ಕೆಟ್ಟ ಸರ್ಪ್ರೈಸ್ ಕೊಟ್ಟ ದೇವ್ರು: ರಮೇಶ್ ಅರವಿಂದ್

Shashikar Cinema   | Asianet News
Published : Sep 14, 2021, 10:40 AM ISTUpdated : Sep 14, 2021, 11:23 AM IST
ಕೆಟ್ಟ ಸರ್ಪ್ರೈಸ್ ಕೊಟ್ಟ ದೇವ್ರು: ರಮೇಶ್ ಅರವಿಂದ್

ಸಾರಾಂಶ

“ನಮ್ಮ ಅಸೋಸಿಯೇಟೆಲ್ಲ ಗಣೇಶನ ಹಬ್ಬಕ್ಕೆ ಅಂತ ಊರಿಗೆ ಹೋಗಿದ್ದರು. ಹಾಗಾಗಿ ನನ್ನ ಬರ್ತ್ ಡೇಗೆ ಯಾರಿಗೂ ಬರಕ್ಕಾಗಿಲ್ಲ ಅಂತ ಇವತ್ತು ಗುರು ಎಲ್ಲ ಸೇರಿಕೊಂಡು ಬೆಳಿಗ್ಗೆ ಹತ್ತು ಗಂಟೆಗೆ ನನ್ನ ಮನೆಗೆ ಬರೋಣ ಅಂತ ಪ್ಲ್ಯಾನ್‌ ಮಾಡಿದ್ದರಂತೆ. ಆದರೆ ನಾನೇ ಹೋಗಿ ಅವರ ಪಾರ್ಥಿವ ಶರೀರ ನೋಡುವಂತಾಗಿದೆ” ಎನ್ನುತ್ತಾರೆ ರಮೇಶ್ ಅರವಿಂದ್.  

ಗುರು ಕಶ್ಯಪ್ ಕನ್ನಡದ ಉದಯೋನ್ಮುಖ ಸಂಭಾಷಣೆಕಾರ. ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ ನಲವತ್ತೈದು ವರ್ಷವಷ್ಟೇ ವಯಸ್ಸಾಗಿದ್ದ ಅವರು ತಾಯಿ, ಅಣ್ಣ, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇಂದು ಟಿ ಆರ್ ಮಿಲ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಶಿವರಾಜ್ ಕುಮಾರ್ ಅವರ ನಟನೆಯ ಬೈರಾಗಿ, ಧನಂಜಯ ರಚಿತಾ ರಾಮ್ ಅವರ ಹೊಸ ಸಿನಿಮಾ ಮಾನ್ಸೂನ್ ರಾಗ, ಶಬರಿ, ಪೃಥ್ವಿ ಅಂಬಾರ್ ನಟನೆಯ  ಶುಗರ್ ಲೆಸ್‌ ಮೊದಲಾದ ಸಾಲು ಸಾಲು ಚಿತ್ರಗಳು ಇನ್ನು ಬಿಡುಗಡೆಯಾಗಬೇಕಷ್ಟೇ. ಇವರ ಅನಿರೀಕ್ಷಿತ ಅಗಲಿಕೆಯ ಬಗ್ಗೆ ಸುವರ್ಣ ನ್ಯೂಸ್ ಆನ್ಲೈನ್ ಜೊತೆಗೆ ತಮ್ಮ ನೋವು ಹಂಚಿಕೊಂಡಿದ್ದಾರೆ ರಮೇಶ್ ಅರವಿಂದ್.

ಶಶಿಕರ ಪಾತೂರು

ನಿಮಗೆ ಗುರು ಕಶ್ಯಪ್ ಪರಿಚಯವಾಗಿದ್ದು ಹೇಗೆ?

ನನಗೆ ಗುರು ಕಶ್ಯಪ್ ಪರಿಚಯವಾಗಿದ್ದೇ `ಪುಷ್ಪಕ ವಿಮಾನ’ ಸಿನಿಮಾದ ಮೂಲಕ. ನನಗೆ ಆ ಚಿತ್ರದ ಕತೆಯನ್ನು ರೀಡಿಂಗ್ ಕೊಟ್ಟಿದ್ದ ಹುಡುಗ ಅವನು. ಅದನ್ನು ಕೇಳಿ ಹೊರಬಂದಾಕ್ಷಣ ನಾನು ಹೇಳಿದ್ದು ಒಂದೇ ಮಾತು. ನನಗೆ ನೀನು ಯಾರು ಗೊತ್ತಿಲ್ಲಪ್ಪ.. ಆದರೆ ನನ್ನ ಮುಂದಿನ ಚಿತ್ರಕ್ಕೆ ನೀನೇ ಡೈಲಾಗ್ ರೈಟರ್ ಅಂತ ಹೇಳಿದ್ದೆ. ಅದರಂತೆ ಸುಂದರಾಂಗ ಜಾಣ, 100 ಸೇರಿದಂತೆ ನನ್ನ ಮುಂದಿನ ಎರಡು ಮೂರು ಸಿನಿಮಾಗಳಿಗೆ ಅವರೇ ಸಂಭಾಷಣೆ ಬರೆದಿದ್ದಾರೆ.

ನಮ್ಮ ಬಾವುಟವೆಂದರೆ ರೋಮಾಂಚನ- ರಮೇಶ್

ಸಣ್ಣ ವಯಸ್ಸಿನಲ್ಲಾಗಿರುವ ಈ ಆತ್ಮೀಯನ ಸಾವು ನಿಮಗೆಷ್ಟು ಆಘಾತ ತಂದಿದೆ?

ಸಣ್ಣ ವಯಸ್ಸು, ಆತ್ಮೀಯ ಎನ್ನುವುದಲ್ಲ.. ಆತ ಒಬ್ಬ ಅದ್ಭುತ ಪ್ರತಿಭಾವಂತ! ಲೈಫ್ ಅನ್ನೋದು ಅಬ್ಬ.. ಒಬ್ಬ ಯುವಕ ಹೋದ ಎನ್ನುವುದಕ್ಕಿಂತಲೂ ಎಕ್ಸಟ್ರಾರ್ಡಿನರಿ ಟ್ಯಾಲೆಂಟ್ ಆತ. ಸಾಮಾನ್ಯವಾಗಿ ಡೈಲಾಗ್ ರೈಟರ್ ಅಂದರೆ ಸಂಭಾಷಣೆ ಬರೆದುಕೊಟ್ಟು ಹೋಗೋರು. ಆದರೆ ಈತಇಡೀ ದಿನ ಸೆಟ್ಟಲ್ಲೇ ಇರ್ತಿದ್ದ! ಏನೇ ಕರೆಕ್ಷನ್ ಬೇಕು ಅಂದ್ರೂ ಇಮೀಡಿಯೆಟ್ಟಾಗಿ ಮಾಡಿಕೊಡೋರು.. ಪೋಸ್ಟರ್ ಡಿಸೈನ್ ಬಗ್ಗೆ ಆಸಕ್ತಿ ಇತ್ತು. ಸಿನಿಮಾ ಜೊತೆಗೆ ಪೂರ್ತಿಯಾಗಿ ಕಾಂಟ್ರಿಬ್ಯೂಟ್‌ ಮಾಡಬೇಕು ಎನ್ನುವ ಆಸಕ್ತಿ ಇದ್ದಂಥ ವ್ಯಕ್ತಿ.

ಮತ್ತೆ ಮನ್ವಂತರದಲ್ಲಿ ಬರಲಿದ್ದಾರೆ ಮೇಧಾ ವಿದ್ಯಾಭೂಷಣ

ಗುರು ಕಶ್ಯಪ್ ಅವರಲ್ಲಿ ನಿಮಗೆ ಕಂಡಿದ್ದ ವಿಶೇಷ ಸಂಗತಿ ಏನು?

ವೆರಿ ವೆರಿ ಕಮಿಟೆಡ್ ಅಂದರೆ ಬರಹಗಾರ. ತುಂಬ ಡೆಡಿಕೇಟೆಡ್‌. ನಾನು ಅವರನ್ನು ನಿರ್ದೇಶಕರನ್ನಾಗಿಸಬೇಕು ಅಂತ ಆಸೆಪಟ್ಟಿದ್ದೆ. ಅಷ್ಟೆಲ್ಲ ತಾಕತ್ತು ಆ ಮನುಷ್ಯನಲ್ಲಿ ಇತ್ತು. ಹೇಗಾದರೂ ಈ ಹುಡುಗನಿಗೆ ಒಳ್ಳೆಯ ತಲೆ ಇದೆ. ಅದನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬೇಕು ಎಂದುಕೊಂಡಿದ್ದೆ. ನಿನ್ನೆ ಕೂಡ ನಗುನಗುತ್ತಾ ಇದ್ದರಂತೆ.. ಎಲ್ಲರ ಜೊತೆಗೆ ಚೆನ್ನಾಗಿ ಮಾತನಾಡುತ್ತಿದ್ದರಂತೆ. ನಾನೂ ಫೋನಲ್ಲಿ ಮಾತನಾಡಿದ್ದೆ. ಆದರೆ ಈಗ ನೋಡಿದರೆ ಅವರೇ ಇಲ್ಲ ಅಂತ ನಂಬಲೇಬೇಕಿದೆ!

ಉಮಾಪತಿಯ ಫಿಲ್ಮ್ ಸಿಟಿ

ಇತ್ತೀಚೆಗೆ ಸಾವು ವಯಸ್ಸಿನ ಅಂತರವಿಲ್ಲದೆ ತುಂಬ ಬೇಗ ಆವರಿಸುತ್ತಿದೆ ಅನಿಸುತ್ತಿಲ್ಲವೇ?

ಖಂಡಿತವಾಗಿ. ಮೊನ್ನೆಯಷ್ಟೇ ನನ್ನ ಬರ್ತ್ ಡೇ ಆಯಿತು. ಅವತ್ತು ಗಣೇಶ ಚತುರ್ಥಿ ಬೇರೆ ಇತ್ತು. ನಮ್ಮ ಅಸೋಸಿಯೇಟೆಲ್ಲ ಗಣೇಶನ ಹಬ್ಬಕ್ಕೆ ಅಂತ ಊರಿಗೆ ಹೋಗಿದ್ದರು. ಹಾಗಾಗಿ ನನ್ನ ಬರ್ತ್ ಡೇಗೆ ಯಾರಿಗೂ ಬರಕ್ಕಾಗಿಲ್ಲ ಅಂತ ಇವತ್ತು ಗುರು ಕಶ್ಯಪ್ ಎಲ್ಲ ಸೇರಿಕೊಂಡು ಬೆಳಿಗ್ಗೆ ಹತ್ತು ಗಂಟೆಗೆ ನನ್ನ ಮನೆಗೆ ಬರೋಣ ಅಂತ ಪ್ಲ್ಯಾನ್‌ ಮಾಡಿದ್ದರಂತೆ. ಆದರೆ ನಾನೇ ಹೋಗಿ ಅವರ ಪಾರ್ಥಿವ ಶರೀರ ನೋಡುವಂತಾಗಿದೆ” ಎನ್ನುತ್ತಾರೆ ರಮೇಶ್ ಅರವಿಂದ್.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು