
ನವದೆಹಲಿ (ಏ.24): ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ತನ್ನ ಹಾಸ್ಟೆಲ್ ಕೋಣೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಲ್ಲಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸೋಮವಾರ ಬೆಳಗಿನ ಜಾವದ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಕೂಡ ಪತ್ತೆಯಾಗಿಲ್ಲ. ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ವಿದ್ಯಾರ್ಥಿನಿಯ ತಂದೆ ಯಾರ ಮೇಲೂ ತಮಗೆ ಅನುಮಾನವಿಲ್ಲ ಎಂದು ಹೇಳಿದ್ದಾರೆ. ಆದರೆ, ವೈದ್ಯಕೀಯ ಪಠ್ಯಕ್ರಮ ಸಂಪೂರ್ಣವಾಗಿ ಇಂಗ್ಲೀಷ್ನಲ್ಲಿ ಇರುತ್ತದೆ ಇದು ತನಗೆ ಕಷ್ಟವಾಗುತ್ತದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗೋದಿಲ್ಲ ಎನ್ನುವ ಆತಂಕ ವ್ಯಕ್ತಪಡಿಸಿದ್ದರು ಎಂದು ತಂದೆ ತಿಳಿಸಿದ್ದಾರೆ. 2022ರ ಅಕ್ಟೋಬರ್ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸವನ್ನು ಹಿಂದಿ ಭಾಷೆಯಲ್ಲಿ ಕಲಿಯಲು ಅವಕಾಶ ಮಾಡಿಕೊಟ್ಟ ಮೊದಲ ರಾಜ್ಯವಾಗಿ ಮಧ್ಯಪ್ರದೇಶ ಗುರುತಿಸಿಕೊಂಡಿತ್ತು. ಆದರೆ, 21 ವರ್ಷದ ರಾಣಿ ಮೋರ್, ಹಿಂದಿ ಭಾಷೆಯಲ್ಲಿ ಎಂಬಿಬಿಎಸ್ ಪದವಿ ಪಡೆಯಲು ಆಯ್ಕೆ ಮಾಡಿಕೊಂಡಿರಲಿಲ್ಲ.
ರಾಣಿ ಖಾರ್ಗೋನ್ನ ಝಿರ್ನಿಯಾದವರಾಗಿದ್ದು, 2023ರಲ್ಲಿ ಪ್ರವೇಶ ಪಡೆದಿದ್ದರು ಎಂದು ಖಜೂರಿ ಎಸ್ಎಚ್ಒ ನೀರಜ್ ವರ್ಮಾ ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ರೂಮ್ ಮೇಟ್ ಮನೆಗೆ ಹೋಗಿದ್ದರಿಂದ ರೂಮಿನಲ್ಲಿ ಒಬ್ಬಳೇ ಇದ್ದಳು. ಸೋಮವಾರ ಬೆಳಗ್ಗೆ 10 ಗಂಟೆಯಾದರೂ ರಾಣಿ ತನ್ನ ಕೋಣೆಯಿಂದ ಹೊರಬರದ ಹಿನ್ನಲೆಯಲ್ಲಿ ವಾರ್ಡನ್ ರೂಮ್ನ ಬಾಗಿಲನ್ನು ಬಡಿದಿದ್ದರು. ಆದರೆ, ರೂಮ್ನ ಒಳಗಿನಿಂದ ಯಾವುದೇ ಶಬ್ದ ಬಾರದ ಕಾರಣ, ಕಾಲೇಜ್ ಮ್ಯಾನೇಜ್ಮೆಂಟ್ಗೆ ತಕ್ಷಣವೇ ಈ ಸುದ್ದಿ ತಿಳಿಸಿದ್ದರು. ಬಳಿಕ ಕಾರ್ಪೆಂಟರ್ ಮೂಲ ಬಾಗಿಲನ್ನು ಒಡೆದು ಒಳನುಗ್ಗಿದಾಗ ಅಲ್ಲಿ ರಾಣಿ ಶವವಾಗಿ ಪತ್ತೆಯಾಗಿದ್ದರು.
ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಖಜೂರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಕೋಣೆಯನ್ನು ಪರಿಶೀಲನೆ ಮಾಡಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ರಾಣಿ ಮೋರ್ಳ ತಂದೆ ದೇವಿ ಸಿಂಗ್ ಮೋರ್ ಮಾತನಾಡಿದ್ದು, ಆಕೆ ಉತ್ತಮ ವಿದ್ಯಾರ್ಥಿನಿಯಾಗಿದ್ದಳು. ಮೆಡಿಸಿನ್ ಅನ್ನು ಇಂಗ್ಲೀಷ್ನಲ್ಲಿ ಅಭ್ಯಾಸ ಮಾಡೋದು ನನಗೆ ಕಷ್ಟವಾಗುತ್ತಿದೆ ಎಂದಷ್ಟೇ ಆಕೆ ದೂರು ಹೇಳುತ್ತಿದ್ದಳು. 12ನೆ ತರಗತಿಯವರೆಗೂ ಆಕೆ ಹಿಂದಿ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿದ್ದಳು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಕಡಿಮೆ ಅಂಕ ತೆಗೆದುಕೊಂಡಾಗ ಕಾಲೇಜಿನ ಮ್ಯಾನೇಜ್ಮೆಂಟ್ ಮನೆಗೆ ಕರೆ ಮಾಡಿ ಕಾಲೇಜಿಗೆ ಬರುವಂತೆ ಹೇಳುತ್ತದೆ. ಕಳೆದ ಬಾರಿ ಹೀಗೇ ಕರೆ ಬಂದಾಗ ಈಕೆಯ ತಾಯಿ ಭೋಪಾಲ್ಗೆ ಬಂದಿದ್ದರು ಎಂದು ತಿಳಿಸಿದ್ದಾರೆ. ಬಹಳ ಕಠಿಣ ಪರೀಕ್ಷೆ ಬರೆದ ಬಳಿಕ ಆಕೆಗೆ ಎಂಬಿಬಿಎಸ್ ಸೀಟ್ ಸಿಕ್ಕಿತ್ತು. ದಿನಗಳು ಕಳೆದ ಹಾಗೆ ಎಲ್ಲವೂ ಸರಿಯಾಗುತ್ತದೆ ಎಂದು ಆಕೆಗೆ ವಿಶ್ವಾಸ ತುಂಬುತ್ತಿದ್ದೆ ಎಂದು ಹೇಳಿದ್ದಾರೆ. ಆಕೆಯ ಕೋಣೆಯಲ್ಲಿದ್ದ ಎಲ್ಲಾ ಬಟ್ಟೆಗಳನ್ನು ತೆಗೆದುಕೊಂಡಿದ್ದೇನೆ. ಅದರೊಂದಿಗೆ ಬುಕ್ಸ್ಗಳನ್ನು ಕೊಟ್ಟಿದ್ದಾರೆ. ಇಂದು ರಾತ್ರಿ ಆಕೆಯ ಅಂತ್ಯಸಂಸ್ಕಾರ ಮಾಡಲಿದ್ದೇವೆ ಎಂದು ತಿಳಿಸಿದರು.
'ಮಧ್ಯಮ ವರ್ಗವದರು ಸ್ವಾರ್ಥಿಗಳು..' To 'ಪಿತ್ರಾರ್ಜಿತ ತೆರಿಗೆ' ಕಾಂಗ್ರೆಸ್ಗೆ Sam Pitroda ಸೆಲ್ಫ್ ಗೋಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ