ಮದುವೆಯಾದ ಪತ್ನಿಯನ್ನೇ ಕಾಲ್ ಗರ್ಲ್ ಮಾಡಿದ ಗಂಡ; ಫೇಸ್‌ಬುಕ್‌ನಲ್ಲಿ ಹೆಂಡತಿ ಫೊಟೋ ಹಂಚಿಕೊಂಡ ಕಿತಾಪತಿ

By Sathish Kumar KHFirst Published Apr 11, 2024, 10:52 AM IST
Highlights

ಬೆಂಗಳೂರಿನಲ್ಲಿ ಪತ್ನಿ ಬಿಟ್ಟು ಹೋಗಿದ್ದಾಳೆಂಬ ಕೋಪಕ್ಕೆ ಆಕೆಯ ಗಂಡನೇ ಫೇಸ್‌ಬುಕ್‌ ನಕಲಿ ಖಾತೆಯನ್ನು ಸೃಷ್ಟಿಸಿ ಕಾಲ್‌ಗರ್ಲ್‌ ಪೋಸ್ಟ್ ಹಾಕಿದ್ದಾನೆ. ಜೊತೆಗೆ ಹೆಂಡತಿಯ ಫೋಟೋ ಹಾಗೂ ಫೋನ್‌ ನಂಬರ್ ಹಾಕಿ ಕಿರುಕುಳ ನೀಡಿದ್ದಾನೆ.

ಬೆಂಗಳೂರು (ಏ.11): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಪತ್ನಿ ಜೊತೆಗಿರದೇ ಬಿಟ್ಟು ಹೋಗಿದ್ದಾಳೆಂಬ ಕೋಪಕ್ಕೆ ಆಕೆಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಅದರಲ್ಲಿ ಕಾಲ್‌ಗರ್ಲ್‌ ಎಂದು ಆಕೆಯ ಫೋಟೋ ಹಾಗೂ ಫೋನ್‌ ನಂಬರ್ ಹಾಕಿ ಕಿರುಕುಳ ನೀಡಿದ್ದಾನೆ.

ಹೌದು, ಈ ಘಟನೆ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದೆ. ಮೋಸ ಹೋದ ಮಹಿಳೆಯನ್ನು ಆರೋಪಿ ಸತ್ಯನಾರಾಯಣ ರೆಡ್ಡಿ ಎನ್ನುವವನು 2019ರಲ್ಲಿ ಮದುವೆ ಆಗಿದ್ದರು. ಇಬ್ಬರೂ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಇವರ  ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಕೂಡ ಸಾಕ್ಷಿಯಿದೆ. ಎಲ್ಲವೂ ಸರಿಯಾಗಿದೆ ಎನ್ನುವಾಗ ಕಳೆದೊಂದು ವರ್ಷದಿಂದ ಗಂಡ ಹಾದಿ ತಪ್ಪಿದ್ದಾನೆ. ಮನೆಯ ನಿರ್ವಹಣೆಗೂ ಸರಿಯಾಗಿ ಸಹಕಾರ ನೀಡದ ಕಾರಣ ಪತ್ನಿ ಪ್ರಶ್ನೆ ಮಾಡಿದ್ದಾಳೆ. ನಂತರ, ಹೆಂಡತಿ ಮೇಲೆ ಕಳೆದೊಂದು ವರ್ಷದಿಂದ ನಿರಂತರವಾಗಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದಾನೆ.

ಹೊಸಕೋಟೆ: ಹೆಂಡತಿಯನ್ನು ಕೊಂದು 3 ದಿನದ ಬಳಿಕ ಪೊಲೀಸರಿಗೆ ಶರಣಾದ ಪತಿ

ಗಂಡನ ಕಿರುಕುಳವನ್ನು ಸಹಿಸಲಾಗದೇ ಹೆಂಡತಿ ಮನೆಯನ್ನು ಬಿಟ್ಟು ತವರು ಮನೆಗೆ ತೆರಳಿದ್ದಾಳೆ. ಈ ವೇಳೆ ಹೆಂಡತಿಯ ತಮ್ಮನೂ ಬಂದು ನಿನಗೆ ನಮ್ಮ ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳುವ ಯೋಗ್ಯತೆಯಿಲ್ಲವೆಂದು ಬೈದು ಅಕ್ಕನನ್ನು ಕರೆದುಕೊಂಡು ಮನೆಗೆ ಹೋಗುತ್ತಾನೆ. ಇದರಿಂದ ತೀವ್ರ ಕುಪಿತಗೊಂಡ ಗಂಡ ಏನು ಮಾಡಬೇಕೆಂದು ತಿಳಿಯದೇ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾನೆ. ಅಲ್ಲಿ ಹೆಂಡತಿಯ ಹೆಸರಿನಲ್ಲಿ ಕಲಾ ಶಶಿ ಎಂದು ನಕಲಿ ಫೇಸ್‌ಬುಕ್ ಖಾತೆಯನ್ನು ಆರಂಭಿಸಿದ್ದಾನೆ. ಜೊತೆಗೆ, ಹೆಂಡತಿಯ ಫೋಟೋವನ್ನು ಕಾಲ್‌ಗರ್ಲ್‌ ಎಂದು ಅಪ್ಲೋಡ್‌ ಮಾಡಿದ್ದಾನೆ. ಮುಂದುವರೆದು, ನಿಮಗೆ ಯಾವಾಗ ಬೇಕಾದರೂ ಕರೆ ಮಾಡಿ ಎಂದು ಪತ್ನಿ ಹಾಗೂ ಆಕೆಯ ತಮ್ಮನ (ಭಾವಮೈದ) ಮೊಬೈಲ್‌ ನಂಬರ್ ಅನ್ನು ಹಾಕಿ ಪೋಸ್ಟ್‌ ಮಾಡಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಫೇಸ್‌ಬುಕ್‌ನಲ್ಲಿ ಈ ತರಹದ ಪೋಸ್ಟ್ ಹಾಕಿದಾಕ್ಷಣ ಹಲವರು ಅದರಲ್ಲಿ ಹಾಕಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ. ಜೊತೆಗೆ, ವಾಟ್ಸಾಪ್ ಮೆಸೇಜ್‌ ಮಾಡಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ನಿನ್ನ ರೇಟ್ ಎಷ್ಟು? ಎಷ್ಟು ಸಮಯ? ಎಂದೆಲ್ಲಾ ಕರೆ ಮಾಡಿ ಕೇಳಿದ್ದಾರೆ. ಆಗ ಫೇಸ್‌ಬುಕ್ ಪರಿಶೀಲನೆ ಮಾಡಿದಾಗ ಕಲಾ ಶಶಿ ಎಂದು ನಕಲಿ ಖಾತೆಯನ್ನು ತೆರೆದಿರುವುದು ಗಮನಕ್ಕೆ ಬಂದಿದೆ. ಇದು ಗಂಡನೇ ಮಾಡಿರುವ ಕಿತಾಪತಿ ಎಂಬುದೂ ತಿಳಿದಿದೆ. ಇದಾದ ನಂತರ ಅಕ್ಕ ಮತ್ತು ತಮ್ಮನಿಗೆ ಇಬ್ಬರಿಗೂ ತೀವ್ರವಾಗಿ ಕರೆಗಳು ಬರಲು ಆರಂಭಿಸಿವೆ. ಈ ಕಿರುಕುಳ ತಾಳಲಾರದೇ ಅವರು ನಂದಿನಿ ಲೇಔಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು: ರೀಲ್ಸ್‌ ಮಾಡಲು ಕಪ್ಪು ಬಣ್ಣದ 29 ಡಿಯೋ ಸ್ಕೂಟರ್‌ ಕಳುವು, ಮೂವರ ಬಂಧನ

ಇನ್ನು ಪೊಲೀಸರು ದೂರು ದಾಖಲಿಸಿಕೊಂಡ ನಂತರ ಆರೋಪಿ ಸತ್ಯನಾರಾಯಣ ರೆಡ್ಡಿಯನ್ನು ಹುಡುಕಲು ಮುಂದಾಗಿದ್ದಾರೆ. ಆದರೆ, ಆರೋಪಿ ವಿದೇಶಕ್ಕೆ ತೆರಳಿದ್ದು, ಅಲ್ಲಿಂದಲೇ ನಕಲಿ ಖಾತೆಯನ್ನು ಹ್ಯಾಂಡಲ್ ಮಾಡುತ್ತಿದ್ದಾನೆ. ಪೊಲೀಸರು ಆತನನ್ನು ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.

click me!