ಮಾನಸಿಕ ಅಸ್ವಸ್ಥ ಪುತ್ರನಿಗೆ ವಿಷ ಕುಡಿಸಿ, ಹೊಡೆದು ಕೊಂದ ತಂದೆ!

By Kannadaprabha NewsFirst Published Jul 19, 2023, 10:08 AM IST
Highlights

ಮಗ ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗನಿಗೆ ವಿಷವುಣಿಸಿ ಕೊಲೆ ಮಾಡಿದ ಘಟನೆ ಕಳೆದ ಮೇ 31ರಂದು ಪಟ್ಟಣದ ಹೊರವಲಯದ ಮಲಪ್ರಭಾ ನದಿತೀರದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಖಾನಾಪುರ (ಜು.19): ಮಗ ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗನಿಗೆ ವಿಷವುಣಿಸಿ ಕೊಲೆ ಮಾಡಿದ ಘಟನೆ ಕಳೆದ ಮೇ 31ರಂದು ಪಟ್ಟಣದ ಹೊರವಲಯದ ಮಲಪ್ರಭಾ ನದಿತೀರದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ತನ್ನ ಹಿರಿಯ ಮಗ ಬದುಕಿರುವವರೆಗೆ ಕಿರಿಯ ಮಗನ ಮದುವೆಗೆ ಅಡಚಣೆಯಾಗುತ್ತದೆ ಎಂದು ಭಾವಿಸಿದ್ದ ಮೃತ ಯುವಕನ ತಂದೆ ಈ ನಿರ್ಧಾರ ತಳೆದಿರುವುದಾಗಿ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಬಂಧಿತ ತಂದೆಯನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಏನಿದು ಪ್ರಕರಣ?: ಖಾನಾಪುರದ ಬಳಿ ಮಲಪ್ರಭಾ ನದಿತೀರದಲ್ಲಿ ಪತ್ತೆಯಾದ ಅಪರಿಚಿತ ಶವದ ಮರಣೋತ್ತರ ತನಿಖೆ ನಡೆಸಿದ್ದ ಪೊಲೀಸರಿಗೆ ಮೃತ ವ್ಯಕ್ತಿ ವಿಷ ಸೇವಿಸಿದ್ದು, ಜೊತೆಗೆ ಆತನ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದು ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವು (ಯೂಡಿ) ಎಂದು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ರಾಜ್ಯದಲ್ಲಿ ಹಿಂದೂಗಳು ಬದುಕಲು ಆಗದ ವಾತಾವರಣ ಇದೆ: ಯತ್ನಾಳ್‌

ಪ್ರಕರಣ ದಾಖಲಾಗಿ ಕೆಲದಿನಗಳ ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತ ಹುಕ್ಕೇರಿ ತಾಲೂಕಿನ ಬೋರಗಲ್‌ ಗ್ರಾಮದ ನಿವಾಸಿ ನಿಖಿಲ ರಾಜಕುಮಾರ ಮಗದುಮ್ಮ (24) ಎಂದು ಪೊಲೀಸರಿಗೆ ತಿಳಿದುಬಂದಿತ್ತು. ನಿಖಿಲ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಕಳೆದ ಜು.7ರಂದು ಆತನ ಚಿಕ್ಕಪ್ಪ ಸಂತೋಷ ಮಗದುಮ್ಮ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಅವರು ತಮ್ಮ ಅಣ್ಣ ರಾಜಕುಮಾರ ಶಂಕರ ಮಗದುಮ್ಮ (45) ನಿಖಿಲ ಕೊಲೆ ಮಾಡಿರುವುದಾಗಿ ತಿಳಿಸಿ ರಾಜಕುಮಾರ ವಿರುದ್ಧ ದೂರು ನೀಡಿದ್ದರು.

ರಾಜಕುಮಾರ ಅವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು ಅವರನ್ನು ವಿಚಾರಣೆ ನಡೆಸಿದಾಗ ತಮ್ಮ ಹಿರಿಯ ಮಗ ನಿಖಿಲ ಮಾನಸಿಕ ಅಸ್ವಸ್ಥನಿದ್ದು, ನಿಖಿಲ ಬದುಕಿರುವವರೆಗೆ ಕಿರಿಯ ಮಗ ನಿತೀಶನ ಮದುವೆ ಮಾಡಲು ತೊಂದರೆ ಆಗುತ್ತದೆಂದು ಭಾವಿಸಿ ನಿಖಿಲನನ್ನು ಮೇ 30ರಂದು ಬೋರಗಲ್‌ ಗ್ರಾಮದ ತಮ್ಮ ಮನೆಯಿಂದ ಪಟ್ಟಣದ ಮಲಪ್ರಭಾ ನದಿಯ ಬಳಿ ಕರೆದುಕೊಂಡು ಬಂದು ವಿಷ ಕುಡಿಸಿ, ಗಿಡಕ್ಕೆ ಜೋರಾಗಿ ತಲೆ ಹಾಯಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮಿಲಿಟರಿ ವಸತಿ ಪ್ರದೇಶದಲ್ಲಿ ಬೀದಿ ನಾಯಿ ಗಣತಿಗೆ ಸಿಗುತ್ತಿಲ್ಲ ಅವಕಾಶ

ಬೆಳಗಾವಿ ಎಸ್‌.ಪಿ ಸಂಜೀವ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಿಖಿಲ ಅವರ ಕೊಲೆ ಪ್ರಕರಣವನ್ನು ಬೇಧಿಸಿರುವ ಖಾನಾಪುರ ಠಾಣೆಯ ಪಿಐ ಮಂಜುನಾಥ ನಾಯ್ಕ ಹಾಗೂ ಸಿಬ್ಬಂದಿ ರಾಜಕುಮಾರ ಶಂಕರ ಮಗದುಮ್ಮ ಅವರನ್ನು ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರ ಆದೇಶದನ್ವಯ ರಾಜಕುಮಾರ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

click me!