
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರು ಶಾರ್ಪ್ ಶೂಟರ್ಗಳನ್ನು ಬಂಧಿಸಿದ್ದಾರೆ. ಗುಜರಾತ್ನ ಭುಜ್ನಲ್ಲಿ ಈ ಇಬ್ಬರು ಶೂಟರ್ಗಳನ್ನು ಬಂಧಿಸಲಾಗಿದ್ದು, ತನಿಖೆಗಾಗಿ ಮುಂಬೈಗೆ ಕರೆತರಲಾಗಿದೆ. ಇಂದು ಮಧ್ಯಾಹ್ನದ ನಂತರ ಇವರನ್ನು ಕೋರ್ಟ್ಗೆ ಹಾಜರುಪಡಿಸಲಿರುವ ಪೊಲೀಸರು ಬಳಿಕ ತಮ್ಮ ಕಸ್ಟಡಿಗೆ ಆರೋಪಿಗಳನ್ನು ಪಡೆಯುವ ಸಾಧ್ಯತೆ ಇದೆ. ಸಲ್ಮಾನ್ ಖಾನ್ ನಿವಾಸದ ಮುಂದೆ ಗುಂಡಿನ ದಾಳಿ ನಡೆಸಿದ ಬಳಿಕ ಈ ಇಬ್ಬರು ಮುಂಬೈನಿಂದ ಗುಜರಾತ್ಗೆ ಪರಾರಿಯಾಗಿದ್ದರು. ಬೈಕ್ನಲ್ಲಿ ಬಂದು ಗುಂಡು ಹಾರಿಸಿ ಪರಾರಿಯಾಗುತ್ತಿರುವ ವೀಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಈ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈಗ ಪೊಲೀಸರು ಬಂಧಿಸಿರುವ ಶಾರ್ಪ್ ಶೂಟರ್ಗಳನ್ನು ವಿಕಾಸ್ ಅಲಿಯಾಸ್ ವಿಕ್ಕಿಗುಪ್ತಾ ಹಾಗೂ ಸಾಗರ್ ಪಾಲ್ ಎಂದು ಗುರುತಿಸಲಾಗಿದೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಆರೋಪಿಗಳ ಬಳಿಯಿಂದ ಪೊಲೀಸರು, ವಿದೇಶಿ ಪಿಸ್ತೂಲ್, ಜೀವಂತ ಗುಂಡುಗಳು, ಮೊಬೈಲ್ ಫೋನ್ಗಳು ಹಾಗೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಈ ಆರೋಪಿಗಳು ತಾವೇ ಸಲ್ಮಾನ್ ಖಾನ್ ಮನೆ ಮುಂದೆ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ ಅವರ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ ಮುಂದೆ ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಬಳಿಕ ಮೆಹಬೂಬ್ ಸ್ಟುಡಿಯೋದತ್ತ ಪರಾರಿಯಾಗುವ ಮೊದಲು 5ರಿಂದ 6 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಸಲ್ಮಾನ್ ಖಾನ್ ಮನೆ ಮೇಲೆ ಗುಂಡು ಹಾರಿಸಿದ್ದು ಅಮೆರಿಕದ ಶಾರ್ಪ್ ಶೂಟರ್!
ನಂತರ ವಸೈಗೆ ಹೋಗುವ ಮಾರ್ಗದ ಬಗ್ಗೆ ರಿಕ್ಷಾ ಚಾಲಕನೋರ್ವನ ಬಳಿ ವಿಚಾರಿಸಿದ ಅವರು ಬಳಿಕ ತಾವು ಬಂದ ಬೈಕ್ ಅನ್ನು ಮೌಂಟ್ ಮೇರಿ ಬಳಿ ಬಿಟ್ಟು ರಿಕ್ಷಾದಲ್ಲಿ ಪರಾರಿಯಾಗಿದ್ದರು. ಕೊನೆಗೆ ಬಾಂದ್ರಾ ರೈಲು ನಿಲ್ದಾಣಕ್ಕೆ ಆಗಮಿಸಿದ ಅವರು ಬಳಿ ಸಾಂತಾಕ್ರೂಜ್ ವಕೋಲಾ ಮಾರ್ಗವಾಗಿ ನವಿ ಮುಂಬೈನತ್ತ ಪ್ರಯಾಣ ಬೆಳೆಸಿದ್ದರು. ಮುಂಬೈ ಪೊಲೀಸರು, ಬಾಂದ್ರಾ ಪೊಲೀಸರು, ಕ್ರೈಂ ಬ್ರಾಂಚ್ ಹಾಗೂ ಎಟಿಎಸ್ ಅವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೈಕನ್ನು ಸೀಜ್ ಮಾಡಿದ್ದರು, ಈ ಬೈಕ್ ಪನ್ವೆಲ್ನ ನಿವಾಸಿಯೊಬ್ಬರಿಗೆ ಸೇರಿದ್ದಾಗಿದ್ದು, ಅವರು ಇದನ್ನು ಶೂಟರ್ಗಳಿಗೆ ಮಾರಾಟ ಮಾಡಿದ್ದರು. ಪನ್ವೆಲ್ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ವಾಸವಿದ್ದ ಶೂಟರ್ಗಳು ಅಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಮನೆ ಮಾಲೀಕ ಹಾಗೂ ಶೂಟರ್ಗಳಿಗೆ ಬೈಕ್ ಮಾರಿದವನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಲ್ಮಾನ್ ಖಾನ್ ಭದ್ರತೆ ಚಲನವಲನಗಳನ್ನು ಸೂಕ್ಷ್ಮವಾಗಿ ತಿಂಗಳ ಕಾಲ ಗಮನಿಸಿದ್ದ ಆರೋಪಿಗಳು, ಸಲ್ಮಾನ್ ಖಾನ್ಗೆ ನೀಡಿದ ಭಾರಿ ಭದ್ರತೆಯಿಂದಾಗಿ ಸಲ್ಮಾನ್ ಖಾನ್ಗೆ ನೇರವಾಗಿ ಗುರಿ ಇರಿಸಲಾಗದೇ ಕೇವಲ ಭಯ ಹುಟ್ಟಿಸಲು ಸಲ್ಮಾನ್ ನಿವಾಸದ ಮುಂದೆ ಗುಂಡು ಹಾರಿಸಿದ್ದರು.
ಗುಂಡಿನ ದಾಳಿ ಬಳಿಕ ಮೌನಕ್ಕೆ ಜಾರಿದ ಸಲ್ಮಾನ್ ಖಾನ್: ಸಹೋದರ ಅರ್ಬಾಜ್ ಖಾನ್ ಪ್ರತಿಕ್ರಿಯೆ ಹೀಗಿದೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.