
ಹೈದರಾಬಾದ್ (ಜೂನ್ 20, 2023): ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಆಶ್ರಮದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಸ್ವಾಮೀಜಿಯೊಬ್ಬರ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳ ತನಿಖೆ ನಡೆಸುತ್ತಿರುವ ದಿಶಾ ಪೊಲೀಸ್ ಠಾಣೆಗೆ ಈ ಸಂಬಂಧ ಹೇಳಿಕೊಂಡಿದ್ದಾಳೆ. ಆಂಧ್ರಪ್ರದೇಶದ ಮಹಿಳೆಯರ ಮೇಲಿನ ಅಪರಾಧಗಳ ತನಿಖೆಯನ್ನು ದಿಶಾ ಪೊಲೀಸ್ ಠಾಣೆ ನಡೆಸುತ್ತದೆ.
ಇನ್ನು, ಈ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು, ವಿಶಾಖಪಟ್ಟಣಂನ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಸ್ವಾಮಿ ಪೂರ್ಣಾನಂದ ಸರಸ್ವತಿ ಅವರನ್ನು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಅವರು ನಡೆಸುತ್ತಿದ್ದ ಆಶ್ರಮದಲ್ಲಿ ಹಲವಾರು ತಿಂಗಳುಗಳಿಂದ ಅನಾಥ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ವಿಜಯವಾಡದಲ್ಲಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.
ಇದನ್ನು ಓದಿ: ಮತ್ತೊಂದು ನಿರ್ಭಯಾ ಕೇಸ್ ಆತಂಕ: ಕಾರಿನಲ್ಲಿ ಮಧ್ಯರಾತ್ರಿ ಕೂಗಿಕೊಂಡ ಮಹಿಳೆ; ಚೇಸ್ ಮಾಡಿದ್ರೂ ಸಿಗದೆ ಪರಾರಿ!
ಪೂರ್ಣಾನಂದ ಸರಸ್ವತಿ ಅವರು ಅಪ್ರಾಪ್ತ ಬಾಲಕಿಗೆ ಪದೇ ಪದೇ ಚಿತ್ರಹಿಂಸೆ ನೀಡುತ್ತಿದ್ದರು ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತ ವಿವೇಕಾನಂದ ಸಹ ತಿಳಿಸಿದ್ದರು. ಬಾಲಕಿ 2016 ರಿಂದ ಆಶ್ರಮದಲ್ಲಿ ವಾಸಿಸುತ್ತಿದ್ದಳು ಎಂದು ಹೇಳಲಾಗಿದ್ದು, ಜೂನ್ 13 ರಂದು ನಾಪತ್ತೆಯಾಗಿದ್ದಳು ಎಂದು ವರದಿಯಾಗಿದೆ. ಅಲ್ಲದೆ, ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು ಜೂನ್ 15 ರಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು ಎಂದೂ ತಿಳಿದುಬಂದಿದೆ. ಇನ್ನು, ಬಾಲಕಿ ಈ ತಿಂಗಳು ಆಶ್ರಮದಿಂದ ತಪ್ಪಿಸಿಕೊಂಡು ವಿಜಯವಾಡಕ್ಕೆ ತಲುಪಿ ಅಲ್ಲಿ ದೂರು ದಾಖಲಿಸಿದ್ದಾಳೆ ಎಂದೂ ವರದಿಯಾಗಿದೆ.
ಇನ್ನು, 2012 ರಲ್ಲಿ ಸಹ ಇದೇ ಸ್ವಾಮೀಜಿ ವಿರುದ್ಧ ಮತ್ತೊಬ್ಬಳು ಅಪ್ರಾಪ್ತೆ ಸಹ ಅತ್ಯಾಚಾರದ ಬಗ್ಗೆ ದೂರು ನೀಡಿದ್ದಳು. ಆ ಪ್ರಕರಣದ ದೂರು ಸಹ ವಿಚಾರಣೆಯ ಹಂತದಲ್ಲಿದೆ ಎಂದು ಆಂಧ್ರಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಅತ್ಯಾಚಾರ ಪ್ರಕರಣ ನಡೆಯುತ್ತಿದ್ದರೂ, ಅದೇ ಆಶ್ರಮದಲ್ಲಿ ಮಕ್ಕಳು ಹೇಗೆ ಇದ್ದರು ಮತ್ತು ಮಕ್ಕಳನ್ನು ಇರಿಸಿಕೊಳ್ಳಲು ಆ ಆಶ್ರಮ ಪರವಾನಗಿ ಹೊಂದಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಶ್ರಮದಲ್ಲಿ 12 ಮಕ್ಕಳು ವಾಸಿಸುತ್ತಿದ್ದು, ಅವರಲ್ಲಿ ನಾಲ್ವರು ಹೆಣ್ಣು ಮಕ್ಕಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇದಪ್ಪಾ ಶಿಕ್ಷೆ ಅಂದ್ರೆ! ಅಪ್ರಾಪ್ತ ಸೋದರ ಸಂಬಂಧಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಪಾಪಿಗೆ 135 ವರ್ಷ ಸೆರೆವಾಸ
ಸ್ವಾಮಿ ಪೂರ್ಣಾನಂದ, 64 ವರ್ಷದ ಅವಿವಾಹಿತ ವ್ಯಕ್ತಿಯಾಗಿದ್ದು, ಇವರು ಡಬಲ್ ಸ್ನಾತಕೋತ್ತರ ಪದವಿ, ಬಿ.ಎಡ್., ಮತ್ತು ಕಾನೂನು ಪದವಿಗಳನ್ನು ಪಡೆದಿದ್ದಾರೆ. ಇವರ ವಿರುದ್ಧ ಅತ್ಯಾಚಾರ ಕೇಸ್ ಮಾತ್ರವಲ್ಲದೆ ಇತರೆ ಹಲವು ಪ್ರಕರಣಗಳಿವೆ ಎಂದೂ ತಿಳಿದುಬಂದಿದೆ. ಭೂ ವಿವಾದ ಕೇಸ್ಗಳು ಸಹ ಆರೋಪಿಯ ಮೇಲಿವೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನೊಂದೆಡೆ, ಈ ಆಶ್ರಮದ 9.5 ಎಕರೆ ಜಾಗವೂ ವಿವಾದದಲ್ಲಿದೆ ಎಂದು ತಿಳಿದುಬಂದಿದೆ. ಆದರೆ, ಜಾಗದ ಮೇಲೆ ಕಣ್ಣಿಟ್ಟಿರುವವರ ಪ್ರೇರಣೆಯಿಂದ ತನ್ನ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಸ್ವಾಮಿ ಪೂರ್ಣಾನಂದ ಪೊಲೀಸರಿಗೆ ತಿಳಿಸಿದ್ದಾರೆ ಎಂದೂ ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ