ನಾನು ಏನನ್ನೂ ಪ್ಲ್ಯಾನ್ ಮಾಡುವುದಿಲ್ಲ: ಭೂಮಿ ಶೆಟ್ಟಿ

By Suvarna NewsFirst Published Dec 30, 2020, 2:28 PM IST
Highlights

`ಕಿನ್ನರಿ' ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತೆಯಾದವರು ಭೂಮಿ ಶೆಟ್ಟಿ. ಆನಂತರ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡರು. ಪ್ರಸ್ತುತ ತೆಲುಗು ಧಾರಾವಾಹಿಯಲ್ಲಿನ ನಟನೆಗಾಗಿ ಹೈದರಾಬಾದ್‌ ಕಡೆಗೆ ಮುಖ ಮಾಡಿರುವ ಭೂಮಿಯವರೊಂದಿಗಿನ ಮಾತುಕತೆ ಇದು.
 

ಭೂಮಿ ಶೆಟ್ಟಿ ನಟಿಯಾಗಿ ಮಾತ್ರವಲ್ಲ, ಇತ್ತೀಚೆಗೆ `ಮಜಾಭಾರತ' ರಿಯಾಲಿಟಿ ಶೋ ನಿರೂಪಕರಾಗಿಯೂ ಗುರುತಿಸಿಕೊಂಡವರು. ಆದರೆ ಅವರಲ್ಲಿನ ನಟಿಗೆ ಇದೀಗ ತೆಲುಗು ಇಂಡಸ್ಟ್ರಿಯಿಂದ ಒಂದು ಉತ್ತಮ ಅವಕಾಶ ಬಂದಿದೆ. `ಅತ್ತಾರಿಂಟ್ಲೋ ಅಕ್ಕ ಚೆಲ್ಲಲು' ಎನ್ನುವ ಧಾರಾವಾಹಿಯ ಮೂಲಕ ಅಲ್ಲಿನ ಪ್ರೇಕ್ಷಕರ ಮನಗೆಲ್ಲಲು ಹೊರಟಿದ್ದಾರೆ. ಇನ್ನುಮುಂದೆ ಭೂಮಿ ತಿಂಗಳಲ್ಲಿ ಹದಿನೈದು ದಿನಗಳ ಕಾಲ ಹೈದರಾಬಾದ್‌ನಲ್ಲಿರುತ್ತಾರೆ. ಜನವರಿ ಮೂರರಿಂದ ಚಿತ್ರೀಕರಣ ನಡೆಯಲಿರುವ ಆ ಧಾರಾವಾಹಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಭೂಮಿಶೆಟ್ಟಿಯವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಲಾದ ಸಂದರ್ಶನ ಇಲ್ಲಿದೆ.

 -ಶಶಿಕರ ಪಾತೂರು

ಹೊಸ ವರ್ಷದ ಹೊಸ ಯೋಜನೆಗೆ ಅಭಿನಂದನೆಗಳು
ತ್ಯಾಂಕ್ಯು. ಇದನ್ನು ಹೊಸ ಯೋಜನೆ ಎಂದು ಹೇಳಲಾರೆ. ಹೊಸ ವರ್ಷಕ್ಕೆ ಬೆಂಗಳೂರಲ್ಲೇ ಇರುತ್ತೇನೆ. ಜನವರಿ ಮೂರರಿಂದ ಶೂಟಿಂಗ್ ಶುರುವಾಗಲಿದೆ. ಈಗಾಗಲೇ ತೆಲುಗಿನಲ್ಲಿ ಜನಪ್ರಿಯತೆಯೊಂದಿಗೆ ಪ್ರಸಾರವಾಗುತ್ತಿರುವ `ಅತ್ತಾರಿಂಟ್ಲೋ ಅಕ್ಕ ಚೆಲ್ಲಲು' ಧಾರಾವಾಹಿಯಲ್ಲಿ ನಾನು ಹೊಸದಾಗಿ ಸೇರಿಕೊಳ್ಳುತ್ತಿದ್ದೇನೆ. ಇದುವರೆಗೆ ಅದರ ನಾಯಕಿಯಾಗಿ ನಟಿಸುತ್ತಿದ್ದ ಚೈತ್ರಾ ರೈಯವರ ಬದಲಿಗೆ ನಾನು ಎಂಟ್ರಿ ನೀಡುತ್ತಿದ್ದೇನೆ.

ಚಿತ್ಕಳಾ ಈಗ ಕನ್ನಡತಿಯಲ್ಲಿ ರತ್ನಮಾಲ

ಇನ್ನೊಬ್ಬರು ಮಾಡಿರುವ ಪಾತ್ರ ಮುಂದುವರಿಸುವುದು ಅದು ಕೂಡ ತೆಲುಗು ಭಾಷೆಯಲ್ಲಿ ಚಾಲೆಂಜಿಂಗ್ ಅನಿಸಿದೆಯೇ?
ಒಂದು ರೀತಿಯಲ್ಲಿ ನಿಜ.  ಆದರೆ ಇದು ನನಗೆ ತೆಲುಗುವಿನಲ್ಲಿ ಮೊದಲ ಧಾರಾವಾಹಿ ಏನಲ್ಲ. ಈಗಾಗಲೇ ಒಂದು ಧಾರಾವಾಹಿಯಲ್ಲಿ ಎಂಟುನೂರು ಎಪಿಸೋಡ್ ನಟಿಸಿದ್ದೆ. `ನಿನ್ನೆ ಪೆಳ್ಳಾಡತ' ಎನ್ನುವುದು ಧಾರಾವಾಹಿಯ ಹೆಸರು. 24 ವರ್ಷಗಳ ಹಿಂದೆ ಅದೇ ಹೆಸರಲ್ಲಿ ನಾಗಾರ್ಜುನ ಅವರ ಜನಪ್ರಿಯ ಚಿತ್ರ ತೆರೆಕಂಡಿತ್ತು. ಚಿತ್ರವನ್ನು ನಿರ್ಮಿಸಿದ್ದ ಅಕ್ಕಿನೇನಿ ನಾಗಾರ್ಜುನ ಅವರದ್ದೇ `ಅನ್ನಪೂರ್ಣ ಸ್ಟುಡಿಯೋಸ್' ನಿಂದಲೇ ಆ ಧಾರಾವಾಹಿಯೂ ನಿರ್ಮಾಣವಾಗಿತ್ತು. ಕನ್ನಡದಲ್ಲಿ `ಬಿಗ್ ಬಾಸ್'ನಲ್ಲಿ ಭಾಗಿಯಾಗುವುದಕ್ಕಾಗಿ ನಾನು  ಆ ಧಾರಾವಾಹಿಯನ್ನು ಅರ್ಧದಲ್ಲೇ ಬಿಟ್ಟು ಬಂದಿದ್ದೆ. ಇದೀಗ ಮತ್ತೊಂದು ಧಾರಾವಾಹಿಯ ಮೂಲಕ ಮರು ಎಂಟ್ರಿ ನೀಡುತ್ತಿದ್ದೇನೆ. ಹಾಗಾಗಿ ಚಾಲೆಂಜ್ ಎದುರಿಸಲು ಸಿದ್ದವಾಗಿದ್ದೇನೆ. 

ಕನ್ನಡತಿಯ ಸ್ಪಾನರ್ ಶಿವ ಈ ಮಹೇಶ್

ಕನ್ನಡ ಮತ್ತು ತೆಲುಗು ಇಂಡಸ್ಟ್ರಿಯ ನಡುವಿನ ವ್ಯತ್ಯಾಸವನ್ನು ಹೇಗೆ ಕಾಣುತ್ತೀರಿ?
ನನಗೆ ಅಂಥ ವ್ಯತ್ಯಾಸವೇನೂ ಅನಿಸಿಲ್ಲ. ಕನ್ನಡದಲ್ಲಿ ನಾನು ಧಾರಾವಾಹಿ ಮಾಡುವಾಗ ಆನ್‌ ಸ್ಪಾಟಲ್ಲೇ ರೆಕಾರ್ಡ್ ಮಾಡಿರುತ್ತೇವೆ. ಆದರೆ ತೆಲುಗುವಲ್ಲಿ ಸಿನಿಮಾದಂತೆ ಚಿತ್ರೀಕರಣ ನಡೆದ ಬಳಿಕ ಡಬ್ ಮಾಡಲಾಗುತ್ತದೆ. ನಟನೆಯ ವಿಚಾರದಲ್ಲಿ ಭಾಷೆಯೊಂದನ್ನು ಬಿಟ್ಟರೆ ಅಂಥ ವ್ಯತ್ಯಾಸಗಳೇನೂ ಇಲ್ಲ. ನಾನು ತೆಲುಗು ಕಲಿತಿದ್ದೇನೆ. ಆದರೆ ನನ್ನ ಪಾತ್ರಕ್ಕೆ  ಬೇರೆ ಕಂಠದಾನ ಕಲಾವಿದೆ ಧ್ವನಿ ನೀಡುತ್ತಾರೆ. ಇನ್ನು ದೃಶ್ಯಗಳಿಗೆ ಸಂಬಂಧಿಸಿದಂತೆ ಸಂಸ್ಕೃತಿ, ರೀತಿ, ನೀತಿಗಳು ಬೇರೆಯಾಗಿರುತ್ತದೆ. ಕೆಲವೊಂದು ಹಬ್ಬ ಹರಿದಿನ, ಅಥವಾ ಕಾರ್ಯಕ್ರಮಗಳ ದೃಶ್ಯಗಳ ಚಿತ್ರೀಕರಣ ಇದ್ದಾಗ ಅಲ್ಲಿನ ಸಂಸ್ಕೃತಿಯ ವಿಭಿನ್ನತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹೊರತಾಗಿ, ಕಲಾವಿದೆಯಾಗಿ ಅಂಥ ವ್ಯತ್ಯಾಸವೇನೂ ಅನುಭವಿಸಿಲ್ಲ. 

ಕ್ರೇಜಿಸ್ಟಾರ್ ಜೊತೆಗಿನ ಮಲ್ಲ ಮರೆಯೋಕಾಗಲ್ಲ- ಪ್ರಿಯಾಂಕಾ

`ಬಿಗ್ ಬಾಸ್'ನಿಂದ ಹೊರಬಂದ ಬಳಿಕ ನಿಮಗಿದ್ದ ನಿರೀಕ್ಷೆಗಳೆಲ್ಲ ಈಡೇರಿವೆಯೇ?
ನಾನು ಯಾವುದರ ಬಗ್ಗೆಯೂ ಪ್ಲ್ಯಾನ್ ಮಾಡಿರಲಿಲ್ಲ. ಯಾಕೆಂದರೆ ಪ್ಲ್ಯಾನ್ ಮಾಡಿದ್ದೆಲ್ಲವೂ ನಡೆಯುದಿಲ್ಲ ಎನ್ನುವುದು ಗೊತ್ತಲ್ಲ? ಅದಕ್ಕೆ ತಕ್ಕಂತೆ ಅಲ್ಲಿಂದ ಬಂದ ಕೆಲವು ಸಮಯದಲ್ಲೇ ಎಲ್ಲರ ಪ್ಲ್ಯಾನ್ ಕೂಡ ಉಲ್ಟಾ ಮಾಡುವ ರೀತಿಯಲ್ಲಿ ಕೊರೊನಾ, ಲಾಕ್ಡೌನ್ ಎಲ್ಲವೂ ಆಯಿತು. ಆದರೆ ಈ ನಡುವೆ ಲಾಕ್ಡೌನ್ ಬಗ್ಗೆಯೇ ಕತೆ ಹೇಳುವ ಚಿತ್ರವೊಂದರಲ್ಲಿ ನಾನು ಮೊದಲ ಬಾರಿಗೆ ಸಿನಿಮಾ ನಾಯಕಿಯಾದೆ. ಹದಿನೈದು ದಿನದಲ್ಲಿ ಚಿತ್ರೀಕರಣ ನಡೆಸಿದ `ಇಕ್ಕಟ್ಟು' ಎನ್ನುವ ಆ ಸಿನಿಮಾ ಬಿಡುಗಡೆಯಾಗಬೇಕಿದೆ. ಅದರಲ್ಲಿ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ನಟಿಸಿದ್ದ ನಾಗಭೂಷಣ್ ಸೇರಿದಂತೆ ಬೆರಳೆಣಿಕೆಯ ಕಲಾವಿದರು ಮಾತ್ರ ಇದ್ದೇವೆ. ಇಶಾನ್ ಮತ್ತು ಹಸೀನ್ ಖಾನ್ ಅದರ ನಿರ್ದೇಶಕರು. ಮುಂದೆ ಸಿನಿಮಾನೇ ಮಾಡಬೇಕು ಅಥವಾ ಸೀರಿಯಲ್ಲೇ ಮಾಡಬೇಕು ಎಂದು ಕಾದು ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ. ಒಳ್ಳೆಯ ಅವಕಾಶಗಳು ಬಂದಾಗ ಬಳಸಿಕೊಳ್ಳುತ್ತೇನೆ.

click me!