
ಬಾಲಿವುಡ್ ಸುಂದರಿ, ಸ್ಯಾಂಡಲ್ವುಡ್ ಬಹು ಬೇಡಿಕೆಯ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಮಾಡಿರದ ತಪ್ಪಿಗೆ ವಿಚಾರಣೆಯಲ್ಲಿ ಹಾಜರಾಗಿದ್ದಾರೆ. ಜಾರಿ ನಿರ್ದೇಶನಾಲಯ ನಡೆಸಿದ ವಿಚಾರಣೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...
17ನೇ ವಯಸ್ಸಿಗೆ ಉದ್ಯಮಕ್ಕೆ ಕಾಲಿಟ್ಟ ಸುಕೇಶ್ ಚಂದ್ರಶೇಖರ್ ಮೂಲತಃ ಬೆಂಗಳೂರಿನವರು. ಅತಿ ಚಿಕ್ಕ ವಯಸ್ಸಿಗೇ ಮಲ್ಟಿ ಮಿಲೆನಿಯರ್ ಆಗಿ ಗುರುತಿಸಿಕೊಂಡಿರುವ ಸುಕೇಶ್ ಚೆನ್ನೈನ ಮನೆಯನ್ನು ಇಡಿ ಸೀಜ್ ಮಾಡಿದೆ. ಸಮುದ್ರದ ಕಡೆ ಮುಖ ಮಾಡುತ್ತಿರುವ ಈ ಮನೆಯ ಬೆಲೆ 85.2 ಲಕ್ಷ ರೂ ಹಾಗೂ ಕೆಲವೊಂದು ಐಷಾರಾಮಿ ಕಾರುಗಳನ್ನು ಹಾಗೂ 2 ಕೆಜಿ ಚಿನ್ನ ಜಪ್ತಿ ಮಾಡಿಕೊಂಡಿದೆ. ಸುಕೇಶ್ ನಡೆಸುತ್ತಿದ್ದ 200 ಕೋಟಿ ರೂ ಅವ್ಯವಹಾರದಲ್ಲಿ 'ವಿಕ್ರಾಂತ್ ರೋಣ' ನಟಿ ಜಾಕ್ವೆಲಿನ್ ಹೆಸರು ಕೇಳಿ ಬಂದಿದೆ.
ಸುಕೇಶ್ ಈವರೆಗೂ 100ಕ್ಕೂ ಹೆಚ್ಚು ಮಂದಿಗೆ ಮೋಸ ಮಾಡಿ ಸುಮಾರು 75 ಕೋಟಿ ಹಣ ಸಂಪಾದಿಸಿದ್ದಾರೆ ಎನ್ನಲಾಗಿದೆ. ಸುಕೇಶ್ ಜೊತೆ ಜಾಕ್ವೆಲಿನ್ ಕೂಡ ಸೇರಿಕೊಂಡಿದ್ದಾರೆ ಎಂಬ ಅನುಮಾನವಿತ್ತು. ಹೀಗಾಗಿ ಜಾಕ್ವೆಲಿನ್ ಇಡಿ ವಿಚಾರಣೆಯಲ್ಲಿ ಭಾಗಿಯಾಗಿದ್ದರು. 'ಜಾಕ್ವೆಲಿನ್ ಯಾವುದೇ ತರಹದ ತಪ್ಪು ಮಾಡಿಲ್ಲ. ಆದರೆ ಈ ಪ್ರಕರಣಕದಲ್ಲಿ ಸಾಕ್ಷಿದಾರರು. ಹೀಗಾಗಿ ಅವರು ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಬೇಕು. ಈ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಕೂಡ ಶಿಕ್ಷೆ ಅನುಭವಿಸುವಂತೆ ಆಗಬಹುದು,' ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈ ಘಟನೆ ಬಗ್ಗೆ ಜಾಕ್ವೆಲಿನ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಬೆಂಗಳೂರು ಮೂಲದ ವಿದ್ಯಾವಂತ ಈ ಯುವಕ ಸುಕೇಶ್ ಚೇಂದ್ರಶೇಖರ್. ಐಷಾರಾಮಿ ಜೀವನದ ಆಸೆಗೆ ಬಿದ್ದು ಹಲವು ವರ್ಷಗಳಿಂದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನೂರಾರು ಜನರಿಗೆ ನೂರಾರು ಕೋಟಿ ರು. ವಂಚಿಸಿದ ಆರೋಪ ಇವನ ಮೇಲಿದೆ. ಈ ಪೈಕಿ AIADMK ಪಕ್ಷದ ಚಿಹ್ನೆ ವಿವಾದ ಚುನಾವಣಾ ಆಯೋಗದ ಮೆಟ್ಟಿಲು ಏರಿದ ಸಂದರ್ಭದಲ್ಲಿ, ಚಿಹ್ನೆಯನ್ನು ಶಶಿಕಲಾ ಬಣಕ್ಕೆ ಉಳಿಸಿಕೊಡಲು, ಶಶಿಕಲಾ ಆಪ್ತ ದಿನಕರನ್ ಜೊತೆ 50 ಕೋಟಿ ರು. ಡೀಲ್ ಕುದುರಿಸಿದ್ದ. ಈ ಪ್ರಕರಣ ಬೆಳಕಿಗೆ ಬಂದು, ಪೊಲೀಸರು ದೆಹಲಿಯಲ್ಲಿ ಆತ ಉಳಿದುಕೊಂಡಿದ್ದ ಹೋಟೆಲ್ ಮೇಲೆ ದಾಳಿ ನಡೆಸಿ ಬಂದಿಸಿದ್ದರು. ಈ ವೇಳೆ 1.3 ಕೋಟಿ ರು. ನಗದು ಪತ್ತೆಯಾಗಿತ್ತು. ಇದಲ್ಲದೇ ಮತ್ತೊಂದು ಪ್ರಕರಣದಲ್ಲಿ ಸಿಬಿಐ ಅಧಿಕಾರಿಯ ಸೋಗಿನಲ್ಲಿ TDP ಸಂಸದ ಸಾಂಬಶಿವ ರಾವ್ ಅವರಿಂದ 100 ಕೋಟಿ ರು. ವಂಚಿಸಲು ಯತ್ನಿಸಿದ್ದ.
ಸುಕೇಶ್ ಹೇಗೆ ವಂಚಿಸುತ್ತಿದ್ದ?
ಸುಕೇಶ್ ಸೂಚನೆ ಅನ್ವಯ ದೀಪಕ್ ಮತ್ತು ಪ್ರದೀಪ್, ಉದ್ಯಮಿಗಳು ಅಥವಾ ದೊಡ್ಡ ಕುಳಗಳಿಗೆ ಬಲೆ ಬೀಸುತ್ತಿದ್ದರು. ಪ್ರಕರಣವೊಂದರಲ್ಲಿ ಈಗಾಗಲೇ ನಿಮ್ಮ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಥವಾ ಅರಂಭಿಸಲಿದ್ದಾರೆ ಎಂದು ಬೆದರಿಸುತ್ತಿದ್ದರು. ಜೊತೆಗೆ ತಮಗೆ ದೊಡ್ಡ ರಾಜಕಾರಣಿಗಳು, ಸಿಬಿಐ, ನ್ಯಾಯಾಧೀಶರ ಸಂಪರ್ಕ ಇದೆ. ಪ್ರಕರಣದಿಂದ ನಿಮ್ಮನ್ನು ಬಚಾವ್ ಮಾಡುವುದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಡೀಲ್ ಕುದುರಿಸುತ್ತಿದ್ದರು. ಹಣ ಪಡೆದ ಬಳಿಕ ಸ್ವತಃ ತಾವೇ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿ, ನಿಮ್ಮನ್ನು ಕೇಸಿಂದ ಮುಕ್ತ ಮಾಡಿರುವುದಾಗಿ ಸುಳ್ಳು ಹೇಳಿ ವಂಚಿಸುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.