ಕೊರೋನಾ ವೈರಸ್ ಲಾಕ್ಡೌನಿಂದ ದೇಶದೆಲ್ಲೆಡೆ ಮದ್ಯ ಮಾರಾಟ ನಿಷೇಧಿಸಿರುವ ಹಿನ್ನೆಲೆಯಲ್ಲಿ ಹಿರಿಯ ಚಿತ್ರನಟಿಯ ಪುತ್ರ ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಾರ್ವಜನಿಕರು ಲಾಕ್ಡೌನ್ ಪಾಲಿಸುತ್ತಿದ್ದಾರೆ. ಈ ಸಮಯಲ್ಲಿ ಭಾರತ ಸರ್ಕಾರ ಮದ್ಯ ಮಾರಾಟ ಮಾಡುವ ಅಂಗಡಿ ಹಾಗೂ ಪಬ್ಗಳನ್ನು ತೆರೆಯದಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಕುಡುಕರ ಪಾಡು ಕೇಳದಂತಾಗಿದೆ .
ತಮಿಳು ಚಿತ್ರರಂಗದ ಮನೆ ಮಾತಾಗಿದ್ದ ನಟಿ ಮನೋರಮಾ ಅವರ ಪುತ್ರ ಗಾಯಕ ಭೂಪತಿ ಓವರ್ ಡೋಸ್ ನಿದ್ರೆ ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥಗೊಂಡ ಕಾರಣ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!
ಇದು ಕೊರೋನಾ ವೈರಸ್ ಭಯವೇ? ಅಥವಾ ಅವಕಾಶ ಸಿಗದ ಕಾರಣ ಅತ್ಮಹತ್ಯೆ ಪ್ರಯತ್ನವೇ? ಎಂಬ ಗಾಳಿ ಮಾತುಗಳು ಕೇಳಿ ಬರುತ್ತಿದ್ದು ಇದಕ್ಕೆ ಭೂಪತಿ ಆಪ್ತರು ಸ್ಪಷ್ಟನೆ ನೀಡಿದ್ದಾರೆ. ಭೂಪತಿ ಅವರಿಗೆ ಮದ್ಯಪಾನದ ಚಟ ಹೆಚ್ಚಿದ್ದು ಅದು ಸಿಗದ ಕಾರಣ ಖಿನ್ನತೆಗೊಳಗೊಂಡು ನಿದ್ರೆ ಮಾತ್ರೆ ಸೇವಿಸಿದ್ದಾರೆ. ಚೆನ್ನೈನಲ್ಲಿ ವಾಸವಿರುವ ಭೂಪತಿ ಅವರನ್ನು ತಕ್ಷಣವೇ ಅವರ ನಿವಾಸದ ಬಳಿ ಇರುವ ಅಪೋಲೋ ಆಸ್ಪತ್ರೆಗೆ ಸೇರಿಸಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
2015ರಲ್ಲಿ ಹೃದಯಾಘಾತದಿಂದ ಮೃತರಾದ ಮನೋರಮಾ ಮದುವೆಯಾದ ಎರಡೇ ವರ್ಷದಲ್ಲಿ ವೈಮನಸ್ಯದಿಂದ ವಿಚ್ಛೇದನ ಪಡೆದುಕೊಂಡರು. ಅವರ ಒಬ್ಬನೇ ಮಗ ಭೂಪತಿ 'ಕಲ್ತೂನ್' ಚಿತ್ರದ ನಂತರ ಚಿತ್ರರಂಗದಲ್ಲಿ ಅವಕಾಶಗಳನ್ನು ಕಳೆದುಕೊಂಡರು ಈ ಬೇಸರದಿಂದ ಮದ್ಯ ಸೇವನೆ ಶುರು ಮಾಡಿಕೊಂಡಿದ್ದರು ಎನ್ನಲಾಗಿದೆ.