ದರೋಡೆಕೋರ ಲಾರೆನ್ಸ್​ ಬಿಷ್ಣೋಯಿಗೂ ಸಲ್ಮಾನ್​ ಖಾನ್​ಗೂ ಏನ್​ ಸಂಬಂಧ? ಯಾರೀತ?

By Suvarna NewsFirst Published Mar 18, 2023, 4:56 PM IST
Highlights

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್​ ಖಾನ್​ ಅವರನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯ್ ಪದೇ ಪದೇ ಬೆದರಿಕೆ ಒಡ್ಡುತ್ತಿದ್ದಾನೆ. ಅಸಲಿಗೆ ಯಾರೀತ?
 

ನಟ ಸಲ್ಮಾನ್ ಖಾನ್ (Salman Khan) ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಕರೆಗಳು ಬಂದಿವೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್​ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾರೆ. ಏಕೆಂದರೆ,  ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಅವರನ್ನು ಕೊಲ್ಲುವುದಾಗಿ  ಹಿಂದೆಯೂ ಕೆಲ ಬಾರಿ ಕೊಲೆ ಬೆದರಿಕೆ ಬಂದಿತ್ತು.  ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ  ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾರೆ.  ಅಷ್ಟಕ್ಕೂ ಅವರ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾರೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದರು. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ  ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡಿದೆ.  ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾರೆ.  

2022ರ ಮೇ 29 ರಂದು ಪಂಜಾಬ್‌ನ ಮಾನ್ಸಾ ಬಳಿ ಗಾಯಕ ಸಿಧು ಮೂಸ್ ವಾಲಾ (Sidhu Moosewala) ಅವರನ್ನು ಗುಂಡಿಕ್ಕಿ ಕೊಂದ ಕೆಲವೇ ದಿನಗಳ ನಂತರ ಜೂನ್ ಆರಂಭದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ (Saleem Khan) ಅವರಿಗೆ ಈ ಬೆದರಿಕೆ ಕರೆ ಬಂದಿದ್ದವು. ಸಲ್ಮಾನ್​ ಅವರ ತಂದೆ ಪ್ರತಿದಿನ ಬೆಳಿಗ್ಗೆ ಜಾಗಿಂಗ್ ಮಾಡಿದ ನಂತರ ಕುಳಿತುಕೊಳ್ಳುವ ಬೆಂಚಿನ ಮೇಲೆ ಸಹಿ ಮಾಡದ ಪತ್ರವೊಂದನ್ನು ಇಡಲಾಗಿತ್ತು. ಅದರಲ್ಲಿ ಜೀವ ಬೆದರಿಕೆವೊಡ್ಡಲಾಗಿತ್ತು. ಆ ಸಂದರ್ಭದಲ್ಲಿ ಟೈಗರ್ 3 ಚಿತ್ರೀಕರಣ ಪ್ರಾರಂಭವಾಗಿತ್ತು. ಸಲ್ಮಾನ್​ ಖಾನ್​ ಅವರು  ಜೀವ ಬೆದರಿಕೆ ಹಿನ್ನೆಲೆಯಲ್ಲಿ  ಹೊಸದಾಗಿ ಬುಲೆಟ್ ಫ್ರೂಪ್ ಕಾರ್ ಅನ್ನು ಖರೀದಿಸಿದ್ದರು.  ಬಾಡಿಗಾರ್ಡ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್ ನಲ್ಲಿ ಮುಂಬೈ ಪೊಲೀಸರು ಆತ್ಮರಕ್ಷಣೆಗಾಗಿ ಸಲ್ಮಾನ್ ಖಾನ್ ಅವರಿಗೆ ಗನ್ ಲೈಸೆನ್ಸ್ ನೀಡಿದ್ದರು. ಇದಲ್ಲದೇ, ಕಳೆದ ವರ್ಷ ನವೆಂಬರ್‌ನಲ್ಲಿ ಸಲ್ಮಾನ್ ಖಾನ್‌ಗೆ ಮಹಾರಾಷ್ಟ್ರ ಪೊಲೀಸರು Y+ ಭದ್ರತೆಯನ್ನು ಒದಗಿಸಿದ್ದರು. ಅದರ ಪ್ರಕಾರ ನಾಲ್ವರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ಯಾವಾಗಲೂ ಅವರೊಂದಿಗೆ ಇರುತ್ತಾರೆ.

ನಮ್​ ಮಾತು ಕೇಳದಿದ್ರೆ ಕೊಲೆಯಾಗ್ತಿ... ಸಲ್ಮಾನ್​ ಖಾನ್​ಗೆ ಬೆದರಿಕೆ

 ಅಷ್ಟಕ್ಕೂ ಈ ಲಾರೆನ್ಸ್ ಬಿಷ್ಣೋಯ್ ಯಾರು ಎಂದು ನೋಡುವುದಾದರೆ, ಈತ  ಉತ್ತರ ಭಾರತದ ಕುಖ್ಯಾತ ದರೋಡೆಕೋರ. ಕೊಲೆ ಮತ್ತು ಸುಲಿಗೆ ಸೇರಿದಂತೆ ಅನೇಕ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅವನ ಗ್ಯಾಂಗ್ ಭಾರತದಾದ್ಯಂತ 700 ಕ್ಕೂ ಹೆಚ್ಚು ಶೂಟರ್‌ಗಳನ್ನು (Shooter) ಹೊಂದಿದೆ. ಸಹವರ್ತಿ ದರೋಡೆಕೋರ ಗೋಲ್ಡಿ ಬ್ರಾರ್​ನೊಂದಿಗೆ ಲಾರೆನ್ಸ್​   ರಾಜಕೀಯವನ್ನು ಪ್ರವೇಶಿಸಿದ್ದ. ಅಲ್ಲಿ ಈತ  ಅಪರಾಧ ಸಾಮ್ರಾಜ್ಯ ಪ್ರಾರಂಭಿದ್ದಾನೆ.  ಖಲಿಸ್ತಾನ್ ಚಳವಳಿ ಮತ್ತು ಇತರ ರೀತಿಯ ದೇಶ ವಿರೋಧಿ ಚಟುವಟಿಕೆಗಳಿಗೆ ಈತ ಫೇಮಸ್​.  ಭಗತ್ ಸಿಂಗ್, ಗುರು ಜಂಭೇಶ್ವರ್ ಮತ್ತು ಭಗವಾನ್ ಹನುಮಾನ್ ಅವರನ್ನೂ ಈ ಗ್ಯಾಂಗ್​ ಅನುಸರಿಸುತ್ತದೆ. ಹಳದಿ ಟೀ ಷರ್ಟ್​ ಧರಿಸಿ ಈಗ ಸಂದರ್ಶನ ನೀಡಿದ್ದು, ಪುನಃ ಸಲ್ಮಾನ್​ ಖಾನ್​ ಅವರನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಜೈಲಿನಲ್ಲಿ ಇರುವ ಈತ ಟೀ ಷರ್ಟ್​ ಧರಿಸಿ ಎಲ್ಲಿಂದ ಸಂದರ್ಶನ ನೀಡಿದ್ದಾನೆ ಎನ್ನುವುದು ಮಾತ್ರ ನಿಗೂಢವಾಗಿದೆ. 

ಪಂಜಾಬಿ ಸಂಗೀತಗಾರ ಸಿಧು ಮೂಸ್ ವಾಲಾ ಅವರನ್ನು ಮೇ 2022 ರಲ್ಲಿ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಹತ್ಯೆ ಮಾಡಿದೆ ಎಂದು ನಂಬಲಾಗಿದೆ.  ಗೋಲ್ಡಿ ಬ್ರಾರ್ (GoldiBrar) ಈ ಗುಂಡಿನ ದಾಳಿಯಲ್ಲಿ ಬಿಷ್ಣೋಯ್ ಭಾಗಿಯಾಗಿದ್ದಾರೆ ಎಂದು ಪೊಲೀಸರು ನಂಬಿದ್ದಾರೆ. ಈ ಕಾರಣದಿಂದಾಗಿ, ವಿಚಾರಣೆಗಾಗಿ ಬಿಷ್ಣೋಯ್ ಅವರನ್ನು ದೆಹಲಿ ಪೊಲೀಸ್ ವಿಶೇಷ ಕೋಶವು ತಾತ್ಕಾಲಿಕವಾಗಿ ವಶಕ್ಕೆ ತೆಗೆದುಕೊಂಡಿತ್ತು. ನಂತರ, ಬಿಷ್ಣೋಯ್ ರಕ್ಷಣೆಗಾಗಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.  ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳಲ್ಲಿ (HighCourt) ಸಂಬಂಧಿತ ಮನವಿಯನ್ನು ಸಲ್ಲಿಸಿದ್ದು, ಹಲವು ಕೋರ್ಟ್​ಗಳಲ್ಲಿ ಈತನ  ವಿರುದ್ಧ ವಿಚಾರಣೆ ಬಾಕಿ ಇದೆ. ಈಗ ಸಲ್ಮಾನ್​ ಖಾನ್​ ಕ್ಷಮೆ ಕೋರಬೇಕು ಎನ್ನುವುದು ಈತ ಮತ್ತು ಈತನ ಗ್ಯಾಂಗ್​ನ ಬೇಡಿಕೆ. ಇದೇ ಕಾರಣಕ್ಕೆ ಸಲ್ಮಾನ್​ ಖಾನ್​ ಮತ್ತು ಅವರ ತಂದೆ ಸಲೀಂ ಖಾನ್​ ಅವರ ವಿರುದ್ಧ ಕೊಲೆ ಬೆದರಿಕೆ ಹಾಕುತ್ತಲೇ ಬಂದಿದ್ದಾನೆ. 

ಸಲ್ಮಾನ್‌ ಖಾನ್‌ ನನ್ನ ಅಪ್ಪನಂತೆ ಎಂದ ನಟಿ ಪಾಲಕ್​: ಬಿಡ್ತಾರೆಯೇ ಟ್ರೋಲಿಗರು?

click me!