ಗೋವಾದಲ್ಲಿ ಮಗು ಕೊಂದ ಬೆಂಗಳೂರು ಸ್ಟಾರ್ಟಪ್‌ ಸಂಸ್ಥಾಪಕಿ ಅರೆಸ್ಟ್: ಶವದ ಸಮೇತ ಕರ್ನಾಟಕದಲ್ಲಿ ಸಿಕ್ಕಿಬಿದ್ದ ಪಾತಕಿ!

By BK AshwinFirst Published Jan 9, 2024, 12:48 PM IST
Highlights

ಬೆಂಗಳೂರು ಸ್ಟಾರ್ಟ್‌ಅಪ್ ಸಂಸ್ಥಾಪಕಿಯೊಬ್ಬರು ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದಾರೆ ಮತ್ತು ಸಿಕ್ಕಿಬೀಳುವ ಮೊದಲು ಶವದೊಂದಿಗೆ ರಾಜ್ಯ ರಾಜಧಾನಿಗೆ ವಾಪಸಾಗುತ್ತಿದ್ದ ವೇಳೆ ಅರೆಸ್ಟ್ ಆಗಿದ್ದಾರೆ.

ಪಣಜಿ (ಜನವರಿ 9, 2024): 39 ವರ್ಷದ ಬೆಂಗಳೂರು ಸ್ಟಾರ್ಟ್‌ಅಪ್ ಸಂಸ್ಥಾಪಕಿಯೊಬ್ಬರು ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆಗೈದಿದ್ದಾರೆ ಮತ್ತು ಸಿಕ್ಕಿಬೀಳುವ ಮೊದಲು ಶವದೊಂದಿಗೆ ಕರ್ನಾಟಕಕ್ಕೆ ಪ್ರಯಾಣಿಸಿದ್ದಾರೆ. ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸರು ಸುಚನಾ ಸೇಠ್‌ರನ್ನು ಬಂಧಿಸಿದ್ದಾರೆ. ಬಳಿಕ ಗೋವಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್ ರನ್ನು  ಸೋಮವಾರ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದ ಆರೋಪಿಯನ್ನು ಗೋವಾ ಪೊಲೀಸರ ಸೂಚನೆ ಮೇರೆಗೆ ಐಮಂಗಲದಲ್ಲಿ ಬಂಧಿಸಲಾಗಿದೆ. ಈ ಪ್ರಕರಣ ಸಂಬಂಧ ಗೋವಾದಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನು ಓದಿ: ಪ್ರಿನ್ಸಿಪಾಲ್ ಆಯ್ತು ಈಗ, ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ! 500 ವಿದ್ಯಾರ್ಥಿನಿಯರಿಂದ ಮೋದಿ, ಹರ್ಯಾಣ ಸಿಎಂಗೆ ಪತ್ರ

ಉತ್ತರ ಗೋವಾದ ಕ್ಯಾಂಡೋಲಿಮ್‌ನ ಸೋಲ್‌ ಬ್ಯಾನಿಯನ್‌ ಗ್ರ್ಯಾಂಡೆ ಅಪಾರ್ಟ್‌ಮೆಂಟ್‌ನಲ್ಲಿ ಮಗನನ್ನು ಕೊಂದಿದ್ದಾರೆ ಎನ್ನುವ ಆರೋಪ ಎದುರಾಗಿದ್ದು, ಅಪರಾಧದ ಉದ್ದೇಶ ಇನ್ನೂ ತಿಳಿದುಬಂದಿಲ್ಲ.

ಬೆಂಗಳೂರಿಗೆ ವಿಮಾನದಲ್ಲಿ ತೆರಳಲು ಅಪಾರ್ಟ್‌ಮೆಂಟ್‌ ಸಿಬ್ಬಂದಿ ಸಲಹೆ ನೀಡಿದ್ರೂ ಟ್ಯಾಕ್ಸಿ ಬುಕ್ ಮಾಡುವಂತೆ ಅವರನ್ನು ಒತ್ತಾಯಿಸಿದ್ದರು ಎಂದೂ ಸಿಬ್ಬಂದಿ ತಿಳಿಸಿದ್ದಾರೆ. ನಂತರ, ಸಿಬ್ಬಂದಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಆಘಾತಕಾರಿ ಪ್ರಕರಣ ವರದಿಯಾಗಿದೆ.

ಇದನ್ನು ಓದಿ: ಲೈಂಗಿಕ ದೌರ್ಜನ್ಯಕ್ಕೆ ಸೇಡು: 25 ವರ್ಷದ ಯುವಕನ ಇರಿದು ಕೊಂದ ಮೂವರು ಅಪ್ರಾಪ್ತರು

ಘಟನೆಯ ವಿವರ..
ಗೋವಾದ ಅಪಾರ್ಟ್‌ಮೆಂಟ್‌ನಲ್ಲಿ ತನ್ನ 4 ವರ್ಷದ ಮಗುವನ್ನು ಹತ್ಯೆ ಮಾಡಿದ ಸುಚನಾ ಸೇಠ್‌ ಮಗುವಿನ ಶವದೊಂದಿಗೆ ಬೆಂಗಳೂರಿಗೆ ವಾಪಸಾಗುತ್ತಿದ್ದರು. ಸೂಟ್‌ಕೇಸ್‌ನಲ್ಲಿ ಮಗುವಿನ ಶವ ಇಟ್ಟುಕೊಂಡಿದ್ದ ಆಕೆ ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಬರುತ್ತಿದ್ದರು.

ಗೋವಾದ ಅಪಾರ್ಟ್‌ಮೆಂಟ್‌ ರೂಮಿನಲ್ಲಿ ರಕ್ತದ ಕಲೆಗಳು ಇದ್ದ ಕಾರಣ ಹಾಗೂ ವಾಪಸ್‌ ಹೋಗುವಾಗ ಮಗು ಇಲ್ಲದ ಕಾರಣ ಅನುಮಾನ ಬಂದ ಹೋಟೆಲ್‌ ಸಿಬ್ಬಂದಿ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಪೊಲೀಸರು ಟ್ಯಾಕ್ಸಿ ಡ್ರೈವರ್‌ ಸಂಪರ್ಕ ಮಾಡಿ, ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಇದರಂತೆ, ರಾಷ್ಟ್ರೀಯ ಹೆದ್ದಾರಿ 4 ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ಚಾಲಕ ಕಾರು ನಿಲ್ಲಿಸಿದ್ದಾರೆ. ಹಾಗೂ ಐಮಂಗಲ ಪೊಲೀಸರಿಗೆ ಆರೋಪಿ ಸುಚನಾ ಸೇಠ್‌ ರನ್ನು ಒಪ್ಪಿಸಿದ್ದಾರೆ. ಈ ವೇಳೆ, ಕಾರಿನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್‌ನಲ್ಲಿ ಮಗುವಿನ ಶವಪತ್ತೆಯಾಗಿದೆ. 

ನಂತರ, ಮಗುವಿನ ಶವವನ್ನು ಶವಾಗಾರಕ್ಕೆ ಶಿಫ್ಟ್ ಮಾಡಿ ಆರೋಪಿ ಸುಚನಾ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಗೋವಾ ಪೊಲೀಸರು ಬಂದ ಮೇಲೆ ಅವರಿಗೆ ಹಸ್ತಾಂತರ ಮಾಡಲಾಗಿದೆ. 

click me!