
ಭೋಪಾಲ್ (ಜ.18): ತಾಯಿಯೊಬ್ಬಳು ಒಂಭತ್ತು ತಿಂಗಳು ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು, ತನ್ನ ಜೀವವನ್ನೇ ಪಣಕ್ಕಿಟ್ಟು ಮಗುವಿಗೆ ಜನ್ಮ ನೀಡುತ್ತಾಳೆ. ಹುಟ್ಟಿದ ಮಗನೋ, ಮಗಳೋ ದೊಡ್ಡವರಾದ ಮೇಲೆ ತನ್ನ ವೃದ್ಧಾಪ್ಯದ ಸಮಯದಲ್ಲಿಆಸರೆಯಾಗುತ್ತಾರೆ ಎನ್ನುವ ಕನಸನ್ನೂ ಅವರು ಕಂಡಿರುತ್ತಾರೆ. ಆದರೆ, ಈಗಿನ ಜಗತ್ತು ಕ್ರೂರ. ತಾಯಿ, ಮಗ, ಸಂಬಂಧಿಗಳು ಅನ್ನೋ ಬಾಂಧ್ಯವಕ್ಕೆ ಬೆಲೆಯೇ ಇಲ್ಲ ಅನ್ನೋದಕ್ಕೆ ಮಧ್ಯಪ್ರದೇಶದ ಟಿಕಮ್ಗಢದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಅಪ್ರಾಪ್ತ ಬಾಲಕನೋರ್ವ ತನ್ನ ತಾಯಿ ತನ್ನನ್ನು ಪ್ರೀತಿ ಮಾಡ್ತಿಲ್ಲ ಅನ್ನೋ ಕಾರಣಕ್ಕೆ ಆಕೆಯ ಎದೆಗೆ ಗುಂಡಿಟ್ಟು ಕೊಲ್ಲುವ ಅಮಾನುಷ ಘಟನೆ ನಡೆದಿದೆ. ಅಚ್ಚರಿ ಎನಿಸುವಂಥ ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 16 ವರ್ಷದ ಬಾಲಕ, ತನ್ನ ತಾಯಿ ನನ್ನನ್ನು ಪ್ರೀತಿ ಮಾಡುತ್ತಿಲ್ಲ. ಯಾವಾಗ ನೋಡಿದ್ರೂ ಬೈತಿರ್ತಾಳೆ ಅನ್ನೋ ಸಿಟ್ಟಿಗೆ ಆಕೆಯ ಎದೆಗೆ ಗುಂಡಿಟ್ಟು ಕೊಂದಿದ್ದಾನೆ.ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ನಂತರ ಇಡೀ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ತಂದೆಯ ಬಂದೂಕಿನಿಂದ ತಾಯಿಯನ್ನು ಕೊಂದ: 11ನೇ ತರಗತಿಯ ಅಪ್ರಾಪ್ತ ಬಾಲಕತನ್ನ ತಂದೆಯ ಲೈಸನ್ಸ್ ಗನ್ನಿಂದ ತನ್ನ ತಾಯಿಯನ್ನು ಗುಂಡು ಹಾರಿಸಿ ಕೊಂದ ಘಟನೆ ಮಂಗಳವಾರ ಮಧ್ಯಾಹ್ನ ಟಿಕಮ್ಗಢ್ ಜಿಲ್ಲೆಯ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಭಗತ್ ನಗರ ಕಾಲೋನಿಯಲ್ಲಿ ನಡೆದಿದೆ. ಘಟನೆ ವರದಿಯಾದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಲೆಯ ನಂತರ ಪೊಲೀಸರಿಗೆ ಕರೆ ಮಾಡಿದ್ದ ಬಾಲಕ: ಆರೋಪಿ ಮಗ ಇನ್ನೂ ಅಪ್ರಾಪ್ತನಾಗಿದ್ದಾನೆ ಎಂದು ಟಿಕಮ್ಗಢ್ನ ಹೆಚ್ಚುವರಿ ಎಸ್ಪಿ ಸೀತಾರಾಮ್ ಸತ್ಯ ಹೇಳಿದ್ದಾರೆ. ಸದ್ಯ ಈ ಇಡೀ ಪ್ರಕರಣದಲ್ಲಿ ಆರೋಪಿಗಳ ಜತೆಗೆ ಮೃತಳ ಪತಿಯನ್ನೂ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಆರೋಪಿ ಮಗ ತನ್ನ ತಾಯಿ ತನ್ನನ್ನು ಪ್ರೀತಿಸುತ್ತಿರಲಿಲ್ಲ ಎಂದು ಹೇಳಿದ್ದಾನೆ. ನಿತ್ಯವೂ ಜಗಳವಾಡುತ್ತಿದ್ದ ಕಾರಣದಿಂದ ಕೋಪಗೊಂಡು ತಾಯಿಯನ್ನು ಕೊಂದು ಹಾಕಿದ್ದೇನೆ ಎಂದಿದ್ದಾರೆ. ಗುಂಡು ತಗುಲಿ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತು ಕೊಲೆಯ ನಂತರ ಆರೋಪಿ ಮಗನೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ನೇಣು ಬಿಗಿದ ಸ್ಥಿತಿಯಲ್ಲಿ ಐಐಎಂ ವಿದ್ಯಾರ್ಥಿ ಶವ ಪತ್ತೆ: ಕೊಲೆ ಎಂದು ಶಂಕಿಸಿದ ಪೋಷಕರು..!
ತಾಯಿಯನ್ನು ಕೊಂದ ಪಶ್ಚಾತ್ತಾಪವೇ ಇರಲಿಲ್ಲ: ಮಂಗಳವಾರ ಮಧ್ಯಾಹ್ನ 12:30ಕ್ಕೆ 16 ವರ್ಷದ ಬಾಲಕ ತನ್ನ ತಂದೆಯ ಲೈಸೆನ್ಸ್ ಗನ್ನಿಂದ ತಾಯಿಗೆ (42 ವರ್ಷ) ಗುಂಡು ಹಾರಿಸಿದ್ದಾನೆ ಎಂದು ಹೆಚ್ಚುವರಿ ಎಸ್ಪಿ ಸೀತಾರಾಮ್ ತಿಳಿಸಿದ್ದಾರೆ. ಪೊಲೀಸರು ಅಲ್ಲಿಗೆ ತಲುಪಿದಾಗ ಆರೋಪಿ ಮಗ ಕುರ್ಚಿಯ ಮೇಲೆ ಕುಳಿತಿರುವುದು ಕಂಡು ಬಂತು. ತಾಯಿಯನ್ನು ಕೊಂದಿದ್ದಕ್ಕೆ ಅವನ ಮುಖದಲ್ಲಿ ಪಶ್ಚಾತ್ತಾಪವಿರಲಿಲ್ಲ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡವನ್ನು ಕರೆಸಿ ತನಿಖೆ ನಡೆಸಲಾಗಿತ್ತು.
Bengaluru Murder: ಪ್ರೀತಿ ನಿರಾಕರಿಸಿದಳೆಂದು ಯುವತಿಯ ಕತ್ತು ಕೊಯ್ದ ಪಾಗಲ್ ಪ್ರೇಮಿ!
ಆರೋಪಿಯ ತಂದೆ ಬ್ಯಾಂಕ್ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಅವರು ಮೂರು ಮದುವೆ ಮಾಡಿಕೊಂಡಿದ್ದರು. ಈತನಿಗೆ ಮೊದಲ ಇಬ್ಬರು ಹೆಂಡತಿಯರಿಂದ ಮಕ್ಕಳಿರಲಿಲ್ಲ, ಹಾಗಾಗಿ ಮೂರನೇ ಮದುವೆಯಾಗಿದ್ದ, ಆರೋಪಿ ಮೂರನೇ ಹೆಂಡತಿಯ ಮಗನಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ