
ಬೆಂಗಳೂರು: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇತ್ತೀಚೆಗಷ್ಟೇ ಖಾಸಗಿ ಶೋವೊಂದರಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮಾಡಿದ ಒಂದು ಚಾಣಾಕ್ಷ ನಡೆ ತಮಗೆ ಟಿ20 ವಿಶ್ವಕಪ್ ಗೆಲ್ಲಲು ಹೇಗೆ ನೆರವಾಯಿತು ಎಂದು ಹೇಳಿದ್ದರು. ಈ ವಿಚಾರವಾಗಿ ಸ್ವತಃ ರಿಷಭ್ ಪಂತ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು ಕೊನೆಯ 30 ಎಸೆತಗಳಲ್ಲಿ 30 ರನ್ಗಳ ಅಗತ್ಯವಿತ್ತು. ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ಅನಾಯಾಸವಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ದಿಢೀರ್ ಎನ್ನುವಂತೆ ರಿಷಭ್ ಪಂತ್ ಅವರ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತು. ತಕ್ಷಣವೇ ಫಿಸಿಯೋ ಮೈದಾನಕ್ಕೆ ಓಡೋಡಿ ಬಂದು ನೋವು ಕಾಣಿಸಿಕೊಂಡ ಭಾಗಕ್ಕೆ ಟೇಪ್ ಸುತ್ತಿದ್ದರು. ಈ ಘಟನೆಯಿಂದಾಗಿ ಒಳ್ಳೆಯ ಲಯದಲ್ಲಿದ್ದ ದಕ್ಷಿಣ ಆಫ್ರಿಕಾದ ಬ್ಯಾಟರ್ಗಳು ಲಯ ಕಳೆದುಕೊಳ್ಳುವಂತಾಯಿತು. ಪಂತ್ ಅವರ ಈ ಚಾಣಾಕ್ಷ ನಡೆ ನಮಗೆ ಪಂದ್ಯ ಗೆಲ್ಲುವಂತೆ ಮಾಡಲು ಸಹಕಾರಿಯಾಯಿತು ಎಂದು ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರಿಷಭ್ ಪಂತ್ ಹೇಳಿದ್ದರು.
ಟಿ20 ವಿಶ್ವಕಪ್ ಫೈನಲ್ ಗೆಲ್ಲಲು ಪಂತ್ ಮಾಡಿದ ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ ರೋಹಿತ್ ಶರ್ಮಾ!
ಈ ಕುರಿತಂತೆ ರಿಷಭ್ ಪಂತ್ ಮೊದಲ ಬಾರಿಗೆ ಮಾತನಾಡಿದ್ದು, "ಕಳೆದ 2-3 ಓವರ್ನಲ್ಲಿ ದಕ್ಷಿಣ ಆಫ್ರಿಕಾಗೆ ಸಾಕಷ್ಟು ರನ್ ಹರಿದು ಬಂದವು, ಇದಕ್ಕಿದ್ದಂತೆಯೇ ಪಂದ್ಯ ದಕ್ಷಿಣ ಆಫ್ರಿಕಾದತ್ತ ವಾಲುವಂತೆ ಭಾಸವಾಯಿತು. ಇದಕ್ಕೆ ಹೇಗಾದರೂ ಮಾಡಿ ಬ್ರೇಕ್ ಹಾಕಲೇಬೇಕು ಎಂದು ಯೋಚಿಸುತ್ತಿದ್ದೆ. ಅದರಲ್ಲೂ ಟಿ20 ವಿಶ್ವಕಪ್ ಫೈನಲ್ ಆಡುವ ಅವಕಾಶ ಮತ್ತೆ ಯಾವಾಗ ಸಿಗುತ್ತದೋ ಏನೋ, ಹೀಗಾಗಿಯೇ ನಮ್ಮ ಫಿಸಿಯೋಗೆ ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ, ಸಾಧ್ಯವಾದಷ್ಟು ಸಮಯ ವ್ಯರ್ಥ ಮಾಡಿ ಎಂದು ಹೇಳಿದೆ" ಎಂದು ಪಂತ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
"ಫಿಸಿಯೋ ನನ್ನ ಬಳಿ ಈಗ ನೋವು ಕಡಿಮೆಯಾಗಿದೆಯೇ ಎಂದು ಕೇಳಿದರು. ನಾನು ಆಗ ಸುಮ್ಮನೆ ನಾಟಕ ಮಾಡುತ್ತಿದ್ದೇನೆ ಎಂದೆ. ಹೀಗೆ ಪಂದ್ಯ ನಡೆಯುವುದನ್ನು ಕೊಂಚ ನಿಧಾನವಾಗಿಸುವುದರಿಂದ ಎಲ್ಲಾ ಬಾರಿಯೂ ಅನುಕೂಲವಾಗುತ್ತದೆ ಎಂದೇನೂ ಹೇಳುವುದಿಲ್ಲ. ಆದರೆ ಕೆಲವೊಮ್ಮೆಯಂತೂ ಖಂಡಿತ ನೆರವಾಗುತ್ತದೆ. ಅದರಲ್ಲೂ ಫೈನಲ್ನಂತಹ ಸಂದರ್ಭದಲ್ಲಿ ಅದು ನೆರವಿಗೆ ಬಂದರೆ ಅದಕ್ಕಿಂತ ಇನ್ನೇನು ಬೇಕು ಹೇಳಿ" ಎಂದು ರಿಷಭ್ ಪಂತ್ ಹೇಳಿದ್ದಾರೆ.
ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ; ಮಾರಕ ವೇಗಿಗೆ ಉಪನಾಯಕ ಪಟ್ಟ!
ಹೀಗಿದೆ ನೋಡಿ ರಿಷಭ್ ಪಂತ್ ಆಡಿದ ಮಾತುಗಳು:
2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಟಿ20 ವಿಶ್ವಕಪ್ ಗೆಲ್ಲಲು ಪದೇ ಪದೇ ವಿಫಲವಾಗುತ್ತಾ ಬಂದಿತ್ತು. ಆದರೆ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬಲಾಢ್ಯ ತಂಡಗಳನ್ನು ಬಗ್ಗುಬಡಿದು ಅಜೇಯವಾಗಿಯೇ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.