The Kerala Story: ನಾಲ್ಕು ರಾಜ್ಯಗಳಿಂದ ಬ್ಯಾನ್​ ಬಿಸಿ! 4ನೇ ದಿನ ಕಲೆಕ್ಷನ್​ ಎಷ್ಟು?

By Suvarna NewsFirst Published May 9, 2023, 2:37 PM IST
Highlights

ಕೆಲವು ಕಡೆಗಳಲ್ಲಿ ಪ್ರತಿಭಟನೆ ಎದುರಿಸುತ್ತಿರುವ ದಿ ಕೇರಳ ಸ್ಟೋರಿ ಎರಡು ರಾಜ್ಯಗಳಲ್ಲಿ ಇದಾಗಲೇ ಬ್ಯಾನ್​ ಮಾಡಲಾಗಿದ್ದು, ಇನ್ನೆರಡು ರಾಜ್ಯಗಳು ಅದರ ಹಾದಿಯಲ್ಲಿವೆ. ಅವು ಯಾವುವು?
 

'ದಿ ಕೇರಳ ಸ್ಟೋರಿ' (The Kerala Story) ತನ್ನ ಟೀಸರ್ ಬಿಡುಗಡೆಯಾದಾಗಿನಿಂದಲೂ ಸುದ್ದಿ ಮಾಡುತ್ತಿದೆ. ಈ ಚಿತ್ರದ ಕಥೆಯು ಕೇರಳದ ಯುವತಿಯರು ಅದರಲ್ಲಿಯೂ ಅಲ್ಲಿನ ಕ್ರೈಸ್ತ ಸಮುದಾಯಕ್ಕೆ ಸೇರಿದವರನ್ನು ಹೇಗೆಲ್ಲಾ  ಇಸ್ಲಾಂಗೆ ಪರಿವರ್ತಿಸಲಾಗುತ್ತಿದೆ ಮತ್ತು ಐಸಿಸ್‌ಗೆ ಸೇರ್ಪಡೆಗೊಳಿಸಲಾಗುತ್ತಿದೆ  ಎಂಬ ಸತ್ಯ ಘಟನೆಯನ್ನು ಆಧರಿಸಿದೆ. ಹೆಣ್ಣುಮಕ್ಕಳನ್ನು ಹೆರುವ ಯಂತ್ರಗಳನ್ನಾಗಿ ಮಾಡಿ, ಹುಟ್ಟುವ ಮಗುವನ್ನು ಅವರಿಂದ ಬೇರ್ಪಡಿಸಲಾಗುತ್ತದೆ, ನಂತರ ಮಕ್ಕಳನ್ನು ಕರೆದುಕೊಂಡು ಹೋಗಿ ಆತ್ಮಹತ್ಯಾ ಬಾಂಬರ್​ಗಳನ್ನಾಗಿ ತಯಾರು ಮಾಡುವ ಭಯಾನಕ ಸತ್ಯ ಚಿತ್ರಣವನ್ನು ಈ ಚಿತ್ರದಲ್ಲಿ ಬಿಚ್ಚಿಡಲಾಗಿದೆ. ಇಂದಿನ ಹೆಣ್ಣುಮಕ್ಕಳಿಗೆ ಕಣ್ಣು ತೆರೆಸುವ ಈ ಚಿತ್ರಕ್ಕೆ ಕೆಲವು ರಾಜ್ಯ ಸರ್ಕಾರಗಳು ಇದಕ್ಕೆ ನಿಷೇಧ ಹೇರಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಸರ್ಕಾರಗಳು ಈ ಚಿತ್ರದ ಮೇಲೆ ಇದಾಗಲೇ ವಿನಾಯಿತಿ ಘೋಷಿಸಿವೆ. ಇದು ಸತ್ಯ ಘಟನೆಯನ್ನೇ ಆಧರಿಸಿದ್ದರೂ ಕಾಂಗ್ರೆಸ್​ ಪಕ್ಷ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಈ ಚಿತ್ರವನ್ನು ವಿರೋಧಿಸಿವೆ.

ಪಶ್ಚಿಮ ಬಂಗಾಳ (West Bengal)
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್​ ಪಕ್ಷದ ಮಮತಾ ಬ್ಯಾನರ್ಜಿ ಅವರು ಕೇರಳ ಸ್ಟೋರಿ ಚಿತ್ರವನ್ನು ಸೋಮವಾರ (ಮೇ 8) ನಿಷೇಧಿಸಿದ್ದಾರೆ. ಅಂದರೆ ಇನ್ನು ಮುಂದೆ ಪಶ್ಚಿಮ ಬಂಗಾಳದ ಯಾವುದೇ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ. ‘ದಿ ಕೇರಳ ಸ್ಟೋರಿ’ಯಲ್ಲಿ ಸತ್ಯಾಂಶಗಳನ್ನು ಸರಿಯಾಗಿ ತೋರಿಸಿಲ್ಲ ಎನ್ನುತ್ತಾರೆ ಮಮತಾ ಬ್ಯಾನರ್ಜಿ. ಕೇರಳದ ಮಾನಹಾನಿ ಮಾಡುವುದು ಈ ಚಿತ್ರದ ಉದ್ದೇಶ ಎನ್ನುವುದು ಅವರ ಅಭಿಮತ.  ‘ಶಾಂತಿ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದ್ವೇಷ ಮತ್ತು ಹಿಂಸೆ ಹರಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

Latest Videos

The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ

ತಮಿಳುನಾಡು (Tamil Nadu) 
AIADMK ಪಕ್ಷ ಅಧಿಕಾರದಲ್ಲಿರುವ ತಮಿಳುನಾಡಿನಲ್ಲಿ 'ದಿ ಕೇರಳ ಸ್ಟೋರಿ'ಯನ್ನು ಬ್ಯಾನ್ ಮಾಡಲಾಗಿದೆ. ಮತ್ತೊಂದೆಡೆ, ಭಾನುವಾರ (ಮೇ 7) ತಮಿಳುನಾಡಿನ ಮಲ್ಟಿಪ್ಲೆಕ್ಸ್ ಸಂಸ್ಥೆಗಳು ಪ್ರದರ್ಶನವನ್ನು ನಿಲ್ಲಿಸುವುದಾಗಿ ಘೋಷಿಸಿದ್ದವು. ಈ ಚಿತ್ರದಿಂದ ರಾಜ್ಯದ ಭದ್ರತಾ ವ್ಯವಸ್ಥೆಗೆ ಅಪಾಯ ಎದುರಾಗಬಹುದು ಎನ್ನುವುದು ಸರ್ಕಾರದ ವಾದ!

ಕೇರಳ (Kerala)
ಕಮ್ಯೂನಿಸ್ಟ್​ ನಾಡು ಕೇರಳದಲ್ಲೂ ‘ದಿ ಕೇರಳ ಸ್ಟೋರಿ’ ಬ್ಯಾನ್ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು, ಇದರ ಒತ್ತಾಯ ಜೋರಾಗಿದೆ. ಯಾವುದೇ ಕ್ಷಣದಲ್ಲಿಯೂ ಸರ್ಕಾರ ನಿಷೇಧಕ್ಕೆ ಆದೇಶ ಹೊರಡಿಸಬಹುದಾಗಿದೆ. ಈ ಚಿತ್ರದಲ್ಲಿ ತೋರಿಸುವುದು ಉಗ್ರ ಸಂಘಟನೆಯ ಕೃತ್ಯವೇ ವಿನಾ ಯಾವುದೇ ಒಂದು ಧರ್ಮದ ಟೀಕೆಯಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದರೂ, ಕೇವಲ ಒಂದು ಸಮುದಾಯದ ವಿರುದ್ಧ ಆಕ್ಷೇಪಾರ್ಹ ವಿಷಯಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಕೇರಳದ ರಾಜಕೀಯ ಪಕ್ಷಗಳು ಬೊಬ್ಬಿಡುತ್ತಿವೆ. ಈ ಹಿನ್ನೆಲೆಯಲ್ಲಿ ನಿಷೇಧಕ್ಕೆ ಬಹಳ ಒತ್ತಾಯ ಕೇಳಿಬರುತ್ತಿದೆ.

The Kerala Story ಕುರಿತು ಬಳ್ಳಾರಿಯಲ್ಲಿ ಮಾತಾಡಿದ ಪ್ರಧಾನಿ ಮೋದಿ: ನಿರ್ಮಾಪಕ ಹೇಳಿದ್ದೇನು?
 
 ರಾಜಸ್ಥಾನ (Rajasthan)
'ದಿ ಕೇರಳ ಸ್ಟೋರಿ' ಚಿತ್ರ ಬ್ಯಾನ್​ ಮಾಡುವಂತೆ  ಕಾಂಗ್ರೆಸ್​ ಅಧಿಕಾರದಲ್ಲಿರುವ ರಾಜ್ಯ ರಾಜಸ್ಥಾನದಲ್ಲಿಯೂ ಭಾರಿ ಗಲಾಟೆ ಶುರುವಾಗಿದೆ. ಈ ಚಿತ್ರ ವೀಕ್ಷಿಸುವಂತೆ ಜನರನ್ನು ಒತ್ತಾಯಿಸಿದ ಕಾರಣಕ್ಕೆ ರಾಜಸ್ಥಾನದ ಜೋಧ್‌ಪುರದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಲಾಗಿದೆ. ಈ ಕುರಿತು ಮಾತನಾಡಿದ ಎಸಿಪಿ ದೇರಾವರ್ ಸಿಂಗ್, 'ಶನಿವಾರ ರಾತ್ರಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ವಾಟ್ಸ್‌ಆ್ಯಪ್‌ನಲ್ಲಿ ಸಿನಿಮಾವನ್ನು ಹೊಗಳಿದ ವ್ಯಕ್ತಿಯೊಬ್ಬರನ್ನು ಥಳಿಸಲಾಗಿದೆ. ತಮ್ಮ ಸಮುದಾಯವನ್ನು ಅವಹೇಳನ ಮಾಡಿರುವುದನ್ನು ನೀವು ಪ್ರೋತ್ಸಾಹಿಸುತ್ತಿರುವುದಾಗಿ  ಆರೋಪಿಸಿ ವ್ಯಕ್ತಿಯನ್ನು ಥಳಿಸಿದ್ದಾರೆ ಎಂದು ವ್ಯಕ್ತಿ ದೂರು ನೀಡಿದ್ದಾರೆ.

ಇವುಗಳ ನಡುವೆಯೇ, ಇದೇ 5ರಂದು ಬಿಡುಗಡೆಯಾಗಿರುವ 'ದಿ ಕೇರಳ ಸ್ಟೋರಿ' ನಾಲ್ಕನೇ ದಿನಕ್ಕೆ ಸುಮಾರು 10.51 ಕೋಟಿ ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಕಲೆಕ್ಷನ್ 45.75 ಕೋಟಿ ರೂ.ಗೆ ತಲುಪಿದೆ. ಪಾಸಿಟಿವ್ ಮೌತ್ ಪಬ್ಲಿಸಿಟಿಯಿಂದಾಗಿ ಮಂಗಳವಾರವೂ ಚಿತ್ರ ಗಮನಾರ್ಹ ಮೊತ್ತವನ್ನು ವಸೂಲಿ ಮಾಡಲಿದೆ ಮತ್ತು ಐದು ದಿನಗಳೊಳಗೆ ಬಾಕ್ಸ್ ಆಫೀಸ್ ನಲ್ಲಿ 50 ಕೋಟಿ ರೂ.ಗಳ ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ.   ಕೇರಳದ ಹಲವಾರು  ಥಿಯೇಟರ್​ಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ರಿಲೀಸ್ (Release) ಮಾಡಲು ಹಿಂದೇಟು ಹಾಕಿವೆ. ಸಿನಿಮಾ ವಿರುದ್ಧ ಪ್ರತಿಭಟನೆ ಭಯ ಇರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳು ಮನಸು ಮಾಡಿಲ್ಲ. ಇದರ ಹೊರತಾಗಿಯೂ ಚಿತ್ರ ಬಿಡುಗಡೆಯಾದ ಮೊದಲ ದಿನ ಅಂದರೆ ಮೇ 5ರಂದು ಚಿತ್ರ 8.03 ಕೋಟಿ ರೂಪಾಯಿ ಗಳಿಸಿತ್ತು.  ಎರಡನೇ ದಿನ ಅಂದರೆ ಮೇ 6ರಂದು 11.22 ಕೋಟಿ ರೂಪಾಯಿ ಗಳಿಸಿದೆ.   ಸೆಲ್ಫಿ, ಶೆಹಜಾದಾ, ಕಾಶ್ಮೀರಿ ಫೈಲ್ಸ್​ಗಳಿಗಿಂತಲೂ ಹೆಚ್ಚಿನ ಆದಾಯ ತಂದುಕೊಟ್ಟಿದೆ. ಐಎಂಡಿಬಿಯಲ್ಲಿ ಸಿನಿಮಾ 10ಕ್ಕೆ 8.3ರಷ್ಟು ರೇಟಿಂಗ್​ ಪಡೆದುಕೊಂಡಿದೆ.  ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್​ನಲ್ಲಿ ಎರಡನೇ ದಿನಕ್ಕೆ ಶೇ.40ರಷ್ಟು ಏರಿಕೆ ಇದೆ ಎನ್ನಲಾಗಿದೆ. ಸಿನಿಮಾದ ಒಟ್ಟು ಕಲೆಕ್ಷನ್ 19.25 ಕೋಟಿ ರೂಪಾಯಿ ಆಗಿದೆ. ಹಿಂದಿ ಬೆಲ್ಟ್​ನಲ್ಲಿ ಶೇ.36.13ರಷ್ಟು ಪ್ರೇಕ್ಷಕರನ್ನು ಪಡೆದಿದೆ ಎಂದು ವರದಿಯಾಗಿದೆ.

click me!