
ಮುಂಬೈ: 2018ರಲ್ಲಿ ಹಠಾತ್ ನಿಧನರಾದ ಬಾಲಿವುಡ್ ನಟಿ ಶ್ರೀದೇವಿ ಸಾವಿನ ಬಗ್ಗೆ ಈಗಲೂ ಅನೇಕರಿಗೆ ಅನುಮಾನವಿದೆ. ಬಾತ್ಟಬ್ನಲ್ಲಿ ಮುಳುಗಿ ಸಾಯಲು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ. ಆದರೆ ಈಗ ಅವರ ಪತಿ ಬೋನಿ ಕಪೂರ್ ಅವರು ಶ್ರೀದೇವಿ ಸಾವಿಗೆ ಕಾರಣವಾಗಿದ್ದೇನು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಶ್ರೀದೇವಿಯವರು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಪಾಲಿಸುತ್ತಿದ್ದರು ಅವರ ಕಟ್ಟುನಿಟ್ಟಿನ ಆಹಾರ ಕ್ರಮದಿಂದಾಗಿ ಅವರಿಗೆ ನಿರಂತರ ಬ್ಲ್ಯಾಕ್ಔಟ್' ಆಗಿತ್ತು. ಅದು ಬಾತ್ ಟಬ್ ನಲ್ಲಿ ಅವರ ಸಾವಿಗೆ ಕಾರಣವಾಯಿತು ಎಂದು ಬೋನಿ ಕಪೂರ್ ಹೇಳಿದ್ದಾರೆ.
ದುಬೈಗೆ ಹೋಗಿದ್ದ ವೇಳೆ ಬಾತ್ಟಬ್ನಲ್ಲಿ ಬಿದ್ದು ಶ್ರೀದೇವಿ ಹಠಾತ್ ಸಾವಿಗೀಡಾಗಿದ್ದರು. ಅವರ ಹಠಾತ್ ಸಾವು ಇಡೀ ದೇಶವನ್ನು ಆಘಾತಕ್ಕೆ ಒಳಪಡಿಸಿದ್ದಲ್ಲದೇ ಅವರ ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗುವಂತೆ ಮಾಡಿತ್ತು. ಆದರೆ ಈಗ ಹಲವು ವರ್ಷಗಳ ನಂತರ ಬೋನಿ ಕಪೂರ್ ತಮ್ಮ ಎರಡನೇ ಪತ್ನಿ ಶ್ರೀದೇವಿ ಸಾವಿನ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ದುಬೈನಲ್ಲಿ ನಡೆದ ತಮ್ಮ ಕುಟುಂಬದ ಮದುವೆಗೆ ಹಾಜರಾದ ಒಂದು ವಾರದೊಳಗೆ ಶ್ರೀದೇವಿ ನಿಧನರಾದಾಗ ಎಲ್ಲರೂ ತೀವ್ರ ದುಃಖದಲ್ಲಿ ಮುಳುಗಿದ್ದರು. ಪ್ರಪಂಚದೆಲ್ಲೆಡೆಯ ಅವರ ಲಕ್ಷಾಂತರ ಅಭಿಮಾನಿಗಳು ಅವರಿಗೆ ಏನಾಯಿತು ಎಂಬ ಪ್ರಶ್ನೆಗೆ ಉತ್ತರ ಬಯಸಿದ್ದರು. ಕೆಲವರು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂದು ಅನುಮಾನ ಪಟ್ಟರೇ ಮತ್ತೆ ಕೆಲವರು ಇದರಲ್ಲಿ ಆಕೆಯ ಪತಿಯ ಕೈವಾಡ ಇರಬಹುದೋ ಏನೋ ಎಂಬ ಅನುಮಾನ ವ್ಯಕ್ತಪಡಿಸಿದ್ದರು.
ಕಪೂರ್ ಕುಟುಂಬಕ್ಕೆ, ಶ್ರೀದೇವಿ ಅವರ ಹಠಾತ್ ಮರಣವನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಇದಾದ ನಂತರ ಬೋನಿ ಕಪೂರ್ ಅವರನ್ನು ದುಬೈ ಪೊಲೀಸರು ವಶಕ್ಕೆ ಪಡೆದಾಗ ಮತ್ತು ಅವರ ಪತ್ನಿಯ ಸಾವಿಗೆ ಕಾರಣವೇನಾಗಿರಬಹುದು ಎಂದು ನಿರಂತರವಾಗಿ ಅವರನ್ನು ಪ್ರಶ್ನಿಸಿದಾಗ ಅಳಲು ಮತ್ತು ಆಘಾತ ವ್ಯಕ್ತಪಡಿಸಲು ಸಹ ಅವರಿಗೆ ಅವಕಾಶ ಸಿಗಲಿಲ್ಲ ಏಕೆಂದರೆ ಅವರಿಗೂ ಸಹ ಅದರ ಬಗ್ಗೆ ತಿಳಿದಿರಲಿಲ್ಲ. ಅಂತ ಬೋನಿ ಕಪೂರ್ ಈಗ ಹೇಳಿಕೊಂಡಿದ್ದಾರೆ.
ಶ್ರೀದೇವಿ ನಿಧನರಾದ ಐದು ವರ್ಷಗಳ ನಂತರ, ಬೋನಿ ಕಪೂರ್' ದಿ ನ್ಯೂ ಇಂಡಿಯನ್'ಗೆ ನೀಡಿದ ಸಂದರ್ಶನದಲ್ಲಿ ಧೈರ್ಯ ತಂದುಕೊಂಡು ಆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಶ್ರೀದೇವಿಗೆ ಕಡಿಮೆ ರಕ್ತದೊತ್ತಡದ ಸಮಸ್ಯೆಗಳಿದ್ದವು, ಏಕೆಂದರೆ ಅವರು ಕಟ್ಟುನಿಟ್ಟಿನ ಆಹಾರಕ್ರಮದಲ್ಲಿ ಇರುತ್ತಿದ್ದರು ಮತ್ತು ಸ್ವತಃ ಹಸಿವಿನಿಂದ ಬಳಲುತ್ತಿದ್ದರು ಎಂದು ಅವರು ಬಹಿರಂಗಪಡಿಸಿದರು. ಶ್ರೀದೇವಿ ಪರದೆಯ ಮೇಲೆ ಚೆನ್ನಾಗಿ ಕಾಣಲು ಮತ್ತು ಸರಿಯಾದ ಆಕಾರದಲ್ಲಿರಲು ಬಯಸಿದ್ದರು. ಆದ್ದರಿಂದ ಅವರು ಆಗಾಗ್ಗೆ ಕ್ರ್ಯಾಶ್ ಡಯಟಿಂಗ್ ಅನ್ನು ಆರಿಸಿಕೊಳ್ಳುತ್ತಿದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ.
ಕ್ರ್ಯಾಶ್ ಡಯಟ್ ಲೋಬಿಪಿ, ವೈದ್ಯರ ಮಾತಿನ ನಿರ್ಲಕ್ಷಿಸಿದ್ದ ಶ್ರೀದೇವಿ
ಶ್ರೀದೇವಿ ಅವರನ್ನು ಮದುವೆಯಾದಾಗಿನಿಂದಲೂ ಅವರಿಗೆ ಹಲವು ಸಂದರ್ಭಗಳಲ್ಲಿ ಬ್ಲ್ಯಾಕ್ಔಟ್ ಆಗುತ್ತಿತ್ತು. ವೈದ್ಯರು ಅವರಿಗೆ ಲೋ ಬಿಪಿ ಇದೆ ಎಂದು ಹೇಳಿದ್ದರು, ಆದರೆ ಶ್ರೀದೇವಿ ಎಂದಿಗೂ ಅವರ ಮಾತನ್ನು ಕೇಳಲಿಲ್ಲ ಮತ್ತು ಯಾವಾಗಲೂ ಉಪ್ಪು ರಹಿತ ಆಹಾರವನ್ನೇ ಸೇವಿಸುತ್ತಿದ್ದರು. ಶ್ರೀದೇವಿ ಅವರ ಆಹಾರ ಪದ್ಧತಿಯೇ ಅವರ ಸಾವಿಗೆ ಕಾರಣ ಎಂದು ಬೋನಿ ಕಪೂರ್ ಹೇಳಿದ್ದಾರೆ. ಅವಳು ಆಗಾಗ್ಗೆ ಹಸಿವಿನಿಂದ ಬಳಲುತ್ತಿದ್ದಳು. ತಾನು ಚೆನ್ನಾಗಿ ಕಾಣಬೇಕೆಂದು ಬಯಸಿದ್ದಳು. ಉತ್ತಮ ಸ್ಥಿತಿಯಲ್ಲಿರಬೇಕೆಂದು ಖಚಿತಪಡಿಸಿಕೊಳ್ಳಬೇಕೆಂದು ಬಯಸಿದ್ದಳು, ಇದರಿಂದ ಅವಳು ಪರದೆಯ ಮೇಲೆ ಚೆನ್ನಾಗಿ ಕಾಣುತ್ತಾಳೆ. ಅವಳು ನನ್ನೊಂದಿಗೆ ಮದುವೆಯಾದಾಗಿನಿಂದಲೂ ಅವಳಿಗೆ ಒಂದೆರಡು ಸಂದರ್ಭಗಳಲ್ಲಿ ಬ್ಲ್ಯಾಕ್ಔಟ್ ಆಗುತ್ತಿತ್ತು, ಮತ್ತು ವೈದ್ಯರು ಅವಳಿಗೆ ಲೋ ಬಿಪಿ ಸಮಸ್ಯೆ ಇದೆ ಎಂದು ಹೇಳುತ್ತಲೇ ಇದ್ದರು. ದುರದೃಷ್ಟವಶಾತ್, ಅವಳು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಮತ್ತು ಘಟನೆ ನಡೆಯುವವರೆಗೂ ಅದು ಇಷ್ಟು ಗಂಭೀರವಾಗಿರುತ್ತೆ ಎಂದು ಆಕೆ ಭಾವಿಸಿಯೇ ಇರಲಿಲ್ಲ.
ಒಮ್ಮೆ ಬಾತ್ರೂಮ್ನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದ ಶ್ರೀದೇವಿ
ಇದೊಂದೇ ಅಲ್ಲ, ಶ್ರೀದೇವಿಯ ಕ್ರ್ಯಾಶ್ ಡಯಟಿಂಗ್ನಿಂದ ಆದ ಮತ್ತೊಂದು ಆನಾಹುತದ ಬಗ್ಗೆ ಬೋನಿ ಕಪೂರ್ ಇದೇ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಇದೇ ರೀತಿ ಕ್ರ್ಯಾಶ್ ಡಯಟಿಂಗ್ನಲ್ಲಿದ್ದ ಶ್ರೀದೇವಿ ಚಿತ್ರಿಕರಣದ ಸಮಯದಲ್ಲೇ ಒಮ್ಮೆ ಬಾತ್ರೂಮ್ನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದರಂತೆ, ಶ್ರೀದೇವಿಯ ಮರಣದ ನಂತರ ತೆಲುಗು ನಟ ನಾಗಾರ್ಜುನ್ ಅವರನ್ನು ಭೇಟಿಯಾಗಿದ್ದ ವೇಳೆ ಅವರು ಈ ವಿಚಾರವನ್ನು ಬೋನಿ ಕಪೂರ್ ಅವರಿಗೆ ತಿಳಿಸಿದ್ದರು ಎಂದು ಬೋನಿ ಕಪೂರ್ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಶ್ರೀದೇವಿ ಸಾವಿನ ನಂತರ ಸುಳ್ಳು ಪತ್ತೆ ಪರೀಕ್ಷೆಗೊಳಗಾಗಿದ್ದ ಬೋನಿಕಪೂರ್
ದುಬೈನಲ್ಲಿ ಶ್ರೀದೇವಿ ಸಾವಿನ ನಂತರ ತಮ್ಮನ್ನು 24ರಿಂದ 48 ಗಂಟೆಗಳ ಕಾಲ ಅಲ್ಲಿನ ಅಧಿಕಾರಿಗಳು ಕಸ್ಟಡಿಯಲ್ಲಿ ಇರಿಸಿದ್ದರು ಎಂಬ ವಿಚಾರವನ್ನು ಕೂಡ ಬೋನಿ ಕಪೂರ್ ಬಹಿರಂಗಪಡಿಸಿದ್ದಾರೆ. ಶ್ರೀದೇವಿ ಸಾವಿನ ನಂತರ ತಾವು ಸುಳ್ಳು ಪತ್ತೆ ಪರೀಕ್ಷೆಗೂ ಒಳಗಾಗಬೇಕಾಯ್ತು ಎಂದು ಬೋನಿ ಕಪೂರ್ ಅವರು ಅದೇ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಭಾರತೀಯ ಮಾಧ್ಯಮಗಳಿಂದ ಸಾಕಷ್ಟು ಒತ್ತಡವಿದ್ದ ಕಾರಣ ತಮ್ಮನ್ನು 24 ರಿಂದ 48 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ನಂತರ, ದುಬೈ ಪೊಲೀಸರು ತಮಗೆ ಕ್ಲೀನ್ ಚಿಟ್ ನೀಡಿ ಶ್ರೀದೇವಿ ಸಾವು ಆಕಸ್ಮಿಕ ಎಂದು ಬಹಿರಂಗಪಡಿಸಿದರು ಎಂದು ಶ್ರೀದೇವಿ ಸಾವಿನ ಬೆನ್ನಲೇ ಎದುರಾದ ಸಂಕಷ್ಟಗಳನ್ನು ಬೋನಿ ಕಪೂರ್ ನೆನಪು ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.