
ʼದಿ ಕೇರಳ ಸ್ಟೋರಿ-2' ಸಿನಿಮಾ ಸದ್ದು ಮಾಡುತ್ತಿರುವಂತೆಯೇ, ಕೇರಳದಲ್ಲಿ ಈ ಸಿನಿಮಾದಲ್ಲಿ ತೋರಿಸಿರುವಂತೆ ಮತಾಂತರದ ಜಾಲಕ್ಕೆ ತುತ್ತಾದ ಹಲವು ಹೆಣ್ಣುಮಕ್ಕಳು ಹೊರಗೆ ಬಂದು ದಿಟ್ಟವಾಗಿ ಮಾತನಾಡುತ್ತಿದ್ದಾರೆ. ಜನಪ್ರಿಯ ಪಾಡ್ಕ್ಯಾಸ್ಟ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಲ್ಕು ಜನ ಹೆಣ್ಣುಮಕ್ಕಳು ʼbodhbysharan' ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಕುಳಿತುಕೊಂಡು ಮಾತನಾಡಿದ ಸಂಗತಿಗಳು ಬೆಚ್ಚಿ ಬೀಳಿಸುವಂತಿವೆ. ಅದರಲ್ಲಿ ಒಬ್ಬಾಕೆ ಹೇಳುವ ಪ್ರಕಾರ, ಆಕೆಯ ತಂದೆ ತಾಯಿ ಕೆಳಗೆ ಪೂಜೆ ಮಾಡುತ್ತಿದ್ದರೆ, ಈಕೆ ಮೊದಲ ಮಹಡಿಯಲ್ಲಿ ನಮಾಜ್ ಮಾಡುತ್ತಿದ್ದಳಂತೆ!
ಡಾ. ಅನಘಾ ಜಯಗೋಪಾಲ್ ಎಂಬಾಕೆ ಹೇಳಿದ ಈ ಕತೆ ಕೇಳಿ. ಈಕೆ ಫಿಸಿಯೋಥೆರಪಿ ಕಲಿಯುತ್ತಿದ್ದವಳು. ಕಾಲೇಜು ಹಾಸ್ಟೆಲ್ನಲ್ಲಿದ್ದಳು. ಸುತ್ತಮುತ್ತ ಇದ್ದವರೆಲ್ಲ ಮುಸ್ಲಿಂ ಯುವತಿಯರೇ. ಅನಘಾ ಪ್ರತಿದಿನ ವಿಷ್ಣು ಸಹಸ್ರನಾಮ ಪಠನ ಮಾಡುತ್ತಿದ್ದಳು. ಇದರಿಂದ ಕುತೂಹಲ ತೋರಿಸಿದ ಮುಸ್ಲಿಂ ಗೆಳತಿಯರು, ನಿನ್ನ ದೇವರು ಯಾರು, ಅವರಲ್ಲಿ ಯಾರು ಹೆಚ್ಚು ಪವರ್ಫುಲ್ ಎಂಬೆಲ್ಲ ಪ್ರಶ್ನೆ ಕೇಳಲು ಆರಂಭಿಸಿದರು. ಅನಘಾ ತನಗೆ ತೋಚಿದಷ್ಟು ಉತ್ತರ ನೀಡಿದಳು. ಆದರೆ ಪ್ರಶ್ನೆಗಳು ಇನ್ನಷ್ಟು ಹೆಚ್ಚುತ್ತ ಹೋದಾಗ, ಉತ್ತರ ಇಲ್ಲದಾದಾಗ ಅನಘಾ ತನ್ನ ತಂದೆ ತಾಯಿಯ ಬಳಿ ಉತ್ತರ ಅಪೇಕ್ಷಿಸಿದಳು. ಅವರಿಗೂ ಗೊತ್ತಿರಲಿಲ್ಲ. ಅವರೂ ಹಿಂದಿನವರು ಹೇಳಿದಂತೆ ಮಾಡುತ್ತಿದ್ದವರು.
ಆಗ ಅನಘಾ ಗೊಂದಲಕ್ಕೊಳಗಾದಳು. ಮುಸ್ಲಿಂ ಗೆಳತಿಯರು ನಿಧಾನವಾಗಿ ಈಕೆಯನ್ನು ತಮ್ಮ ಆಲೋಚನೆಯ ವ್ಯಾಪ್ತಿಗೆ ತೆಗೆದುಕೊಂಡರು. ʼತಮಗಿರುವವನು ಒಬ್ಬನೇ ದೇವರು, ಅವನೇ ಅಲ್ಲಾಹ್, ಅವನು ಸರ್ವಶಕ್ತʼ ಎಂದು ಫೀಡ್ ಮಾಡಿದರು. ಕುರಾನ್ನಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಎತ್ತಿ ಈಕೆಗೆ ತೋರಿಸಿ ವಿವರಿಸಿದರು. ಇತರ ವಿಷಯ ಮುಚ್ಚಿಟ್ಟರು. ಇವರಿಂದ ಮೆದುಳು ಕ್ಲೀನಿಂಗ್ಗೆ ಒಳಗಾದ ಅನಘಾ, ಹಿಂದೂ ಧರ್ಮ ಬಹುಶಃ ದೇವರಿಂದ ಸ್ಥಾಪಿತವಾದ ಧರ್ಮವೇ ಅಲ್ಲ ಎಂಬ ನಂಬಿಕೆಗೆ ಬಂದುಬಿಟ್ಟಳು.
ಇದರ ಪರಿಣಾಮ ಭೀಕರವಾಗಿತ್ತು. ನಿಧಾನವಾಗಿ ಮಾನಸಿಕವಾಗಿ ಪರಿವರ್ತನೆಯಾದ ಅನಘಾ, ಮನೆಯಲ್ಲಿ ಕೋಣೆಯೊಳಗೆ ದಿನದಲ್ಲಿ ಐದು ಬಾರಿ ನಮಾಜ್ ಮಾಡಲು ತೊಡಗಿದಳು. ಕೆಳಗೆ ದೇವರ ಕೋಣೆಯಲ್ಲಿ ತಂದೆ ಶ್ರೀಕೃಷ್ಣನಿಗೆ ಪೂಜೆ ಮಾಡುತ್ತಿದ್ದರೆ, ಮಗಳು ಮೇಲಿನ ಕೋಣೆಯಲ್ಲಿ ನಮಾಜ್ ಮಾಡುತ್ತಿದ್ದಳು. ಆಕೆಗ ಪೂಜೆ ಕಿರಿಕಿರಿ ಆಗುತ್ತಿತ್ತು. ಒಂದು ದಿನ ಆಕೆ ಭಂಡ ಧೈರ್ಯದಿಂದ ಕೋಣೆಯ ಬಾಗಿಲು ತೆರೆದಿಟ್ಟೇ ನಮಾಜ್ ಮಾಡತೊಡಗಿದಳು. ಆಗ ಅಲ್ಲಿಗೆ ಬಂದ ಅನಘಾಳ ತಾಯಿ ಈ ದೃಶ್ಯವನ್ನು ನೋಡಿ ಶಾಕ್ನಿಂದ ತಲ್ಲಣಿಸಿಹೋದರು.
ತಂದೆ ತಾಯಿ ಭಯಂಕರವಾಗಿ ಹೆದರಿಕೊಂಡರು. ಈಕೆಯ ಮುಂದೆ ಕುಳಿತು "ಹೀಗೆಲ್ಲ ಮಾಡಬೇಡ" ಎಂದು ಪರಿಪರಿಯಾಗಿ ವಿನಂತಿಸಿಕೊಂಡರು. ಆದರೆ ಈಕೆಯದು ಒಂದೇ ಹಠ- "ನಾನು ಇಸ್ಲಾಂಗೆ ಮತಾಂತರ ಆಗುತ್ತೇನೆ. ಇಸ್ಲಾಂ ಒಂದೇ ನಿಜವಾದ ಧರ್ಮ. ಅಲ್ಲಾಹ್ ಒಬ್ಬನೇ ದೇವರು. ನೀವೂ ನನ್ನ ದಾರಿಯಲ್ಲಿ ಬರುವಿರಾದರೆ ಬನ್ನಿ. ಇಲ್ಲವಾದರೆ ನನ್ನ ದಾರಿ ನನಗೆ, ನಿಮ್ಮ ದಾರಿ ನಿಮಗೆ" ಎಂದು ಕಠಿಣವಾಗಿ ಹೇಳಿಬಿಟ್ಟಳು. ಅಲ್ಲಿಂದ ಆಕೆಯ ಬರ್ಬರ ಕಥಾನಕ ಆರಂಭವಾಯಿತು. ಅದನ್ನೆಲ್ಲ ಆಕೆಯ ಧ್ವನಿಯಲ್ಲೇ ಕೇಳಬಹುದು.
ʼಕೇರಳ ಸ್ಟೋರಿ- 2' ಸಿನಿಮಾದ ಮುಖ್ಯವಾಗಿ ಕೇರಳದ ಕೆಲವು ಯುವತಿಯರ ಬದುಕಿನ ಸುತ್ತ ನಡೆಯುತ್ತದೆ. ಕಾಲೇಜು ಓದುತ್ತಿರುವ ಕೆಲ ಹುಡುಗಿಯರು ಸ್ನೇಹ, ಪ್ರೀತಿ ಮತ್ತು ನಂಬಿಕೆಯ ಮೂಲಕ ಇಸ್ಲಾಂಗೆ ಮತಾಂತರದ ಒಂದು ಜಾಲಕ್ಕೆ ಸಿಲುಕುತ್ತಾರೆ. ಚಿತ್ರದಲ್ಲಿ ಮೂರು ಯುವತಿಯರ ಜೀವನವನ್ನು ಸಮಾಂತರವಾಗಿ ತೋರಿಸಲಾಗಿದೆ. ಒಬ್ಬಳು ಪ್ರಚಾರಕ್ಕೆ ಒಳಗಾಗಿ ತನ್ನ ಜೀವನದ ದಿಕ್ಕನ್ನೇ ಬದಲಿಸಿಕೊಳ್ಳುತ್ತಾಳೆ. ಇನ್ನೊಬ್ಬಳು ಕೊನೆಯ ಕ್ಷಣದಲ್ಲಿ ಸತ್ಯವನ್ನು ಅರಿತು ಪಾರಾಗಲು ಪ್ರಯತ್ನಿಸುತ್ತಾಳೆ. ಮೂರನೇ ಹುಡುಗಿ ಈ ಸಂಪೂರ್ಣ ಜಾಲವನ್ನು ಬಹಿರಂಗಪಡಿಸಲು ಮುಂದಾಗುತ್ತಾಳೆ. ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ ಸಿನಿಮಾ ಸುಮಾರು ₹38–40 ಕೋಟಿ ಗಳಿಕೆ ಮಾಡಿದೆ. ಕೆಲ ವರದಿಗಳ ಪ್ರಕಾರ, ಕಡಿಮೆ ಬಜೆಟ್ನಿಂದಾಗಿ ಇದು 2026ರ ಅತ್ಯಂತ ಲಾಭದಾಯಕ ಬಾಲಿವುಡ್ ಸಿನಿಮಾಗಳಲ್ಲಿ ಒಂದಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.