ಪುಟ್ಟ ಹುಡುಗ ನನ್ನ, ರಾಜ್ ಕುಮಾರ್ ಜೀವ ಉಳಿಸಿದ; 'ಒಂದು ಮುತ್ತಿನ ಕಥೆ' ಅನುಭವ ಬಿಚ್ಚಿಟ್ಟ ಚಂದ್ರು

By Shruiti G KrishnaFirst Published May 25, 2022, 2:04 PM IST
Highlights

ಸ್ಯಾಂಡಲ್‌ವುಡ್‌ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸದ್ಯ ಕಾಮಿಡಿ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಮುಖ್ಯಮಂತ್ರಿ ಚಂದ್ರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಡಾ.ರಾಜ್ ಕುಮಾರ್ ನಟನೆಯ ಒಂದು ಮುತ್ತಿನಕಥೆ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ನಡೆದ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು(Mukhyamantri Chandru) ಸದ್ಯ ಕಾಮಿಡಿ ಗ್ಯಾಂಗ್(Comedy Gang) ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಮುಖ್ಯಮಂತ್ರಿ ಚಂದ್ರು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಡಾ.ರಾಜ್ ಕುಮಾರ್ ನಟನೆಯ ಒಂದು ಮುತ್ತಿನಕಥೆ(Ondu Muttina Kathe) ಸಿನಿಮಾದ ಚಿತ್ರೀಕರಣ ಸಮಯದಲ್ಲಿ ನಡೆದ ಭಯಾನಕ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಚಿತ್ರೀಕರಣ ಸಮಯದಲ್ಲಿ ಹುಲಿ ಮತ್ತು ಕಾಳಿಂಗ ಸರ್ಪ ಬಂದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ ಆ ಸಮಯದಲ್ಲಿ ಪುಟ್ಟ ಬಾಲಕ ಅವರ ಜೀವ ಉಳಿಸಿದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಮುಖ್ಯಮಂತ್ರಿ ಚಂದ್ರು ಹೇಳಿದ್ದೇನು?

'ಒಂದು ಮುತ್ತಿನ ಕಥೆ' ಸಿನಿಮಾಗೆ ಯಾಣಗೆ 3 ರಿಂದ 4 ಕಿ.ಮೀ ನಡೆದುಕೊಂಡು ಹೋಗಬೇಕಿತ್ತು. ಅಲ್ಲಿ ಕರಿ ಕಲ್ಲುಗಳೇ ತುಂಬಿದ್ದವು. ಸುಧೀಂದ್ರ, ರಮೇಶ್ ಭಟ್, ಸುಂದರ್ ರಾಜ್ ಸೇರಿದಂತೆ ಸಾಕಷ್ಟು ಕಲಾವಿದರಿದ್ದರು. ಬೆಳಗ್ಗೆ 7 ಗಂಟೆಗೆ ಶೂಟಿಂಗ್ ಮಾಡಬೇಕು ಅಂತ ನಾವು ಬೆಳಗಿನ ಜಾವ 5 ಗಂಟೆಗೆ ನಡೆಯಲು ಆರಂಭಿಸಿದ್ದೆವು. ಆ ಸಿನಿಮಾದಲ್ಲಿ ನಾನು ಸಾಹುಕಾರನ ಪಾತ್ರ ಮಾಡಿದ್ದೆ, ಫುಲ್ ಬಟ್ಟೆ ಹಾಕಿದ್ದೆ, ಉಳಿದವರೆಲ್ಲ ಬೆಸ್ತರ ಉಡುಗೆಯಲ್ಲಿದ್ದರು. ಡಾ ರಾಜ್‌ಕುಮಾರ್ ಆ ಸಿನಿಮಾ ಹೀರೋ, ಪಾರ್ವತಮ್ಮ ರಾಜ್‌ಕುಮಾರ್ ಆ ಸಿನಿಮಾ ನಿರ್ಮಾಪಕಿಯಾಗಿದ್ದರು' ಎಂದರು.

'ಅದು ಕಾಳಿಂಗ ಸರ್ಪ, ಹುಲಿ, ಚಿರತೆ ಓಡಾಡುವ ಅರಣ್ಯ. ಹೀಗೆ ನಡೆದುಕೊಂಡು ಹೋಗುವಾಗ 2 ಕಿಮೀ ಹೋಗಿದ್ವಿ. ಆಗ ಸಣ್ಣ ತೊರೆ ಕಾಣಿಸ್ತು, ಅದನ್ನು ನೋಡಿ ರಾಜ್‌ಕುಮಾರ್ ಅವರು ಸ್ವಲ್ಪ ಹೊತ್ತು ನೀರಲ್ಲಿ ಕೂತು ವಿಶ್ರಾಂತಿ ಮಾಡಿ ಹೋಗೋಣವೇ? ಎಂದು ಕೇಳಿದರು. ನಮಗೂ 2 ಕಿ ಮೀ ನಡೆದು ಸುಸ್ತಾಗಿತ್ತು. ಹೀರೋ ಅವರೇ ಈ ಮಾತು ಹೇಳಿದ್ದಾರೆ. ನಮಗೆ ಏನಾಗಬೇಕು ಅಂತ ನಾವು ಬಟ್ಟೆ ಕಳಚಿಟ್ಟು ಆ ನೀರೊಳಗೆ ಹೋಗಿ ಕುಳಿತೆವು' ಎಂದು ವಿವರಿಸಿದರು. 

'ಅರ್ಧಾಂಗಿ'ಯಲ್ಲಿ ಪ್ರಿಯಾಂಕಾ ಉಪೇಂದ್ರ; ಹೊಸ ಧಾರಾವಾಹಿ ಬಗ್ಗೆ ನಟಿ ಹೇಳಿದ್ದೇನು?

'ಅಲ್ಲೊಬ್ಬ ಬುಡಕಟ್ಟು ಜನಾಂಗದ ಹುಡುಗ ಓಡಿ ಬಂದ. ಚಿಕ್ಕ ಹುಡುಗ ಆತ, 8-9 ವರ್ಷ ಆಗಿರಬಹುದು. ಅವನಿಗೆ ಡಾ ರಾಜ್‌ಕುಮಾರ್ ಯಾರು, ಚಂದ್ರು ಯಾರು ಅಂತ ಗೊತ್ತಿಲ್ಲ. ಇಲ್ಲಿಂದ ಬೇಗ ಬೇಗ ಹೋಗಿ ಅಂತ ಹೇಳಿದ. ಯಾಕೆ ಅಂತ ಕೇಳಿದ್ವಿ ಆಗ ಅವನು ಹುಲಿ ಬಂದು ನೀರು ಕುಡಿದುಕೊಂಡು ಹೋಗುತ್ತೆ ಅಂತ ಹೇಳಿದ. ನಾವು ಹಾಗೆ ಎದ್ದು ಓಡಲು ಶುರು ಮಾಡಿದೆವು. ಸ್ವಲ್ಪ ಹೊತ್ತು ಬರುವ ಬದಲು ಈಗಲೇ ಬಂದ್ರೆ ಗತಿ ಏನು ಅಂತ ಭಯ ಆಯ್ತು. ಆಗ ಅವನು ಇರಿ ಇರಿ ಹುಲಿ ಯಾವಾಗ ಬರುತ್ತೆ ಎಂದು ಸೌಂಡ್ ಮಾಡುತ್ತೆ. ಆ ಶಬ್ದಕ್ಕೆ ಮಂಗಗಳು ಎಲ್ಲಾ ಪ್ರಾಣಿಗಳು ಓಡಾಡುತ್ತವೆ. ಆಗ ನೀವು ಹೋಗಿ ನಾನು ಇದ್ದೀನಿ ಅಂತ ಹೇಳಿದ. ನೀನು ಹೇಗೆ ಇದಿಯಾ ಅಂತ ಕೇಳಿದೆ. ನಮಗೆ ಅನೇಕ ವರ್ಷಗಳಿಂದ ಇದೇ ಅಭ್ಯಾಸ ಎಂದ. ಓಡಿ ಬಂದ್ವು. ಒಂದು ಘರ್ಜನೆ ಬಂತುಹುಲಿದು. ಅದು ಒಂದೂವರೆ ಕಿ ಮೀ ದೂರದಲ್ಲಿ ಇದೆಯಂತೆ. ಆಗ ಮಂಗಗಳೆಲ್ಲ ಓಡಲು ಪ್ರಾರಂಭಿಸಿದೆವು. ನಾವು ಓಡಲು ಶುರು ಮಾಡಿದೆವು. 10 ಅಡಿ ಓಡಿಲ್ಲ ಆದರೆ ಅಲ್ಲೇ ಕಾಳಿಂಗ ಸರ್ಪ ಕಾಣಿಸಿತು'

'ಹತ್ತು ಅಡಿ ದೂರದಲ್ಲಿದೆ. 4 ಅಡಿ ಎದ್ದು ನಿಂತಿದೆ. ಕರೀ ಮೀಸೆ, ಉಶ್.. ಉಶ್.. ಎನ್ನುತ್ತೆ. ಯಾರೋ ಒಬ್ರು ಹೋಗ್ತಾವಿ ಅಂತ ಭಯ ಆಯ್ತು. ಆಗ ಹೀರೋ ರಾಜ್ ಕುಮಾರ್ ಅಲ್ಲ, ವಿಲನ್ ನಾನು ಅಲ್ಲ. ಆ ಹುಡುಗ ಹೀರೋ. ಅವನು ಕಾಳಿಂಗ ಸರ್ಪವನ್ನು ಎದುರಿಸಿ ನಮ್ಮನ್ನು ಬದುಕಿಸುತ್ತಿದ್ದಾನೆ. ಮಾತಾಡಬೇಡಿ, ಸುಮ್ಮನೆ ಇರಿ ಅದರ ಪಾಡಿಗೆ ಅದು ಹೋಗುತ್ತೆ ಎಂದ. ನಮಗೂ ಹೋಗುತ್ತೆ ಎಂದು ಸಂತೋಷ ವಾಯಿತು. ಆದರೆ ನಮ್ಮ ಕಡೆ ಬರುತ್ತೋ ಎಲ್ಲಿ ಹೋಗುತ್ತೋ ಗೊತ್ತಾಗಿಲ್ಲ. ನಾನು ಬೇರೆ ಕಚ್ಚೆ ಹಾಕಿದ್ದೆ. ಕಚ್ಚೆ ಒಳಗೆ ಹೋದ್ರೆ ಏನ್ ಮಾಡೋದು. ಭಯ ಆಗ್ತಿತ್ತು'

ಕಾಮಿಡಿ ಗ್ಯಾಂಗ್ಸ್‌ ಶೋಗೆ ನಿರೂಪಕನಾದ ಹಾಸ್ಯ ನಟ ಶಿವರಾಜ್‌ ಕೆಆರ್‌ ಪೇಟೆ!

'ಆಗ ರಾಜ್ ಕುಮಾರ್ ಹೇಳಿದ್ರು, ಏನ್ರಿ ನಾನು ಇಷ್ಟು ಸಿನಿಮಾಗಳ ಹೀರೋ, ನೀವು ಇಷ್ಟು ಸಿನಿಮಾಗಳ ವಿಲನ್ ನಮ್ಮ ಸ್ಥಿತಿ 8 ವರ್ಷದ ಹುಡುಗ ಹೀರೋ, ನಾವೇನು ಹೀರೋ, ಜಗತ್ತು ಹೇಗಿದೆ ನೋಡ ಎಂದು ಅವರು ಕಥೆ ಹೇಳುತ್ತಿದ್ದಾರೆ ನಿಧಾನಕ್ಕೆ. ಅಮೇಲೆ ನಿಧಾನಕ್ಕೆ ಹಾವು ಇಳಿಯತೊಡಗಿತು. ಆ ಕಡೆ ಹೋಯ್ತು. ಮುಂದಕ್ಕೆ ಹೋದ್ವಿ ಹುಡುಗ ವಾಸಮಾಡೋ ಜಾಗ. ಅಜ್ಜಿ ಮೊಮ್ಮಗ ಇದ್ದರು. ಅಲ್ಲಿ ನಮಗೆ ಬೆಲ್ಲ, ನೀರು ಕೊಟ್ಟರು' ಎಂದು ಭಯಾನಕ ಘಟನೆ ವಿವರಿಸಿದರು.

click me!