ಚೆಕ್‌ ಬೌನ್ಸ್ ಪ್ರಕರಣ: ಮಾಲೂರು ಶಾಸಕ ನಂಜೇಗೌಡಗೆ ₹ 49.65 ಲಕ್ಷ ದಂಡ

By Sathish Kumar KHFirst Published Dec 17, 2022, 4:00 PM IST
Highlights

ಚೆಕ್ ಬೌನ್ಸ್ ಪ್ರಕರಣದಲ್ಲಿ ಶಾಸಕ ಕೆ.ವೈ.ನಂಜೇಗೌಡ ತಪ್ಪಿತಸ್ಥ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.  ಜೊತೆಗೆ, ಶಾಸಕರಿಗೆ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ 49.65 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

ಬೆಂಗಳೂರು (ಡಿ.17):  ಚೆಕ್ ಬೌನ್ಸ್ ಪ್ರಕರಣದಲ್ಲಿ ಶಾಸಕ ಕೆ.ವೈ.ನಂಜೇಗೌಡ ತಪ್ಪಿತಸ್ಥ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.  ಜೊತೆಗೆ, ಶಾಸಕರಿಗೆ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ 49.65 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಅವರು ಚೆಕ್‌ ಪ್ರಕರಣದ ತಪ್ಪಿತಸ್ಥ ಆಗಿದ್ದಾರೆ. ಇವರು ರಾಮಚಂದ್ರ.ಜಿ ಎಂಬುವರಿಂದ 40 ಲಕ್ಷ ರೂಪಾಯಿ ಸಾಲವನ್ನು ಪಡೆದಿದ್ದು, ಬಹುದಿನಗಳಾದರೂ ಸಾಲ ಮರುಪಾವತಿ ಮಾಡಿರಲಿಲ್ಲ. ಆದರೆ, ಸಾಲ ಮರುಪಾವತಿಗಾಗಿ ನಂಜೇಗೌಡ ಅವರು ೪೦ ಲಕ್ಷ ರೂ. ಮೊತ್ತವನ್ನು ಒಳಗೊಂಡ ಚೆಕ್‌ ಅನ್ನು ನೀಡಿದ್ದರು. ಆದರೆ, ಚೆಕ್‌ ಅನ್ನು ಡ್ರಾ ಮಾಡಲು ಸಾಲ ನೀಡಿದ್ದ ರಾಮಚಂದ್ರ ಅವರು ಬ್ಯಾಂಕ್‌ಗೆ ಹಾಕಿದ್ದಾರೆ. ಈ ವೇಳೆ ಖಾತೆಯಲ್ಲಿ ಹಣ ಇಲ್ಲದೆ ಚೆಕ್‌ ಬೌನ್ಸ್‌ ಆಗಿದೆ ಎಂದು ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಚೆಕ್‌ ಬೌನ್ಸ್ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42 ನೇ ಎಸಿಎಂಎಂ ಕೋರ್ಟ್) ನ್ಯಾಯಾಧೀಶರಾದ ಜಿ.ಪ್ರೀತ್ ಅವರು ಚೆಕ್‌ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ತಪ್ಪಿತಸ್ಥ ಎಂದು ಆದೇಶ ಹೊರಡಿಸಿದ್ದಾರೆ. ಇನ್ನು ಚೆಕ್ ಬೌನ್ಸ್ ಕೇಸ್ ನಲ್ಲಿ ಕೋರ್ಟ್ ನಿಂದ 49.65 ಲಕ್ಷ ರೂ. ದಂಡ ವಿಧಿಸಲಾಗಿದೆ. 6 ತಿಂಗಳ ಒಳಗಾಗಿ ನ್ಯಾಯಾಲಯ ವಿಧಿಸಿದ ದಂಡವನ್ನು ಪಾವತಿಸದಿದ್ದರೆ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಸರ್ಕಾರಿ ಭೂಮಿ ವಂಚನೆ; ಮಾಲೂರು ಕ್ಷೇತ್ರದ ಶಾಸಕ ಕೆ.ವೈ ನಂಜೇಗೌಡ ವಿರುದ್ಧ ಎಫ್‌ಐಆರ್‌ 

ಸರ್ಕಾರಿ ಭೂಮಿ ಅಕ್ರಮ ಹಂಚಿಕೆ ಪ್ರಕರಣ: ಕಳೆದ ತಿಂಗಳು 150 ಕೋಟಿ ಬೆಲೆ ಬಾಳುವ ಭೂಮಿಯನ್ನು ಅಕ್ರಮವಾಗಿ ಹಂಚಿರುವ ಆರೋಪದಡಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಲ್ಲಿ ಶಾಸಕ ಕೆ.ವೈ ನಂಜೇಗೌಡ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು,ಶಾಸಕರಿಗೆ ಸಂಕಷ್ಟ ಎದುರಾಗಿದೆ. 2019 ಇಸವಿಯ ಜುಲೈ ತಿಂಗಳಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಅಂತ ಆರೋಪಿಸಿ ಸಾಮಾಜಿಕ ಕಾರ್ಯಕರ್ತ ರಾಜಣ್ಣ ಎಂಬುವವರು ದೂರು ನೀಡಿದ್ದರು. 

Kolar: ಅನುದಾನ ವಿಚಾರ: ಕೈ ಕೈ ಮಿಲಾಯಿಸುವ ಹಂತ ತಲುಪಿದ ಮುನಿಸ್ವಾಮಿ, ನಂಜೇಗೌಡ

ತಹಶೀಲ್ದಾರ್‌ ಮೇಲೂ ದೂರು: ಬೆಂಗಳೂರಿನ 47ನೇ ಹೆಚ್ಚುವರಿ ಸಿಎಂಎಂ ಕೋರ್ಟ್ ಆದೇಶದಂತೆ ಇದೀಗ ಮಾಲೂರು ಶಾಸಕರ ವಿರುದ್ಧ FIR ದಾಖಲಾಗಿದೆ. ಇನ್ನು ಶಾಸಕರು ಮಂಜೂರು ಮಾಡಿರುವ ಗೋಮಾಳ ಜಮೀನಿನ ಬೆಲೆ ಬರೋಬ್ಬರಿ 150 ಕೋಟಿ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದ್ದು, ಮಂಜೂರು ಮಾಡುವ ವೇಳೆ ಶಾಸಕರು 4 ಬಾರಿ ಸಭೆ ಮಾಡಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ. ಇನ್ನು ಶಾಸಕರ ಜೊತೆ ತಹಶೀಲ್ದಾರ್, ಕಾರ್ಯದರ್ಶಿ, ಶಿರಸ್ತೆದಾರ, ರಾಜಸ್ವ ನಿರೀಕ್ಷಕ,ಗ್ರಾಮ ಲೆಕ್ಕಾಧಿಕಾರಿ ಸೇರಿ ಹಲವರ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಅದಕ್ಕೂ ಮುನ್ನ ಚೆಕ್‌ ಬೌನ್ಸ್ ಪ್ರಕರಣದಲ್ಲಿ ಶಾಸಕರಿಗೆ ದಂಡ ವಿಧಿಸಲಾಗಿದೆ. 

click me!