
ಬೆಂಗಳೂರು (ಫೆ.23): ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) 'ಕಾಂತಾರಾ ಚಾಪ್ಟರ್-1' ಸಿನಿಮಾದ ಪಾತ್ರದ ಬಗ್ಗೆ ಅವಹೇಳನಕಾರಿಯಾಗಿ ವರ್ತನೆ ತೋರಿದ್ದ ಆರೋಪದ ಮೇಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಎಫ್ಐಆರ್ ರದ್ದುಪಡಿಸುವಂತೆ ಕೋರಿ ನಟಿ ದೀಪಿಕಾ ಪಡುಕೋಣೆ ಪತಿ ಹಾಗೂ ಕರ್ನಾಟಕದ ಅಳಿಯ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ರಣವೀರ್ ಸಿಂಗ್ ಪರ ವಕೀಲರು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. "ಪೊಲೀಸರು ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದ್ದಾರೆ, ಆದ್ದರಿಂದ ಇಂದೇ ವಿಚಾರಣೆ ನಡೆಸಿ" ಎಂದು ಕೋರಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, "ಬಾಲಿವುಡ್ ನಟನಾದರೆ ಮಧ್ಯಾಹ್ನವೇ ವಿಚಾರಣೆ ನಡೆಸಬೇಕೇ? ಒಂದು ವೇಳೆ ಹಾಲಿವುಡ್ ನಟನಾದರೆ ಈಗಲೇ ವಿಚಾರಣೆ ನಡೆಸಬೇಕೆ?" ಎಂದು ಪ್ರಶ್ನಿಸುವ ಮೂಲಕ ವಿಶೇಷ ಆದ್ಯತೆ ನೀಡಲು ನಿರಾಕರಿಸಿದರು. ಅಂತಿಮವಾಗಿ ವಿಚಾರಣೆಯನ್ನು ನಾಳೆಗೆ (ಫೆಬ್ರವರಿ 24) ನಿಗದಿಪಡಿಸಿದರು.
ವಕೀಲ ಪ್ರಶಾಂತ್ ಎಂಬುವವರು ರಣವೀರ್ ಸಿಂಗ್ ವಿರುದ್ಧ ದೂರು ನೀಡಿದ್ದರು. ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ ರಣವೀರ್ ಸಿಂಗ್ ಅವರು 'ಕಾಂತಾರಾ' ಚಿತ್ರದ ಪಾತ್ರವೊಂದನ್ನು ಅನುಕರಿಸುವಾಗ ಅವಹೇಳನಕಾರಿಯಾಗಿ ವರ್ತಿಸಿದ್ದಾರೆ ಎಂಬುದು ದೂರುದಾರರ ಆರೋಪ. ಆದರೆ ರಣವೀರ್ ಸಿಂಗ್ ಪರ ವಕೀಲರು, "ನಟ ರಣವೀರ್ ಸಿಂಗ್ ಅವರು ರಿಷಬ್ ಶೆಟ್ಟಿ ಅವರ ನಟನೆಯನ್ನು ಪ್ರಾಮಾಣಿಕವಾಗಿ ಹೊಗಳಿದ್ದಾರೆ. ಅವರ ಹೇಳಿಕೆಗೆ ಕ್ರಿಮಿನಲ್ ಬಣ್ಣ ಬಳಿಯಲಾಗಿದೆ" ಎಂದು ವಾದಿಸಿದ್ದಾರೆ. ಈಗಾಗಲೇ ಪೊಲೀಸರಿಂದ ನೋಟಿಸ್ ಪಡೆದಿರುವ ರಣವೀರ್ ಸಿಂಗ್ ಅವರಿಗೆ ಹೈಕೋರ್ಟ್ ನಾಳೆ ನೀಡಲಿರುವ ತೀರ್ಪು ಅತ್ಯಂತ ನಿರ್ಣಾಯಕವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.