
ಪುಣೆ (ಮೇ.14): ಸ್ಯಾಮ್ಸ್ ಬಿಲ್ಲಿಂಗ್ಸ್ (Sam Billings) ಹಾಗೂ ಆಂಡ್ರೆ ರಸೆಲ್ (Andre Russell) ಭರ್ಜರಿ ಜೊತೆಯಾಟದ ನೆರವಿನಿಂದ ಕೆಕೆಆರ್ (KKR) ತಂಡ ಐಪಿಎಲ್ 2022ರ (IPL 2022) ತನ್ನ 13ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ವಿರುದ್ಧ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. 94 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರಸೆಲ್ ಹಾಗೂ ಬಿಲ್ಲಿಂಗ್ಸ್ ಜೋಡಿ ಅಧಾರವಾಯಿತು.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ (Kolkata Knight Riders) ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಉಮ್ರಾನ್ ಮಲೀಕ್ (33ಕ್ಕೆ 3) ಮಾರಕ ದಾಳಿಯ ನಡುವೆಯೂ ಸ್ಯಾಮ್ ಬಿಲ್ಲಿಂಗ್ಸ್ (34 ರನ್, 29 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಆಂಡ್ರೆ ರಸೆಲ್ (49 *ರನ್, 28 ಎಸೆತ, 3 ಬೌಂಡರಿ, 4 ಸಿಕ್ಸರ್) ಸ್ಪೋಟಕ ಇನ್ನಿಂಗ್ಸ್ ನಿಂದಾಗಿ ಕೋಲ್ಕತ ನೈಟ್ ರೈಡರ್ಸ್ ತಂಡ 6 ವಿಕೆಟ್ ಗೆ 177 ರನ್ ಪೇರಿಸಿತು.
ಬ್ಯಾಟಿಂಗ್ ಮಾಡಲು ಆರಂಭಿಸಿದ ಕೆಕೆಆರ್ ತಂಡಕ್ಕೆ ಮತ್ತೊಮ್ಮೆ ಆರಂಭಿಕರು ಕೈಕೊಟ್ಟರು. ಕೆಟ್ಟ ಫಾರ್ಮ್ ನಲ್ಲಿರುವ ವೆಂಕಟೇಶ್ ಅಯ್ಯರ್ (7) ಮಾರ್ಕೋ ಜಾನ್ಸೆನ್ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. 17 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡ ಕೆಕೆಆರ್ ತಂಡಕ್ಕೆ 2ನೇ ವಿಕೆಟ್ ಗೆ ನಿತೇಶ್ ರಾಣಾ (26 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಅಜಿಂಕ್ಯ ರಹಾನೆ (28 ರನ್, 24 ಎಸೆತ, 3 ಸಿಕ್ಸರ್) 48 ರನ್ ಗಳ ಅಮೂಲ್ಯ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ಐದು ರನ್ ಗಳ ಅಂತರದಲ್ಲಿ ಇವರಿಬ್ಬರ ವಿಕೆಟ್ ಉರುಳಿದ್ದು ಕೆಕೆಆರ್ ತಂಡದ ಹಿನ್ನಡೆಗೆ ಕಾರಣವಾಯಿತು. ಜಮ್ಮುವಿನ ವೇಗಿ ಉಮ್ರಾನ್ ಮಲೀಕ್ ಇವರಿಬ್ಬರ ವಿಕಟ್ ಗಳನ್ನು ಉರುಳಿಸಿದರು.
ಒಂದು ಹಂತದಲ್ಲಿ 65 ರನ್ ಗೆ 1 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ ತಂಡ 94 ರನ್ ಗಳಿಸುವ ವೇಳೆಗೆ ಐದು ವಿಕೆಟ್ ಕಳೆದುಕೊಂಡಿತ್ತು. ಟೂರ್ನಿಯುದ್ಧಕ್ಕೂ ಕಳಪೆ ಫಾರ್ಮ್ ನಲ್ಲಿದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟಾದರು. 9 ಎಸೆತ ಎದುರಿಸಿದ ಶ್ರೇಯಸ್ 2 ಬೌಂಡರಿಗಳೊಂದಿಗೆ 15 ರನ್ ಸಿಡಿಸಿ ಉಮ್ರಾನ್ ಮಲೀಕ್ ಗೆ ವಿಕೆಟ್ ನೀಡಿದರು. ಶ್ರೇಯಸ್ ನಿರ್ಗಮನದ ಬಳಿಕ ಬಂದ ರಿಂಕು ಸಿಂಗ್ 6 ಎಸೆತಗಳಲ್ಲಿ 5 ರನ್ ಸಿಡಿಸಿ ಟಿ. ನಟರಾಜನ್ ಗೆ ಎಲ್ ಬಿಯಾದರು.
IPL 2022 ಟಾಸ್ ಗೆದ್ದ ಕೆಕೆಆರ್ ತಂಡದಿಂದ ಬ್ಯಾಟಿಂಗ್ ಆಯ್ಕೆ
ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ವೇಳೆ ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ಸ್ಫೋಟಕ ಆಲ್ರೌಂಡರ್ ಆಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ವಿಕೆಟ್ ಉಳಿಸಿಕೊಳ್ಳುವತ್ತ ಗಮನ ನೀಡಿದ ಈ ಜೋಡಿ, ಇನ್ನಿಂಗ್ಸ್ ಮುಕ್ತಾಯದ ಹಂತದಲ್ಲಿ ಸನ್ ರೈಸರ್ಸ್ ಬೌಲರ್ ಗಳನ್ನು ಬೆಂಡೆತ್ತುವಲ್ಲಿ ಯಶಸ್ವಿಯಾಯಿತು. 44 ಎಸೆತಗಳಲ್ಲಿ 63 ರನ್ ಜೊತೆಯಾಟವಾಡುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸುವಲ್ಲಿ ನೆರವಾದರು.
ನಿವೃತ್ತಿ ಘೋಷಣೆ ಮಾಡಿ ಟ್ವೀಟ್ ಮಾಡಿದ ಕೆಲ ನಿಮಿಷದಲ್ಲೇ ನಿರ್ಧಾರ ಬದಲಿಸಿದ ಅಂಬಟಿ ರಾಯುಡು!
ರಿಂಕು ಡಿಆರ್ ಎಸ್ ಡ್ರಾಮಾ: ರಿಂಕು ಸಿಂಗ್, ನಟರಾಜನ್ ಎಸೆತದಲ್ಲಿ ಔಟಾಗಿದ್ದು ಡಿಆರ್ ಎಸ್ ಡ್ರಾಮಾಗೆ ಕಾರಣವಾಯಿತು. ರಿಂಕು ಸಿಂಗ್ ಅವರನ್ನು ಔಟ್ ಎಂದು ಅನಿಲ್ ಚೌಧರಿ ತೀರ್ಪು ನೀಡಿದ ಬೆನ್ನಲ್ಲಿಯೇ ರುಂಕು ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಮಾತುಕತೆ ಆರಂಭಿಸಿದ್ದರು. ಈ ನಡುವೆ ಸ್ಯಾಮ್ ಬಿಲ್ಲಿಂಗ್ಸ್, ಡಿಆರ್ ಎಸ್ ಸಿಗ್ನಲ್ ಕೂಡ ಮಾಡಿದ್ದರು. ಆದರೆ, ಸಮಯ ಮೀರಿದನ್ನು ಅಂಪೈರ್ ಅನಿಲ್ ಚೌಧರಿ ತಿಳಿಸಿದ ಬಳಿಕ ರಿಂಕು ಸಿಂಗ್ ಮೈದಾನದಿಂದ ಹೊರನಡೆದರು. ಡಿಆರ್ ಎಸ್ ನಿಯಮದ ಪ್ರಕಾರ, ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ ಮನ್ ಡಿಆರ್ ಎಸ್ ಸಿಗ್ನಲ್ ಮಾಡಿದರೆ ಮಾತ್ರವೇ ಪರಿಗಣನೆ ಮಾಡಲಾಗುತ್ತದೆ. ಅದೇನೇ ಇದ್ದರೂ, ಈ ಡಿಆರ್ ಎಸ್ ತೆಗೆದುಕೊಂಡಿದ್ದಲ್ಲಿ ಅವರು ವ್ಯರ್ಥವಾಗುತ್ತಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.