Shikhar Dhawan wife Aesha Mukerji: ಶಿಖರ್ ಧವನ್‌ಗೆ ಸಿಹಿ ಸುದ್ದಿ ನೀಡಿದ ಪಟಿಯಾಲ ಕೋರ್ಟ್..!

By Naveen KodaseFirst Published Feb 5, 2023, 4:20 PM IST
Highlights

ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್‌ಗೆ ಕೋರ್ಟ್‌ನಲ್ಲಿ ಗೆಲುವು
ದೂರವಾಗಿರುವ ಧವನ್‌ ಪತ್ನಿ ಆಯೆಷಾ ಮುಖರ್ಜಿಗೆ ಪಟಿಯಾಲ ಹೌಸ್ ಕೋರ್ಟ್ ಎಚ್ಚರಿಕೆ
ಧವನ್ ವಿರುದ್ದ ಯಾವುದೇ ಮಾನಹಾನಿಯಾಗುವಂತಹ ಪ್ರಕ್ರಿಯೆ ನಡೆಸದಂತೆ ಸೂಚನೆ

ನವದೆಹಲಿ(ಫೆ.05): ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ಶಿಖರ್ ಧವನ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ ಒಂದು ಸಿಹಿ ಸುದ್ದಿಯನ್ನು ನೀಡಿದ್ದು, ಧವನ್ ವಿರುದ್ದ ಎಲ್ಲಿಯೂ ಯಾವುದೇ ಮಾನಹಾನಿಯಾಗುವಂತಹ ಹೇಳಿಕೆ ನೀಡಬಾರದು ಎಂದು ಪತ್ನಿ ಆಯೆಷಾ ಮುಖರ್ಜಿಗೆ ಸೂಚಿಸಿದೆ. ಇದು ಶಿಖರ್ ಧವನ್‌ಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಸದ್ಯ ಶಿಖರ್ ಧವನ್ ಹಾಗೂ ಆಯೆಷಾ ಮುಖರ್ಜಿ ನಡುವೆ ವಿಚ್ಛೇದನಾ ಪ್ರಕ್ರಿಯೆ ಜಾರಿಯಲ್ಲಿದೆ. ಇದೇ ಸಂದರ್ಭದಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ತಮ್ಮ ಚಾರಿತ್ರ್ಯವಧೆ ಮಾಡುವಂತಹ ಪ್ರಯತ್ನವನ್ನು ಆಯೆಷಾ ಮುಖರ್ಜಿ ಮಾಡುತ್ತಿದ್ದಾರೆ ಎಂದು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಈ ಮನವಿಯನ್ನು ಆಲಿಸಿದ ಪಟಿಯಾಲ ಹೌಸ್ ಕೋರ್ಟ್‌, ಆಯೆಷಾಗೆ ಹೀಗೆಲ್ಲಾ ಮಾಡಬಾರದು ಎಂದು ಸೂಚಿಸಿದೆ.

2020ರಿಂದಲೇ ಪ್ರತ್ಯೇಕವಾಗಿರುವ ಶಿಖರ್ ಧವನ್ ಹಾಗೂ ಆಯೆಷಾ ಮುಖರ್ಜಿ:

ಆಯೆಷಾ ಮುಖರ್ಜಿ ಆಸ್ಟ್ರೇಲಿಯಾ ಮೂಲದ ನಾಗರೀಕರಾಗಿದ್ದು, ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸಿ 2012ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದು ಆಯೆಷಾ ಅವರಿಗೆ ಎರಡನೇ ವಿವಾಹವಾಗಿತ್ತು. ಧವನ್ ಮದುವೆಗೂ ಮುನ್ನ ಆಯೆಷಾಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಧವನ್ ಅವರನ್ನು ಮದುವೆಯಾದ ಬಳಿಕ ಆಯೆಷಾ ಮುಖರ್ಜಿ 2014ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಜ್ವರಾವರ್ ಎಂದು ಹೆಸರಿಟ್ಟಿದ್ದಾರೆ.

ಮುಗಿಯಿತಾ ಈ ಇಬ್ಬರು Team India ಸ್ಟಾರ್ ಕ್ರಿಕೆಟಿಗರ ಟಿ20 ವೃತ್ತಿಬದುಕು..?

ಶಿಖರ್ ಧವನ್ ಹಾಗೂ ಆಯೆಷಾ ಮುಖರ್ಜಿ ಜೋಡಿ ಬಿಂದಾಸ್ ಜೀವನವನ್ನು ನಡೆಸುತ್ತಾ ಚೆನ್ನಾಗಿಯೇ ಇದ್ದರು. ಆದರೆ 2020 ಬರುತ್ತಿದ್ದಂತೆಯೇ ಈ ಸುಂದರ ಜೋಡಿಯ ಮೇಲೆ ಯಾವುದೋ ಕೆಟ್ಟ ಕಣ್ಣು ಬಿದ್ದಿತು. ಹೀಗಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಯಿತು. ಅದು ಯಾವ ಹಂತಕ್ಕೆ ತಲುಪಿತು ಎಂದರೇ, ಇಬ್ಬರೂ ವಿಚ್ಛೇದನಾ ಪಡೆಯುವ ಹಂತಕ್ಕೆ ಬೆಳೆದು ನಿಂತಿದೆ. 2020ರಿಂದೀಚೆಗೆ ಈ ಇಬ್ಬರು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದಾರೆ. ಪುತ್ರ ಜ್ವರಾವರ್ ತಮ್ಮ ಅಮ್ಮನ ಜತೆ ಇದ್ದಾನೆ. ಇನ್ನು ಸಮಯ ಸಿಕ್ಕಾಗಲೆಲ್ಲಾ ಶಿಖರ್ ಧವನ್ ಕೂಡಾ ತಮ್ಮ ಪುತ್ರನನ್ನು ಭೇಟಿಯಾಗಿ ಮಾತನಾಡುತ್ತಿರುತ್ತಾರೆ. ಇನ್ನು ಧವನ್, ಆಯೆಷಾ ಮುಖರ್ಜಿಯ ಇಬ್ಬರು ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ನ್ಯಾಯಮೂರ್ತಿ ಹರೀಶ್‌ ಕುಮಾರ್ ಅವರಿಂದ ಮಹತ್ತರ ಆದೇಶ: 

ಡೆಲ್ಲಿಯ ಪಟಿಯಾಲ ಹೌಸ್ ಕೋರ್ಟ್‌ನ ನ್ಯಾಯಮೂರ್ತಿ ಹರೀಶ್ ಕುಮಾರ್, ಆಯೆಷಾ ಮುಖರ್ಜಿಗೆ, ಶಿಖರ್ ಧವನ್ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ, ಮುದ್ರಣ ಮಾಧ್ಯಮ, ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಯಾವುದೇ ಅಪಮಾನಕಾರಿ ಹಾಗು ಚಾರಿತ್ರ್ಯವಧೆಯಾಗುವಂತಹ ಸುಳ್ಳು ಸುದ್ದಿಯನ್ನು ಹರಡಬಾರದು. ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಗೌರವ ಹಾಗೂ ಮರ್ಯಾದೆ ಇರುತ್ತದೆ. ಸಾಕಷ್ಟು ಕಷ್ಟಪಟ್ಟು ಸಮಾಜದಲ್ಲಿ ಅವರೆಲ್ಲರೂ ಗೌರವ ಹಾಗೂ ಹೆಸರನ್ನು ಸಂಪಾದಿಸಿರುತ್ತಾರೆ. ಒಮ್ಮೆ ಏನಾದರೂ ಮಾನಹಾನಿಯಾದರೇ, ಸಾಕಷ್ಟು ನಷ್ಟವಾಗುತ್ತದೆ ಎಂದು ನ್ಯಾಯಮೂರ್ತಿ ಹರೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿ ಶಿಖರ್ ಧವನ್:  

37 ವರ್ಷದ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಕಳೆದ ಕೆಲ ವರ್ಷಗಳಿಂದ ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ಡಿಸೆಂಬರ್‌ನಿಂದೀಚೆಗೆ ಧವನ್, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಎದುರು ಶಿಖರ್ ಧವನ್, 07, 08 ಹಾಗೂ 03 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಇದರ ಬೆನ್ನಲ್ಲೇ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಹಾಗೂ ಶುಭ್‌ಮನ್ ಗಿಲ್, ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಇನಿಂಗ್ಸ್ ಆಡುವ ಮೂಲಕ ಆಯ್ಕೆ ಸಮಿತಿ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ 2023ರಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಿಖರ್ ಧವನ್, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನಿಸಿದೆ.

click me!