ಜಿಂಕೆ ಕೊಂದು ಅರಣ್ಯ ಪ್ರದೇಶದಲ್ಲೆ ಮಾಂಸ ಕತ್ತರಿಸುತ್ತಿದ್ದವರ ಬಂಧನ, ಮೂವರು ಪರಾರಿ!

By Gowthami KFirst Published Jun 3, 2023, 1:17 PM IST
Highlights

ನಾಡ ಬಂದೂಕಿನಿಂದ ಜಿಂಕೆ ಕೊಂದು ಅರಣ್ಯ ಪ್ರದೇಶದಲ್ಲೆ ಮಾಂಸ ಕತ್ತರಿಸುತ್ತಿದ್ದ ಇಬ್ಬರು ಆರೋಪಿಗಳು ಸಿಕ್ಕಿಬಿದ್ದು, ಉಳಿದ ಮೂರು ಮಂದಿ ಪರಾರಿಯಾಗಿರುವ ಘಟನೆ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ನಡೆದಿದೆ.

ಚಾಮರಾಜನಗರ(ಜೂ.3): ನಾಡ ಬಂದೂಕಿನಿಂದ ಜಿಂಕೆ ಕೊಂದು ಅರಣ್ಯ ಪ್ರದೇಶದಲ್ಲೆ ಮಾಂಸ ಕತ್ತರಿಸುತ್ತಿದ್ದ ಇಬ್ಬರು ಆರೋಪಿಗಳು ಸಿಕ್ಕಿಬಿದ್ದು, ಉಳಿದ ಮೂರು ಮಂದಿ ಪರಾರಿಯಾಗಿರುವ ಘಟನೆ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ನಡೆದಿದೆ. ಕುಣಗಳ್ಳಿ ಗ್ರಾಮದ ದಿವಂಗತ ಪುಟ್ಟಮಾದಶೆಟ್ಟಿಅವರ ಮಗ ಮೂರ್ತಿ( 26) ಮತ್ತು ದಿ. ಮರಣಶೆಟ್ಟಿ ಅವರ ಪುತ್ರ ರಾಮು ಬಂಧಿತರಾಗಿದ್ದಾರೆ. ಇದೆ ವೇಳೆ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು ಅಲಿಯಾಸ್‌ ದಪ್ಪ ತಲೆ, ವಿಜಯ, ಮಧು ಪರಾರಿಯಾಗಿದ್ದಾರೆ.

ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಮಧುವನಹಳ್ಳಿ ಗಸ್ತಿನ ರಾಯರಹಳ್ಳ ಅರಣ್ಯ ಪ್ರದೇಶದಲ್ಲಿ ಐವರು ಆರೋಪಿಗಳು ಅರಣ್ಯ ಪ್ರವೇಶಿಸಿ ನಾಡ ಬಂದೂಕು ಬಳಸಿ ವನ್ಯಜೀವಿಯಾದ ಜಿಂಕೆಯನ್ನು ನಾಡ ಬಂದೂಕಿನಿಂದ ಬೇಟೆಯಾಡಿ ಮಾಂಸ ಪಾಲು ಮಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆ ಬಿಆರ್‌ಟಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪು ಜೆ. ಕಾಂಟ್ರ್ಯಾಕ್ಟರ್‌, ಎಸಿ ಎಫ್‌ ಮಹದೇವಯ್ಯ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ವಾಸು, ಉಪ ಅಧಿಕಾರಿ ಮಹೇಶ, ಪ್ರಭುಸ್ವಾಮಿ, ಗಸ್ತು ಅರಣ್ಯಪಾಲಕರಾದ ಸಂಜುನಾಥ ಅಯಟ್ಟಿ, ಮಹೇಶ, ಅರಣ್ಯ ವೀಕ್ಷಕರಾದ ಬಸವರಾಜ ಹಬ್ಬದ, ಸತೀಶ, ತಮ್ಮಯ್ಯಗೌಡ, ನಂಜುಂಡಸ್ವಾಮಿ ಇನ್ನಿತರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಬಂಧಿತ ಆರೋಪಿಗಳಿಂದ ನಾಲ್ಕು ಚಾಕು, ಎರಡು ಮೊಬೈಲ…, 35ಕೆಜಿ ಜಿಂಕೆ ಮಾಂಸ , ಮೂರು ಬೈಕ್‌ ಸೇರಿದಂತೆ ಇನ್ನಿತರೆ ಪದಾರ್ಥಗಳನ್ನು ವಶಕ್ಕೆ ಪಡೆಯುವ ಮೂಲಕ ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮಧುವನಹಳ್ಳಿ, ಕುಣಗಳ್ಳಿ, ಅರೇ ಪಾಳ್ಯ ಅರಣ್ಯ ಗಸ್ತು ವ್ಯಾಪ್ತಿಯಲ್ಲಿ ಜಿಂಕೆ ಬೇಟೆ ಪ್ರಕರಣ ಹೆಚ್ಚಾಗಿದೆ. ಆದರೂ ಅರಣ್ಯಾಧಿಕಾರಿಗಳ ಕಾರ್ಯಾಚರಣೆ ವನ್ಯಜೀವಿ ಪ್ರಿಯರಲ್ಲಿ ಪ್ರಶಂಸೆಗೆ ಭಾಜನವಾಗಿದ್ದು ಮುಂದಿನ ದಿನಗಳಲ್ಲಿ ಆರೋಪಿಗಳ ಬಗ್ಗೆ ನಿಗಾ ವಹಿಸುವಂತೆ ಅರಣ್ಯಾಧಿಕಾರಿಗಳು ಮುಂದಾಗಬೇಕು ಎಂದು ವನ್ಯಜೀವಿ ಪ್ರಿಯರು ಕೋರಿದ್ದಾರೆ.

ಬೆಂಗಳೂರು: ಮಾದಕ ವ್ಯಸನ ಮುಕ್ತಿ ಕೇಂದ್ರದ ಮುಖ್ಯಸ್ಥನಿಂದಲೇ ಡ್ರಗ್ಸ್‌ ಮಾರಾಟ..!

ಕಾಡಾನೆ ದಾಳಿಗೆ ರೈತ ಬಲಿ
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯವ್ಯಾಪ್ತಿಯ ಮೊಳೆಯೂರು ವಲಯದಲ್ಲಿ ಗುರುವಾರ ರಾತ್ರಿ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ವೇಳೆ ಕಾಡಾನೆ ದಾಳಿಗೆ ರೈತನೊಬ್ಬ ಬಲಿಯಾಗಿದ್ದಾನೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಹೀರೆಹಳ್ಳಿ ಗ್ರಾಮದ ರವಿಕುಮಾರ್‌(40) ಮೃತರು. ಇವರ ಜಮೀನು ಮೊಳೆಯೂರು ವಲಯ ಅರಣ್ಯ ಪ್ರದೇಶದ ಪಕ್ಕದಲ್ಲೇ ಇದ್ದು, ತಮ್ಮ ಜಮೀನಿನಲ್ಲಿ ಹತ್ತಿ ಬೀಜ ನಾಟಿ ಮಾಡಿದ್ದರು. ಬೆಳೆ ಉತ್ತಮವಾಗಿ ಬಂದಿತ್ತು. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಕಾಯಲು ರಾತ್ರಿ ಕಾವಲು ಕಾಯುತ್ತಿದ್ದರು. ಈ ವೇಳೆ ಕಾಡಿನಿಂದ ಹೊರ ಬಂದ ಆನೆ ಜಮೀನಿನಲ್ಲಿ ನಿಲ್ಲಿಸಿದ್ದ ಬೈಕ್‌ನ್ನು ಧ್ವಂಸಗೊಳಿಸಿ, ಏಕಾಏಕಿ ಇವರ ಮೇಲೆ ದಾಳಿ ನಡೆಸಿತು. ಅವರು ಸ್ಥಳದಲ್ಲೇ ಮೃತಪಟ್ಟರು. ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು.

ಬಾಂಗ್ಲಾ ವಲಸಿಗರೆಂದು ಬೆಂಗಳೂರು ಜೈಲಲ್ಲಿ 301 ದಿನ ಬಂಗಾಳ ದಂಪತಿ ಬಂಧಿ..!

ಕಾಡಂಚಿನಲ್ಲಿ ರೈಲ್ವೆ ಕಂಬಿ ಅಳವಡಿಸಲು ಒತ್ತಾಯಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಪರಿಶೀಲನೆ ನಡೆಸಿ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ಸರ್ಕಾರದ ಪರಿಹಾರದ ಪೈಕಿ 5 ಲಕ್ಷ ರು.ಚೆಕ್‌ನ್ನು ಸ್ಥಳದಲ್ಲೆ ನೀಡಲಾಯಿತು. ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ 15 ಲಕ್ಷ ರು.ಪರಿಹಾರ, ಮೃತರ ಪತ್ನಿಗೆ 5 ವರ್ಷದವರೆಗೆ ತಿಂಗಳಿಗೆ 4 ಸಾವಿರ ರು.ಮಾಶಾಸನ ನೀಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ, ಶುಕ್ರವಾರ ಸ್ವಗ್ರಾಮ ಹೀರೆಹಳ್ಳಿಯ ಜಮೀನಿನಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು.

click me!