ಅಯೋಧ್ಯೆಯ ಶ್ರೀರಾಮನ ಪ್ರಾಣಪ್ರತಿಷ್ಠೆಗೆ 'ಸೀತೆ'ಗೂ ಆಹ್ವಾನ: ನನ್ನ ಪಾಲಿನ ದೀಪಾವಳಿ ಇದು ಎಂದ ನಟಿ

By Suvarna NewsFirst Published Jan 4, 2024, 1:27 PM IST
Highlights

ಅಯೋಧ್ಯೆಯ ಶ್ರೀರಾಮನ ಪ್ರಾಣಪ್ರತಿಷ್ಠೆಗೆ ರಾಮಾಯಣದ ಸೀತೆಗೂ ಆಹ್ವಾನ ಬಂದಿದೆ. ಇದು ನನ್ನ ಪಾಲಿನ ದೀಪಾವಳಿ ಇದು ಎಂದಿದ್ದಾರೆ ನಟಿ
 

ಅಯೋಧ್ಯೆಯಲ್ಲಿ, ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ಕೆ ಶ್ರೀರಾಮ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಜನವರಿ 22ರ ಐತಿಹಾಸಿಕ ದಿನಕ್ಕಾಗಿ ಕೋಟ್ಯಂತರ ಮಂದಿ ಕಾದು ಕುಳಿತಿದ್ದಾರೆ. ಅಂದು ರಾಮನಿಗೆ ನಡೆಯಲಿರುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಾಗಲೇ ಅಯೋಧ್ಯೆ ನಗರಿಯಲ್ಲಿ ಬಿರುಸಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲೆಲ್ಲೂ ಶ್ರೀರಾಮನಾಮವೇ ಮೊಳಗುತ್ತಿದೆ. ಅಯೋಧ್ಯೆ ನವವಧುವಿನಂತೆ ಶೃಂಗಾರಗೊಂಡು ನಳನಳಿಸುತ್ತಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ಕೆ ಇದಾಗಲೇ ಮನೆಮನೆಗೆ ತೆರಳಿ ಅಕ್ಷತೆ ನೀಡಿ ಆಮಂತ್ರಿಸುವ ಕಾರ್ಯವೂ ನಡೆಯುತ್ತಿದೆ. 500 ವರ್ಷಕ್ಕೂ ಅಧಿಕ ಕಾಲದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ. ಶ್ರೀರಾಮನ ದರ್ಶನದ ದಿನಕ್ಕೆ ಇನ್ನೇನು ಬೆರಳೆಣಿಕೆಯಷ್ಟು ದಿನ ಇರುವ ಬೆನ್ನಲ್ಲೇ ಹಲವಾರು ಮಂದಿಗೆ ಇದರ ಆಮಂತ್ರಣ ಪತ್ರಿಕೆಯೂ ತಲುಪಿದೆ.

ಅದೇ ಇನ್ನೊಂದೆಡೆ ಸಾಕ್ಷಾತ್​ ಸೀತೆಯೇ ಎಂದು ಕರೆಸಿಕೊಂಡಿದ್ದ ದೀಪಿಕಾ ಚಿಖಲಿಯಾ(Deepika Chikhalia) ಅವರು ಅಯೋಧ್ಯೆಗೆ ಹೋಗಲು ಉತ್ಸುಕರಾಗಿದ್ದಾರೆ. ಅಷ್ಟಕ್ಕೂ, ಯಾರೀ ಸೀತೆ ಎಂದು ಎಲ್ಲರಿಗೂ ತಿಳಿದದ್ದೇ. ರಾಮಾಯಣ, ಮಹಾಭಾರತ ಪೌರಾಣಿಕ ಕಥೆ ಇಟ್ಟುಕೊಂಡು ಹಲವು ಧಾರಾವಾಹಿಗಳು ಬಂದವು, ಸಿನಿಮಾಗಳೂ ಆದವು, ಇಂದಿಗೂ ಸಿನಿಮಾ ನಡೆಯುತ್ತಲೇ ಇದೆ. ಆದರೆ ಅದೇನೇ ಇದ್ದರೂ 1987- 88ರಲ್ಲಿ ದೂರದರ್ಶನ ಚಾನೆಲ್​ನಲ್ಲಿ  ಪ್ರಸಾರವಾಗುತ್ತಿದ್ದ  ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana) ಮಾತ್ರ ಇಂದಿಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿ ಬಿಟ್ಟಿದೆ. ಈಗಿನಷ್ಟು ತಂತ್ರಜ್ಞಾನ ಇಲ್ಲದಿದ್ದರೂ ರಾಮಾಯಣ ಮತ್ತು ಮಹಾಭಾರತದಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನಕ್ಕೆ ಪ್ರೇಕ್ಷಕ ವರ್ಗ ಫಿದಾ ಆಗಿತ್ತು. ಅಂದು ಎಷ್ಟೋ ಮನೆಗಳಲ್ಲಿ ಟಿ.ವಿಗಳೇ ಇರಲಿಲ್ಲ. ಕಲರ್​ ಟಿ.ವಿ ಅಂತೂ ಎಷ್ಟೋ ಕುಟುಂಬಗಳಿಗೆ ಕನಸಿನ ಮಾತೇ ಆಗಿತ್ತು. ಹಾಗಿದ್ದರೂ ಬ್ಲ್ಯಾಕ್​ ಆ್ಯಂಡ್​ ವೈಟ್​ ಟಿ.ವಿಯಲ್ಲಿ ಈ ಧಾರಾವಾಹಿಗಳನ್ನು ನೋಡಿ ಖುಷಿ ಪಟ್ಟವರು ಕೋಟ್ಯಂತರ ಮಂದಿ.  ಆ ಸಮಯದಲ್ಲಿ ರಾಮಾಯಣ ಧಾರಾವಾಹಿಯನ್ನು ನೋಡುವುದಕ್ಕಾಗಿ ಪ್ರತಿ ಭಾನುವಾರ ಎಷ್ಟೋ ದೂರದ ಮನೆಗಳಿಗಳಿಗೆ ಹೋಗಿ ನೋಡಿದವರೂ ಇದ್ದಾರೆ. ಅಷ್ಟೊಂದು ರೀತಿಯಲ್ಲಿ ಈ ಧಾರಾವಾಹಿ (Serial) ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. 

ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ

ಬಹುತೇಕ ಮನೆಗಳಲ್ಲಿ, ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದ್ದರು . ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ರಾಮನ ಪಾತ್ರಧಾರಿಯಾಗಿದ್ದ ಅರುಣ್​ ಗೋವಿಲ್​, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ(Deepika Chikhalia) , ಲಕ್ಷ್ಮಣನಾಗಿದ್ದ ಸುನಿಲ್​ ಲಹರಿ, ಹನುಮಂತನಾಗಿದ್ದ ಧಾರಾ ಸಿಂಗ್​ (Dhara singh) ಅವರನ್ನು ಖುದ್ದು ದೇವರೆಂದು ಪೂಜಿಸಿದ್ದಾರೆ.  ಅವರು ಹೋದ ಕಡೆಗಳಲ್ಲಿ ದೇವರೇ ಮನೆಗೆ ಬಂದವಂತೆ ಪೂಜೆ, ಪುನಸ್ಕಾರ ಮಾಡಿದ್ದಾರೆ.  ಅದೇ ರೀತಿ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್​ ತ್ರಿವೇದಿಯವರು ನಿಜ ಜೀವನದಲ್ಲಿಯೂ ಕೆಟ್ಟವರೆಂದು ಬಿಂಬಿಸಿದವರೂ ಇದ್ದಾರೆ. ಅಷ್ಟು ಈ ಪಾತ್ರಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. 

 ಇದೇ ಸೀತೆ ಈಗ ಅಯೋಧ್ಯೆಗೆ ಹೊರಡಲು ರೆಡಿಯಾಗಿದ್ದಾರೆ. ತಮಗೂ ಆಮಂತ್ರಣ ಸಿಕ್ಕಿದ್ದು 2024ರ ದೀಪಾವಳಿ ನನ್ನ ಪಾಲಿಗೆ ಜನವರಿಯಲ್ಲಿಯೇ ಬಂದಿದೆ ಎಂದು ಹೇಳಿದ್ದಾರೆ ನಟಿ. ಅಂದಹಾಗೆ ದೀಪಿಕಾ,  ಒಂದಾನೊಂದು ಕಾಲದ ಜನಪ್ರಿಯ ಬಾಲಿವುಡ್ ನಟಿ. ಕನ್ನಡದಲ್ಲೂ ನಟಿಸಿದ್ದಾರೆ.   ನಟ ಶಂಕರ್ ನಾಗ್ ಜೊತೆ ಲಾಲಿ, ಲಾಲಿ ಜೋ, ನನ್ನ ತಾಳಿಯ ಬಂಗಾರ ಜೋ ಎಂದು ಹಾಡುತ್ತಾ ಕನ್ನಡಿಗರ ಮನಸ್ಸು ಗೆದ್ದವರು ಇವರು. ಕನ್ನಡದಲ್ಲಿ ಶಂಕರ್ ನಾಗ್ ಜೊತೆ ಹೊಸ ಜೀವನದ ಚಿತ್ರದಲ್ಲಿ ನಟಿಸಿ, ನಂತರ ರೆಬಲ್ ಸ್ಟಾರ್ ಅಂಬರೀಶ್ ಜೊತೆ ಇಂದ್ರಜೀತ್ ಚಿತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದ ಈ ಬಾಲಿವುಡ್ ನಟಿಯನ್ನು (Bollywood actress) ದೇಶಾದ್ಯಂತ ಜನರು ಇಂದಿಗೂ ನೆನಪಿಟ್ಟುಕೊಂಡಿರುವುದು ರಮಾನಂದ ಸಾಗರ್ ಅವರ ರಾಮಾಯಣದ ಸೀತೆಯಾಗಿ.  ರಾಜ್ ಕಿರಣ್, ರಾಜೇಶ್ ಖನ್ನಾ ಜೊತೆ ನಟಿಸಿರುವ ಈ ನಟಿ ಹಲವಾರು ಹಿಂದಿ ಸೀರಿಯಲ್, ಮಲಯಾಳಿ, ಬೆಂಗಾಲಿ, ಗುಜರಾತಿ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಜಕೀಯದಲ್ಲೂ ಈ ನಟಿ ಸಕ್ರಿಯರಾಗಿದ್ದಾರೆ. ಅಯೋಧ್ಯೆಗೆ ತೆರಳಲು ಸಜ್ಜಾಗುತ್ತಿದ್ದಾರೆ ದೀಪಿಕಾ. 

ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದೆ? ನಟಿ ಶೋಭನಾರನ್ನು ರುಬ್ಬುತ್ತಿರೋ ನೆಟ್ಟಿಗರು!

 

click me!