ವಿಜಿ ಇಲ್ಲದ ನೋವಲ್ಲಿ ಪುಕ್ಸಟ್ಟೆಲೈಫು ಬಿಡುಗಡೆ; ನಿರ್ದೇಶಕ ಅರವಿಂದ ಕುಪ್ಳೀಕರ್‌ ಸಂದರ್ಶನ

By Suvarna NewsFirst Published Sep 24, 2021, 4:19 PM IST
Highlights

ಅರವಿಂದ್‌ ಕುಪ್ಳೀಕರ್‌ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ಪುಕ್ಸಟ್ಟೆಲೈಫು ಪುರುಸೊತ್ತೇ ಇಲ್ಲ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ನಾಗರಾಜ್‌ ಸೋಮಯಾಜಿ ಚಿತ್ರದ ನಿರ್ಮಾಪಕರು. ಸಂಚಾರಿ ವಿಜಯ್‌ ಜೊತೆ ಸಿನಿಮಾ ಮಾಡಿದ ದಿನಗಳನ್ನೂ, ಚೊಚ್ಚಲ ಚಿತ್ರ ರಿಲೀಸ್‌ನ ಆತಂಕವನ್ನೂ ನಿರ್ದೇಶಕ ಕುಪ್ಳೀಕರ್‌ ಇಲ್ಲಿ ಬಿಚ್ಚಿಟ್ಟಿದ್ದಾರೆ.

ಪ್ರಿಯಾ ಕೆರ್ವಾಶೆ

ಸಿನಿಮಾ ರಿಲೀಸ್‌ ಹೊತ್ತಲ್ಲಿ ನಿಂತು ಪುಕ್ಸಟ್ಟೆಲೈಫಿನ ಮೇಕಿಂಗ್‌ ನೆನೆಸಿಕೊಂಡರೆ?

Latest Videos

ಈ ಕ್ಷಣದಲ್ಲಿ ನನಗೆ ಭಯ ಅಷ್ಟೇ ಆಗ್ತಿರೋದು. ಸಿನಿಮಾ ಶುರುವಾದಂದಿನಿಂದ ಈವರೆಗೂ ಬಹಳ ಕಷ್ಟಪಟ್ಟಿದ್ದೀವಿ. ಶುರುವಲ್ಲೇ ನಿರ್ಮಾಪಕರಿಗೆ ಏನೂ ತೊಂದರೆ ಆಯ್ತು. ಆಗ ಸಿನಿಮಾಟೋಗ್ರಾಫರ್‌ ಧೈರ್ಯ ಕೊಟ್ರು. ಕಲಾವಿದರು ಜೊತೆಗೆ ನಿಂತರು.

ಪುಕ್ಸಟ್ಟೆ ಲೈಫ್ ಪ್ರೀಮಿಯರ್ ಶೇ: ಸಂಚಾರಿ ವಿಜಯ್‌ಗೆ ಸೀಟು ಮೀಸಲು!

ಶೂಟಿಂಗ್‌ನ ದಿನಗಳು?

ಅಂಜನಾಪುರ ಅನ್ನುವ ಮುಸ್ಲಿಮರೇ ಇದ್ದ ಜಾಗದಲ್ಲಿ ಮುಸ್ಲಿಮರ ಮನೆಯಲ್ಲಿ ನಮ್ಮ ಚಿತ್ರದ ಶೂಟಿಂಗ್‌. ಅಲ್ಲೊಮ್ಮೆ ಮಸೀದಿಯಲ್ಲಿ ಶೂಟಿಂಗ್‌ ಮಾಡ್ಬೇಕಿತ್ತು. ವಿಜಯ್‌ ಮುಸ್ಲಿಂ ವೇಷದಲ್ಲಿದ್ದ. ಇನ್ನೇನು ಶೂಟಿಂಗ್‌ ಶುರು ಮಾಡ್ಬೇಕು ಅನ್ನುವಾಗ ಅಲ್ಲಿನ ಮೌಲ್ವಿ, ವಿಜಯ್‌ಗೆ ಮಸೀದಿ ಒಳಗೆ ಹೋಗಲು ಬಿಡಲಿಲ್ಲ. ವಿಜಿ ಮುಸ್ಲಿಂ ವೇಷದಲ್ಲಿದ್ದರೂ ಆತ ಹಿಂದೂ ಅಂತ ಅವರಿಗೆ ಗೊತ್ತಾಗಿತ್ತು. ನಾವು ಹೊರಗಿಂದ ಶೂಟಿಂಗ್‌ ಮಾಡಲು ನಿರ್ಧರಿಸಿದೆವು. ಅದನ್ನೂ ವಿರೋಧಿಸಿ ನಾಲ್ಕೈದು ಜನ ನಮ್ಮ ಜೊತೆಗೆ ಜಗಳಕ್ಕೆ ಬಂದರು. ಆಮೇಲೆ ನಡೆದದ್ದು ಅವಿಸ್ಮರಣೀಯ ಘಟನೆ. ಆ ಊರಿನ ಮುಸ್ಲಿಮರೆಲ್ಲ ಒಟ್ಟು ಸೇರಿ ಮಸೀದಿಯವರ ನಡೆಯನ್ನು ವಿರೋಧಿಸಿ ನಮ್ಮನ್ನು ಬೆಂಬಲಿಸಿದರು. ಅವರೆಲ್ಲರ ಪ್ರೀತಿ, ವಿಶ್ವಾಸ ನಮ್ಮನ್ನು ಮೂಕರನ್ನಾಗಿಸಿತ್ತು. ಆ ಊರಿನ ಜನರಲ್ಲಿ ಹೆಚ್ಚಿನವರು ಶಿಕ್ಷಿತರಲ್ಲ. ಆದರೆ ಅವರೊಳಗಿನ ಮಾನವೀಯತೆಯನ್ನು ವರ್ಣಿಸುವುದು ಕಷ್ಟ.

ಚಿತ್ರದಲ್ಲಿ ಸಂಚಾರಿ ವಿಜಯ್‌ ಅವರ ತೊಡಗಿಸಿಕೊಳ್ಳುವಿಕೆ ಹೇಗಿತ್ತು?

‘ನೀನು ಈ ಸಿನಿಮಾದ ಹೀರೋ ಅಲ್ಲ. ಇಲ್ಲಿ ನೀನೊಬ್ಬ ಮುಖ್ಯ ನಟ ಅಷ್ಟೇ ..’ ಆರಂಭದಲ್ಲೇ ವಿಜಿಗೆ ಹೀಗಂದಿದ್ದೆ. ಆತನಿಗೆ ರಾಷ್ಟ್ರಪ್ರಶಸ್ತಿ ಬರುವ ಎಷ್ಟೋ ಮೊದಲಿಂದಲೂ ನಾವಿಬ್ಬರೂ ಆತ್ಮೀಯ ಮಿತ್ರರು. ವಿಜಿ ಸ್ಕಿ್ರಪ್ಟ್‌ ವರ್ಕ್ನುದ್ದಕ್ಕೂ ನಮ್ಮ ಜೊತೆಗೇ ಇದ್ದ. ನಾನು ಆತನ ಪಾತ್ರದ ಬಗ್ಗೆ ವಿವರಿಸುವಾಗ ಅದನ್ನು ಕಲ್ಪಿಸಿಕೊಂಡು ನೋಟ್‌ ಮಾಡಿಕೊಳ್ಳುತ್ತಿದ್ದ. ಶೂಟಿಂಗ್‌ ಲೊಕೇಶನ್‌ ಹುಡುಕಾಟದಲ್ಲೂ ಜೊತೆಗಿದ್ದ. ಸಿನಿಮಾ ರೆಡಿ ಆದಮೇಲೆ ಅದರ ರಿಲೀಸ್‌ಗೆ ಬಹಳ ಓಡಾಡಿದ್ದ. ಚಿತ್ರ ಬಿಡುಗಡೆ ವಿಚಾರ ಬಂದಾಗಲೆಲ್ಲ ಅಂದ್ಕೊಳ್ಳೋದು ಅವನೊಬ್ಬ ಇರ್ಬೇಕಿತ್ತು! ಸಿನಿಮಾ ಬಿಡುಗಡೆ ಮಾಡ್ಬೇಕು ಅಂದ್ಕೊಂಡಾಗಲೂ ನಾವು ಮಾತಾಡಿಕೊಂಡಿದ್ದು - ಬಹಳ ದೊಡ್ಡದನ್ನೇ ಕಳ್ಕೊಂಡಿದ್ದೀವಿ, ಇನ್ನು ಸಿನಿಮಾ ಓಡದಿದ್ರೆ ದುಡ್ಡು ಕಳ್ಕೊಳ್ಳಬಹುದಷ್ಟೇ. ಆದರೆ ಆ ನೋವಿಗಿಂತ ಇದು ದೊಡ್ಡದಲ್ಲ. ಆ ನೋವಲ್ಲೇ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ.

ಸಿನಿಮಾ ಬಗ್ಗೆ ನಿರೀಕ್ಷೆ?

ಜನ ಪ್ರೋತ್ಸಾಹ ನೀಡಬಹುದು ಅನ್ನೋ ನಿರೀಕ್ಷೆ. ಸಿನಿಮಾ ಎಷ್ಟೇ ಚೆನ್ನಾಗಿ ಮಾಡಿದ್ರೂ ಬಿಡುಗಡೆಯ ಹೊತ್ತಿಗೆ ಭಯ ಇದ್ದೇ ಇದೆ. ಅಧಿಕಾರಶಾಹಿ, ರಾಜಕೀಯ, ಆಮಿಷಗಳೇನೋ ಇದ್ದರೂ ಸತ್ಯ ಒಂದಲ್ಲ ಒಂದು ದಿನ ಹೊರಬಿದ್ದೇ ಬೀಳುತ್ತೆ ಅಂತ ಈ ಚಿತ್ರ ಮೂಲಕ ಹೇಳಕ್ಕೆ ಹೊರಟಿದ್ದೀವಿ.

ಸಂಚಾರಿ ವಿಜಯ್‌ ನಟನೆಯ ಪುಕ್ಸಟ್ಟೆಲೈಫು ಟ್ರೈಲರ್‌ ಬಿಡುಗಡೆ

ನಿಮ್ಮ ಹಿನ್ನೆಲೆ?

ಬಿ ಕೆ ಚಂದ್ರಶೇಖರ್‌ ಅವರ ‘ಊರುಭಂಗ’ ನಾಟಕದಿಂದ ರಂಗಭೂಮಿಗೆ ಬಂದವನು ಬಿ. ಜಯಶ್ರೀ ಅವರ ತಂಡ ಸೇರಿಕೊಂಡೆ. ಅವರದು ನನ್ನದು ತಾಯಿ ಮಗನ ಸಂಬಂಧ. ಕ್ಯಾಮರಾಮೆನ್‌ ಆಗಲು ಹೊರಟಿದ್ದೆ. ಹಿರಿಯ ಛಾಯಾಗ್ರಾಹಕ ಭಾಸ್ಕರ್‌ ಸರ್‌ ನಿರ್ದೇಶನ ಮಾಡು ಅಂದರು. ಒಗ್ಗರಣೆ ಚಿತ್ರಕ್ಕೆ ಪ್ರಕಾಶ್‌ ರೈ ಅವರ ಜೊತೆಗೆ ಸಹ ನಿರ್ದೇಶನಾಗುವ ಜೊತೆ ಸ್ಕಿ್ರಪ್ಟ್‌ ವರ್ಕ್ನಲ್ಲೂ ಸಹಾಯ ಮಾಡಿದೆ. ಪ್ರಕಾಶ್‌ ರೈ ‘ಇದೊಳ್ಳೆ ರಾಮಾಯಣ’ ಸಿನಿಮಾದಲ್ಲಿ ದೊಡ್ಡ ಪಾತ್ರವನ್ನೇ ಕೊಟ್ಟರು. ಯೋಗರಾಜ ಭಟ್‌ ಜೊತೆ ಕೆಲಸ, ಹಿಂದಿಯ ನಾನಾ ಪಾಟೇಕರ್‌, ತಾಪ್ಸಿ ಪನ್ನು ನಟಿಸಿದ್ದ ಚಿತ್ರಕ್ಕೆ ಸಹ ನಿರ್ದೇಶನದ ಜೊತೆಗೆ ಸಣ್ಣ ಪಾತ್ರದಲ್ಲೂ ಕಾಣಿಸಿಕೊಂಡೆ.

click me!