18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಚೆಂಡಿಗೆ ಎಂಜಲು ಬಳಸಲು ಅನುಮತಿ, 2ನೇ ಇನ್ನಿಂಗ್ಸ್ನ 11ನೇ ಓವರ್ನಲ್ಲಿ ಚೆಂಡು ಬದಲು ಮತ್ತು ನಿಧಾನಗತಿ ಬೌಲಿಂಗ್ಗೆ ನಾಯಕರಿಗೆ ದಂಡ ವಿಧಿಸುವ ನಿಯಮಗಳನ್ನು ಪರಿಷ್ಕರಿಸಲಾಗಿದೆ.
ಬೆಂಗಳೂರು: ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕ್ಷಣಗಣನೆ ಆರಂಭವಾಗಿದೆ. 2008ರಲ್ಲಿ ಆರಂಭವಾದ ಭಾರತದ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ 17 ಯಶಸ್ವಿ ಆವೃತ್ತಿಗಳನ್ನು ಮುಗಿಸಿ ಇದೀಗ 18ನೇ ಆವೃತ್ತಿಯ ಟೂರ್ನಿಗೆ ಸಜ್ಜಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದೆ.
ಇನ್ನು ಮಿಲಿಯನ್ ಡಾಲರ್ ಟಿ20 ಲೀಗ್ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಯನ್ನು ಇನ್ನಷ್ಟು ಸ್ಪರ್ಧಾತ್ಮಕಗೊಳಿಸಲು ಹಾಗೂ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಐಪಿಎಲ್ ರೂಲ್ಸ್ನಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಅಷ್ಟಕ್ಕೂ ಬಿಸಿಸಿಐ ಜಾರಿಗೆ ತಂದಿರುವ ಆ ಹೊಸ ರೂಲ್ಸ್ಗಳೇನು? ಇದರಿಂದ ಯಾರಿಗೆ ಹೆಚ್ಚು ಪ್ರಯೋಜನ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಇದನ್ನೂ ಓದಿ: ಆರ್ಸಿಬಿ ತವರಿನ ಪಂದ್ಯಗಳ ಟಿಕೆಟ್ ಈ ಸಲವೂ ದುಬಾರಿ! ಒಂದು ಟಿಕೆಟ್ ಬೆಲೆ ಕೇವಲ ₹42,000
ಚೆಂಡಿಗೆ ಎಂಜಲು ಬಳಸಲು ಅನುಮತಿ
18ನೇ ಆವೃತ್ತಿಯ ಆಟಗಾರರು ಚೆಂಡಿಗೆ ಎಂಜಲು ಬಳಸಲು ಬಿಸಿಸಿಐ ಅನುಮತಿ ನೀಡಿದೆ. ಗುರುವಾರ ಕೇಂದ್ರ ಕಚೇರಿಯಲ್ಲಿ ನಡೆದ ಐಪಿಎಲ್ ನಾಯಕರ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಿತು. ಇದಕ್ಕೆ ಬಹುತೇಕ ನಾಯಕರು ಸಮ್ಮತಿಸಿದ ಕಾರಣ ಎಂಜಲು ಬಳಕೆಗೆ ಅನುಮತಿ ನೀಡಲಾಯಿತು.
2020ರಲ್ಲಿ ಕೋವಿಡ್ನಿಂದಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ಐಸಿಸಿ ನಿಷೇಧಿಸಿತ್ತು. ಇದರಿಂದಾಗಿ ಚೆಂಡಿನ ಹೊಳಪು ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಚೆಂಡು ಒಂದು ಬದಿಯ ಹೊಳಪು ಕಾಪಾಡುವ ಮೂಲಕ ಚೆಂಡನ್ನು ಸ್ವಿಂಗ್ ಮಾಡಲು ಅನುಕೂಲವಾಗಲಿದೆ.
ಇದನ್ನೂ ಓದಿ: IPL 2025ಗೂ ಮುನ್ನ ರಾಜಸ್ಥಾನ ರಾಯಲ್ಸ್ಗೆ ಬಿತ್ತು ಬಲವಾದ ಪೆಟ್ಟು; ಸಂಜು ಸ್ಯಾಮ್ಸನ್ ಔಟ್, ಈತನೇ ಹೊಸ ಕ್ಯಾಪ್ಟನ್!
2ನೇ ಇನ್ನಿಂಗ್ಸ್ನ 11ನೇ ಓವರ್ನಲ್ಲಿ ಚೆಂಡು ಬದಲು
ಐಪಿಎಲ್ನಲ್ಲಿ ಇಬ್ಬನಿಯಿಂದಾಗಿ ಚೆಂಡು ಹೆಚ್ಚು ಒದ್ದೆಯಾಗಿ ಬೌಲ್ ಮಾಡುವ ತಂಡಕ್ಕೆ ಸಮಸ್ಯೆಯಾಗಲಿರುವ ಕಾರಣಕ್ಕೆ ಸಂಜೆ ಪಂದ್ಯಗಳ ವೇಳೆ 2ನೇ ಇನ್ನಿಂಗ್ಸ್ನ 11ನೇ ಓವರ್ನಲ್ಲಿ ಚೆಂಡನ್ನು ಬದಲಿಸುವುದಾಗಿ ಬಿಸಿಸಿಐ ತಿಳಿಸಿದೆ. ಬಳಕೆಯಾಗಿರುವ ತೇವಾಂಶವಿಲ್ಲದ ಚೆಂಡನ್ನು ಆಯ್ಕೆ ಮಾಡಲಾಗುತ್ತದೆಯೇ ವಿನಃ ಹೊಸ ಚೆಂಡನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನಿಧಾನಗತಿ ಬೌಲಿಂಗ್ಗಿನ್ನು ನಾಯಕರಿಗೆ ನಿಷೇಧವಿಲ್ಲ
ಐಪಿಎಲ್ನಲ್ಲಿ ತಂಡವೊಂದು 3 ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕರಿಗೆ ಒಂದು ಪಂದ್ಯ ನಿಷೇಧ ಹೇರುವ ನಿಯಮವನ್ನು ಈ ಬಾರಿ ಬಿಸಿಸಿಐ ಬದಲಾಯಿಸಿದೆ. ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ತಂಡ ನಿಗದಿತ ಅವಧಿಯಲ್ಲಿ ಬೌಲಿಂಗ್ ಮುಗಿಸದಿದ್ದರೆ, ನಾಯಕರಿಗೆ ದಂಡ ವಿಧಿಸಿ, 1 ಡಿಮೆರಿಟ್ ಅಂಕ ನೀಡಲಾಗುತ್ತದೆ. ಡಿಮೆರಿಟ್ ಅಂಕದ ಅವಧಿ 3 ವರ್ಷ ಇರಲಿದ್ದು, ಈ ಅವಧಿಯಲ್ಲಿ 4 ಡಿಮೆರಿಟ್ ಅಂಕ ಪಡೆದರೆ ನಾಯಕನಿಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸುವುದಾಗಿ ಬಿಸಿಸಿಐ ತಿಳಿಸಿದೆ.
ಇದನ್ನೂ ಓದಿ: ಈ ಸಲದ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡ ಇದೇನಾ?
ಬಿಸಿಸಿಐ ಹಳೆ ರೂಲ್ಸ್ನಿಂದಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಮೂರು ಬಾರಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿತ್ತು.