ಯಶ್‌ ಮುಂದಿನ ಚಿತ್ರವೂ ಪ್ಯಾನ್‌ ಇಂಡಿಯಾ ಸಿನಿಮಾ: ನರ್ತನ್‌

By Kannadaprabha NewsFirst Published Jul 4, 2020, 8:36 AM IST
Highlights

ಯಶ್‌ ಮುಂದಿನ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್‌. ಕೆಜಿಎಫ್‌ ನಂತರ ರಾಕಿಂಗ್‌ಸ್ಟಾರ್‌ ಜತೆ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎಂಬುದನ್ನು ನರ್ತನ್‌ ಹೇಳಿಕೊಂಡಿದ್ದಾರೆ.

ಆರ್‌ ಕೇಶವಮೂರ್ತಿ

ಯಶ್‌ ಮತ್ತು ನಿಮ್ಮ ಕಾಂಬಿನೇಷನ್‌ ಸಿನಿಮಾ ಪಕ್ಕಾ ಆಗಿದೆಯೇ?

ಹೌದು. ‘ಕೆಜಿಎಫ್‌’ ನಂತರ ಯಶ್‌ ಅವರಿಗೆ ಸಿನಿಮಾ ಮಾಡುತ್ತಿರುವೆ. ಕತೆಯ ಸಾಲು ಹೇಳಿದ್ದೇನೆ. ಅವರಿಗೆ ಇಷ್ಟಆಗಿದೆ. ಪೂರ್ತಿ ಕತೆ ಹೇಳಿದ ಮೇಲೆ ಮುಂದಿನ ನಿರ್ಧಾರ ಆಗಲಿವೆ. ಆದರೆ, ಇಬ್ಬರು ಜತೆಗೆ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಸಂಪೂರ್ಣವಾಗಿ ಕತೆ ಹೇಳಿದ ಮೇಲೆ ಹೊಸ ಬದಲಾವಣೆಗಳು ಇದ್ದರೆ ಆಮೇಲೆ ಗೊತ್ತಾಗುತ್ತದೆ.

ಕೆಜಿಎಫ್ 2 ಮೀರಿಸುತ್ತಾ ಯಶ್ 20 ನೇ ಸಿನಿಮಾ?

ನೀವು ನಿರ್ದೇಶನ ಮಾಡಲಿರುವ ಯಶ್‌ ಸಿನಿಮಾ ಹೇಗಿರುತ್ತದೆ?

ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಪಕ್ಕಾ ಆ್ಯಕ್ಷನ್‌- ಮಾಸ್‌ ಸಿನಿಮಾ. ಮನರಂಜನೆ, ಫ್ಯಾಮಿಲಿ ಡ್ರಾಮಾ ಜತೆಗೆ ಆ್ಯಕ್ಷನ್‌ ಇರುತ್ತದೆ. ನಿರೀಕ್ಷೆಗಳು ಹುಸಿಯಾಗದಂತಹ ಸಿನಿಮಾ ಮಾಡುತ್ತೇನೆಂಬ ಭರವಸೆ ಕೊಡಬಲ್ಲೆ.

ಕೆಜಿಎಫ್‌ ನಂತರ ಯಶ್‌ ಜತೆ ಚಿತ್ರ ನಿರ್ದೇಶನ ಮಾಡುತ್ತಿರುವುದು ಹೇಗನಿಸುತ್ತಿದೆ?

ಇದೊಂದು ದೊಡ್ಡ ಜವಾಬ್ದಾರಿ. ದೊಡ್ಡ ಗೆಲುವು ಕಂಡ ಹೀರೋ, ನನ್ನ ಮುಂದಿನ ಚಿತ್ರಕ್ಕೆ ನಾಯಕ ಆಗುತ್ತಿದ್ದಾರೆ ಎನ್ನುವುದು ನಿರ್ದೇಶಕನಾಗಿ ನನಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಇದನ್ನ ನಾನು ನನ್ನ ಕತೆಯಿಂದ ಸೂಕ್ತ ರೀತಿಯಲ್ಲಿ ನಿಭಾಯಿಸುತ್ತೇನೆಂಬ ವಿಶ್ವಾಸ ಇದೆ. ಆ ಕಾರಣಕ್ಕೆ ಸಾಕಷ್ಟುಸಮಯ ತೆಗೆದುಕೊಂಡು ಕತೆ ಮಾಡುತ್ತಿದ್ದೇನೆ.

ಇದು ಕೂಡ ಪ್ಯಾನ್‌ ಇಂಡಿಯಾ ಸಿನಿಮಾ ಆಗುತ್ತದೆಯೇ?

ನನ್ನ ಸಿನಿಮಾ ಮಾತ್ರವಲ್ಲ, ಇನ್ನು ಮುಂದೆ ಯಾರೇ ಯಶ್‌ ಜತೆ ಚಿತ್ರ ಮಾಡಿದರೂ ಪ್ಯಾನ್‌ ಇಂಡಿಯಾ ಸಿನಿಮಾ ಆಗಿರುತ್ತದೆ. ಯಾಕೆಂದರೆ ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತ ಆಗಿರುವ ಹೀರೋ ಅಲ್ಲ. ಅವರಿಗೆ ಎಲ್ಲಾ ಭಾಷೆಯಲ್ಲೂ ಪ್ರೇಕ್ಷಕರು, ಅಭಿಮಾನಿಗಳು ಹಾಗೂ ಮಾರುಕಟ್ಟೆಇದೆ. ಹೀಗಾಗಿ ಅವರ ಮುಂದಿನ ಸಿನಿಮಾಗಳು ಎಲ್ಲಾ ಭಾಷೆಗಳಿಗೂ ಅನ್ವಯಿಸುತ್ತದೆ. ನಮ್ಮ ಕಾಂಬಿನೇಷನ್‌ ಸಿನಿಮಾ ಕೂಡ ಪ್ಯಾನ್‌ ಇಂಡಿಯಾ ಚಿತ್ರವೇ ಆಗಿರುತ್ತದೆ.

ಮನೆಗೆಲಸದ ಮಹಿಳೆಗೆ ರಾಧಿಕಾ ಪಂಡಿತ್ ಅಚ್ಚರಿ ಗಿಫ್ಟ್

‘ಮಫ್ತಿ’ ತಮಿಳು ರೀಮೇಕ್‌ ಎಲ್ಲಿಯವರೆಗೂ ಬಂದಿದೆ?

ಒಂದಷ್ಟುಶೂಟಿಂಗ್‌ ಆಗಿದೆ. ಇಲ್ಲಿ ಶಿವಣ್ಣ ಮಾಡಿದ ಪಾತ್ರ ಅಲ್ಲಿ ಸಿಂಬು ಮಾಡುತ್ತಿದ್ದಾರೆ. ಲಾಕ್‌ಡೌನ್‌ ಕಾರಣಕ್ಕೆ ಶೂಟಿಂಗ್‌ ಕೆಲಸಗಳು ನಿಂತಿವೆ. ಜತೆಗೆ ನಿರ್ಮಾಣ ಸಂಸ್ಥೆಯ ಕಾರಣಕ್ಕೂ ಚಿತ್ರ ತಡವಾಗುತ್ತಿದೆ. ಕೊರೋನಾ ಸಂಕಷ್ಟಮುಗಿದ ಮೇಲೆ ‘ಮಫ್ತಿ’ ತಮಿಳು ರೀಮೇಕ್‌ ಕೆಲಸಗಳು ಶುರುವಾಗಬಹುದೇನೋ ಗೊತ್ತಿಲ್ಲ.

ಈಗಾಗಲೇ ನಿಮ್ಮ ನಿರ್ದೇಶನದಲ್ಲಿ ಘೋಷಣೆ ಆಗಿರುವ ‘ಭೈರತಿ ರಣಗಲ್‌’ ಚಿತ್ರ ಯಾವಾಗ ಸೆಟ್ಟೇರುತ್ತದೆ?

ಶಿವಣ್ಣ ನಾಯಕನಾಗಿ ನಟಿಸಲಿರುವ ಸಿನಿಮಾ. ಅವರದ್ದೇ ಸಂಸ್ಥೆಯಲ್ಲಿ ನಿರ್ಮಾಣ ಕೂಡ ಆಗಲಿದೆ. ಇದು ಶಿವಣ್ಣ ಅವರಿಗೆ 120ನೇ ಸಿನಿಮಾ ಆಗಬೇಕು ಎನ್ನುವುದು ಯೋಚನೆ. ಹೀಗಾಗಿ ಆ ನಂಬರ್‌ ಬರುವ ತನಕ ಕಾಯಬೇಕು. ಚಿತ್ರಕತೆ ರೆಡಿ ಇದೆ. ರೆಡಿ ಟು ಶೂಟಿಂಗ್‌ ಅನ್ನುವಂತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಯಶ್‌ ಸಿನಿಮಾ ಮುಗಿದ ಮೇಲೆ ‘ಭೈರತಿ ರಣಗಲ್‌’ ಸೆಟ್ಟೇರಲಿದೆ.

ಯಶ್‌ ಸಿನಿಮಾ ಕುರಿತು ನರ್ತನ್‌ ಹೇಳಿದ್ದು

- ತನಗೆ ಇಂಥದ್ದೇ ಕತೆ ಬೇಕು ಎಂಬುದನ್ನು ಯಶ್‌ ಅವರು ಹೇಳಿಲ್ಲ. ನಿರ್ದೇಶಕ ಕತೆ ಹೇಳಿದಾಗ ಇಷ್ಟವಾದ ಮೇಲೆ ಜತೆಗೆ ಕೂತು ಕೆಲಸ ಮಾಡುತ್ತಾರೆ. ಹೀಗಾಗಿ ನಾನು ಕತೆ ಹೇಳುವುದಕ್ಕೆ ಹೋದಾಗ ಈ ರೀತಿ ಕತೆ ಬೇಕು, ಆ ರೀತಿ ಇರಬೇಕು ಎನ್ನುವ ಬೇಡಿಕೆ ಇರಲಿಲ್ಲ. ಕತೆ ಇಷ್ಟವಾದರೆ ತಮ್ಮನ್ನು ಸಂಪೂರ್ಣವಾಗಿ ಚಿತ್ರಕ್ಕೆ ತೊಡಗಿಸಿಕೊಳ್ಳುವ ನಟ ಯಶ್‌.

- ಬಹುಭಾಷೆಯ ಸ್ಟಾರ್‌ ಆಗಿರುವ ಯಶ್‌, ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳಬೇಕು, ನಟರಾಗಿ ಅವರಿಗೆ ಎಂಥ ಕತೆ ಸೂಕ್ತ, ಅಭಿಮಾನಿಗಳು ಹಾಗೂ ಪ್ರೇಕ್ಷಕರು ಅವರಿಂದ ಯಾವ ರೀತಿಯ ಕತೆ ಬಯಸುತ್ತಿದ್ದಾರೆ ಎನ್ನುವ ನಿರೀಕ್ಷೆಗಳನ್ನು ತುಂಬುವ ಕತೆ ಮಾಡಿಕೊಳ್ಳುತ್ತಿರುವೆ.

- ಊರಲ್ಲೇ ಇದ್ದುಕೊಂಡು ಚಿತ್ರಕಥೆ ಮಾಡುತ್ತಿದ್ದೇನೆ. ಕೆಜಿಎಫ್‌ ಮುಗಿದ ಮೇಲೆ ಸಿನಿಮಾ ಶುರುವಾಗುವುದರಿಂದ ನನಗೆ ಸಾಕಷ್ಟುಸಮಯ ಇದೆ. ಹೀಗಾಗಿ ಕತೆ ಪಕ್ಕಾ ಮಾಡಿಕೊಳ್ಳುತ್ತಿದ್ದೇನೆ.

click me!