
ಬೆಂಗಳೂರು (ಫೆ.08): ಕನ್ನಡ ಚಿತ್ರರಂಗದ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಎಂದರೆ ಅದು ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್. ಇದೀಗ ಇಡೀ ಭಾರತದಲ್ಲಿಯೇ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಕನ್ನಡ ಸಿನಿಮಾ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 1,200 ಕೋಟಿ ರೂ.ಗೂ ಅಧಿಕ ಆದಾಯವನ್ನು ಗಳಿಸಿಕೊಂಡಿದೆ. ಇದಾದ ನಂತರ ಯಶ್ ಅವರ ಇಮೇಜ್ ತುಂಬಾ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇದೀಗ ಕನ್ನಡದ ನಿರ್ದೇಶಕರು, ನಿರ್ಮಾಪಕರು ಯಶ್ ಅವರೊಂದಿಗೆ ಸಿನಿಮಾ ಮಾಡುವುದಕ್ಕೂ ಹಿಂದೇಟು ಹಾಕುವ ಪರಿಸ್ಥಿತಿ ಬಂದಿದೆ. ಏಕೆಂದರೆ ಯಶ್ ಇದೀಗ ಪ್ಯಾನ್ ಇಂಡಿಯಾ ನಟ, ಅವರಿಗೆ ಸಂಭಾವನೆ ಕೊಡುವುದಾಗಲೀ ಅಥವಾ ಅವರ ಆಲೋಚನೆಗಳಿಗೆ ನಾವು ಸಿನಿಮಾ ಮ್ಯಾಚ್ ಮಾಡುವುದಾಗಲೀ ಸಾಧ್ಯವಿಲ್ಲ ಎಂದು ಕೆಲವು ನಿರ್ದೇಶಕರೇ ಬಹಿರಂಗವಾಗಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಯಶ್ ಅವರಿಗೆ ಕೆಜಿಎಫ್-3 ಸಿನಿಮಾಗಿಂತಲೂ ಮೊದಲೇ ಟಾಕ್ಸಿಕ್ ಸಿನಿಮಾ ಮಾಡುತ್ತಿದ್ದಾರೆ.
ಈ ಟಾಕ್ಸಿಕ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾವಾಗಿದ್ದು, ಬಾಲಿವುಡ್, ಕಾಲಿವುಡ್ ಸೇರಿದಂತೆ ಅನೇಕ ಸ್ಟಾರ್ ನಟಿಯರನ್ನು ಸಿನಿಮಾಗೆ ಕರೆತಂದಿದ್ದಾರೆ. ಅದರಲ್ಲಿಯೂ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ (ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಅವರ ಎಸ್ಎಸ್ಎಂಬಿ ಸಿನಿಮಾದ ಸಂಭಾವನೆ ಹೊರತುಪಡಿಸಿ) ನಟಿ ನಯನತಾರಾ ಅವರನ್ನು ಟಾಕ್ಸಿನ್ ಸಿನಿಮಾ ಶೂಟಿಂಗ್ಗಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಈಗಾಗಲೇ ಸ್ಯಾಂಡಲ್ವುಡ್ನ ನಟ ಉಪೇಂದ್ರ ಅವರ ಸೂಪರ್ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು. ಇದೀಗ ಬಾಲಿವುಡ್ಗೆ ಎಂಟ್ರಿ ಕೊಟ್ಟ ನಂತರ ನಯನತಾರಾ ಕನ್ನಡ ಸಿನಿಮಾದಲ್ಲಿ ನಟಿಸಲು ಬೆಂಗಳೂರಿಗೆ ಶೂಟಿಂಗ್ಗಾಗಿ ಆಗಮಿಸಿದ್ದಾರೆ.
ಇದನ್ನೂ ಓದಿ: ಟಾಕ್ಸಿಕ್ಗಾಗಿ ಕಿಯಾರ, ಯಶ್ ಭರ್ಜರಿ ಸ್ಟೆಪ್ಸ್: ಕೊರಿಯೋಗ್ರಾಫ್ ಮಾಡ್ತಿರೋದು ಯಾರು?
ಟಾಕ್ಸಿನ್ ಸಿನಿಮಾ ಈಗಾಗಲೇ ಮುಂಬೈ, ಗೋವಾ ಭರದಿಂದ ಸಾಗಿದೆ. ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ಬೇಡಿಕೆ ನಟಿ ನಯನತಾರಾ, ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಟಾಕ್ಸಿಕ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯ ಬೆಂಗಳೂರಿನ ಹೆಚ್ಎಂಟಿ ಫ್ಯಾಕ್ಟರಿಯಲ್ಲಿ ನಡೆಯುತ್ತಿರುವ ಚಿತ್ರೀಕರಣಕ್ಕೆ ನಯನತಾರಾ, ಕಿಯಾರಾ, ತಾರಾ ಸುತಾರಿಯಾ, ಹುಮಾ ಖುರೇಶಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತುದೆ. ಆದರೆ, ಟಾಕ್ಸಿಕ್ ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಇದನ್ನೂ ಓದಿ: ಟಾಕ್ಸಿಕ್ ಸಿನಿಮಾಗೆ ಯಶ್ ಪಡೆದ ಸಂಭಾವನೆ ರಹಸ್ಯ ಹೊರಬಿತ್ತು; ಡಾಲಿಗೆ ಇಷ್ಟೊಂದು ಕಡಿಮೆನಾ?
ಟಾಕ್ಸಿಕ್ ಸಿನಿಮಾ ಸೆಟ್ ವಿವಾದ: ಬೆಂಗಳೂರಿನ ಹೆಚ್ಎಂಟಿ ಕಾರ್ಖಾನೆ ಆವರಣದ ಜಾಗದಲ್ಲಿ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಸೆಟ್ ಹಾಕಿದ್ದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಚಿತ್ರತಂಡದ ವಿರುದ್ಧ ಮರ ಕಡಿದ ಆರೋಪವನ್ನು ಮಾಡಿ ದೂರು ಕೊಟ್ಟಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಚಿತ್ರತಂಡ ಹೋರಾಟವನ್ನು ಮಾಡಿದೆ. ಶೂಟಿಂಗ್ ಸೆಟ್ ನಿರ್ಮಾಣಕ್ಕೆ ಮರಗಳನ್ನು ಕಡಿದಿದ್ದರು ಎಂದು ಆರೋಪ ಮಾಡಿದ್ದರು. ಈ ಬಗ್ಗೆ ಕೆಲವು ಏರಿಯಲ್ ವ್ಯೂವ್ ಫೋಟೋಗಳನ್ನು ಹಂಚಿಕೊಂಡಿದ್ದರು. ಅರಣ್ಯ ಇಲಾಖೆಯಿಂದ ಕ್ರಮ ಜರುಗಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.