
ಬೆಂಗಳೂರು (ನ.14): ಜೂಜು-ಐಷಾರಾಮಿ ಜೀವನಕ್ಕೆ ಸುಲಭವಾಗಿ ಹಣ ಹೊಂದಿಸಲು ಹಾಡಹಗಲೇ ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಚಾಕು ತೋರಿಸಿ ಚಿನ್ನದ ಸರ ಕಿತ್ತು ಪರಾರಿಯಾಗುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರ ನಿವಾಸಿ ಸುರೇಶ್ ಅಲಿಯಾಸ್ ಸೂರಿ (21) ಬಂಧಿತ. ಅಪ್ರಾಪ್ತ ಬಾಲಕನನ್ನು ಕಾನೂನು ಪ್ರಕಾರ ಬಾಲ ಮಂದಿರಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ 9.07 ಲಕ್ಷ ರು. ಮೌಲ್ಯದ 165 ಗ್ರಾಂ ತೂಕದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ಹಾಗೂ ಚಾಕುವನ್ನು ಜಪ್ತಿ ಮಾಡಲಾಗಿದೆ.
ಗಿರಿನಗರದ ನಾಗೇಂದ್ರ ಬ್ಲಾಕ್ 7ನೇ ಮುಖ್ಯರಸ್ತೆ ನಿವಾಸಿ ಶಾರದಮ್ಮ(65) ಅವರು ಕಳೆದ ಅಕ್ಟೋಬರ್ 21ರಂದು ಬೆಳಗ್ಗೆ 6.30ರ ಸುಮಾರಿಗೆ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ಇಬ್ಬರು ದುಷ್ಕರ್ಮಿಗಳು, ಶಾರದಮ್ಮಗೆ ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bengaluru: ಪತಿಗೆ ಮದ್ಯ ಕುಡಿಸಿ, ಕಬಾಬ್ ತಿನ್ನಿಸಿ ಕತ್ತು ಹಿಸುಕಿ ಹತ್ಯೆ!
ನಗರದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸುರೇಶ್ ನಗರದ ಬಡಾವಣೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ. ಹೀಗಾಗಿ ಸಮಯ ಸಾಧಿಸಿ ಅಪರಾಧ ಕೃತ್ಯ ಎಸೆಗುತ್ತಿದ್ದ. ಇದೀಗ ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನ ಬಂಧನದಿಂದ ಗಿರಿನಗರ ಠಾಣೆ ಎರಡು ಹಾಗೂ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಒಂದು ಸರಗಳವು ಪ್ರಕರಣ, ಹನುಮಂತನಗರ ಮತ್ತು ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆಗಳವು ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರಗಳ್ಳತನಕ್ಕೆ ಅಪ್ರಾಪ್ತನ ಬಳಕೆ: ಆರೋಪಿ ಸುರೇಶ್ ಕುಷ್ಟಗಿಯಿಂದ ಸಹಚರರನ್ನು ಕರೆಸಿಕೊಂಡು ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಬೆಂಗಳೂರು ತೋರಿಸುವುದರ ಜತೆಗೆ ಖರ್ಚಿಗೆ ಹಣ ಕೊಡುವುದಾಗಿ ನಂಬಿಸಿ ಗಂಗಾವತಿಯಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದ. ಆ ಅಪ್ರಾಪ್ತ ಬಾಲಕ ಗಂಗಾವತಿಯಿಂದ ಬೆಂಗಳೂರಿಗೆ ದ್ವಿಚಕ್ರ ವಾಹನದಲ್ಲೇ ಬಂದಿದ್ದ. ಬಳಿಕ ಆರೋಪಿ ಸುರೇಶ್, ಈ ಬಾಲಕನನ್ನು ದ್ವಿಚಕ್ರ ವಾಹನ ಚಾಲನೆ ಮಾಡಲು ತಿಳಿಸಿ ತಾನು ಹಿಂಬದಿ ಕುಳಿತು ಮಹಿಳೆಯರ ಸರ ಕಸಿಯುತ್ತಿದ್ದ. ಬಳಿಕ ಆರೋಪಿಗಳಿಬ್ಬರೂ ದ್ವಿಚಕ್ರ ವಾಹನದಲ್ಲೇ ಗಂಗಾವತಿಗೆ ಪರಾರಿಯಾಗುತ್ತಿದ್ದರು. ಕದ್ದ ಚಿನ್ನದ ಸರಗಳನ್ನು ಪರಿಚಿತರ ಮೂಲಕ ಕುಷ್ಟಗಿ, ಗಂಗಾವತಿಯಲ್ಲಿ ವಿಲೇವಾರಿ ಮಾಡಿ ಹಣ ಪಡೆದು ಜೂಜಾಡಿ, ಮೋಜು-ಮಸ್ತಿ ಮಾಡಿ ವ್ಯಯಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
Bengaluru: ಸ್ನೇಹಿತನನ್ನೇ ಬ್ಲ್ಯಾಕ್ಮೇಲ್ ಮಾಡಿ 16 ಲಕ್ಷ ಸುಲಿಗೆ!
ಫುಡ್ ಡೆಲಿವರಿ ಬಾಯ್ನೇ ಲೀಡರ್: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಕೂಕಿನ ಚಳಗೆರೆ ಗ್ರಾಮ ಮೂಲದ ಆರೋಪಿ ಸುರೇಶ್ ಕಳೆದ ನಾಲ್ಕು ವರ್ಷಗಳಿಂದ ಪೋಷಕರೊಂದಿಗೆ ಹನುಮಂತನಗರದಲ್ಲಿ ನೆಲೆಸಿದ್ದ. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿರುವ ಆರೋಪಿ ಆನ್ಲೈನ್ ಫುಡ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಈತನೇ ಕದೀಮ ಪಡೆಯ ನಾಯಕನಾಗಿದ್ದು, ಎರಡು ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ. ಇಸ್ಪಿಟ್ ಜೂಜು ಹಾಗೂ ಶೋಕಿ ಲಾಲನಾಗಿರುವ ಆರೋಪಿಯು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡು, ಕಳ್ಳತನದ ಸಂಚು ರೂಪಿಸುತ್ತಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ