
"ರಾಮಾಯಣ" ಹವಾ! ರಣಬೀರ್ ಕಪೂರ್ಗೆ ಸಿಕ್ಕಿತು ವಿಶೇಷ ಜಾಕೆಟ್!
ಬೆಂಗಳೂರು/ಮುಂಬೈ: ಬಾಲಿವುಡ್ನ ಚಾಕೊಲೇಟ್ ಬಾಯ್ ರಣಬೀರ್ ಕಪೂರ್ (Ranbir Kapoor) ಇದೀಗ ಸಂಪೂರ್ಣವಾಗಿ 'ರಾಮಮಯ'ವಾಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ 'ಧುರಂಧರ್: ದಿ ರಿವೆಂಜ್' ಸಿನಿಮಾ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ಬೆನ್ನಲ್ಲೇ, ರಣಬೀರ್ ಕಪೂರ್ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' (Ramayana) ಚಿತ್ರದ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ಲಾಸ್ ಏಂಜಲೀಸ್ನಲ್ಲಿ ನಡೆದ ಈ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಅವರಿಗೆ ಒಂದು ಮಧುರವಾದ ಸರ್ಪ್ರೈಸ್ ಕಾದಿತ್ತು!
ಅಭಿಮಾನಿಯಿಂದ ವಿಶೇಷ ಉಡುಗೊರೆ:
ಹೌದು, ಲಾಸ್ ಏಂಜಲೀಸ್ನಲ್ಲಿ ನಡೆದ 'ರಾಮಾಯಣ' ಟೀಸರ್ ಸ್ಕ್ರೀನಿಂಗ್ ವೇಳೆ, ಬಟ್ಟೆ ವಿನ್ಯಾಸಕರಾಗಿರುವ ರಣಬೀರ್ ಅವರ ಅಪ್ಪಟ ಅಭಿಮಾನಿಯೊಬ್ಬರು ಅಯೋಧ್ಯೆಯ ರಾಮ ಮಂದಿರದಿಂದ ಪ್ರೇರಿತವಾದ ಸುಂದರವಾದ ಕೆಂಪು ಬಣ್ಣದ 'ಬಂದ್ಗಾಲಾ' (Bandhgala) ಜಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಜಾಕೆಟ್ ನೋಡುಗರ ಕಣ್ಣು ಕುಕ್ಕುವಂತಿದ್ದು, ಇದರ ಮೇಲೆ ಚಿನ್ನದ ದಾರದಿಂದ ಅತ್ಯಂತ ನಾಜೂಕಾದ ಕಸೂತಿ ಕೆಲಸ ಮಾಡಲಾಗಿದೆ. ಜಾಕೆಟ್ನ ಹಿಂಭಾಗದಲ್ಲಿ ಭಗವಾನ್ ಶ್ರೀರಾಮನ ಭವ್ಯವಾದ ಚಿತ್ರವನ್ನು ಬಹಳ ವಿಶಿಷ್ಟವಾಗಿ ಬಿಡಿಸಲಾಗಿದೆ. ಈ ವಿಶೇಷ ಉಡುಗೊರೆಯನ್ನು ಕಂಡ ರಣಬೀರ್ ಮುಖದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು.
ಈ ಕ್ಷಣದ ವಿಡಿಯೋವನ್ನು ಅಭಿಮಾನಿಯೊಬ್ಬರು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದು, "ನ್ಯೂಯಾರ್ಕ್ ಸಿಟಿಯಲ್ಲಿ ನಡೆದ ರಾಮಾಯಣ ಟೀಸರ್ ಪ್ರದರ್ಶನದ ವೇಳೆ, ಅಭಿಮಾನಿಯೊಬ್ಬರು ರಣಬೀರ್ ಕಪೂರ್ ಅವರಿಗೆ ಭಗವಾನ್ ರಾಮನ ಚಿತ್ರವಿರುವ ಸುಂದರವಾದ ವೆಸ್ಟ್ ಜಾಕೆಟ್ ಉಡುಗೊರೆಯಾಗಿ ನೀಡಿದರು. ಇದು ನಿಜಕ್ಕೂ ಮರೆಯಲಾಗದ ಕ್ಷಣ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಣಬೀರ್ ಆ ಜಾಕೆಟ್ನ ಮೇಲಿರುವ ಕೆಲಸವನ್ನು ಬಹಳ ಕುತೂಹಲದಿಂದ ಗಮನಿಸುತ್ತಾ, ತಮ್ಮ ತಂಡದವರಿಗೂ ಅದನ್ನು ತೋರಿಸಿ ಸಂಭ್ರಮಿಸುತ್ತಿರುವುದನ್ನು ಕಾಣಬಹುದು.
ಟೀಸರ್ ಯಾವಾಗ?
ಸಿನಿರಸಿಕರ ಕುತೂಹಲಕ್ಕೆ ಇದೀಗ ತೆರೆ ಬೀಳುವ ಸಮಯ ಹತ್ತಿರ ಬಂದಿದೆ. ಲಾಸ್ ಏಂಜಲೀಸ್ನಲ್ಲಿ ಪ್ರದರ್ಶನಗೊಂಡ ಈ ಟೀಸರ್ 2 ನಿಮಿಷ 38 ಸೆಕೆಂಡ್ಗಳ ಸುದೀರ್ಘ ಅವಧಿಯದ್ದಾಗಿದೆ. ಸೆನ್ಸಾರ್ ಮಂಡಳಿಯಿಂದ ಈ ಟೀಸರ್ ಈಗಾಗಲೇ 'U' ಸರ್ಟಿಫಿಕೇಟ್ ಪಡೆದುಕೊಂಡಿದೆ. ಭಾರತದಲ್ಲಿ ಈ ಬಹುನಿರೀಕ್ಷಿತ ಟೀಸರ್ ಏಪ್ರಿಲ್ 2 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ದಂಗಲ್ ಖ್ಯಾತಿಯ ನಿತೇಶ್ ತಿವಾರಿ ಈ ಮಹಾಕಾವ್ಯವನ್ನು ಬೆಳ್ಳಿತೆರೆಯ ಮೇಲೆ ತರುತ್ತಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ವಿಶೇಷವೆಂದರೆ, ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಲಕ್ಷಣ್ ಪಾತ್ರದಲ್ಲಿ ರವಿ ದುಬೆ ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ವರದಿಗಳ ಪ್ರಕಾರ, ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮೊದಲ ಭಾಗವು 2026 ರ ದೀಪಾವಳಿಗೆ ತೆರೆಕಂಡರೆ, ಎರಡನೇ ಭಾಗವು 2027 ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ರಣಬೀರ್ ಕಪೂರ್ ಮತ್ತು ತಂಡ 'ರಾಮಾಯಣ' ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.