ಉಪೇಂದ್ರ ನನ್ನ ಗುರು.. ರಾಜಕೀಯದ ಆಕರ್ಷಣೆಯಿಂದ ಸಿನಿಮಾಕ್ಕೆ ಬಂದೆ: ರವಿ ಗೌಡ ಹೇಳಿದ್ದೇನು?

Published : Nov 07, 2025, 05:18 PM IST
Ravi Gowda

ಸಾರಾಂಶ

ರವಿ ಗೌಡ ನಟನೆ, ನಿರ್ದೇಶನ, ನಿರ್ಮಾಣದ ರೊಮ್ಯಾಂಟಿಕ್‌ ಥ್ರಿಲ್ಲರ್‌ ಐ ಆ್ಯಮ್‌ ಗಾಡ್‌. ಉಪೇಂದ್ರ ಗರಡಿಯಿಂದ ಬಂದ ರವಿ ಗೌಡ ಐ ಆ್ಯಮ್‌ ಗಾಡ್‌ ಎಂಬ ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥೆಯೊಂದಿಗೆ ಬಂದಿದ್ದಾರೆ. ಅವರೊಂದಿಗೆ ಮಾತುಕತೆ.

ಪ್ರಿಯಾ ಕೆರ್ವಾಶೆ

ಉಪೇಂದ್ರ ಗರಡಿಯಿಂದ ಬಂದ ರವಿ ಗೌಡ 'ಐ ಆ್ಯಮ್‌ ಗಾಡ್‌' ಎಂಬ ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥೆಯೊಂದಿಗೆ ಬಂದಿದ್ದಾರೆ. ಅವರೊಂದಿಗೆ ಮಾತುಕತೆ.

* ರಿಷಬ್ ಅವರಿಂದ ಕನಗರಾಜು ತನಕ ಎಲ್ರೂ ಉಪೇಂದ್ರ ಸಿನಿಮಾದಿಂದ ಸ್ಫೂರ್ತಿ ಪಡೆದವರೇ. ನೀವು ಪಡೆದ ಸ್ಫೂರ್ತಿ ಏನು?
ಉಪ್ಪಿ ಅವರ ಫ್ಯಾನ್ ಬಾಯ್‌ ನಾನು. ನಿರ್ದೇಶನ, ನಟನೆಯ ಕನಸು ಇರಲಿಲ್ಲ. ಉಪ್ಪಿ ಅವರ ಸಿನಿಮಾ ನೋಡುವ, ಅವರನ್ನು ಭೇಟಿ ಮಾಡುವ ಅವಕಾಶಕ್ಕೆ ಕಾಯುತ್ತಿದ್ದೆ. ಯಾರೂ ಮಾಡದೇ ಇರುವ ಪ್ರಯೋಗ, ಯೋಚನೆಯೊಂದನ್ನು ದೃಶ್ಯಕ್ಕಿಳಿಸುವ ರೀತಿ ನನಗಿಷ್ಟ. ಸಿನಿಮಾ ಬಿಡಿ, ಅವರು ಒಂದು ಪದವನ್ನೇ ನಾಲ್ಕೈದು ಥರ ನೋಡ್ತಾರೆ. ಅದನ್ನಿಟ್ಟು ಮನರಂಜನೆ ನೀಡಿ ಫಿಲಾಸಫಿಯನ್ನೂ ಹೇಳುತ್ತಾರೆ. ಅವರ ಇಡೀ ವ್ಯಕ್ತಿತ್ವವೇ ನನ್ನಂಥವರಿಗೆ ಸ್ಫೂರ್ತಿ.

* ಶೀರ್ಷಿಕೆಗೂ ಉಪ್ಪಿ ಅವರೇ ಪ್ರೇರಣೆಯಾ?
ನಮ್ಮ ಸಿನಿಮಾದಲ್ಲಿ ವಿಲನ್‌ ಕೊಲೆ ಮಾಡಿ ಗೋಡೆ ಮೇಲೆ ಬರೆಯೋ ವಾಕ್ಯ ಅದು. ಅದನ್ನು ಟೈಟಲ್‌ ಮಾಡಿದ್ರೆ ಸರಿಹೋಗುತ್ತಾ ಇಲ್ವಾ ಅನ್ನುವ ಗೊಂದಲದಲ್ಲಿದ್ದೆ. ಆದರೆ ಉಪ್ಪಿ ಸರ್‌ಗೆ ಅದು ಕನೆಕ್ಟ್‌ ಆಗುತ್ತೆ ಅಂತ ಗೊತ್ತಾದಾಗ ಬೇರೆ ಆಯ್ಕೆ ಸೈಡಿಗಿಟ್ಟು, ಬಹಳ ಭಾವನಾತ್ಮಕವಾಗಿ ಈ ಟೈಟಲ್‌ ಇಟ್ಟೆ.

* ಇದು ಯಾವ ಜಾನರಾದಲ್ಲಿ ಬರುತ್ತೆ?
ಪ್ಯಾರಲಲ್‌ ಟ್ರಾಕ್‌ನಲ್ಲಿ ಹೋಗುವ ಈ ಸಿನಿಮಾ ಕಥೆ ರೊಮ್ಯಾಂಟಿಕ್‌ ಥ್ರಿಲ್ಲರ್‌ ಜಾನರಾದಲ್ಲಿದೆ. ಆರಂಭದಲ್ಲಿ ಲವ್‌ ಸ್ಟೋರಿ ಅಂತ ಕಥೆ ಬರೀತಿದ್ದೆ. ಬರೀ ಲವ್‌ಸ್ಟೋರಿ ಹೇಳಿದರೆ ಜನ ನೋಡಬಹುದಾ ಅನ್ನೋ ಅನುಮಾನ ಬಂದು ಥ್ರಿಲ್ಲರ್‌ ಸೇರಿಸಿದೆ. ಅದು ಚೆನ್ನಾಗಿ ಬ್ಲೆಂಡ್‌ ಆಯ್ತು.

* ನಟನೆ, ನಿರ್ದೇಶನ, ನಿರ್ಮಾಣ ಈ ಮೂರೂ ಅನಿವಾರ್ಯ ಅಂತ ಮಾಡಿದ್ರಾ ಅಥವಾ ಆಸಕ್ತಿಯಾ?
ಹೌದು. ನನಗೆ ಆಕ್ಟಿಂಗ್‌ ಇಷ್ಟ ಇತ್ತು. ಆದರೆ ‘ಧ್ವಜ’ ಸಿನಿಮಾ ಬಳಿಕ ಮನಸ್ಸಿಗೊಪ್ಪುವ ಸ್ಕ್ರಿಪ್ಟ್‌ ಬರಲಿಲ್ಲ. ನಾನೇ ಕೂತು ಕಥೆ ಬರೆದೆ. ಅದನ್ನು ನಿರ್ದೇಶಕರಿಗೆ ವಿವರಿಸಿದರೂ ಕ್ರಿಯೇಟಿವ್‌ ಡಿಫರೆನ್ಸ್‌ ಬರುತ್ತಿತ್ತು. ಈ ಕಾರಣಕ್ಕೆ ನಾನೇ ನಿರ್ದೇಶನ ಮಾಡಿದೆ. ಹಣ ಹಾಕುವವರು ಸಿಗದ ಕಾರಣ ನಿರ್ಮಾಣಕ್ಕೂ ಮುಂದಾಗಬೇಕಾಯ್ತು.

* ಸಿನಿಮಾದಿಂದ ಜನ ಓಡೋಗೋ ಟೈಮಲ್ಲಿ ನಿಮ್ಮ ಸಿನಿಮಾದ ಹಾರ್ಡ್ ಡಿಸ್ಕೇ ಕಳವಾಗಿತ್ತು. ಕಥೆ ಅಷ್ಟು ಇಂಟರೆಸ್ಟಿಂಗ್‌ ಆಗಿದ್ಯಾ?
ಕಾಫಿ ಡೇ ಹತ್ರ ಕಾರು ನಿಲ್ಲಿಸಿದ್ದಾಗ ಕಳ್ಳರು ಗ್ಲಾಸ್‌ ಒಡೆದು ಕಾರಲ್ಲಿದ್ದದ್ದನ್ನೆಲ್ಲ ದೋಚಿದ್ದಾರೆ. ಕದ್ದವರು ಅಪ್ಪ ಮಗ. ಇಬ್ಬರೂ ಆಂಧ್ರದ ರಾಮ್‌ ಜಿ ನಗರ್‌ದವರು. ಅಲ್ಲಿ ಊರೊಳಗೆ ಬೇರೆಯವರು ಕಾಲಿಟ್ಟರೆ ದೊಡ್ಡ ಗಲಾಟೆ ಆಗುತ್ತದೆ. ಹೀಗಾಗಿ ಪೊಲೀಸರು ರಾತ್ರಿಯಿಡೀ ಕಾದು ಬೆಳಗಿನ ಜಾವ ಆತ ನಾಯಿ ಜೊತೆಗೆ ವಾಕಿಂಗ್‌ಗೆ ಬಂದಾಗ ಸೆರೆ ಹಿಡಿದಿದ್ದಾರೆ. ಕಥೆಗಾಗಿ ಕಳ್ಳರು ಹಾರ್ಡ್‌ ಡಿಸ್ಕ್‌ ದೋಚಿದ್ದರೆ ಅದಕ್ಕಿಂತ ಸಾರ್ಥಕ ಭಾವ ಇನ್ನೇನಿರುತ್ತೆ ಹೇಳಿ..

* ಸಿನಿಮಾ ಹೈಲೈಟ್‌?
ಎಮೋಶನಲ್‌ ಕಥೆ. ಆ ಭಾವನೆಗಳನ್ನೇ ಸಮರ್ಥವಾಗಿ ಪ್ರೇಕ್ಷಕರಿಗೆ ದಾಟಿಸುವ ಪ್ರಯತ್ನ ಮಾಡಿದ್ದೇನೆ.

* ನಿಮ್ಮ ತಂದೆ ರಾಜಕೀಯದಲ್ಲಿದ್ದಾರೆ. ನಿಮಗೆ ಆ ಆಕರ್ಷಣೆ ಇಲ್ಲವೇ?

ಆ ಆಕರ್ಷಣೆಯಿಂದಲೇ ಸಿನಿಮಾಕ್ಕೆ ಬಂದದ್ದು. ಸುಮ್ಮನೆ ಹೋದರೆ ರಾಜಕೀಯದಲ್ಲಿ ಬೆಲೆ ಇರೋದಿಲ್ಲ. ಸಿನಿಮಾದ ಮೂಲಕ ಗುರುತಿಸಿಕೊಂಡು ಹೋದರೆ ನಮ್ಮ ಮಾತಿಗೂ ಮಹತ್ವ ಇರುತ್ತದೆ ಅಂತ. ಆದರೆ ಇಲ್ಲಿ ಬಂದಮೇಲೆ ಇದೇ ನನ್ನ ಜಗತ್ತು ಅನಿಸುತ್ತಿದ್ದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು