
ದರ್ಶನ್ ನಟನೆಯ "ರಾಬರ್ಟ್' ಸಿನಿಮಾದ "ಕಣ್ಣೇ ಅದಿರಿಂದಿ' ಹಾಡಿನ ಮೂಲಕ ಕನ್ನಡದಲ್ಲೂ ಮನೆ ಮಾತಾದವರು ಗಾಯಕಿ ಮಂಗ್ಲಿ. ಕನ್ನಡ ಮೂಲದ ರಾಬರ್ಟ್ ಸಿನಿಮಾದ ಕನ್ನಡ ಹಾಡು "ಕಣ್ಣು ಹೊಡಿಯಾಕ..'ಕ್ಕಿಂತ ಎಷ್ಟೋ ಹೆಚ್ಚಿನ ಮೆಚ್ಚುಗೆ, ಪ್ರಶಂಸೆಗೆ ಕಾರಣವಾದದ್ದು ರಾಬರ್ಟ್ ತೆಲುಗು ವರ್ಶನ್ನಲ್ಲಿ ಮಂಗ್ಲಿ ಹಾಡಿದ "ಕಣ್ಣೇ ಅದಿರಿಂದಿ' ಹಾಡು. ಅಷ್ಟಕ್ಕೂ ಆ ಹಾಡಿನ ಜನಪ್ರಿಯತೆಗೆ ಕಾರಣವಾಗಿದ್ದು ಮಂಗ್ಲಿ ಅವರ ಕಂಠ. ಬೇಸ್ ವಾಯ್ಸ್ನಲ್ಲಿ ಪದಗಳ ಅರ್ಥಕ್ಕೆ ತಕ್ಕ ಹಾಗೆ ಧ್ವನಿಯಲ್ಲಿ ಮಾರ್ಪಾಡು ಮಾಡಿಕೊಂಡು ಅವರು ಹಾಡಿದ ರೀತಿ ದೇಶಾದ್ಯಂತ ಅವರಿಗೆ ಅಭಿಮಾನಿಗಳನ್ನು ಸೃಷ್ಟಿಸಿತು. ನಿರೂಪಕಿ ಆಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ, ಜನಪದ ಗಾಯಕಿಯಾಗಿ ನಂತರ ಸಿನಿಮಾ ಹಾಡುಗಳ ಗಾಯಕಿಯಾದ ಮಂಗ್ಲಿ ಕಷ್ಟಪಟ್ಟು ಜನಪ್ರಿಯತೆ ಗಳಿಸಿಕೊಂಡವರು. ಅವರ ಜನಪದ ಶೈಲಿಯ ಹಾಡುಗಳನ್ನು ತೆಲುಗು ರಾಜ್ಯಗಳಲ್ಲಿ ಪ್ರತೀ ದಿನ ಜನರ ಮನೆಯಲ್ಲಿ ಕೇಳುವ ಪರಿಪಾಠ ಇಟ್ಟುಕೊಂಡಿದ್ದರು.
ಇದೀಗ ಅದೇ ಗಾಯಕಿ ಜನರ ವಿರೋಧಕ್ಕೂ ಕಾರಣವಾಗಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ಹಾಡು. ಒಂದು ಕಡೆ ಆ ಹಾಡನ್ನು ಲಕ್ಷಾಂತರ ಜನ ವೀಕ್ಷಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇನ್ನೊಂದು ಕಡೆ ಈ ಹಾಡು ಮೈಸಮ್ಮ ದೇವಿಯ ಭಕ್ತರ ಸಿಟ್ಟಿಗೆ ಕಾರಣವಾಗಿದೆ.
ಚಕ್ರವರ್ತಿಗೆ ದೊಡ್ಡ ಆಘಾತ ಕೊಟ್ಟು ಮನೆಯಿಂದ ಹೊರಬಂದ ಪ್ರಿಯಾಂಕಾ
ಮಂಗ್ಲಿ ಅವರ ಮತ್ತೊಂದು ಹೆಚ್ಚುಗಾರಿಕೆ ಅಂದರೆ ಸಿನಿಮಾ ಹಾಡಿನ ಜನಪ್ರಿಯತೆಯಿಂದ ಬಂದ ಯಶಸ್ಸು ಅವರ ತಲೆಗೇರಿಲ್ಲ. ಅವರ ಸ್ವಭಾವದಲ್ಲಿ ಬದಲಾವಣೆ ಆಗಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಹಾಡುಗಳು ಎಷ್ಟೇ ಹಿಟ್ ಆದರೂ ಜನಪದ ಶೈಲಿಯ ಹಾಡುಗಳನ್ನು ಹಾಡುವುದನ್ನು ಮಂಗ್ಲಿ ಬಿಟ್ಟಿಲ್ಲ. ತೆಲುಗು ಸಂಸ್ಕೃತಿಯ ಯಾವುದೇ ಹಬ್ಬ ಬಂತೆಂದರೆ ಅದಕ್ಕೆ ಸೂಕ್ತವಾಗುವ ಜನಪದ ಹಾಡೊಂದನ್ನು ಹಾಡಿ ವಿಡಿಯೋ ಬಿಡುಗಡೆ ಮಾಡುತ್ತಾ ಬರುತ್ತಿದ್ದಾರೆ ಮಂಗ್ಲಿ. ಹಾಗೆಯೇ ಇದೀಗ ತೆಲುಗು ರಾಜ್ಯಗಳಲ್ಲಿ 'ಬೋನಾಲು ಪಂಡುಗ'ದ ಸಮಯ. ಇದಕ್ಕೆ ತಕ್ಕಂತೆ ಹಾಡೊಂದನ್ನು ಮಂಗ್ಲಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ಹಾಡು ವಿವಾದಕ್ಕೆ ಕಾರಣವಾಗಿದೆ. ಈ ಹಾಡು ವಿವಾದಕ್ಕೆ ಸಿಲುಕಿರುವುದಕ್ಕೂ ಕಾರಣವಿದೆ.
ಮಂಗ್ಲಿ ಅವರು ಇದೀಗ ಬಿಡುಗಡೆ ಮಾಡಿರುವ 'ಬೋನಾಲು' ಹಾಡಿನಲ್ಲಿನ ಕೆಲವು ಸಾಲುಗಳು ಗ್ರಾಮ ದೇವತೆ ಮೈಸಮ್ಮ ದೇವಿಯನ್ನು ಟೀಕಿಸುವಂತಿದೆ. ಕೊಂಚ ಬೈಯ್ಯುವ ಶೈಲಿಯಲ್ಲಿರುವ ಈ ಹಾಡಿಗೆ ಮೈಸಮ್ಮ ದೇವಿಯ ಭಕ್ತರು ತಕರಾರು ಎತ್ತಿದ್ದಾರೆ. ಹಾಡಿನಲ್ಲಿನ ಕೆಲವು ಸಾಲುಗಳು ದೇವಿಯ ಮಹಿಮೆಯನ್ನು ಸಾರುವ ಬದಲು, ದೇವಿಯನ್ನು ಬೈಯ್ಯುವ ರೀತಿಯಲ್ಲಿ ಇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಲಾಗಿದೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ!
'ಮನೆಗೆ ಬಂದ ನೆಂಟಳಂತೆ ಮರದ ಕೆಳಗೆ ಕೂತಿದ್ದಿ', 'ನೀನು ಕೂತ ರೀತಿ ಬೊಂಬೆಯಂತಿದೆ, ಚೂರೂ ಅಲುಗಾಡದೇ ಕೂತಲ್ಲೇ ಕೂತು ಬಿಟ್ಟಿರುವೆ' ಎಂಬರ್ಥದ ಸಾಲುಗಳು ಹಾಡಿನಲ್ಲಿವೆ. ಈ ಸಾಲುಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿವೆ. ದೇವಿಯು, ಭಕ್ತರನ್ನು ಕಾಯುವ ಕಾರ್ಯವನ್ನು ಮಾಡದೆ ಸುಮ್ಮನೆ ಇದ್ದುಬಿಟ್ಟಿದ್ದಾಳೆ ಎಂಬ ಅರ್ಥ ಬರುವ ಸಾಲುಗಳು ಹಾಡಿನಲ್ಲಿದ್ದು ಅದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಆದರೆ ಈ ರೀತಿ ಭಕ್ತರು ದೇವರೊಂದಿಗೆ ಜಗಳವಾಡುವ, ಪ್ರೀತಿಯಿಂದ ಬೈಯ್ಯುವ ಹಾಡುಗಳು ಜನಪದದಲ್ಲಿ ಸಾಕಷ್ಟಿವೆ. ಆದರೆ ಈಗೀಗ ಜನ ಅಂಥಾ ಹಾಡುಗಳ ಬಗ್ಗೆ ತಕರಾರು ತೆಗೆಯುತ್ತಿದ್ದಾರೆ. ಮಂಗ್ಲಿ ಒಂದಿಷ್ಟು ಜನ ನೃತ್ಯಗಾರರೊಂದಿಗೆ ಸೇರಿಕೊಂಡು ಹಾಡಿಗೆ ಕುಣಿದಿದ್ದಾರೆ. ಇದಕ್ಕೂ ಆಕ್ಷೇಪಣೆ ವ್ಯಕ್ತವಾಗಿದೆ. ಈ ರೀತಿಯ ಕುಣಿತ ನಮ್ಮ ಸಂಸ್ಕೃತಿಯಲ್ಲ ಎಂದು ಕೆಲವರು ತಗಾದೆ ತೆಗೆದಿದ್ದಾರೆ. ಜೊತೆಗೆ ಈ ಹಾಡಿನಲ್ಲಿ ಆಫ್ರಿಕನ್ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ನಮ್ಮೂರ ದೇವಿಯ ಕುರಿತ ಹಾಡಿಗೆ ಇವರ್ಯಾಕೆ ಬೇಕಿತ್ತು ಅಂತ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ ಈ ಆರೋಪಗಳ ಬಗ್ಗೆ ಮಂಗ್ಲಿ ಈವರೆಗೆ ಕಮಕ್ಕಿಮಕ್ ಅಂದಿಲ್ಲ. ಒಂದು ಕಡೆ ಟೀಕೆಗೆ ಒಳಗಾದ ಹಾಡು ಇನ್ನೊಂದೆಡೆ ಸರಿಸುಮಾರು ಅರ್ಧ ಕೋಟಿಗಳ ಹತ್ತಿರ ವೀಕ್ಷಣೆ ದಾಖಲಿಸಿದೆ. ರಾಮಸ್ವಾಮಿ ಅನ್ನುವವರು ಬರೆದಿರುವ ಹಾಡನ್ನು ಮಂಗ್ಲಿ ಹಾಡಿದರೆ, ರಾಕೇಶ್ ವೆಂಕಟಾಪುರ ಸಂಗೀತ ನೀಡಿದ್ದಾರೆ. ಢೀ ಖ್ಯಾತಿಯ ಪಂಡು ಅವರ ಕೊರಿಯೋಗ್ರಫಿ ಇದೆ.
ಇಂಗ್ಲೆಂಡ್ ಬೀದಿಗಳಲ್ಲಿ ಎಂಜಾಯ್ ಮಾಡುತ್ತಿರುವ ವಿರುಷ್ಕಾ ಫೋಟೋ ವೈರಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.