
ಮುಂಬೈ: ಭಾರತೀಯ ಸಂಗೀತ ಲೋಕದ ಮಿನುಗುತಾರೆ ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ಭಾನುವಾರ ಕೊನೆಯುಸಿರೆಳೆದರು. ಆಶಾ ಭೋಸ್ಲೆ ನಿಧನದ ಸುದ್ದಿ ಇಡೀ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಹಲವು ಗಣ್ಯರು ಸೋಶಿಯಲ್ ಮೀಡಿಯಾ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸೋಮವಾರ ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಿತು. 'ಆಶಾ ತಾಯಿ ಅಮರ್ ರಹೇ' ಎಂಬ ಘೋಷಣೆಗಳ ನಡುವೆ, ಮಗ ಆನಂದ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಸೋಮವಾರ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ನಡೆಯಿತು. ಅವರಿಗೆ ಸಂಗೀತಮಯ ವಿದಾಯ ನೀಡಲಾಯಿತು. ಈ ವೇಳೆ, ಶಾನ್ ಮತ್ತು ಅನೂಪ್ ಜಲೋಟಾ ಸೇರಿದಂತೆ ಹಲವು ಬಾಲಿವುಡ್ ಗಾಯಕರು ಆಶಾ ತಾಯಿ ಹಾಡಿದ ಹಾಡುಗಳನ್ನೇ ಹಾಡಿ ಭಾವಪೂರ್ಣ ವಿದಾಯ ಹೇಳಿದರು. ಈ ದೃಶ್ಯ ಎಲ್ಲರ ಕಣ್ಣಂಚನ್ನು ತೇವಗೊಳಿಸಿತ್ತು. ಕಳೆದ ಕೆಲವು ದಿನಗಳಿಂದ ಆಶಾ ತಾಯಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದಾಗಿ ಶನಿವಾರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ವೈದ್ಯರು ನಿರಂತರವಾಗಿ ನಿಗಾ ವಹಿಸಿದ್ದರೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಹು ಅಂಗಾಂಗ ವೈಫಲ್ಯದಿಂದ ಅವರು ನಿಧನರಾದರೆಂದು ವೈದ್ಯರು ಖಚಿತಪಡಿಸಿದ್ದಾರೆ.
ಆಶಾ ಭೋಸ್ಲೆ ಅವರಿಗೆ ಅಂತಿಮ ವಿದಾಯ ಹೇಳಲು ಮತ್ತು ಕೊನೆಯ ದರ್ಶನ ಪಡೆಯಲು ಬಾಲಿವುಡ್ ತಾರೆಯರ ದಂಡೇ ಹರಿದುಬಂದಿತ್ತು. ಈ ಸಂದರ್ಭದಲ್ಲಿ ಅಮೀರ್ ಖಾನ್, ವಿಕ್ಕಿ ಕೌಶಲ್, ಮೀನಾಕ್ಷಿ ಶೇಷಾದ್ರಿ, ಎ.ಆರ್. ರೆಹಮಾನ್, ಶಬಾನಾ ಅಜ್ಮಿ, ರಣವೀರ್ ಸಿಂಗ್, ಟಬು, ಜಾಕಿ ಶ್ರಾಫ್, ಫರ್ಹಾನ್ ಅಖ್ತರ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಶಿರಾಜ್, ಹೆಲೆನ್, ಅನುರಾಧಾ ಪೌಡ್ವಾಲ್, ಆಶಾ ಪರೇಖ್, ಸಚಿನ್ ಪೆಲ್ಗಾಂವ್ಕರ್, ಪದ್ಮಿನಿ ಕೊಲ್ಹಾಪುರೆ, ರಾಕೇಶ್ ರೋಶನ್, ಅನು ಮಲಿಕ್, ನಿತಿನ್ ಮುಕೇಶ್, ಸುದೇಶ್ ಭೋಸ್ಲೆ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು
ಆಶಾ ಭೋಸ್ಲೆ ಅವರ ಜೀವನ ಹೋರಾಟಗಳಿಂದಲೇ ತುಂಬಿತ್ತು. ಅವರಿಗೆ ಕೇವಲ 4 ವರ್ಷ ವಯಸ್ಸಿದ್ದಾಗ ತಂದೆ ತೀರಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಅಕ್ಕ ಲತಾ ಮಂಗೇಶ್ಕರ್ ಜೊತೆ ಹಾಡಲು ಶುರು ಮಾಡಿದರು. ಕೇವಲ 16ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿ ಮದುವೆಯಾಗಿದ್ದರು. ಮದುವೆಯ ನಂತರ ಅವರ ಜೀವನ ಮತ್ತಷ್ಟು ಕಷ್ಟಕರವಾಯಿತು. ಅವರು ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾಗ, ಪತಿ ಗಣಪತರಾವ್ ಭೋಸ್ಲೆ ಅವರನ್ನು ಮನೆಯಿಂದ ಹೊರಹಾಕಿದ್ದರು. ನಂತರ ಮೂವರು ಮಕ್ಕಳನ್ನು ಒಬ್ಬರೇ ಬೆಳೆಸಿದರು. ಪತಿಯಿಂದ ವಿಚ್ಛೇದನ ಪಡೆದ ಸುಮಾರು 20 ವರ್ಷಗಳ ನಂತರ, ಅವರು ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಅವರನ್ನು ಮದುವೆಯಾದರು.
ಇದನ್ನೂ ಓದಿ: ಆಶಾ ಭೋಸ್ಲೆ ಕೊನೆಯ ಆಸೆ ಇದಾಗಿತ್ತು.. ಆದರೆ ಈ ಮಹಾನ್ ಗಾಯಕಿ ಬಯಕೆ ಈಡೇರಿತಾ?
ಹಾಡುವುದನ್ನೇ ಉಸಿರಾಗಿಸಿಕೊಂಡಿದ್ದ ಆಶಾ ಭೋಸ್ಲೆಯವರಿಗೆ ಅದು ಕೊನೆ ಉಸಿರಿರುವ ತನಕವೂ ಇರಬೇಕು ಎನ್ನುವ ಆಸೆಯಿತ್ತು. ಕೊನೆ ತನಕವೂ ಅದೇ ಇರನ್ಕು ಎನ್ನುವ ಆಸೆಯೂ ಇತ್ತು. ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ‘ನಾನು ಹಾಡುತ್ತಲೇ ಸಾಯಬೇಕೆಂಬುದು ನನ್ನ ಆಸೆ. ಈಗ ನನಗೆ ಏನನ್ನೂ ಕಲಿಯಲು ಇಷ್ಟವಿಲ್ಲ. ಹಾಡುವುದೇ ನನ್ನ ಜೀವನ. ನಾನು ಬಾಲ್ಯದಿಂದಲೂ ಹಾಡುತ್ತಿದ್ದೇನೆ. ನಾನು 3 ವರ್ಷದವಳಿದ್ದಾಗ ನನ್ನ ತಂದೆಯಿಂದ ಶಾಸ್ತ್ರೀಯ ಗಾಯನವನ್ನು ಕಲಿಯಲು ಪ್ರಾರಂಭಿಸಿದೆ. ಹಾಗಾಗಿ ನನ್ನ ಇಡೀ ಜೀವನ ಅದರಲ್ಲಿಯೇ ಕಳೆದಿದೆ. ನಾನೀಗ ಚಿತ್ರರಂಗದಲ್ಲಿ 80ರಿಂದ 82 ವರ್ಷಗಳಾಗಿವೆ. ಎಲ್ಲಾ ಪ್ರಕಾರದ ಹಾಡುಗಳನ್ನೂ ನಾನು ಹಾಡಿದ್ದೇನೆ. ಈಗ ನನ್ನ ಜೀವನದ ಸಂಧ್ಯಾಕಾಲದಲ್ಲಿ ನನ್ನ ಏಕೈಕ ಆಸೆ ಎಂದರೆ ಹಾಡುತ್ತಾ ಸಾಯುವುದು. ನಾನು ಹಾಡುತ್ತಾ ಸತ್ತರೆ ನನಗೆ ಹೆಚ್ಚು ಸಂತೋಷವಾಗುತ್ತದೆ’ ಎಂದಿದ್ದರು. ಅದರಂತೆಯೇ ಅವರು ಅಗಲಿದರು.
ಇದನ್ನೂ ಓದಿ:
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.