
ಮುಂಬೈ (ಜು.22): ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕವಾಗಿ ತಿರುಗಿದೆ. ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ 'ಸಿಜೆಪಿ' (CJP) ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮುಕ್ತ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ಶ್ಲಾಘಿಸಿರುವ ಅವರು, ಈ ವಿದ್ಯಾರ್ಥಿ ಚಳವಳಿಯನ್ನು ಯಾರೂ 'ರಾಜಕೀಯವಾಗಿ ಹೈಜಾಕ್' ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ 'ಎಕ್ಸ್'ನಲ್ಲಿ (X) ಭಾವನಾತ್ಮಕ ಹಾಗೂ ಸ್ಪಷ್ಟ ಸಂದೇಶವನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್, ವಿದ್ಯಾರ್ಥಿಗಳ ನಿಲುವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದ ಈ ಚಳವಳಿ ಹಿಂಸಾತ್ಮಕ ರೂಪ ಪಡೆದುಕೊಂಡಿರುವುದು ನನಗೆ ತೀವ್ರ ಬೇಸರ ತಂದಿದೆ. ಪ್ರತಿಭಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಪರವಾಗಿ ನನ್ನ ಹೃದಯ ಮಿಡಿಯುತ್ತಿದೆ. ಪೇಪರ್ ಲೀಕ್ ಎಂಬುದು ಅತ್ಯಂತ ಗಂಭೀರವಾದ ವಿಷಯ. ದೇಶದ ಮಕ್ಕಳು ಬಲಿಷ್ಠ ಶಿಕ್ಷಣ ವ್ಯವಸ್ಥೆಗಾಗಿ ಒಗ್ಗಟ್ಟಿನಿಂದ ಮುಂದೆ ಬಂದಿರುವುದು ಮತ್ತು ಅವರಿಗೆ ಪೋಷಕರು ಬೆಂಬಲವಾಗಿ ನಿಂತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ಸಲ್ಮಾನ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಶ್ಲಾಘಿಸಿದ ನಟ, ಕಷ್ಟಪಟ್ಟು ಓದಿ ತಮ್ಮ ಭವಿಷ್ಯವನ್ನು ಹಾಗೂ ಬಲಿಷ್ಠ ಶಿಕ್ಷಣ ಹೊಂದಿದ ಭಾರತವನ್ನು ನಿರ್ಮಿಸಲು ಆ ಮಕ್ಕಳು ತೋರುತ್ತಿರುವ ಸಮರ್ಪಣೆ, ಪ್ರಾಮಾಣಿಕತೆ ಮತ್ತು ಕಾಳಜಿಯನ್ನು ನಾನು ಹೃದಯಪೂರ್ವಕವಾಗಿ ಮೆಚ್ಚುತ್ತೇನೆ. ಈ ಆಂದೋಲನ ಅಥವಾ ಪ್ರತಿಭಟನೆ ಅತ್ಯಂತ ಸೂಕ್ತವಾದ ಹಾದಿಯಾಗಿದೆ. ವಿದ್ಯಾರ್ಥಿಗಳು ಇದನ್ನು ಶಾಂತಿಯುತವಾಗಿ ನಡೆಸಿದ್ದಾರೆ. ಕಲಿಯುವ ತೀವ್ರ ಆಸಕ್ತಿ ಹೊಂದಿರುವ ಈ ಧೈರ್ಯವಂತ ಯುವಪೀಳಿಗೆ ಖಂಡಿತವಾಗಿಯೂ ಭಾರತಕ್ಕೆ ಹೆಮ್ಮೆ ತರಲಿದೆ ಎಂದಿದ್ದಾರೆ.
ಈ ವಿಷಯದಲ್ಲಿ ರಾಜಕೀಯದ ಹಸ್ತಕ್ಷೇಪ ಇರಬಾರದು ಎಂದಿರುವ ಸಲ್ಮಾನ್, ಈ ವಿಷಯವು ಸಂಪೂರ್ಣವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನದ್ದು. ಇದನ್ನು ರಾಜಕೀಯವಾಗಿ ಹೈಜಾಕ್ ಮಾಡಬಾರದು. ಇದರ ಸಂಪೂರ್ಣ ಶ್ರೇಯಸ್ಸು ನಮ್ಮ ದೇಶದ ವಿದ್ಯಾರ್ಥಿಗಳಿಗೆ ಮಾತ್ರ ಸಲ್ಲಬೇಕು. ಸರ್ಕಾರವೂ ಸಹ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ದೃಢಗೊಳಿಸುತ್ತದೆ ಎಂಬ ನಂಬಿಕೆ ನನಗಿದೆ. ವಿದ್ಯಾರ್ಥಿಗಳ ಪರವಾಗಿ ಧನಾತ್ಮಕ ನಿರ್ಧಾರ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಆಶಿಸಿದ್ದಾರೆ.
ಭಾರತವನ್ನು ಜಾಗತಿಕ ಶಿಕ್ಷಣದ ಹಬ್ ಮಾಡಲು ಕರೆ ನೀಡಿದ ಸಲ್ಮಾನ್ ಖಾನ್, ಶಿಕ್ಷಣ ಎಂಬುದು ಮುಂದಿನ ದಿನಗಳಲ್ಲಿ ದೇಶದ ದೊಡ್ಡ 'ಟ್ರೆಂಡ್ ಮತ್ತು ಫ್ಯಾಶನ್' ಆಗಬೇಕು. ವರ್ಷದಿಂದ ವರ್ಷಕ್ಕೆ ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಬೇಕೆಂದರೆ, ವಿದೇಶಗಳಿಂದ ಜನರು ಶಿಕ್ಷಣ ಪಡೆಯಲು ಭಾರತಕ್ಕೆ ಬರಬೇಕು ಮತ್ತು ಭಾರತ ವಿಶ್ವದ ಬೃಹತ್ ಶೈಕ್ಷಣಿಕ ಕೇಂದ್ರವಾಗಬೇಕು (Educational Hub). ಕಲಿಯುವ ಆಸಕ್ತಿ ಹೊಂದಿರುವ ಎಲ್ಲ ಮಕ್ಕಳಿಗೂ ದೇವರ ಆಶೀರ್ವಾದವಿರಲಿ ಎಂದು ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.