
ಬೆಂಗಳೂರು(ನ.19): ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಏಕದಿನ ವಿಶ್ವಕಪ್ನ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವನ್ನು ಕರ್ನಾಟಕದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆ ಮೇಲೆ ನೇರ ಪ್ರಸಾರ ಮಾಡುವಂತೆ ರಾಜ್ಯ ಕ್ರೀಡಾ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಸಾರ್ವಜನಿಕರು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಗತ್ಯ ಪ್ರಚಾರ ಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ.
140 ಕೋಟಿಗೂ ಅಧಿಕ ಭಾರತೀಯರು ಹಾಗೂ ಕೋಟ್ಯಂತರ ಜಾಗತಿಕ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. 13ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ನ ಅಂತಿಮ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇಂದು(ಭಾನುವಾರ) ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ರಾಹುಲ್ ದ್ರಾವಿಡ್ಗಾಗಿ ಈ ವಿಶ್ವಕಪ್ ಗೆಲ್ಲಬೇಕು, ನಾಯಕ ರೋಹಿತ್ ಮಾತಿಗೆ ಫ್ಯಾನ್ಸ್ ಪ್ರತಿಕ್ರಿಯೆ!
ಈ ಬಾರಿ ಆಡಿರುವ ಎಲ್ಲ 10 ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಭಾರತ ಪ್ರಶಸ್ತಿ ಗೆಲ್ಲಲು ಹಾಟ್ ಫೇವರಿಟ್ ಆಗಿದ್ದರೆ, ಮೊದಲೆರಡು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡ ಬಳಿಕ ಸತತವಾಗಿ 8 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಎದುರಾಳಿಗೆ ಪ್ರಬಲ ಸವಾಲೊಡ್ಡಲು ಸಜ್ಜಾಗಿ ನಿಂತಿದೆ. ಒಟ್ಟಿನಲ್ಲಿ ‘ಸೂಪರ್ ಸಂಡೇ’ಯ ಕ್ರಿಕೆಟ್ ರಸದೌತಣ ಸವಿಯಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಭಾರತದ ಗೆಲುವಿಗೆ ಈಡುಗಾಯಿ ಒಡೆದು ಪ್ರಾರ್ಥನೆ
ಮಂಡ್ಯ: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕು ಎಂದು ಪ್ರಾರ್ಥಿಸಿ ನಗರದ ಕಾಳಿಕಾಂಬ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಶನಿವಾರ ವಿಶೇಷ ಪೂಜೆ ಸಲ್ಲಿಸಿ ಎಂಟು ದಿಕ್ಕಿಗೂ ಈಡುಗಾಯಿ ಒಡೆದರು.
ಕಳೆದ 3 ವಿಶ್ವಕಪ್ನಲ್ಲಿ ಎಡಭಾಗದಲ್ಲಿ ನಿಂತವರಿಗೆ ಒಲಿದಿದೆ ಟ್ರೋಫಿ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್!
ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಫೈನಲ್ ಪಂದ್ಯ ನಡೆಯಲಿರುವ ಹಿನ್ನಲೆಯಲ್ಲಿ ಭಾರತ ಗೆಲುವು ಸಾಧಿಸಬೇಕೆಂದು ಬಿಜೆಪಿ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಬಿಜೆಪಿ ನಗರ ಉಪಾಧ್ಯಕ್ಷ ಶಿವಕುಮಾರ ಆರಾಧ್ಯ, ಶಕ್ತಿ ದೇವತೆ ಕಾಳಿಕಾಂಬ ದೇವಾಲಯದಲ್ಲಿ ಎಂಟು ದಿಕ್ಕಿಗೂ ಈಡುಗಾಯಿ ಹೊಡೆದು ನಮ್ಮ ಭಾರತ ದೇಶವು ವಿಶ್ವಕಪ್ನಲ್ಲಿ ಜಯಶೀಲರಾಗಿ ಬರಬೇಕು ಎಂದು ಪ್ರಾರ್ಥನೆ ಮಾಡಿದ್ದೇವೆ. ಆ ತಾಯಿ ಗೆಲವು ಸಾಧಿಸಲು ನಮ್ಮ ಆಟಗಾರರಿಗೆ ಶಕ್ತಿಕೊಡಲಿ ಎಂದರು. ಇದು ವಿಶ್ವದ ಕ್ರಿಕೆಟ್ ಅಭಿಮಾನಿಗಳ ಆಸೆಯೂ ನಮ್ಮ ಭಾರತ ಗೆಲ್ಲ ಬೇಕು ಎಂಬುದೇ ಆಗಿದೆ. ಇದರ ಅಂಗವಾಗಿ ಈಡುಗಾಯಿ ಹಾಗೂ ವಿಶೇಷ ಪೂಜೆ ಸಲ್ಲಿಸಿರುವ ಉದ್ದೇಶವೇ ಈ ಬಾರಿಯೂ ವಿಶ್ವಕಪ್ ಗೆಲುವು ಪಡೆದುಕೊಳ್ಳಬೇಕು. ಗೆದ್ದು ಬಾ ಭಾರತ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಮುಖಂಡರಾದ ಮಾದರಾಜ ಅರಸ್, ಹೊಸಹಳ್ಳಿ ಶಿವು, ಪ್ರಸನ್ನ, ಚಂದ್ರು, ನಂದೀಶ್, ಯೋಗೇಶ್, ವಿಜಯ್ಕುಮಾರ್ ಭಾಗವಹಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.