'ಅಜಿತ್‌ಗಿಂತ ವಿಜಯ್ ದೊಡ್ಡ ಸ್ಟಾರ್' ಎಂದು ವಿವಾದ ಸೃಷ್ಟಿಸಿದ ದಿಲ್ ರಾಜು; ರೊಚ್ಚಿಗೆದ್ದ ತಲಾ ಅಭಿಮಾನಿಗಳು

By Shruthi KrishnaFirst Published Dec 17, 2022, 12:19 PM IST
Highlights

ತಮಿಳುನಾಡಿನಲ್ಲಿ ನಟ ಅಜಿತ್ ಗಿಂತ ವಿಜಯ್ ದೊಡ್ಡ ಸ್ಟಾರ್ ಎಂದು ನಿರ್ಮಾಪಕ ದಿಲ್ ರಾಜು ವಿವಾದ ಸೃಷ್ಟಿಸಿದ್ದಾರೆ. 

ಕಾಲಿವುಡ್‌ನಲ್ಲಿ ನಟ ಅಜಿತ್ ಮತ್ತು ದಳಪತಿ ವಿಜಯ್ ಇಬ್ಬರೂ ಬಿಗ್ ಸ್ಟಾರ್ಸ್. ಇಬ್ಬರಿಗೂ ತಮ್ಮದೇ ಆದ ಅಭಿಮಾನಿ ಬಳಗವಿದೆ. ತಮಿಳು ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲೂ ಇಬ್ಬರಿಗೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ತಮಿಳಿನ ಈ ಇಬ್ಬರೂ ಬಿಗ್ ಸ್ಟಾರ್ಸ್ ಇದೀಗ ಸಂಕ್ರಾಂತಿಗೆ ಮುಖಾಮುಖಿಯಾಗುತ್ತಿದ್ದಾರೆ. ಅಜಿತ್ ನಟನೆಯ ತುಣಿವು ಮತ್ತು ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾ ಒಮ್ಮಗೆ ರಿಲೀಸ್ ಆಗುತ್ತಿವೆ. ಇಬ್ಬರೂ ಸ್ಟಾರ್ ನಟರ ಸಿನಿಮಾ ಒಂದೇ ದಿನ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿರುವುದರಿಂದ ಕಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಬಿಗ್ ವಾರ್ ಆಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ಇಬ್ಬರ ಸಿನಿಮಾಗಳು ಸಂಕ್ರಾಂತಿಗೂ ಎರಡು ದಿನ ಮೊದಲು ಅಂದರೆ ಜನವರಿ 12ಕ್ಕೆ ರಿಲೀಸ್ ಆಗುತ್ತಿವೆ. 

ಸ್ಟಾರ್ ವಾರ್ ಬಿಸಿಯ ನಡುವೆ ವಾರಿಸು ಸಿನಿಮಾದ ನಿರ್ಮಾಪಕ ದಿಲ್ ರಾಜು ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಸಿಲುಕಿದೆ. ದಿಲ್ ರಾಜು ವಿರುದ್ಧ ಅಜಿತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ದಿಲ್ ರಾಜು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ತೆಲುಗು ಸಿನಿಮಾರಂಗದಿಂದ ಬಂದು ಕಾಲಿವುಡ್ ನಲ್ಲಿ ಫ್ಯಾನ್ ವಾರ್ ಸೃಷ್ಟಿ ಮಾಡಿದ್ದೀರಾ ಎಂದು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇತ್ತೀಚಿಗಷ್ಟೆ ದಿಲ್ ರಾಜು, ತೆಲುಗು ವೆಬ್ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ, 'ವಿಜಯ್ ತಮಿಳುನಾಡಿನಲ್ಲಿ ಅಜಿತ್ ಕುಮಾರ್‌ಗಿಂತ ದೊಡ್ಡ ಸ್ಟಾರ್' ಎಂದು ಹೇಳಿದ್ದರು. ಅಲ್ಲದೇ 'ವರಿಸು ಚಿತ್ರಕ್ಕೆ ಹೆಚ್ಚಿನ ಸ್ಕ್ರೀನ್‌ಗಳನ್ನು ನೀಡುವಂತೆ ಉದಯನಿಧಿ ಸ್ಟಾಲಿನ್‌ಗೆ ಮನವಿ ಮಾಡಿಕೊಳ್ಳುತ್ತೇನೆ' ಎಂದು ಸಹ ಹೇಳಿದ್ದರು. 

ಸಂದರ್ಶನದಲ್ಲ ದಿಲ್ ರಾಜು, 'ತಮಿಳುನಾಡಿನಲ್ಲಿ ಅಜಿತ್ ಸರ್ ಅವರ ಸಿನಿಮಾ ನನ್ನ ಸಿನಿಮಾದ ಜೊತೆಗೆ ಬಿಡುಗಡೆಯಾಗುತ್ತಿದೆ. ವಿಜಯ್ ಸರ್ ತಮಿಳುನಾಡಿನ ನಂಬರ್ 1 ಸ್ಟಾರ್ ಎಂಬುದು ಗೊತ್ತಿರುವ ವಿಚಾರ. ರಾಜ್ಯದಲ್ಲಿ ಒಟ್ಟು 800 ಸ್ಕ್ರೀನ್‌ಗಳಿವೆ. ಇದೀಗ ಎರಡೂ ಚಿತ್ರಗಳು ಸಮಾನ ಸಂಖ್ಯೆಯಲ್ಲಿ ತೆರೆ ಕಾಣುತ್ತಿವೆ. ನನ್ನ ಚಿತ್ರಕ್ಕೆ ಕನಿಷ್ಠ 50 ಹೆಚ್ಚು ಸ್ಕ್ರೀನ್‌ಗಳನ್ನು ನೀಡುವಂತೆ ನಾನು ಅಕ್ಷರಶಃ ಬೇಡುತ್ತಿದ್ದೇನೆ ಏಕೆಂದರೆ ವಿಜಯ್ ಸರ್ ಅಜಿತ್‌ಗಿಂತ ದೊಡ್ಡ ಸ್ಟಾರ್' ಎಂದು ಹೇಳಿದ್ದರು. ದಿಲ್ ರಾಜು ಅವರ ಈ ಹೇಳಿಕೆ  ಅಜಿತ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ತೆಲುಗು ನಿರ್ಮಾಪಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ. 'ಬೇರೆ ರಾಜ್ಯದವರೊಬ್ಬರು ವಿಜಯ್ ಮತ್ತು ಅಜಿತ್ ಅಭಿಮಾನಿಗಳ ನಡುವೆ ಜಗಳ ಸೃಷ್ಟಿಸುತ್ತಿದ್ದಾರೆ.ಈ ರೀತಿಯ ಮಾತುಗಳನ್ನು ನಿರ್ಲಕ್ಷಿಸಿ' ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು 'ವಿಜಯ್ ನಂಬರ್ 1 ಸ್ಟಾರ್ ಆಗಿದ್ದರೆ ಚಿತ್ರಮಂದಿರಕ್ಕೆ ಯಾಕೆ ಬೆಗ್ ಮಾಡುತ್ತಿದ್ರಿ' ಪ್ರಶ್ನೆ ಮಾಡುತ್ತಿದ್ದಾರೆ.  

ಪ್ಯಾನ್ ಇಂಡಿಯಾ ಸ್ಟಾರ್ ಯ‌ಶ್‌ಗೆ 100 ಕೋಟಿ ರೂ. ಆಫರ್ ಮಾಡಿದ್ರಾ ತೆಲುಗು ಸ್ಟಾರ್ ನಿರ್ಮಾಪಕ?

ದಳಪತಿ ವಿಜಯ್ ನಟನೆಯ 'ವಾರಿಸು' ಚಿತ್ರಕ್ಕೆ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ.  ಅಜಿತ್ ನಟನೆಯ ತುಣಿವು ಚಿತ್ರಕ್ಕೆ ಎಚ್ ವಿನೋತ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಇಬ್ಬರೂ ಸ್ಟಾರ್‌ಗಳ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅನೇಕ ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿವೆ. ಹಾಗಾಗಿ ದೊಡ್ಡ ಸ್ಟಾರ್ ವಾರ್ ನಡೆಯಲಿದೆ ಎನ್ನುವುದು ಸಿನಿಪಂಡಿತರ ಲೆಕ್ಕಾಚಾರ. ಈ ನಡುವೆ ದಿಲ್ ರಾಜು ಅವರ ಹೇಳಿಕೆ ಉರಿಯುತ್ತಿದ್ದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ.

ವಾರಿಸು ಸಿನಿಮಾ ಬಗ್ಗೆ 

ವಾರಿಸು ಸಿನಿಮಾಗೆ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇನ್ನು ಉಳಿದಂತೆ ಪ್ರಕಾಶ್ ರಾಜ್, ಶ್ರೀಕಾಂತ್, ಶರತ್‌ ಕುಮಾರ್, ಪ್ರಭು ಮತ್ತು ಶಾಮ್ ಸೇರಿದಂತೆ ಅನೇಕರು ನಟಿಸಿದ್ದಾರೆ. 

ಲಡಾಖ್‌ನಲ್ಲಿ ಕನ್ನಡಿಗನ ಬೈಕ್ ರಿಪೇರಿ ಮಾಡಿಕೊಟ್ಟ ತಲಾ ಅಜಿತ್; ತನ್ನ ದೃಷ್ಟಿಕೋನ ಬದಲಾಯಿತು ಎಂದ ಫ್ಯಾನ್

ತುಣಿವು ಸಿನಿಮಾ ಬಗ್ಗೆ   

ಹೆಚ್.ವಿನೋದ್ ಸಾರಥ್ಯದಲ್ಲಿ ಬಂದಿರುವ ಈ ಸಿನಿಮಾ ಆಕ್ಷನ್ ಥ್ರಿಲ್ಲರ್ ಆಗಿದೆ. ಅಜಿತ್ ಕುಮಾರ್ ಮತ್ತು ಮಂಜು ವಾರಿಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಾನ್ ಕೊಕ್ಕೆನ್, ಸಮುದ್ರಕನಿ, ವೀರ ಮತ್ತು ಮಮತಿ ಚಾರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!