ಹುಟ್ಟಿದ ಒಂದೇ ದಿನಕ್ಕೆ ಶಿಶುವನ್ನು 3ನೇ ಮಹಡಿಯಿಂದ ಎಸೆದು ಕೊಂದ ತಾಯಿ!

By Santosh NaikFirst Published Jan 10, 2023, 10:44 AM IST
Highlights

ಸೋಮವಾರ ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಗಿ ತಾಯಿ ತಿಳಿಸಿದ್ದು, ಶಿಶುವನ್ನು ವಾಶ್‌ ರೂಮ್‌ನ ಕಿಟಕಿಯಿಂದ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 

ನವದೆಹಲಿ (ಜ.10): ರಾಷ್ಟ್ರ ರಾಜಧಾನಿಯ ನ್ಯೂ ಅಶೋಕ್‌ ನಗರದಲ್ಲಿ ಅಮಾನವೀಯ ಘಟನೆ ನಡೆದಿದೆ. ಹುಟ್ಟಿ ಒಂದೇ ದಿನವಾಗಿದ್ದ ಮಗುವನ್ನು ತಾಯಿಯೊಬ್ಬಳು ಮೂರನೇ ಮಹಡಿಯಲ್ಲಿದ್ದ ತನ್ನ ಮನೆಯ ವಾಶ್‌ ರೂಮ್‌ನ ಕಿಟಕಿಯಿಂದ ಎಸೆದು ಕೊಂದಿರುವ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 20 ವರ್ಷದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗದೇ ಗರ್ಭ ಧರಿಸಿದ್ದ ಈಕೆ, ಸೋಮವಾರ ತನ್ನ ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಸಮಾಜವನ್ನು ಎದುರಿಸುವ ಭಯದಿಂದ ಮಗುವನ್ನು ಮಹಡಿಯಿಂದ ಎಸೆದು ಕೊಂದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಪ್ರಸ್ತುತ ಆಕೆಗೆ ಲಾಲ್‌ ಬಹದ್ದೂರ್‌ ಶಾಸ್ತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ಆಕೆಯನ್ನು ಬಂಧನ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈ ಅಂಬೇ ಅಪಾರ್ಟ್‌ಮೆಂಟ್ ಆವರಣದಲ್ಲಿ ನವಜಾತ ಶಿಶು ರಕ್ತದ ಮಡುವಿನಲ್ಲಿ ಬಿದ್ದಿರುವ ಬಗ್ಗೆ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿತ್ತು ಎಂದು ಪೊಲೀಸ್ ಉಪ ಆಯುಕ್ತ (ಪೂರ್ವ) ಅಮೃತಾ ಗುಗುಲೋತ್ ತಿಳಿಸಿದ್ದಾರೆ. 

“ಪೊಲೀಸರು ಸ್ಥಳಕ್ಕೆ ಬಂದಾಗ, ಸ್ಥಳೀಯ ಜನರು ಮಗುವನ್ನು ನೋಯ್ಡಾದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಿದ್ದ ವಿಚಾರ ಗೊತ್ತಾಗಿತ್ತು. ಕೂಡಲೇ ಪೊಲೀಸರು ಆಸ್ಪತ್ರೆಗೆ ತಲುಪಿದ್ದಾರೆ. ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು ಎಂದು ತಿಳಿಸಿದ್ದಾರೆ. ಮಗುವಿನ ಮೃತದೇಹವನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಪೊಲೀಸರು ಮಗು ಪತ್ತೆಯಾದ ಸ್ಥಳದ ಸುತ್ತಮುತ್ತಲಿನ ಹಲವಾರು ಮನೆಗಳನ್ನು ಪರಿಶೀಲನೆ ಮಾಡಿದ್ದರು. “ಈ ವೇಳೆ ಒಂದು ಮನೆಯನ್ನು ಪರಿಶೀಲಿಸಿದಾಗ, ಕಸದ ಬುಟ್ಟಿಯಲ್ಲಿ ರಕ್ತದ ಕುರುಹುಗಳನ್ನು ನಾವು ಕಂಡುಕೊಂಡಿದ್ದೇವೆ. ನಾವು ಮನೆಯ ನಿವಾಸಿಗಳನ್ನು ವಿಚಾರಣೆಗೆ ಒಳಪಡಿಸಿದೆವು. ಈ ವೇಳೆ 20 ವರ್ಷದ ಮಹಿಳೆಯೊಬ್ಬರು ತಪ್ಪೊಪ್ಪಿಕೊಂಡರು, ”ಎಂದು ಡಿಸಿಪಿ ಹೇಳಿದ್ದಾರೆ.

Bengaluru: 1 ವರ್ಷದಿಂದ ಪುಕ್ಕಟೆ ಬಜ್ಜಿ ತಿಂದ ‘ನಕಲಿ ಪೊಲೀಸ್‌ ಲೇಡಿ’ ಬಂಧನ

ಸೋಮವಾರ ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಗಿ ಮಹಿಳೆ ಹೇಳಿದ್ದು, ವಾಶ್‌ ರೂಮ್‌ನ ಕಿಟಕಿಯಿಂದ ಮಗುವನ್ನು ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಅವಿವಾಹಿತಳಾಗಿದ್ದಳು. ಮದುವೆಯಾಗದೇ ಮಗು ಹೆತ್ತ ಕಾರಣದಿಂದ ಎದುರಾಗುವ ಸಾಮಾಜಿಕ ಕಳಂಕಕ್ಕೆ ಭಯಪಟ್ಟಿದ್ದಳು. ಅದರಿಂದಾಗಿ ಆಕೆ ಮಗುವನ್ನು ಸಾಯಿಸಲು ನಿರ್ಧಾರ ಮಾಡಿದ್ದಳು ಎಂದು ಗುಗುಲೋತ್ ತಿಳಿಸಿದ್ದಾರೆ. ನೋಯ್ಡಾದ ಖಾಸಗಿ ಕಂಪನಿಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಾಳೆ. ಮಹಿಳೆ ಒಬ್ಬಳೇ ವಾಸಿಸುತ್ತಿದ್ದಾಳೆಯೇ ಅಥವಾ ಯಾರೊಂದಿಗಾದರೂ ವಾಸ ಮಾಡುತ್ತಿದ್ದಳೇ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಅದರ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಹೊರಗೆ ಪಾನ್ ಒಳಗೆ 'ಲಕ್ಷ್ಮಿ' ಬ್ಯಾಕಾಂಕ್‌ಗೆ ಹೊರಟವ ಏರ್‌ಪೋರ್ಟ್‌ನಲ್ಲಿ ಅಂದರ್

ಘಟನಾ ಸ್ಥಳಕ್ಕೆ ಕ್ರೈಂ ತಂಡ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಮತ್ತು 201 (ಸಾಕ್ಷ್ಯದ ಕಣ್ಮರೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಮಹಿಳೆ ವೈದ್ಯಕೀಯ ನಿಗಾದಲ್ಲಿದ್ದು, ಆಕೆಯನ್ನು ಬಿಡುಗಡೆ ಮಾಡಿದ ನಂತರ ಬಂಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

click me!