
ರಾಜಮೌಳಿ ಮಾಡಿರೋ ಅವಮಾನ ಇದು ಮೊದಲಲ್ಲ!?
ಹೌದು, ಭಾರತದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರಿಗೆ ಇದೀಗ ಟೈಮ್ ಕೆಟ್ಟಿದೆ ಎನ್ನಬಹುದೇನೋ!? ಕಾರಣ, ಇತ್ತೀಚೆಗೆ ರಾಮೋಜಿರಾವ್ ಫಿಲಂಸಿಟಿಯಲ್ಲಿ ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ ನಟನೆ, ರಾಜಮೌಳಿ ನಿರ್ದೇಶನದ ಸಿನಿಮಾದ ಟೈಟಲ್ ಲಾಂಚ್ ಈವೆಂಟ್ ನಡೆದಿದೆ. ಅದರಲ್ಲಿ ತಾಂತ್ರಿಕ ಅಡಚನೆ ಉಂಟಾಗಿ ಸ್ವಲ್ಪ ಹೊತ್ತು ಸಿನಿಮಾ ಟೈಟಲ್ ಅನಾವರಣ ಆಗದೇ ಚಿತ್ರತಂಡ ಮುಜುಗರಕ್ಕೆ ಈಡಾಗಿದೆ.
ಬಳಿಕ ಟೈಟಲ್ ಅನಾವರಣ ಮಾಡಿ ಮಾತನ್ನಾಡಿದ್ದ ರಾಜಮೌಳಿಯವರು ಚಿತ್ರತಂಡ ಮಾಡಿಕೊಂಡ ಯಡವಟ್ಟಿಗೆ ಹನುಮಂತ ಸಹಾಯ ಮಾಡಲಿಲ್ಲ ಎಂಬಂತೆ ಹೇಳಿ ಹಿಂದೂ ದೇವರು ಹನುಮಂತನಿಗೆ ಅವಮಾನ ಮಾಡಿದ್ದಾರೆ ಎಂಬ ಮಾತು ವೈರಲ್ ಆಗಿದೆ. ಇದೀಗ, ರಾಜಮೌಳಿ ಈ ಹಿಂದೆ ಮಾಡಿದ್ದ ಟ್ವೀಟ್ ಮತ್ತೆ ವೈರಲ್ ಆಗಿದೆ. ಹಾಗಿದ್ದರೆ ವಾರಣಾಸಿ ಸಿನಿಮಾ ಟೈಟಲ್ ಲಾಂಚ್ ಈವೆಂಟ್ನಲ್ಲಿ ಏನಾಯ್ತು? ಹಾಗೂ ಈ ಮೊದಲು ರಾಜಮೌಳಿಯವರು ಶ್ರೀರಾಮನ ಬಗ್ಗೆ ಅದೇನು ಟ್ವೀಟ್ ಮಾಡಿದ್ದರು? ಈ ಸ್ಟೋರಿ ನೋಡಿ..
ವಾರಣಾಸಿ ಟೈಟಲ್ ಅನಾವರಣ ಮಾಡಿ ಮಾತನ್ನಾಡಿದ ಎಸ್ಎಸ್ ರಾಜಮೌಳಿಯವರು 'ನನಗೆ ದೇವರ ಮೇಲೆ ಅಂತಹ ನಂಬಿಕೆಯೇನೂ ಇಲ್ಲ. ನನ್ನ ಮೇಲೆ ಹನುಮಂತನ ಆಶೀರ್ವಾದ ಇರುತ್ತದೆ ಎಂದು ನನ್ನ ತಂದೆ ವಿಜಯ್ ಪ್ರಸಾದ್ ಅವರು ಒಮ್ಮೆ ಹೇಳಿದ್ದರು. ಈ ತಾಂತ್ರಿಕ ಸಮಸ್ಯೆ ಆದಾಗ ನನಗೆ ಕೋಪ ಬಂತು. ಈ ರೀತಿಯಾ ಅವನು (ಹನುಮಂತ) ನನಗೆ ಸಹಾಯ ಮಾಡೋದು?' ಎಂದು ರಾಜಮೌಳಿಯವರು ಅಲ್ಲಿ ಹೇಳಿದ್ದಾರೆ.
ಜೊತೆಗೆ, 'ನನ್ನ ಪತ್ನಿ ಹನುಮಂತನ ಪರಮ ಭಕ್ತೆ. ತನ್ನ ಗೆಳೆಯ ಎನ್ನುವ ರೀತಿಯಲ್ಲಿ ಅವಳು ಆಗಾಗ ಅವನೊಂದಿಗೆ ಮಾತನ್ನಾಡುತ್ತ ಇರುತ್ತಾಳೆ. ನನಗೆ ಅವಳ ಮೇಲೂ ಕೋಪ ಬಂತು. ನನ್ನ ಪತ್ನಿಯ ಗೆಳೆಯ ಹನುಮಂತ ಈ ಬಾರಿಯಾದರೂ ನನಗೆ ಸಹಾಯ ಮಾಡುತ್ತಾನಾ ನೋಡೋಣ ಎಮದು ಹೇಳುತ್ತ ಟೀಸರ್ ಅನಾವರಣ ಮಾಡಿದ್ದಾರೆ. ಆದರೆ ಅದೀಗ ಹನುಮಂತನ ಭಕ್ತರೂ ಸೇರಿದಂತೆ ಹಲವರ ಮನಸ್ಸಿನ ಬೇಸರಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.
ರಾಜಮೌಳಿ ಹೇಳಿಕೆಯನ್ನು ಬಹಳಷ್ಟು ಜನರು ಖಂಡಿಸಿ ಮಾತನ್ನಾಡಿದ್ದಾರೆ. ಚಿತ್ರತಂಡದವರು ಮಾಡಿಕೊಂಡ ಯಡವಟ್ಟಿಗೆ ಹನುಮಂತನನ್ನು ದೂಷಿಸೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ರಾಜಮೌಳಿ ಸೇರಿದಂತೆ ಚಿತ್ರತಂಡ ಹಿಂದಿನ ದಿನ ಅಥವಾ ಟೈಟಲ್ ಅನಾವರಣಕ್ಕೆ ಮೊದಲೊಮ್ಮ ಚೆಕ್ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ತಾವು ಮಾಡಿಕೊಂಡ ಎಡವಟ್ಟಿಗೆ ಹನುಮಂತನನ್ನು ಎಳೆದು ತಂದಿದ್ದು ಅದೆಷ್ಟು ಸರಿ ಎಂಬುದು ಅನೇಕರ ಅನಿಸಿಕೆ. ಜೊತೆಗೆ, ಈಗ ಹಳೆಯ ಟ್ವೀಟ್ ಕೂಡ ವೈರಲ್ ಅಗುತ್ತಿದೆ.
ಅಂದು ಅದೊಂದು ದಿನ ಶ್ರೀರಾಮನವಮಿಗೆ ಮಾಡಿದ್ದ ವಿಶ್ಗೆ ಉತ್ತರವಾಗಿ ಮಾಡಿದ್ದ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದ ರಾಜಮೌಳಿಯವರು 'ನಾನು ಶ್ರೀರಾಮನನ್ನು ಇಷ್ಟಪಡಲ್ಲ. ವಿಷ್ಣುವಿನ ಹತ್ತು ಅವತಾರಗಳಲ್ಲಿ ನಾನು ಶ್ರೀಕೃಷ್ಣನನ್ನು ಹೆಚ್ಚು ಇಷ್ಟಪಡುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದರು. ಆಗ ಅದು ಕೂಡ ವಿವಾದವಾಗಿ ರಾಜಮೌಳಿಯವರು ಕ್ಷಮೆ ಕೇಳಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಆದರೆ, ಅದಕ್ಕೆ ನಿರ್ದೇಶಕ ರಾಜಮೌಳಿಯವರು ಕ್ಷಮೆ ಕೇಳಿಲ್ಲ, ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ಇದೀಗ, ಮತ್ತೆ ರಾಜಮೌಳಿಯ ಮೇಲೆ ಹಲವರು ಬೇಸರ, ಆಕ್ರೋಶ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕಾರಣ, ಈ ಮೊದಲು ಶ್ರೀರಾಮನಿಗೆ ಅವಮಾನ ಮಾಡಿದ್ದ ರಾಜಮೌಳಿಯವರು ಈಗ ವೇದಿಕೆಯಲ್ಲಿಯೇ ಹನುಮಂತನ ಬಗ್ಗೆ ಅವಹೇಳನ ಮಾಡಿದ್ದಾರೆ. ಈಗಲಾದರೂ ಅವರು ಕ್ಷಮೆ ಕೇಳಬೇಕು. ಅಥವಾ, ಅವರ ಮುಂಬರುವ 'ವಾರಣಾಸಿ' ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಹಲವರು ಪಟ್ಟುಹಿಡಿದಿದ್ದಾರೆ. ಮುಂದೇನಾಗುತ್ತೋ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.