ಭಾರತ-ಆಸ್ಟ್ರೇಲಿಯಾ ಫೈನಲ್‌ ಮ್ಯಾಚ್‌: ರಾಜ್ಯದ ಸ್ಟೇಡಿಯಂಗಳಲ್ಲಿ ಫೈನಲ್ ಪಂದ್ಯದ ಪ್ರಸಾರ

By Girish GoudarFirst Published Nov 19, 2023, 4:14 AM IST
Highlights

140 ಕೋಟಿಗೂ ಅಧಿಕ ಭಾರತೀಯರು ಹಾಗೂ ಕೋಟ್ಯಂತರ ಜಾಗತಿಕ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. 13ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಅಂತಿಮ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು(ಭಾನುವಾರ) ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 

ಬೆಂಗಳೂರು(ನ.19):  ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಏಕದಿನ ವಿಶ್ವಕಪ್‌ನ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್‌ ಪಂದ್ಯವನ್ನು ಕರ್ನಾಟಕದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆ ಮೇಲೆ ನೇರ ಪ್ರಸಾರ ಮಾಡುವಂತೆ ರಾಜ್ಯ ಕ್ರೀಡಾ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಗತ್ಯ ಪ್ರಚಾರ ಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ.

140 ಕೋಟಿಗೂ ಅಧಿಕ ಭಾರತೀಯರು ಹಾಗೂ ಕೋಟ್ಯಂತರ ಜಾಗತಿಕ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. 13ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಅಂತಿಮ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು(ಭಾನುವಾರ) ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 

ರಾಹುಲ್ ದ್ರಾವಿಡ್‌ಗಾಗಿ ಈ ವಿಶ್ವಕಪ್ ಗೆಲ್ಲಬೇಕು, ನಾಯಕ ರೋಹಿತ್ ಮಾತಿಗೆ ಫ್ಯಾನ್ಸ್ ಪ್ರತಿಕ್ರಿಯೆ!

ಈ ಬಾರಿ ಆಡಿರುವ ಎಲ್ಲ 10 ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಭಾರತ ಪ್ರಶಸ್ತಿ ಗೆಲ್ಲಲು ಹಾಟ್ ಫೇವರಿಟ್ ಆಗಿದ್ದರೆ, ಮೊದಲೆರಡು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡ ಬಳಿಕ ಸತತವಾಗಿ 8 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಎದುರಾಳಿಗೆ ಪ್ರಬಲ ಸವಾಲೊಡ್ಡಲು ಸಜ್ಜಾಗಿ ನಿಂತಿದೆ. ಒಟ್ಟಿನಲ್ಲಿ ‘ಸೂಪರ್ ಸಂಡೇ’ಯ ಕ್ರಿಕೆಟ್ ರಸದೌತಣ ಸವಿಯಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಭಾರತದ ಗೆಲುವಿಗೆ ಈಡುಗಾಯಿ ಒಡೆದು ಪ್ರಾರ್ಥನೆ

ಮಂಡ್ಯ: ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕು ಎಂದು ಪ್ರಾರ್ಥಿಸಿ ನಗರದ ಕಾಳಿಕಾಂಬ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಶನಿವಾರ ವಿಶೇಷ ಪೂಜೆ ಸಲ್ಲಿಸಿ ಎಂಟು ದಿಕ್ಕಿಗೂ ಈಡುಗಾಯಿ ಒಡೆದರು. 

ಕಳೆದ 3 ವಿಶ್ವಕಪ್‌ನಲ್ಲಿ ಎಡಭಾಗದಲ್ಲಿ ನಿಂತವರಿಗೆ ಒಲಿದಿದೆ ಟ್ರೋಫಿ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್!

ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫೈನಲ್ ಪಂದ್ಯ ನಡೆಯಲಿರುವ ಹಿನ್ನಲೆಯಲ್ಲಿ ಭಾರತ ಗೆಲುವು ಸಾಧಿಸಬೇಕೆಂದು ಬಿಜೆಪಿ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಬಿಜೆಪಿ ನಗರ ಉಪಾಧ್ಯಕ್ಷ ಶಿವಕುಮಾರ ಆರಾಧ್ಯ, ಶಕ್ತಿ ದೇವತೆ ಕಾಳಿಕಾಂಬ ದೇವಾಲಯದಲ್ಲಿ ಎಂಟು ದಿಕ್ಕಿಗೂ ಈಡುಗಾಯಿ ಹೊಡೆದು ನಮ್ಮ ಭಾರತ ದೇಶವು ವಿಶ್ವಕಪ್‌ನಲ್ಲಿ ಜಯಶೀಲರಾಗಿ ಬರಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ. ಆ ತಾಯಿ ಗೆಲವು ಸಾಧಿಸಲು ನಮ್ಮ ಆಟಗಾರರಿಗೆ ಶಕ್ತಿಕೊಡಲಿ ಎಂದರು. ಇದು ವಿಶ್ವದ ಕ್ರಿಕೆಟ್‌ ಅಭಿಮಾನಿಗಳ ಆಸೆಯೂ ನಮ್ಮ ಭಾರತ ಗೆಲ್ಲ ಬೇಕು ಎಂಬುದೇ ಆಗಿದೆ. ಇದರ ಅಂಗವಾಗಿ ಈಡುಗಾಯಿ ಹಾಗೂ ವಿಶೇಷ ಪೂಜೆ ಸಲ್ಲಿಸಿರುವ ಉದ್ದೇಶವೇ ಈ ಬಾರಿಯೂ ವಿಶ್ವಕಪ್‌ ಗೆಲುವು ಪಡೆದುಕೊಳ್ಳಬೇಕು. ಗೆದ್ದು ಬಾ ಭಾರತ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು. 

ಈ ವೇಳೆ ಮುಖಂಡರಾದ ಮಾದರಾಜ ಅರಸ್‌, ಹೊಸಹಳ್ಳಿ ಶಿವು, ಪ್ರಸನ್ನ, ಚಂದ್ರು, ನಂದೀಶ್‌, ಯೋಗೇಶ್‌, ವಿಜಯ್‌ಕುಮಾರ್ ಭಾಗವಹಿಸಿದ್ದರು.

click me!