Kodagu: ನಾಂಗಾಲದ ಯುವತಿ ಹತ್ಯೆ ಆರೋಪಿ ತಿಮ್ಮಯ್ಯ ಶವವಾಗಿ ಪತ್ತೆ: ಕೊಲೆ ಮಾಡಿದ್ಯಾರು?

By Sathish Kumar KHFirst Published Jan 18, 2023, 8:01 PM IST
Highlights

ಕೊಡಗು ಜನತೆಯನ್ನು ಬೆಚ್ಚಿ ಬೀಳಿಸಿದ್ದ ಯುವತಿಯ ಕೊಲೆ
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳ ಹತ್ಯೆ
ಹತ್ಯೆ ಮಾಡಿದ್ದಾನೆಂಬ ಆರೋಪಿ ಶವವಾಗಿ ಕೃಷಿ ಹೊಂಡದಲ್ಲಿ ಪತ್ತೆ
ಶವ ಪತ್ತೆಗಾಗಿ ಕೃಷಿ ಹೊಂಡದ ನೀರನ್ನು ಖಾಲಿ ಮಾಡಿ ಶವ ತೆಗೆದ ಸ್ಥಳೀಯರು

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ18): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ನಾಂಗಾಲದಲ್ಲಿ 24 ವರ್ಷದ ಯುವತಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾದ ಯುವಕ ತಿಮ್ಮಯ್ಯ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. 

ಭಾನುವಾರ ರಾತ್ರಿ ನಾಂಗಾಲದ ಮಾದಪ್ಪ ಎಂಬುವರ ಪುತ್ರಿ ಆರತಿಯ ಹತ್ಯೆಯಾಗಿತ್ತು.  ಹತ್ಯೆಯಾದ ಬಳಿಕ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಗುಪ್ಪೆಯ ನಾಣಯ್ಯ ಮತ್ತು ವಿಮಲ ಎಂಬುವರ ಪುತ್ರ ತಿಮ್ಮಯ್ಯನೇ ಆರತಿಯನ್ನು ಕೊಚ್ಚಿ ಕೊಲೆ ಮಾಡಿದ್ದ ಎನ್ನುವ ಆರೋಪ ಕೇಳಿ ಬಂದಿತ್ತು. ಆರತಿಯನ್ನು ಹತ್ಯೆ ಮಾಡಿದ ಬಳಿಕ ಮನೆ ಹೋಗಿದ್ದ ತಿಮ್ಮಯ್ಯ ರಕ್ತಸಿಕ್ತವಾಗಿದ್ದ ತನ್ನ ಜಾಕೆಟ್ ಅನ್ನು ಮನೆ ಸಮೀಪವೇ ರಸ್ತೆ ಬದಿಯಲ್ಲಿ ಬಿಚ್ಚಿ ಬಿಸಾಡಿದ್ದನು. ಅದನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. 

ಕೃಷಿ ಹೊಂಡದ ಬಳಿ ವಿಷದ ಬಾಟಲ್: ಬಳಿಕ ತಿಮ್ಮಯ್ಯ ಮದ್ಯದೊಂದಿಗೆ ವಿಷ ಸೇವಿಸಿ ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು. ಕೃಷಿ ಹೊಂಡದ ಬಳಿಯೇ ಆತನ ಚಪ್ಪಲಿಗಳು, ಹಾಗೂ ಮದ್ಯದ ಬಾಟೆಲ್ ಜೊತೆಗೆ ವಿಷದ ಬಾಟೆಲ್ ಕೂಡ ಇದ್ದವು.  ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೇ ಕಾರಣದಿಂದ ಪೊಲೀಸ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಕೃಷಿ ಹೊಂಡದಲ್ಲಿ ತೀವ್ರ ಶೋಧ ನಡೆಸಿದ್ದರು.  ಸೋಮವಾರ ಇಡೀ ದಿನ ತಡಕಾಡಿದ್ದರೂ ಆತನ ಸುಳಿವು ದೊರೆತ್ತಿರಲಿಲ್ಲ. ಬಳಿಕ ಜೆಸಿಬಿ ಬಳಸಿ ಕೃಷಿ ಹೊಂಡವನ್ನು ಅಗೆದು ನೀರು ಹೊರ ಹೋಗುವಂತೆ ಮಾಡಲಾಗಿತ್ತು. 

ಕೊಡಗಿನಲ್ಲಿ ಯುವತಿಯ ಕೊಲೆ: ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ನೀರು ಖಾಲಿ ಮಾಡಿದ ಗರಾಮಸ್ಥರು: ಕೃಷಿ ಹೊಂಡ 20 ರಿಂದ 25 ಅಡಿ ಆಳವಾಗಿದ್ದು ಅಪಾರ ಪ್ರಮಾಣದ ನೀರು ಇದ್ದಿದ್ದರಿಂದ ಆತ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದು ಅನುಮಾನ ಮೂಡಿಸಿತ್ತು. ಆದರೆ ಗ್ರಾಮದವರೆಲ್ಲರೂ ಸೇರಿ ಹಲವು ಪಂಪುಗಳನ್ನು ಬಳಸಿ ಹೊಂಡದಿಂದ ಬಹುತೇಕ ನೀರನ್ನು ಖಾಲಿ ಮಾಡಿದ್ದಾರೆ. ಹೀಗೆ ಹುಡುಕಾಡಿದ ಪೊಲೀಸರಿಗೆ ಮಂಗಳವಾರ ಮಧ್ಯ ರಾತ್ರಿ ಒಂದುವರೆಯಾದರೂ ಕೃಷಿ ಹೊಂಡದಲ್ಲಿ ತಿಮ್ಮಯ್ಯ ಸುಳಿವು ಕಾಣಿಸಿರಲಿಲ್ಲ. ಹೀಗಾಗಿ ತಿಮ್ಮಯ್ಯ ಇನ್ನೂ ಇದರಲ್ಲಿ ಬಿದ್ದಿಲ್ಲ ಎನ್ನುವ ತೀರ್ಮಾನಕ್ಕೆ ಬರುವವರಿದ್ದರು. 

ಎರಡು ದಿನದ ನಂತರ ಮೃತದೇಹ ಪತ್ತೆ: ಆದರೆ ಗ್ರಾಮದ ಜನರು ನೀರನ್ನೆಲ್ಲಾ ಖಾಲಿ ಮಾಡಿ ಐದಾರು ಅಡಿ ಮಾತ್ರವೇ ಬಾಕಿ ಇರುವಾಗ ಕೃಷಿ ಹೊಂಡದಲ್ಲಿ ಇಳಿದು ಹುಡುಕಾಡಲಾಗಿದೆ. ಆಗ ತಿಮ್ಮಯ್ಯನ ಕಾಲು ಕೃಷಿ ಹೊಂಡದಲ್ಲಿ ಇಳಿದು ಹುಡುಕಾಡುತ್ತಿದ್ದವರ ಕಾಲಿ ಸಿಲುಕಿದೆ. ಹೀಗಾಗಿ ಇಲ್ಲಿಯೇ ಮೃತದೇಹ ಇರಬಹುದೆಂದು ಮತ್ತಷ್ಟು ಹುಡುಕಾಟ ನಡೆಸಿದಾಗ ತಿಮ್ಮಯ್ಯನ  ಶವ ದೊರೆತಿದೆ. ಮಧ್ಯರಾತ್ರಿಯೇ ಮೃತದೇಹವನ್ನು ವಿರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶವ ಪರೀಕ್ಷೆ ಬಳಿಕ ಮೃತದೇಹವನ್ನು ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಘಟನೆ  ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Bengaluru Murder: ಪ್ರೀತಿ ನಿರಾಕರಿಸಿದಳೆಂದು ಯುವತಿಯ ಕತ್ತು ಕೊಯ್ದ ಪಾಗಲ್ ಪ್ರೇಮಿ!

ಒಳ್ಳೆಯ ಹುಡುಗ ಹೀಗೇಕಾದ ಎಂಬುದೇ ಅನುಮಾನ: ಒಳ್ಳೆಯ ಹುಡುಗನಾಗಿದ್ದು, ಗ್ರಾಮದವರೊಂದಿಗೆ ಒಳ್ಳೆಯ ಒಡನಾಟವಿತ್ತು. ಆದರೆ ಈ ರೀತಿ ಏಕೆ ಮಾಡಿದನೆಂಬುದೇ ಗೊತ್ತಿಲ್ಲ ಎಂದು ಪಂಚಾಯಿತಿ ಸದಸ್ಯ ಸುಬ್ಬಯ್ಯ ಹೇಳಿದ್ದಾರೆ.  ಜನರ ಪ್ರತಿಕ್ರಿಯೆ ಆಲಿಸಿದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ ಅಯ್ಯಪ್ಪ ಅವರಿಗೆ ಯುವತಿ ಆರತಿಯನ್ನು ಹತ್ಯೆ ಮಾಡಿದವರು ಯಾರು ಎಂಬ ಅನುಮಾನ ಇನ್ನೂ ಹೆಚ್ಚಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ತಿಮ್ಮಯ್ಯ ಹತ್ಯೆ ಮಾಡಿದ್ದಾನೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಅದಕ್ಕೆ ಪೂರಕವಾಗಿ ಕೆಲವು ಸಾಕ್ಷ್ಯಗಳು ದೊರೆತ್ತಿದ್ದವು. ಆ ದೃಷ್ಟಿಕೋನದಲ್ಲಿ ತನಿಖೆ ಮುಂದುವರೆದಿದೆ. ಇನ್ನು ತಿಮ್ಮಯ್ಯ ನಾಪತ್ತೆಯಾಗಿದ್ದ ಎಂದು ಮೂರು ತಂಡಗಳು ಪತ್ತೆಗಾಗಿ ತನಿಖೆ ಮುಂದುವರೆಸಿದ್ದವು. ತಿಮ್ಮಯ್ಯ ಕೆರೆಯಲ್ಲಿ ಶವವಾಗಿ ಸಿಕ್ಕಿದ್ದಾನೆ. 

ಒಟ್ಟಿನಲ್ಲಿ ಯುವತಿ ಕೊಲೆ ಪ್ರಕರಣ ತಿಮ್ಮಯ್ಯ ಆತ್ಮಹತ್ಯೆ ಮೂಲಕ ಅಂತ್ಯ ಕಂಡಂತೆ ಆಗಿದ್ದರೆ, ಎರಡು ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ.

click me!