
ಮುಂಬೈ(ಮೇ.21): ಕೊರೋನ ವೈರಸ್ ಕಾರಣ ಸ್ಥಗಿತಗೊಂಡಿರುವ ಐಪಿಎಲ್ 2021 ಟೂರ್ನಿಯನ್ನು ಇಂಗ್ಲೆಂಡ್ನಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯದ ಪಟೌಡಿ ಟೆಸ್ಟ್ ಸರಣಿಯನ್ನು ಮುಂದೂಡಲಾಗುತ್ತಿದೆ ಅನ್ನೋ ವರದಿಯನ್ನು ಬಿಸಿಸಿಐ ಸ್ಪಷ್ಟವಾಗಿ ನಿರಾಕರಿಸಿದೆ.
ಮೇ 29ಕ್ಕೆ ಐಪಿಎಲ್, ವಿಶ್ವಕಪ್ ಭವಿಷ್ಯ ನಿರ್ಧಾರ?
ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಐಪಿಎಲ್ 2021 ಟೂರ್ನಿಯನ್ನು ಇಂಗ್ಲೆಂಡ್ನಲ್ಲಿ ಆಯೋಜಿಸಲು, ಆಗಸ್ಟ್ತಿಂಗಳಲ್ಲಿ ಆಯೋಜಿಸಿರುವ ಪಟೌಡಿ ಟೆಸ್ಟ್ ಸರಣಿ ಮುಂದೂಡಲು ಬಿಸಿಸಿಐ, ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯಲ್ಲಿ ಮನವಿ ಮಾಡಿದೆ ಅನ್ನೋ ಸುಳ್ಳು ಸುದ್ದಿ ಹರಿದಾಡಿತ್ತು. ವೇಲ್ಸ್ ಕ್ರಿಕೆಟ್ ಮಂಡಳಿ ಸುಳ್ಳು ಪತ್ರ ಈ ಗೊಂದಲಕ್ಕೆ ಕಾರಣವಾಗಿತ್ತು.
ಐಪಿಎಲ್ ಆಯೋಜನೆ ಕುರಿತು ಬಿಸಿಸಿಐ ಯಾವುದೇ ಮನವಿಯನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಸಲ್ಲಿಸಿಲ್ಲ. ಟೆಸ್ಟ್ ಸರಣಿ ವೇಳಾಪಟ್ಟಿ ಬದಲಿಸಿ ಐಪಿಎಲ್ ಟೂರ್ನಿ ಆಯೋಜಿಸುವ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂಗೆ ಬಿಸಿಸಿಐ ಖಚಿತ ಮೂಲಗಳು ಸ್ಪಷ್ಟಪಡಿಸಿದೆ.
ಇನ್ನುಳಿದ ಐಪಿಎಲ್ ಪಂದ್ಯಗಳಿಗೆ ಆತಿಥ್ಯ ನೀಡಲು ಒಲವು ತೋರಿದ ಶ್ರೀಲಂಕಾ...
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಪಟೌಡಿ ಟೆಸ್ಟ್ ಸರಣಿಯನ್ನು 2 ವರ್ಷ ಮೊದಲೇ ನಿರ್ಧರಿಸಲಾಗಿದೆ. ಈ ಸರಣಿ ವೇಳಾಪಟ್ಟಿಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ. ಈ ಕುರಿತು ಈಗಾಗಲೇ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದೆ. ಬಿಸಿಸಿಐ ಈ ರೀತಿಯ ಯಾವುದೇ ಮನವಿ ಮಾಡಿಲ್ಲ ಎಂದಿದೆ.
ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸುವ ಉದ್ದೇಶವಿದೆ. ಆದರ ಭಾರತದಲ್ಲಿ ಕೊರೋನಾ ಪರಿಸ್ಥಿತಿ ಸಹಜಸ್ಥಿತಿಗೆ ಬಂದರೆ ಮಾತ್ರ ಈ ಆಯ್ಕೆಯಾಗಲಿದೆ. ಕೊರೋನಾ ಸ್ಥಿತಿಗತಿ ಸುಧಾರಿಸಿದಿದ್ದರೆ, ಯುಎಇ ಎರಡನೇ ಆಯ್ಕೆಯಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ಆರ್ಥಟನ್ ಖಾಸಗಿ ಮಾಧ್ಯಮವೊಂದಕ್ಕೆ ಬರೆದ ಲೇಖನದಲ್ಲಿ ಟೆಸ್ಟ್ ಸರಣಿ ವೇಳಾಪಟ್ಟಿ ಬದಲಾವಣೆಗೆ ಬಿಸಿಸಿಐ ಮನವಿ ಮಾಡಿದೆ ಎಂದು ಉಲ್ಲೇಖಿಸಿದ್ದರು. ಈ ಲೇಖನ ಐಪಿಎಲ್ ಆಯೋಜಿಸುವ ಸುಳ್ಳು ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಆದರೆ ಇದೀಗ ಎಲ್ಲಾ ಗೊಂದಲ ಹಾಗೂ ತಪ್ಪು ಮಾಹಿತಿಗೆ ಬಿಸಿಸಿಐ ತೆರೆ ಎಳೆದಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಪಟೌಡಿ ಟೆಸ್ಟ್ ಸರಣಿ ಆಗಸ್ಟ್ 4 ರಂದು ಆರಂಭಗೊಳ್ಳಲಿದ್ದು, ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ವೇಳಾಪಟ್ಟಿ ಬದಲಿಸುವ ಕುರಿತು ಹಲವು ಊಹಾಪೋಹಳಿಗೂ ಬಿಸಿಸಿಐ ತೆರೆ ಎಳೆದಿದೆ.
ಇದೇ ವೇಳೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ 100 ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯಾವುದೇ ಭಾರತೀಯ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ಅನುಮತಿ ನೀಡಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಮನ್ಸೂರ್ ಆಲಿ ಖಾನ್ ಪಟೌಡಿ:
ಟೀಂ ಇಂಡಿಯಾ ಮಾಜಿ ನಾಯಕ ಮನ್ಸೂರ್ ಆಲಿ ಖಾನ್ ಪಟೌಡಿ ಭಾರತ ಕಂಡ ಶ್ರೇಷ್ಠ ನಾಯಕ. ಬಲಗೈ ಬ್ಯಾಟ್ಸ್ಮನ್ ಹಾಗೂ ಮೀಡಿಯಂ ಪೇಸ್ ಬೌಲರ್ ಆಗಿದ್ದ ಪಟೌಡಿ, 1961ರಲ್ಲಿ ಟೀಂ ಇಂಡಿಯಾ ಪದಾರ್ಪಣೆ ಮಾಡಿದರು. ದೆಹಲಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ಟೀಂ ಇಂಡಿಯಾ ಜರ್ಸಿ ತೊಟ್ಟ ಪಟೌಡಿ, 1975ರಲ್ಲಿ ಮುಂಬೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ವಿದಾಯ ಘೋಷಿಸಿದು.
ಭಾರತದ ಪರ 46 ಟೆಸ್ಟ್ ಪಂದ್ಯದಿಂದ 2,793 ರನ್ ಸಿಡಿಸಿರುವ ಪಟೌಡಿ, 6 ಶತಕ ಹಾಗೂ 16 ಅರ್ಧಶತಕ ಸಿಡಿಸಿದ್ದಾರೆ. ಪಟೌಡಿ 40 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಸಿದ್ದಾರೆ. ಇದರಲ್ಲಿ 9 ಟೆಸ್ಟ್ ಸರಣಿ ಗೆಲುವು ದಾಖಲಿಸೋ ಮೂಲಕ ದಾಖಲೆ ಬರೆದಿದ್ದಾರೆ. ಪಟೌಡಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಟೆಸ್ಟ್ ಗೆಲುವು ಕಂಡಿತ್ತು. 1967ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಈ ಸಾಧನೆ ಮಾಡಿದೆ. ಪಟೌಡಿ ಸ್ಮರಣೆಗಾಗಿ ಭಾರತ ಹಾಗೂ ಇಂಗ್ಲೆಂಡ್ ಪಟೌಡಿ ಟೆಸ್ಟ್ ಸರಣಿ ಆಯೋಜಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.