Bengaluru: ನಕಲಿ ವೈದ್ಯನ ಇಂಜೆಕ್ಷನ್‌ನಿಂದ ಮಹಿಳೆ ದೇಹದಲ್ಲಿ ಕೊಳೆತ ಮಾಂಸ!

By Govindaraj SFirst Published Dec 16, 2022, 8:25 AM IST
Highlights

ಜ್ವರದಿಂದ ಬಳಲುತ್ತಿದ್ದ ಮಹಿಳೆಗೆ ಚುಚ್ಚುಮದ್ದು ನೀಡಿ ಆರೋಗ್ಯ ಹದಗೆಡಿಸಿದ ಆರೋಪದಡಿ ನಕಲಿ ವೈದ್ಯ ಹಾಗೂ ಕ್ಲಿನಿಕ್‌ ಮಾಲಿಕನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಡಿ.16): ಜ್ವರದಿಂದ ಬಳಲುತ್ತಿದ್ದ ಮಹಿಳೆಗೆ ಚುಚ್ಚುಮದ್ದು ನೀಡಿ ಆರೋಗ್ಯ ಹದಗೆಡಿಸಿದ ಆರೋಪದಡಿ ನಕಲಿ ವೈದ್ಯ ಹಾಗೂ ಕ್ಲಿನಿಕ್‌ ಮಾಲಿಕನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾದೇಶ್ವರ ನಗರದ ನಿವಾಸಿ ನಕಲಿ ವೈದ್ಯ ನಾಗರಾಜ ಸವಣೂರ (55) ಮತ್ತು ಕ್ಲಿನಿಕ್‌ ಮಾಲಿಕ ಕುಮಾರಸ್ವಾಮಿ (35) ಬಂಧಿತರು. ಆರೋಪಿಗಳು ಹೆಗ್ಗನಹಳ್ಳಿಯ ಸಂಜೀವಿನಿನಗರದಲ್ಲಿ ಸಹನಾ ಪಾಲಿಕ್ಲಿನಿಕ್‌ ನಡೆಸುತ್ತಿದ್ದರು. ಶ್ರೀಗಂಧದಕಾವಲು ನಿವಾಸಿ ಜ್ಯೋತಿ (29) ನೀಡಿದ ದೂರಿನ ಮೇರೆಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾರ್ಮೆಂಟ್ಸ್‌ ಉದ್ಯೋಗಿ ಜ್ಯೋತಿ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೆ.25ರಂದು ಸಹನಾ ಪಾಲಿಕ್ಲಿನಿಕ್‌ಗೆ ತೆರಳಿದ್ದರು. ಈ ವೇಳೆ ಪರೀಕ್ಷಿಸಿದ ನಕಲಿ ವೈದ್ಯ ನಾಗರಾಜ, ಜ್ಯೋತಿಯವರ ಸೊಂಟದ ಭಾಗಕ್ಕೆ ಎರಡು ಚುಚ್ಚುಮದ್ದು ನೀಡಿದ್ದ. ಎರಡು ದಿನಗಳ ಬಳಿಕ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ರಕ್ತಹೆಪ್ಪುಗಟ್ಟಿನೋವು ಕಾಣಿಸಿಕೊಂಡಿದೆ. ಹೀಗಾಗಿ ಜ್ಯೋತಿ ಮತ್ತೆ ಕ್ಲಿನಿಕ್‌ಗೆ ಬಂದು ನಕಲಿ ವೈದ್ಯ ನಾಗರಾಜ್‌ ಬಳಿ ತೋರಿಸಿದ್ದಾರೆ. ಈ ವೇಳೆ ನಾಗರಾಜು ಮೆಡಿಕಲ್‌ ಶಾಪ್‌ನಿಂದ ಆಯಿಂಟ್‌ಮೆಂಟ್‌ ತರಿಸಿ ರಕ್ತಹೆಪ್ಪುಗಟ್ಟಿರುವ ಜಾಗಕ್ಕೆ ಲೇಪಿಸುವಂತೆ ಸೂಚಿಸಿ ಮನೆಗೆ ಕಳುಹಿಸಿದ್ದ.

Bengaluru: ಪೊಲೀಸರು ಲಂಚ ಕೇಳಿದರೆ ತಕ್ಷಣ ಕ್ಯೂಆರ್‌ ಕೋಡಲ್ಲಿ ದೂರು ನೀಡಿ!

ಇದಾದ ಐದಾರು ದಿನಗಳ ಬಳಿಕ ಜ್ಯೋತಿ ಅವರಿಗೆ ಸೊಂಟದ ಭಾಗದಲ್ಲಿ ನೋವು ಹೆಚ್ಚಾಗಿ ಹೆಪ್ಪುಗಟ್ಟಿದ ಭಾಗದಲ್ಲಿ ಕೀವು ತುಂಬಿಕೊಂಡಿತ್ತು. ಮತ್ತೆ ಕ್ಲಿನಿಕ್‌ಗೆ ಬಂದ ಜ್ಯೋತಿಗೆ ನಕಲಿ ವೈದ್ಯ ನಾಗರಾಜು, ಬೇರೆ ಆಸ್ಪತ್ರೆಗೆ ತೋರಿಸಿಕೊಳ್ಳುವಂತೆ ಸೂಚಿಸಿದ್ದಾನೆ. ಅಷ್ಟೇ ಅಲ್ಲದೆ, ಚಿಕಿತ್ಸಾ ವೆಚ್ಚವನ್ನು ತಾನೇ ಭರಿಸುವುದಾಗಿ ಹೇಳಿದ್ದಾನೆ. ಅದರಂತೆ ಜ್ಯೋತಿ ಖಾಸಗಿ ಆಸ್ಪತ್ರೆಗೆ ತೋರಿಸಿದಾಗ, ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ಅದರಂತೆ ಕೀವು ತುಂಬಿದ ಜಾಗದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕೊಳೆತ ಮಾಂಸವನ್ನು ಹೊರತೆಗೆದು ಹೊಲಿಕೆ ಹಾಕಿದ್ದರು.

ಇಂದು 100ಕ್ಕೂ ಅಧಿಕ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಎಚ್‌.ಡಿ.ಕುಮಾರಸ್ವಾಮಿ

ತನ್ನ ಈ ಸ್ಥಿತಿಗೆ ಕಾರಣದ ನಕಲಿ ವೈದ್ಯ ನಾಗರಾಜನ ವಿರುದ್ಧ ಜ್ಯೋತಿ ನೀಡಿದ್ದರು. ಈ ದೂರು ಆಧರಿಸಿ ನಾಗರಾಜನನ್ನು ಬಂಧಿಸಿ ವಿಚಾರಣೆಗೆ ಮಾಡಿದಾಗ ಆತ ಎಂಬಿಬಿಎಸ್‌ ವೈದ್ಯ ಅಲ್ಲ. ನಕಲಿ ವೈದ್ಯ ಎಂಬುದು ಗೊತ್ತಾಗಿದೆ. ಈತನನ್ನು ಹುಬ್ಬಳ್ಳಿಯಿಂದ ನಗರಕ್ಕೆ ಕರೆತಂದು ಯಾವುದೇ ಪರವಾನಗಿ ಪಡೆಯದೆ ಕ್ಲಿನಿಕ್‌ ಹಾಕಿಕೊಟ್ಟಿದ್ದ ಮಾಲಿಕ ಕುಮಾರಸ್ವಾಮಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!