
ಮೈಸೂರು(ಆ.05): ನಂಜನಗೂಡಿನಲ್ಲಿ ನಡೆದ ಶಿಕ್ಷಕಿ ಕೊಲೆ ಪ್ರಕರಣವನ್ನು 5 ತಿಂಗಳ ನಂತರ ಬೇಧಿಸುವಲ್ಲಿ ನಂಜನಗೂಡು ಪಟ್ಟಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ನಗರಸಭೆ ಸದಸ್ಯೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನಂಜನಗೂಡು ಪಟ್ಟಣದ ಸಭಾಪತಿ ಬಡಾವಣೆಯಲ್ಲಿ ವಾಸವಿದ್ದ ವಸತಿ ಶಾಲೆಯೊಂದರ ಹಿಂದಿ ಶಿಕ್ಷಕಿ ಸುಲೋಚನಾ ಅವರನ್ನು ಕಳೆದ ಮಾ.8ರ ರಾತ್ರಿ ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ತನಿಕೆ ಆರಂಭಿಸಿದ ಪೊಲೀಸರು ಕೊಲೆ ರಹಸ್ಯವನ್ನು ಬೇಧಿಸಿ, 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಂಜನಗೂಡು ನಗರಸಭೆಯ ಸದಸ್ಯೆ ಗಾಯಿತ್ರಿ ಮುರುಗೇಶ್, ಅವರ ಸಂಬಂಧಿಕರಾದ ಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತ ಆರೋಪಿಗಳು. ಶಿಕ್ಷಕಿಯೊಂದಿಗೆ ಪತಿ ಮುರುಗೇಶ್ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ನಗರಸಭೆ ಸದಸ್ಯೆ ತನ್ನ ಸಂಬಂಧಿಕರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ. ಇದು ಸುಫಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Chikkodi: ಫೋನ್ ಪೇ ಸ್ಕ್ರೀನ್ ಶಾಟ್ ತೋರಿಸಿ ಪಂಗನಾಮ ಹಾಕುತ್ತಿದ್ದ ಖದೀಮರ ಬಂಧನ
5 ತಿಂಗಳ ಬಳಿಕ ಆರೋಪಿಗಳ ಬಂಧನ
ಸಭಾಪತಿ ಬಡಾವಣೆಯ ಬಾಡಿಗೆ ಮನೆಯಲ್ಲಿ ಸುಲೋಚನಾ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಗುತ್ತಿಗೆ ಆಧಾರದಲ್ಲಿ ವಸತಿ ಶಾಲೆಯೊಂದಲ್ಲಿ ಹಿಂದಿ ಶಿಕ್ಷಕಿಯಾಗಿದ್ದರು. ಇವರ ಪತಿ ನಿಧನರಾಗಿದ್ದು, ಇರುವ ಇಬ್ಬರು ಮಕ್ಕಳಲ್ಲಿ ಮಗಳ ಮದುವೆಯಾಗಿದ್ದು, ಮಗ ಊರಿನಲ್ಲಿ ಇರಲಿಲ್ಲ. ಹೀಗಿರುವಾಗ ಮಾಚ್ರ್ 8 ರಂದು ಒಬ್ಬರೇ ಮನೆಯಲ್ಲಿ ಇರುವಾಗ ರಾತ್ರಿ ವೇಳೆ ಕೊಲೆ ಮಾಡಲಾಗಿತ್ತು. ಈ ಸಂಬಂಧ ಶಿಕ್ಷಕಿ ಪುತ್ರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಮೈಸೂರು ಎಸ್ಪಿ ಆರ್. ಚೇತನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಲೆಯಾದ ಶಿಕ್ಷಕಿ ಮತ್ತು ಆರೋಪಿತ ಮಹಿಳೆಯೊಬ್ಬರ ಪತಿಗೂ ಸ್ನೇಹವಿತ್ತು ಎಂಬ ಕಾರಣದಿಂದ ಹತ್ಯೆ ಮಾಡಲಾಗಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಇನ್ನು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದರು.
ನಂಜನಗೂಡು ಪಟ್ಟಣ ಇನ್ಸ್ಪೆಕ್ಟರ್ ಲಕ್ಷೀ್ಮಕಾಂತ್ ಕೆ. ತಳವಾರ್ ನೇತೃತ್ವದಲ್ಲಿ ನಂಜನಗೂಡು ಪಟ್ಟಣ ಠಾಣೆಯ ಎಸ್ಐಗಳಾದ ವಿಜಯರಾಜ್, ಬಿ. ಮಹೇಂದ್ರ, ಟಿ. ಆರತಿ ಮತ್ತು ಸಿಬ್ಬಂದಿ ಸತೀಶ್, ಅಶೋಕ್, ಲೋಕೇಶ, ಶಿವಕುಮಾರ್, ರವಿಕುಮಾರ್, ನಾಗೇಂದ್ರ, ರಾಜು, ಶ್ರೀದೇವಿ ಗಾಣಿಗೇರ್ ಈ ಪತ್ತೆ ಮಾಡಿದ್ದಾರೆ. ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಗೋವಿಂದರಾಜ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ