
ಜಾಹ್ನವಿ ಕಪೂರ್- ಕರಣ್ ಜೋಹರ್ ಮಧ್ಯೆ ಬಿರುಕು?
ಬಾಲಿವುಡ್ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ (Karan Johar) ಹಾಗೂ ಅವರ 'ಧರ್ಮ ಕಾರ್ನರ್ಸ್ಟೋನ್ ಏಜೆನ್ಸಿ' (Dharma Cornerstone Agency) ಕುರಿತಾದ ಸುದ್ದಿ ಸದ್ಯ ಬಿ-ಟೌನ್ನಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ, ಕರಣ್ ಅವರ ನೆಚ್ಚಿನ ನಟಿ ಜಾಹ್ನವಿ ಕಪೂರ್ (Janhvi Kapoor) ತಮ್ಮ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿಯಿಂದ ಹೊರನಡೆದಿರುವುದು. ಈ ಬೆಳವಣಿಗೆಯ ಬೆನ್ನಲ್ಲೇ ಕರಣ್ ಜೋಹರ್ ಅವರು ಮೊದಲ ಬಾರಿಗೆ ಮೌನ ಮುರಿದಿದ್ದು, ಜಾಹ್ನವಿ ಕಪೂರ್ ನಿರ್ಧಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಕರಣ್ ಜೋಹರ್ ಕಡೆಯಿಂದ ಜಾಹ್ನವಿಗೆ 'ಆಲ್ ದಿ ಬೆಸ್ಟ್': ಏಜೆನ್ಸಿ ತೊರೆದ ನಟಿ ಬಗ್ಗೆ ಗಾಡ್ಫಾದರ್ ಮಾತು!
ಬಾಲಿವುಡ್ನಲ್ಲಿ ಸ್ಟಾರ್ ಕಿಡ್ಗಳ ಗಾಡ್ಫಾದರ್ ಎಂದೇ ಗುರುತಿಸಿಕೊಳ್ಳುವ ಕರಣ್ ಜೋಹರ್, ಜಾಹ್ನವಿ ಕಪೂರ್ ಅವರ ವೃತ್ತಿಜೀವನದ ಆರಂಭದಿಂದಲೂ ಬೆನ್ನೆಲುಬಾಗಿ ನಿಂತವರು. ಆದರೆ ಇತ್ತೀಚೆಗೆ ಜಾನ್ವಿ ಕಪೂರ್ ಕರಣ್ ಅವರ ಟ್ಯಾಲೆಂಟ್ ಏಜೆನ್ಸಿಯಿಂದ ಹೊರಬಂದು ಬೇರೆ ತಂಡವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ 'ಹಿಂದೂಸ್ತಾನ್ ಟೈಮ್ಸ್' ಜೊತೆ ಮಾತನಾಡಿದ ಕರಣ್, "ನಮ್ಮ ಏಜೆನ್ಸಿಯನ್ನು ಯಾರು ಬಿಟ್ಟು ಹೋದರೂ ನಾನು ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ. ಅವರು ನಮ್ಮ ಜೊತೆ ಇಲ್ಲದಿದ್ದರೂ ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ," ಎಂದು ಹೇಳುವ ಮೂಲಕ ಜಾನ್ವಿ ಜೊತೆ ಯಾವುದೇ ಕಸುವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಜಾಹ್ನವಿ ಮಾತ್ರವಲ್ಲದೆ, ರಣವೀರ್ ಸಿಂಗ್ ಮತ್ತು ಪರಿಣಿತಿ ಚೋಪ್ರಾ ಕೂಡ ಇತ್ತೀಚೆಗೆ ತಮ್ಮ ಮ್ಯಾನೇಜ್ಮೆಂಟ್ ತಂಡಗಳನ್ನು ಬದಲಾಯಿಸಿದ್ದಾರೆ. ಈ ಬದಲಾವಣೆಗಳ ಬಗ್ಗೆ ಮಾತನಾಡಿದ ಕರಣ್, "ಬಾಲಿವುಡ್ನಲ್ಲಿ ಮೂರು ಪ್ರಮುಖ ಟ್ಯಾಲೆಂಟ್ ಏಜೆನ್ಸಿಗಳಿವೆ. ಇಲ್ಲಿ ಕಲಾವಿದರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದು ಸಾಮಾನ್ಯ. ಇದು ಒಂತರ 'ಪಾಸಿಂಗ್ ದಿ ಪಾರ್ಸೆಲ್' ಇದ್ದಂತೆ. ಇದರಿಂದ ನಮ್ಮ ವ್ಯವಹಾರಕ್ಕೆ ಯಾವುದೇ ತೊಂದರೆಯಿಲ್ಲ, ನಮ್ಮ ಸಂಸ್ಥೆ ಈಗ ಮೊದಲಿಗಿಂತಲೂ ಹೆಚ್ಚು ಸದೃಢವಾಗಿದೆ," ಎಂದಿದ್ದಾರೆ.
ಇಂದಿನ ತಲೆಮಾರಿನ ಆತಂಕದ ಬಗ್ಗೆ ಕರಣ್ ಕಳವಳ:
ಇಂದಿನ ಪೀಳಿಗೆಯ ನಟ-ನಟಿಯರು ಏಜೆನ್ಸಿಗಳನ್ನು ಪದೇ ಪದೇ ಬದಲಾಯಿಸುವುದು ಏಕೆ ಎಂಬ ಪ್ರಶ್ನೆಗೆ ಕರಣ್ ಕುತೂಹಲಕಾರಿ ಉತ್ತರ ನೀಡಿದ್ದಾರೆ. "ಇಂದಿನ ತಲೆಮಾರು ತುಂಬಾ ಆತಂಕದಲ್ಲಿದೆ (Anxiety). ಅವರಿಗೆ ಸ್ಟಾರ್ಡಮ್ ತುಂಬಾ ವೇಗವಾಗಿ ಸಿಗಬೇಕು ಎಂಬ ಹಂಬಲವಿದೆ. ಅವರನ್ನು ನಾನು ದೂಷಿಸುವುದಿಲ್ಲ, ಏಕೆಂದರೆ ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಜಡ್ಜ್ ಮಾಡಲಾಗುತ್ತದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಒತ್ತಡದಿಂದಾಗಿ ಅವರು ಹೊಸ ಆರಂಭವನ್ನು ಬಯಸುತ್ತಾರೆ," ಎಂದು ಕರಣ್ ವಿಶ್ಲೇಷಿಸಿದ್ದಾರೆ.
ಜಾಹ್ನವಿ ಹೊರಹೋದ ನಂತರ ಕರಣ್ ಈಗ ತಮ್ಮ ಏಜೆನ್ಸಿಯಲ್ಲಿರುವ ಇತರೆ ಕಲಾವಿದರ ಮೇಲೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದಾರೆ. "ನಿರ್ಮಾಣ ಸಂಸ್ಥೆಯಾಗಿ ನಮ್ಮ ಏಜೆನ್ಸಿಯಲ್ಲಿರುವ ಪ್ರತಿಭೆಗಳಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ. ಚಿತ್ರದ ಪಾತ್ರಕ್ಕೆ ಯಾರು ಸೂಕ್ತವೋ ಅವರನ್ನೇ ಆಯ್ಕೆ ಮಾಡುತ್ತೇವೆ, ಆದರೆ ನಮ್ಮ 'ಕುಟುಂಬ'ದ ಭಾಗವಾಗಿರುವವರಿಗೆ ಹೆಚ್ಚು ಅವಕಾಶ ನೀಡುವುದು ನನ್ನ ಗುರಿ," ಎಂದು ಅವರು ತಿಳಿಸಿದ್ದಾರೆ.
ಮುಂದಿನ ಚಿತ್ರ ಯಾವುದು?
ಕೆಲಸದ ವಿಚಾರಕ್ಕೆ ಬಂದರೆ, ಕರಣ್ ಜೋಹರ್ ಸದ್ಯದಲ್ಲೇ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಹೊಸ ಸಿನಿಮಾ ಮಾಡುವ ಸಾಧ್ಯತೆ ಇದೆ. 'ಸ್ಟೂಡೆಂಟ್ ಆಫ್ ದಿ ಇಯರ್' ಮೂಲಕ ಸಿದ್ಧಾರ್ಥ್ ಅವರನ್ನು ಪರಿಚಯಿಸಿದ್ದ ಕರಣ್, ಈಗ ಮತ್ತೆ ಅವರಿಗೆ ಒಂದು ಅದ್ಭುತ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಜಾಹ್ನವಿ ಕಪೂರ್ ಏಜೆನ್ಸಿ ತೊರೆದರೂ ಕರಣ್ ಅವರ ಧರ್ಮ ಪ್ರೊಡಕ್ಷನ್ಸ್ ಸಿನಿಮಾಗಳಲ್ಲಿ ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.