ನಾಲ್ಕು ಲಕ್ಷ ರೂ. ಸುಪಾರಿ! ಸಲ್ಮಾನ್‌ ಖಾನ್‌ ಕುರಿತು ಪೊಲೀಸರೆದುರು ಶೂಟರ್ಸ್‌ ಬಾಯ್ಬಿಟ್ಟಿದ್ದೇನು?

By Suvarna NewsFirst Published Apr 18, 2024, 3:28 PM IST
Highlights

ಸಲ್ಮಾನ್‌ ಖಾನ್‌  . ಅವರಿಗೆ ಹೆದರಿಸಲು ನಾಲ್ಕು ಲಕ್ಷ ರೂಪಾಯಿಗಳ ಸುಪಾರಿ ನೀಡಲಾಗಿತ್ತು ಎಂದಿದ್ದಾರೆ ಆರೋಪಿಗಳು. ಅವರು ಹೇಳಿದ್ದೇನು? 
 

ಇದೇ 14ರಂದು  ನಟ ಸಲ್ಮಾನ್​ ಖಾನ್​ (Salman Khan) ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗಡೆ ಗುಂಡಿನ ದಾಳಿ ನಡೆದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಆದರೆ ಇದುವರೆಗೂ ಈ ಬಗ್ಗೆ ನಟ ಸಲ್ಮಾನ್​ ಖಾನ್​ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಜಾರಿದ್ದಾರೆ. ಆದರೆ ಈ ಕುರಿತು ಸಹೋದರ ಅರ್ಬಾಜ್​ ಖಾನ್​ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಘಟನೆ ಶಾಕಿಂಗ್​ ಆಗಿದೆ ಎಂದಿದ್ದರು.  ಇಬ್ಬರು ಅಪರಿಚಿತರು ಬೈಕ್​ನಲ್ಲಿ ಬಂದು ಸಲೀಂ ಖಾನ್​ ಕುಟುಂಬದ ನಿವಾಸವಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಮೇಲೆ ಗುಂಡಿನ ದಾಳಿ ಮಾಡಿದ್ದು ಆಘಾತಕಾರಿ ಸಂಗತಿಯಾಗಿದೆ. ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಆತಂಕ ಆಗಿದೆ ಎಂದಿದ್ದರು,  ಇದರ ಬೆನ್ನಲ್ಲೇ ಗ್ಯಾಂಗ್‌ಸ್ಟರ್‌ ಲಾರೆನ್ಸ್​ ಬಿಷ್ಣೋಯಿ ಕೂಡ ತಮ್ಮವರೇ ಇದನ್ನು ಮಾಡಿರುವುದಾಗಿ ಹೇಳಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಇದಾಗಲೇ ಕೆಲವರನ್ನು ಬಂಧಿಸಿಯೂ ಆಗಿದೆ. 
 
ಪೊಲೀಸರು ಹೇಳಿರುವ ಪ್ರಕಾರ, ವಿಕ್ಕಿ ಗುಪ್ತಾ, 24, ಮತ್ತು ಸಾಗರ್ ಕುಮಾರ್ ಪಾಲಕ್, 21 ಪೊಲೀಸ್ ಕಸ್ಟಡಿಯಲ್ಲಿ ಇದ್ದು ಇನ್ನು ಕೆಲವರನ್ನು ಬಂಧಿಸಲಾಗಿದೆ. ಘಟನೆ ನಡೆದ ದಿನ ಈ ಕೃತ್ಯ ಎಸಗಿದ್ದು ನಮ್ಮವರೇ ಎಂದು ಲಾರೆನ್ಸ್‌ ಬಿಷ್ಣೋಯಿ ಫೇಸ್​ಬುಕ್​ನಲ್ಲಿ ಈ ಪೋಸ್ಟ್​ ಹಾಕಿದ್ದ. ಗುಂಡಿನ ದಾಳಿಯನ್ನು ನಡೆಸಿರುವುದು ತಮ್ಮವರೇ ಎಂದು ಹೇಳಿಕೊಂಡಿರುವ ಲಾರೆನ್ಸ್​,  ಕೃಷ್ಣಮೃಗ ಬೇಟೆಯ ಬಗ್ಗೆ ಇದುವರೆಗೆ ಕ್ಷಮೆ ಕೋರದ ಸಲ್ಮಾನ್​ ಖಾನ್​ ವಿರುದ್ಧ ಹೀಗೆ ಹರಿಹಾಯ್ದಿದ್ದ.  "ಓಂ" ಮತ್ತು "ಜೈ ಶ್ರೀ ರಾಮ್" ಎಂದು ಪ್ರಾರಂಭವಾಗಿರುವ ಈ ಪೋಸ್ಟ್​ನಲ್ಲಿ ನಮ್ಮ ಮನೆಯ ನಾಯಿಗಳಿಗೆ  ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಎಂದು ಹೆಸರು ಇಡಲಾಗಿದೆ. ಆದರೆ ನೀನು ಹಲವರ ಪಾಲಿಗೆ ದೇವರಾಗಿದ್ದಿ, ನಮಗೆ ಒಟ್ಟಿನಲ್ಲಿ ಶಾಂತಿ ಬೇಕು. ಅದಕ್ಕೆ ನೀನು ಒಪ್ಪದಿದ್ದರೆ ಮುಂದಿನ ಗುಂಡು ಮನೆಯ ಮೇಲೆ ಬೀಳುವುದಿಲ್ಲ ಎಂದಿದ್ದ.

ಮದ್ವೆ ಯಾವಾಗ, ಹುಡುಗ ಯಾರೆಂದು ಅಮ್ಮನನ್ನೇ ಪ್ರಶ್ನಿಸಿದ ಅರ್ಹಾನ್‌: ಮಲೈಕಾ ಅರೋರಾ ಹೇಳಿದ್ದೇನು?

ಅದರಂತೆ ಈಗ ಬಂಧನಕ್ಕೆ ಒಳಗಾಗಿರುವವರೂ ಅವನ ಕಡೆಯವರೇ ಎನ್ನಲಾಗಿದೆ. ಆರೋಪಿಗಳು ಬಿಹಾರದ ಪಶ್ಚಿಮ ಚಂಪಾರಣ್‌ನವರಾಗಿದ್ದು, ಗುಜರಾತ್‌ನ ಕಚ್ ಜಿಲ್ಲೆಯ ದೇವಸ್ಥಾನದ ಆವರಣದಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಆರೋಪಿಗಳು ಘಟನೆ ಕುರಿತು ಬಾಯಿ ಬಿಟ್ಟಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ಪೊಲೀಸರು ಹೇಳಿರುವ ಪ್ರಕಾರ,  ಪಾಲಕ್ ಮತ್ತು ಅವನ ಸಹಚರ ವಿಕ್ಕಿ ಗುಪ್ತಾ ಇಬ್ಬರಿಗೂ ಕೃತ್ಯ ನಡೆಸಲು   4 ಲಕ್ಷ ರೂಪಾಯಿಗಳ ಲಂಚ ನೀಡಲಾಗಿತ್ತಂತೆ. ಮುಂಗಡ ಹಣವಾಗಿ  1 ಲಕ್ಷ ರೂಪಾಯಿ ನೀಡಲಾಗಿತ್ತು ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಯಾವುದೇ ಕಾರಣಕ್ಕೂ ಸಲ್ಮಾನ್‌ ಖಾನ್‌ ಅವರನ್ನು ಕೊಲ್ಲುವ ಉದ್ದೇಶ ನಮಗಿಲ್ಲ. ಆದರೆ ಕೇವಲ ಹೆದರಿಸುವ ಉದ್ದೇಶವಿತ್ತಷ್ಟೇ ಎಂದು ಆರೋಪಿಗಳು ಹೇಳಿರುವುದಾಗಿ ತಿಳಿದು ಬಂದಿದೆ.
 
ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ  ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾನೆ.  ಅಷ್ಟಕ್ಕೂ ಆತನ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ.  ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ  ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡುತ್ತಲೇ ಇದೆ.  ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ.

ಗುಂಡಿನ ದಾಳಿ ಬಳಿಕ ಮೌನಕ್ಕೆ ಜಾರಿದ ಸಲ್ಮಾನ್​ ಖಾನ್​: ಸಹೋದರ ಅರ್ಬಾಜ್​ ಖಾನ್​ ಪ್ರತಿಕ್ರಿಯೆ ಹೀಗಿದೆ...

 

click me!