆಸ್ತಿ ಇನ್ನೂ ಮ್ಯುಟೇಶನ್‌ ಪ್ರಗತಿಯಲ್ಲಿರುವಾಗಲೇ, 3.56 ಲಕ್ಷ ರು.ಗಳಿಗೆ ನಗರಸಭೆ ವತಿಯಿಂದ ಪತ್ರಕರ್ತರ ಕೋಟಾದಲ್ಲಿ ಪಡೆದ ನಿವೇಶನವನ್ನು ಕೆಲವರು ಸುಮಾರು 18-20 ಲಕ್ಷ ರು.ಗಳವರೆಗೆ ಮಾರಾಟದ ಒಪ್ಪಂದ ಮಾಡಿಕೊಂಡಿದ್ದಾರೆ. ಹಂಚಿಕೆಯಲ್ಲೂ ಗೋಲ್ಮಾಲ್‌ ಆಗಿದೆ ಎಂಬ ಮಾತುಗಳಿವೆ. ನಿವೇಶನ ಮಂಜೂರಾತಿಗಾಗಿ ಪತ್ರಕರ್ತರೇ ಲಂಚ ಕೊಟ್ಟು ಕೆಲಸ ಮಾಡಿಕೊಂಡರೇ ಎಂಬ ಅನುಮಾನಗಳು ಮೂಡಿಬಂದಿದ್ದವು.

ನಗರಸಭೆ ವತಿಯಿಂದ ಪತ್ರಕರ್ತರ ಕೋಟಾದಲ್ಲಿ ಪಡೆಯಲಾದ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. 3.56 ಲಕ್ಷ ರು.ಗಳಿಗೆ ಪಡೆದ ನಿವೇಶನವನ್ನು ಖರೀದಿಸಿದ ತಿಂಗಳೊಪ್ಪತ್ತಿನಲ್ಲೇ 18-20 ಲಕ್ಷ ರು.ಗಳಿಗೆ ಮರು ಮಾರಾಟದ ಒಪ್ಪಂದವಾಗಿದೆ. ನಗರಸಭೆರ ಪತ್ರಕರ್ತರಿಗೆ ವಸತಿಗೆ ಅನುಕೂಲ ಆಗಲಿ ಎಂದು ನಿವೇಶನ ಕೊಟ್ಟರೆ, ಅದನ್ನು ಮಾರಾಟ ಮಾಡಿದರೆ ಎಷ್ಟುಸರಿ ? ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ ಅಂತ ಶಹಾಪುರದ ಮಾಜಿ ಸೈನಿಕ ಮಲ್ಲಣ್ಣ ಶಿರಡ್ಡಿ ತಿಳಿಸಿದ್ದಾರೆ.  
 

click me!