
ಬಾಲಿವುಡ್ಗೆ ಮತ್ತೆ ಅಂಡರ್ವರ್ಲ್ಡ್ ನಡುಕ: 90ರ ದಶಕದ ಆ ರಕ್ತಸಿಕ್ತ ದಿನಗಳನ್ನು ನೆನಪಿಸಿಕೊಂಡ ರಾಮ್ ಗೋಪಾಲ್ ವರ್ಮಾ!
ಬಾಲಿವುಡ್ ಅಂದ ಮೇಲೆ ಅಲ್ಲಿ ಬಣ್ಣದ ಲೋಕದ ಜೊತೆಗೆ ಕರಾಳ ಮಾಫಿಯಾದ ನೆರಳು ಕೂಡ ಸದಾ ಇರುತ್ತದೆ. ದಶಕಗಳ ಕಾಲ ಮುಂಬೈ ಭೂಗತ ಲೋಕ ಅಥವಾ ಅಂಡರ್ವರ್ಲ್ಡ್ ಬಾಲಿವುಡ್ ಬೆನ್ನುಬಿದ್ದಿತ್ತು. ಇತ್ತೀಚೆಗೆ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರ ಜುಹು ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣ ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಈ ದಾಳಿಯ ಹೊಣೆಯನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಹಿಸಿಕೊಂಡ ಬೆನ್ನಲ್ಲೇ, ಸಿನೆಮಾ ಲೋಕದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) 90ರ ದಶಕದ ಆ ಭಯಾನಕ ದಿನಗಳನ್ನು ಬಿಚ್ಚಿಟ್ಟಿದ್ದಾರೆ.
ರೋಹಿತ್ ಶೆಟ್ಟಿ ಮನೆಯ ಬಳಿ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಆರ್ಜಿವಿ (Ram Gopal Varma), ಈ ದಾಳಿಯ ಮೂಲ ಎಲ್ಲಿದೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ದಾಳಿ ನಡೆಯುವ ಮೊದಲು ರೋಹಿತ್ ಶೆಟ್ಟಿ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವೇ? ಹಣಕ್ಕಾಗಿ ಬೇಡಿಕೆ ಇಡಲಾಗಿತ್ತೇ? ಈ ಬಗ್ಗೆ ರೋಹಿತ್ ಏನೂ ಮಾತನಾಡುತ್ತಿಲ್ಲ, ಹಾಗಾಗಿ ದಾಳಿಯ ನೈಜ ಉದ್ದೇಶ ಏನೆಂದು ತಿಳಿಯುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಪ್ರಚಾರಕ್ಕಾಗಿ ಅಥವಾ ಯಾರೋ ತಮಾಷೆಗಾಗಿ ಇಂತಹ ಕೃತ್ಯ ಎಸಗಿರಬಹುದು ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
90ರ ದಶಕದ ನೆನಪುಗಳನ್ನು ಮೆಲುಕು ಹಾಕಿದ ವರ್ಮಾ, "1997 ಮತ್ತು 1998ರ ಅವಧಿಯಲ್ಲಿ ಅಂಡರ್ವರ್ಲ್ಡ್ ಪ್ರಭಾವ ಒಂದು ಚಳವಳಿಯಂತೆ ಹರಡಿತ್ತು. ಅದು ಕೇವಲ ಒಂದು ಸಣ್ಣ ಘಟನೆಯಾಗಿರಲಿಲ್ಲ, ಇಡೀ ಚಿತ್ರರಂಗವೇ ಪ್ರಾಣಭಯದಲ್ಲಿ ಬದುಕುತ್ತಿತ್ತು. ಪ್ರಭಾವಿ ವ್ಯಕ್ತಿಗಳೆಲ್ಲರೂ ಭೂಗತ ಲೋಕದ ಟಾರ್ಗೆಟ್ ಆಗಿದ್ದರು. ಅಂದು ಖ್ಯಾತ ನಿರ್ಮಾಪಕ ರಾಕೇಶ್ ರೋಷನ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಅಷ್ಟೇ ಅಲ್ಲದೆ, ಪ್ರಖ್ಯಾತ ನಿರ್ಮಾಪಕ ಮನ್ಮೋಹನ್ ಶೆಟ್ಟಿ ಅವರನ್ನು ಕೊಲ್ಲಲು ಅಂಡರ್ವರ್ಲ್ಡ್ ಗ್ಯಾಂಗ್ ಹೊಂಚು ಹಾಕಿತ್ತು. ರಾಜೀವ್ ರೈ ಅಂತಹ ನಿರ್ದೇಶಕರಿಗೂ ಜೀವ ಬೆದರಿಕೆ ಇತ್ತು. ಆ ಕಾಲ ಮತ್ತೆ ಮರುಕಳಿಸುತ್ತದೆ ಎಂದು ನಾನು ನಂಬುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಇನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಗ್ಗೆ ಮಾತನಾಡಿದ ಆರ್ಜಿವಿ, ಸಂಘಟಿತ ಅಪರಾಧಕ್ಕೂ ಮತ್ತು ವೈಯಕ್ತಿಕ ಘಟನೆಗಳಿಗೂ ವ್ಯತ್ಯಾಸವಿದೆ ಎಂದು ವಿಶ್ಲೇಷಿಸಿದ್ದಾರೆ. ಬಿಷ್ಣೋಯ್ ತಾನೇ ಈ ಕೃತ್ಯ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಆತನಿಗೆ ಒಂದು ಹೆಮ್ಮೆಯ ವಿಷಯ ಅಥವಾ ಗೌರವದ ಸಂಕೇತದಂತೆ ಕಾಣುತ್ತಿದೆ. "90ರ ದಶಕದಲ್ಲಿ ಅಲಿ ಬುದೇಶ್ ಎಂಬೊಬ್ಬ ವ್ಯಕ್ತಿ ಇದ್ದ. ಯಾರು ಸತ್ತರೂ ಅಥವಾ ಯಾರ ಮೇಲೆ ದಾಳಿಯಾದರೂ ತಾನೇ ಮಾಡಿದ್ದು ಎಂದು ಆತ ಹೊಣೆ ಹೊತ್ತುಕೊಳ್ಳುತ್ತಿದ್ದ. ಈಗಿನ ಪರಿಸ್ಥಿತಿಯೂ ಅಲಿ ಬುದೇಶ್ ಕಾಲದಂತೆಯೇ ಕಾಣುತ್ತಿದೆ" ಎಂದು ವರ್ಮಾ ವ್ಯಂಗ್ಯವಾಗಿ ನುಡಿದಿದ್ದಾರೆ.
ಒಟ್ಟಾರೆಯಾಗಿ, ರೋಹಿತ್ ಶೆಟ್ಟಿ ನಿವಾಸದ ಮೇಲಿನ ದಾಳಿ ಬಾಲಿವುಡ್ನಲ್ಲಿ ಹಳೆಯ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಆರ್ಜಿವಿ ಅವರ ಈ ಸ್ಫೋಟಕ ಮಾತುಗಳು ಈಗ ಸಿನೆಮಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಅಂಡರ್ವರ್ಲ್ಡ್ ಪಿಡುಗು ಮತ್ತೆ ಬಾಲಿವುಡ್ ಅನ್ನು ಆವರಿಸಲಿದೆಯೇ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.