Coimbatore car blast: ಸಾವೀಗೀಡಾದ ಜಮೇಜಾ ಮುಬಿನ್ ಮನೆಯಲ್ಲಿ ಸ್ಪೋಟಕಗಳು ಪತ್ತೆ!

By Santosh NaikFirst Published Oct 24, 2022, 11:48 AM IST
Highlights

ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರ್ ಸ್ಫೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಉಕ್ಕಡಂ ನಿವಾಸಿ ಜಮೇಶಾ ಮುಬಿನ್‌ ಎಂದು ಗುರುತಿಸಲಾಗಿದೆ. ಆತ ಎನ್‌ಐಎ ರಾಡಾರ್‌ನಲ್ಲಿದ್ದ ವ್ಯಕ್ತಿ ಎನ್ನಲಾಗಿದೆ. ಐಸಿಸ್‌ ಜೊತೆ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ 2019ರಲ್ಲಿ ವಿಚಾರಣೆಗೂ ಹಾಜರಾಗಿದ್ದ. ಆದರೆ, ಐಸಿಸ್‌ ಜೊತೆಗಿನ ಲಿಂಕ್‌ಅನ್ನು ಪತ್ತೆ ಮಾಡಲು ಸಾಕ್ಷ್ಯ ಸಿಗದ ಕಾರಣ ಆತನನ್ನು ಬಿಟ್ಟುಬಿಡಲಾಗಿತ್ತು.

ಚೆನ್ನೈ (ಅ. 24): ಕೊಯಮತ್ತೂರಿನ ಕಾರ್‌ ಬ್ಲಾಸ್ಟ್‌ ಆಕಸ್ಮಿಕವಲ್ಲ. ಅದರಲ್ಲಿ ಟೆರರ್‌ ಲಿಂಕ್‌ ಇತ್ತು ಎನ್ನುವ ಸೂಚನೆ ತಮಿಳನಾಡು ಪೊಲೀಸರಿಗೆ ಸಿಕ್ಕಿದೆ. ಶನಿವಾರ ಮುಂಜಾನೆ ಉಕ್ಕಡಂ ಪ್ರದೇಶದ ಕೋಟ್ಟಾಯಿ ಈಶ್ವರನ್‌ ದೇವಸ್ಥಾನದ ಮುಂಭಾಗದಲ್ಲಿ ಕಾರ್‌ ಸ್ಫೋಟವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಆರಂಭದಲ್ಲಿ ಕಾರಿನ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗಿ ಘಟನೆ ಸಂಭವಿಸಿದೆ ಎನ್ನಲಾಗಿತ್ತು. ಆದರೆ, ಸಾವಿಗೀಡಾದ ವ್ಯಕ್ತಿ ಯಾರೆಂದು ಪೊಲೀಸರು ಪತ್ತೆ ಹಚ್ಚಿದ ಬಳಿಕ ಇದು ಭಯೋತ್ಪಾದಕ ಘಟನೆ ಆಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಕಾರ್‌ ಸ್ಫೋಟದಲ್ಲಿ ಜಮೇಶಾ ಮುಬಿನ್‌ ಎನ್ನುವ ವ್ಯಕ್ತಿ ಸಾವು ಕಂಡಿದ್ದಾನೆ. ಈತನ ಮನೆಯನ್ನು ಹುಡುಕಿ ಅಲ್ಲಿ ಪರಿಶೀಲನೆ ಮಾಡಿದ ಬಳಿಕ ಆತನ ಮನೆಯಲ್ಲಿ ಕೆಲವು ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. ಆತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಯಾವುದೇ ಪ್ರಕರಣವಿಲ್ಲ. ಆದರೆ, ಹಿಂದೊಮ್ಮೆ ಈತನ ಮನೆಯ ಮೇಲೆ ಎನ್‌ಐಎ ದಾಳಿ ಮಾಡಿತ್ತು ಎನ್ನುವ ಮಾಹಿತಿ ಸಿಕ್ಕಿದೆ. ಡಿಜಿಪಿ ಶೈಲೇಂದ್ರಬಾಬು, ಮುಬಿನ್‌ ಮನೆಯಲ್ಲಿದ್ದ ಸ್ಫೋಟಕಗಳನ್ನು ಭಯೋತ್ಪಾದಕ ಕೃತ್ಯ ನಡೆಸುವ ಸಲುವಾಗಿಯೇ ಸಂಗ್ರಹಿಸಿದ್ದ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದಿದ್ದಾರೆ.

ದೇವಸ್ಥಾನದ ಮುಂಭಾಗದಲ್ಲಿ ಮುಂಜಾನೆ 4.15ಕ್ಕೆ ಸ್ಫೋಟ ಸಂಭವಿಸಿತ್ತು. ಕಾರಿನ ಒಳಗಿದ್ದ ವ್ಯಕ್ತಿ ಗುರುತೇ ಸಿಗದಂತೆ ಸುಟ್ಟುಹೋಗಿದ್ದ. ಘಟನೆಯ ಬಗ್ಗೆ ಸುತ್ತಮುತ್ತಲಿನ ಜನರು ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಸಿಸಿಟಿವಿ ದೃಶ್ಯಾವಳಿಗಳು ಕೂಡ ಪೊಲೀಸರಿಗೆ ಸಿಕ್ಕಿದೆ. ಕಾರನ್ನು ಡ್ರೈವ್‌ ಮಾಡಿಕೊಂಡೇ (Jamesha Mubin) ಬಂದಿದ್ದ ಮುಬಿನ್‌, ದೇವಸ್ಥಾನದ (Kottai Iswaran temple) ಸಮೀಪ ಬರುತ್ತಿದ್ದಂತೆಯೇ ಕಾರು ನಿಲ್ಲಿಸಿದ್ದಾನೆ. ಅಲ್ಲಿಯೇ ಅದು ಬ್ಲಾಸ್ಟ್‌ ಆಗಿದೆ. ಘಟನೆ ನಡೆದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ನಡೆಸಿದ ಮೊದಲ ಹಂತದ ತನಿಖೆಯಲ್ಲಿ ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಾರು ಎರಡು ತುಂಡಾಗಿದೆ ಎನ್ನುವುದು ತಿಳಿದುಬಂದಿತ್ತು.ಇದಲ್ಲದೇ ಕಾರಿನ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಸ್ಥಳಕ್ಕೆ ಬೆರಳಚ್ಚು ತಜ್ಞರು, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಕರೆಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಆಸ್ಪತ್ರೆ ಬೆಡ್ ಮೇಲೂ ಕಾವೇರಿ ವಿವಾದದ ಬಗ್ಗೆ ಚರ್ಚಿಸಿದ್ದ ಜಯಲಲಿತಾ

ಇದರ ಜೊತೆ ಪೊಲೀಸರು ಜಮೇಶಾ ಮುಬಿನ್ ಮನೆ ಬಳಿಯಿರುವ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಶನಿವಾರ ರಾತ್ರಿ 11.25ಕ್ಕೆ ಜಮೇಶಾ ಮುಬಿನ್‌ ಅವರ ಮನೆಯಿಂದ ಈತ ಸೇರಿ 5 ಮಂದಿ ನಿಗೂಢ ವಸ್ತುವನ್ನು ಹೊತ್ತೊಯ್ಯುತ್ತಿದ್ದರು ಎನ್ನಲಾಗಿದೆ. ವಿಶೇಷ ಪೊಲೀಸ್ ತಂಡವು ಸಿಸಿಟಿವಿ ದೃಶ್ಯಗಳಲ್ಲಿ ಇತರ 4 ವ್ಯಕ್ತಿಗಳ ಗುರುತನ್ನು ತನಿಖೆ ನಡೆಸುತ್ತಿದೆ. ಮುಬಿನ್ ಅವರ ನಿವಾಸದಲ್ಲಿ ಪೊಟಾಷಿಯಂ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್, ಸಲ್ಫರ್ ಮತ್ತು ಇದ್ದಿಲು ಸೇರಿದಂತೆ ಸ್ಫೋಟಕ ವಸ್ತುಗಳ ಸಂಗ್ರಹವನ್ನು ಪೊಲೀಸರು (Tamil Nadu Police) ಪತ್ತೆ ಮಾಡಿದ್ದಾರೆ ಎಂದು ತಮಿಳುನಾಡು ಪೊಲೀಸ್ ಡಿಜಿಪಿ ಸೈಲೇಂದ್ರ ಬಾಬು ಹೇಳಿದ್ದಾರೆ. ಅವರು ರಾಸಾಯನಿಕಗಳನ್ನು ತಮ್ಮೊಂದಿಗೆ ಕೊಂಡೊಯ್ಯದ ಕಾರಣ ಮತ್ತು ಅವುಗಳನ್ನು ತಮ್ಮ ನಿವಾಸದಲ್ಲಿ ಹಿಂದೆ ಬಿಟ್ಟುಹೋಗಿದ್ದರ. ಅವರು ಭವಿಷ್ಯದಲ್ಲಿ ಕಂಟ್ರಿ ಬಾಂಬ್‌ಗಳನ್ನು ತಯಾರಿಸಲು ಯೋಜಿಸುತ್ತಿದ್ದರು. ಜಮೇಶಾ ಮುಬಿನ್‌ ಹಳೆಯ ಬಟ್ಟೆಗಳನ್ನು ಮಾರಾಟ ಮಾಡುವ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ.

ಭಯೋತ್ಪಾದನೆ ವಿರುದ್ಧ ಮತ್ತೆ ಸಮರ ಸಾರಿದ ಕೇಂದ್ರ ಸರ್ಕಾರ; ಜಮ್ಮು ಕಾಶ್ಮೀರದಲ್ಲಿ NIA Raid

ಮೂರು ವರ್ಷಗಳ ಹಿಂದೆ ಮುಬಿನ್‌ನನ್ನು ಎನ್‌ಐಎ ವಿಚಾರಣೆ ನಡೆಸಿತ್ತು ಆದರೆ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಅಕ್ಟೋಬರ್ 23 ರಂದು ಉಕ್ಕಡಂ ಘಟನೆಯಲ್ಲಿ ಯಾವುದೇ ಪಿತೂರಿಯ ಒಳನೋಟವನ್ನು ಪಡೆಯಲು ತಮಿಳುನಾಡು ಪೊಲೀಸರು ಈಗ ಇತರರೊಂದಿಗೆ ಆತನ ಸಂಪರ್ಕವನ್ನು ತನಿಖೆ ಮಾಡುತ್ತಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.

click me!