
ಏಪ್ರಿಲ್ 24 ಕನ್ನಡಿಗರಿಗೆ ವಿಶೇಷವಾದ ದಿನ. ಅದರಲ್ಲೂ ಡಾ.ರಾಜ್ ಕುಮಾರ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಇಂದು (ಏಪ್ರಿಲ್ 24) ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟಿದ ದಿನ(Dr Rajkumar Birthday). ಅಭಿಮಾನಿಗಳು 93ನೇ ವರ್ಷದ ಜನ್ಮದಿನಾಚರಣೆಯ ಸಡಗರದಲ್ಲಿದ್ದಾರೆ. ಪ್ರತೀವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಅಣ್ಣಾವ್ರು ಕನ್ನಡ ಚಿತ್ರರಂಗದ ದೂರ ಆಗಿದ್ದರು ಅವರ ನೆನಪು ಮಾತ್ರ ಇಂದಿಗೂ ಜೀವಂತವಾಗಿದೆ. ಡಾ.ರಾಜ್ ಕುಮಾರ್ ಮೇಲಿನ ಅಭಿಮಾನ ಕೊಂಚವು ಕಡಿಮೆಯಾಗಿಲ್ಲ. ಇಂದು ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ವಿಶ್ ಮಾಡಿ ಅಣ್ಣಾವ್ರ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಪ್ರತಿವರ್ಷ ಅಪ್ಪಾಜಿ ಹುಟ್ಟುಹಬ್ಬಕ್ಕೆ ಹಾಡಿನ ಮೂಲಕ ಶುಭಾಶಯ ತಿಳಿಸುತ್ತಿದ್ದರು. ಅಪ್ಪು ಕೊನೆಯದಾಗಿ ಅಂದರೆ ಕಳೆದ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ಹೃದಯಸ್ಪರ್ಶಿ ಗೀತೆ ಮೂಲಕ ಅಣ್ಣಾವ್ರಿಗೆ ವಿಶ್ ಮಾಡಿದ್ದರು. ಪುನೀತ್ ಹಾಡಿರುವ ಆ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರಲ್ಲೂ ಪುನೀತ್ ನಿಧನದ ಬಳಿಕವಂತು ಆ ಹಾಡು ಅಭಿಮಾನಿಗಳ ಮನಕಲುಕಿತ್ತು. ಅಪ್ಪು ಯಾಕಾದರು ಈ ಹಾಡನ್ನು ಹಾಡಿದ್ದಾರೋ ಎಂದು ಕಣ್ಣೀರಾಕಿದ್ದರು. ಅಷ್ಟು ಅಪ್ಪು ಕೊನೆಯದಾಗಿ ಅಪ್ಪನಿಗಾಗಿ ಹಾಡಿದ ಹಾಡು 'ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯ ಹೇಳಿವೆ...'., 'ಬಡವರ ಬಂಧು' ಸಿನಿಮಾದ ಹಾಡನ್ನು ಹೇಳಿ ಪುಟ್ಟ ಕಾಣಿಕೆ ಎಂದು ಬರೆದುಕೊಂಡಿದ್ದರು. ಇದನ್ನು ಅಪ್ಪು ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು. ಪುನೀತ್ ಹಾಡಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಕನ್ನಡದ ತಲೆಮಾರುಗಳನ್ನು ರೂಪಿಸಿದ ರಾಜ್ ಜೀವನಯಾತ್ರೆಯಲ್ಲೇ ಅದ್ಭುತ ಸಂದೇಶಗಳಿವೆ
ಆದರೆ ಇಂದು ಅಣ್ಣಾವ್ರ ಹಾಗೆ ಪುನೀತ್ ರಾಜ್ ಕುಮಾರ್ ಸಹ ನಮ್ಮೊಂದಿಗೆ ಇಲ್ಲ. ಆದರೆ ಶಾಶ್ವತವಾಗಿ ಕಾಡುವಂತ ಅವರ ನೆನಪುಗಳು ಮಾತ್ರ ಜೀವಂತ. ಆ ನೆನಪುಗಳಿಗೆ ಮರುಜೀವ ತುಂಬುತ್ತಾ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ. ಅಪ್ಪು ಕೊನೆಯದಾಗಿ ಅಪ್ಪನಿಗೆ ವಿಶ್ ಮಾಡಿರುವ ಹಾಡು ಮತ್ತೆ ವೈರಲ್ ಆಗಿದೆ. ಅಪ್ಪು ಧ್ವನಿಯಲ್ಲಿ ಬಂದಿರುವ ಹಾಡನ್ನು ಶೇರ್ ಮಾಡಿ ಅಭಿಮಾನಿಗಳು ಸಹ ಶುಭಾಶಯ ತಿಳಿಸುತ್ತಿದ್ದಾರೆ.
Dr Rajkumar ಚಿತ್ರಗಳಿಗೆ ಕುಂಚ ಸ್ಪರ್ಶ: ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಭಿಮಾನಿಯ ಉಡುಗೊರೆ
ಇನ್ನು ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ ಇಂದು ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಅಭಿಮಾನಿಗಳಿಗೆ ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡಿರಲಿಲ್ಲ. ಸಮಾಧಿ ಬಳಿ ಭೇಟಿಗೆ ಅನುಮತಿ ಇರಲಿಲ್ಲ. ಹಾಗಾಗಿ ಮನೆಯಲ್ಲೇ ವರನಟನನ್ನು ನೆನೆದು ಅಭಿಮಾನಿಗಳು ಧನ್ಯರಾಗಿದ್ದರು. ಆದರೆ ಈ ವರ್ಷ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಭಿಮಾನಿಗಳು ರಾಜ್ ಕುಮಾರ್ ಅವರನ್ನು ಸ್ಮರಿಸುತ್ತಿದ್ದಾರೆ. ಕುಟುಂಬದವರು ಸಹ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇನ್ನು ರಾಜ್ಯದ ಹಲವು ಕಡೆ ಸಮಾಜಮುಖಿ ಕಾರ್ಯಗಳನ್ನು ಅಭಿಮಾನಿಗಳನ್ನು ಹಮ್ಮಿಕೊಂಡಿದ್ದಾರೆ. ರಕ್ತದಾನ, ನೇತ್ರದಾನ ನೋಂದಣಿ, ಅನ್ನ ದಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.