ಅಗ್ರಾ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಂದು ಕಡೆ ಅದು ಉಂಡು ಮಲಗಿದ ನಂತರವೂ ಮುಂದುವರೆದಿದ್ದು ಬೀದಿಗೆ ಬಂದಿದೆ. ಗಂಡ ಹೆಂಡತಿಯನ್ನು ನಡುರಸ್ತೆಯಲ್ಲಿ ಥಳಿಸಿದ್ದಾನೆ. ಗಂಡನೋರ್ವ ಹೆಂಡತಿಯನ್ನು ಕರೆಂಟು ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಜುಲೈ 14 ರಂದು ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಳಿಕ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯಕ್ಕೆ ಆಗ್ರಹಿಸಿದ್ದಾಳೆ.
22 ಸೆಕೆಂಡುಗಳ ಈ ವಿಡಿಯೋದಲ್ಲಿ ಶ್ಯಾಮ್ಬಿಹಾರಿ ಎಂಬಾತ ತನ್ನ ಪತ್ನಿ ಕುಸುಮಾ ದೇವಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾನೆ. ಕಂಬಕ್ಕೆ ಕಟ್ಟಿ ಥಳಿಸಿದ ಬಳಿಕವೂ ಸಮಾಧಾನಗೊಳ್ಳದ ಆತ ನಂತರ ಕಂಬದಿಂದ ಬಿಚ್ಚಿ ಆಕೆಯನ್ನು ನೆಲದಲ್ಲಿ ಎಳೆದಾಡಿ ಥಳಿಸಿದ್ದಾನೆ. ಅಗ್ರಾದ ಸಿಕಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಸೆನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಮಹಿಳೆಯ ಪತಿ ಶ್ಯಾಮ್ಬಿಹಾರಿ ಹಾಗೂ ಆತನ ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆಯ ಬಳಿಕ ಇಬ್ಬರು ನಾಪತ್ತೆಯಾಗಿದ್ದಾರೆ. ಜುಲೈ 14 ರಂದೇ (ಗುರುವಾರ) ಈ ಘಟನೆ ನಡೆದಿದ್ದು, ಜುಲೈ 20 ರಂದು (ಬುಧವಾರ) ಇದರ ವಿಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಶ್ಯಾಮ್ಬಿಹಾರಿ ಹಾಗೂ ಹಲ್ಲೆಗೊಳಗಾದ ಸಂತ್ರಸ್ತೆಯನ್ನು ಆತನ ಪತ್ನಿ ಕುಸುಮಾದೇವಿ ಎಂದು ಗುರುತಿಸಲಾಗಿದೆ ಎಂದು ಸಿಕಂದ್ರಾ ಪೊಲೀಸ್ ಸ್ಟೇಷನ್ ಉಸ್ತುವಾರಿ ಆನಂದ್ ಕುಮಾರ್ ಶಹಿ ಹೇಳಿದ್ದಾರೆ.
ಶ್ಯಾಮ್ಬಿಹಾರಿ ಹಾಗೂ ಆತನ ತಾಯಿ ಬರ್ಫಾ ದೇವಿ ವಿರುದ್ಧ ಐಪಿಸಿ ಸೆಕ್ಷನ್ಗಳಾದ 323ರ (ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು), 504 (ಉದ್ದೇಶ ಪೂರ್ವಕವಾಗಿ ಅವಮಾನಿಸುವುದು), 342 (ಅಕ್ರಮವಾಗಿ ಬಂಧನದಲ್ಲಿಡುವುದು) ಹಾಗೂ 354 (ಮಹಿಳೆಯ ನಮ್ರತೆಯನ್ನು ದುರ್ಬಳಕೆ ಮಾಡುವುದು) ಇವುಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆಯೂ ಪತಿ ನನಗೆ ಹಲ್ಲೆ ಮಾಡಿದ್ದ. ಹಲ್ಲೆ ಮಾಡಿದ ಬಳಿಕ ಪೊಲೀಸರಿಗೆ ದೂರು ನೀಡದಂತೆ ತನ್ನ ಅತ್ತೆ ಹಾಗೂ ಪತಿ ಬೆದರಿಕೆ ಹಾಕಿದರು ಎಂದು ಕುಸುಮಾದೇವಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ನಾನು ಪೊಲೀಸರಿಗೆ ದೂರು ನೀಡಲು ಹೊರಟಿದ್ದೇನೆ ಎಂಬುದು ತಿಳಿಯುತ್ತಿದ್ದಂತೆ ಪತಿ ನನ್ನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಲು ಶುರು ಮಾಡಿದ. ಈ ವೇಳೆ ಮನೆಯ ಸಮೀಪದವರು ಈ ಘಟನೆಯನ್ನು ವಿಡಿಯೋ ರೆಕಾರ್ಡ್ ಮಾಡಿದ್ದರು.
ಮದುವೆಯಾದ ನಾಲ್ಕೇ ತಿಂಗಳಿಗೆ ಹಂತಕಿಯಾದ ಹೆಂಡತಿ, ಗಂಡನ ಹತ್ಯೆಗೆ ಕಾರಣವಾಯ್ತು ಜೀನ್ಸ್!
ಇತ್ತೀಚೆಗೆ ಗಂಡ ಹೆಂಡಿರ ಜಗಳ ಆಗಾಗ ಸುದ್ದಿಯಾಗುತ್ತಿದೆ. ಕೆಲವೊಂದು ಕೋರ್ಟ್ ಕೇಸ್ಗಳಲ್ಲಿ ಹಿರಿಯರ ಪಂಚಾಯಿತಿಯಲ್ಲಿ ಅಂತ್ಯವಾದರೆ ಮತ್ತೆ ಕೆಲ ಪ್ರಕರಣಗಳಲ್ಲಿ ಪ್ರಾಣಕ್ಕೆ ಸಂಚಾಕಾರ ತಂದೆ ಘಟನೆಗಳು ನಡೆದಿವೆ. ಕೆಲದಿನಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಚೀಟಿ ಹಾಕಿದ್ದಕ್ಕೆ ದಿನಾ ಬೈಯುತ್ತಿದ್ದ ಗಂಡನನ್ನೇ ಹೆಂಡತಿ ಸುಪಾರಿ ನೀಡಿ ಕೊಲೆ ಮಾಡಿದ ಘಟನೆ ನಡೆದಿತ್ತು. ಸ್ನೇಹಿತರ ಬಳಿ ಚೀಟಿ ಹಾಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಹೆಂಡತಿಯ ಸಾಲವನ್ನ ತೀರಿಸಿದ ಗಂಡ ನಿತ್ಯವೂ ಆಕೆಗೆ ಬೈಯುತ್ತಿದ್ದ, ಗಂಡನ ಬೈಗುಳಕ್ಕೆ ಬೇಸತ್ತ ಹೆಂಡತಿ ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ದಳು. ಪೊಲೀಸರ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ.
triple talaq to ill wife: ಎಂಥಾ ಗಂಡ.... ಡಾಕ್ಟರ್ ಬಳಿ ಕರೆದುಕೊಂಡು ಹೋಗು ಎಂದಿದ್ದಕ್ಕೆ ತಲಾಖ್
ಕಳೆದ ಮೇ 25 ರಂದು ನಡೆದ ದರೋಡೆ ಯತ್ನ ಕೇಸ್ಗೆ ಈಗ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿಯೇ ಗಂಡನ ಕೊಲೆಗೆ ಸುಫಾರಿ ನೀಡಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ