ಬಿಡುವಿನ ವೇಳೆ ಅಡುಗೆ ಕಲಿತ ಶಿವರಾಜ್ ಕೆ ಆರ್ ಪೇಟೆ!

By Suvarna NewsFirst Published Jun 23, 2020, 5:31 PM IST
Highlights

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು ಯಶಸ್ವಿಯಾಗುವವರು ಅಪರೂಪ. ಆದರೆ ತನ್ನ ಹಾಸ್ಯದ ಶೈಲಿಯನ್ನು ಕಿರುತೆರೆ, ಬೆಳ್ಳಿತೆರೆ ಭೇದವಿಲ್ಲದೆ ಮೆಚ್ಚುವ ಪ್ರೇಕ್ಷಕರಿದ್ದಾರೆ ಎಂದು ಸಾಬೀತು ಪಡಿಸಿದವರು ಶಿವರಾಜ್ ಕೆ.ಆರ್ ಪೇಟೆ. ನಾಯಕನ ಜತೆಗೆ ಹಾಸ್ಯಕ್ಕೊಬ್ಬ ಸ್ನೇಹಿತ ಎನ್ನುವಂತೆ ಇದ್ದ ಇವರು, `ನಾನು ಮತ್ತು ಗುಂಡ' ಚಿತ್ರದ ಮೂಲಕ ತಾನು ಭಾವನಾತ್ಮಕ ಸನ್ನಿವೇಶಗಳಲ್ಲಿ ಕೂಡ ಚೆನ್ನಾಗಿ ನಟಿಸಬಲ್ಲೆ ಎಂದು ಸಾಬೀತು ಪಡಿಸಿದ್ದಾರೆ. ಲಾಕ್ಡೌನ್ ದಿನಗಳಲ್ಲಿ ತಾವು ರೈತನಾಗಿ ನಡೆಸಿದ ಕೃಷಿ, ಮತ್ತು ಅಡುಗೆ ಕಲಿತ ಖುಷಿಯ  ಬಗ್ಗೆ ಶಿವರಾಜ್ ಕೆ ಆರ್ ಪೇಟೆ ಅವರು ಸುವರ್ಣನ್ಯೂಸ್.ಕಾಮ್ ಜತೆಗೆ ಹಂಚಿಕೊಂಡ ವಿಚಾರಗಳು ಇಲ್ಲಿವೆ.
 

ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು ಯಶಸ್ವಿಯಾಗುವವರು ಅಪರೂಪ. ಆದರೆ ತನ್ನ ಹಾಸ್ಯದ ಶೈಲಿಯನ್ನು ಕಿರುತೆರೆ, ಬೆಳ್ಳಿತೆರೆ ಭೇದವಿಲ್ಲದೆ ಮೆಚ್ಚುವ ಪ್ರೇಕ್ಷಕರಿದ್ದಾರೆ ಎಂದು ಸಾಬೀತು ಪಡಿಸಿದವರು ಶಿವರಾಜ್ ಕೆ.ಆರ್ ಪೇಟೆ. ನಾಯಕನ ಜತೆಗೆ ಹಾಸ್ಯಕ್ಕೊಬ್ಬ ಸ್ನೇಹಿತ ಎನ್ನುವಂತೆ ಇದ್ದ ಇವರು, `ನಾನು ಮತ್ತು ಗುಂಡ' ಚಿತ್ರದ ಮೂಲಕ ತಾನು ಭಾವನಾತ್ಮಕ ಸನ್ನಿವೇಶಗಳಲ್ಲಿ ಕೂಡ ಚೆನ್ನಾಗಿ ನಟಿಸಬಲ್ಲೆ ಎಂದು ಸಾಬೀತು ಪಡಿಸಿದ್ದಾರೆ. ಲಾಕ್ಡೌನ್ ದಿನಗಳಲ್ಲಿ ತಾವು ರೈತನಾಗಿ ನಡೆಸಿದ ಕೃಷಿ, ಮತ್ತು ಅಡುಗೆ ಕಲಿತ ಖುಷಿಯ  ಬಗ್ಗೆ ಶಿವರಾಜ್ ಕೆ ಆರ್ ಪೇಟೆ ಅವರು ಸುವರ್ಣನ್ಯೂಸ್.ಕಾಮ್ ಜತೆಗೆ ಹಂಚಿಕೊಂಡ ವಿಚಾರಗಳು ಇಲ್ಲಿವೆ.

ಶಶಿಕರ ಪಾತೂರು

ಇತ್ತೀಚೆಗಷ್ಟೇ ನಿಮ್ಮ ಮನೆಯಲ್ಲಿ ಒಂದು ಸಿಹಿ ಘಟನೆ ನಡೆಯಿತಂತೆ. ನಿಜವೇ?

ಖಂಡಿತವಾಗಿ ನಿಜ. ಮನೆಗೊಬ್ಬ ಪುಟ್ಟ ಪಾಪು ಬಂದಿದ್ದಾನೆ. ಇದು ನನ್ನ ಎರಡನೇ ಮಗು. ಮೊದಲ ಮಗು ವಂಶಿಕ್ ಗೌಡನಿಗೆ ನಾಲ್ಕು ವರ್ಷ. ನನ್ನ ಮಡದಿಯ ಹೆಸರು ಶ್ರುತಿ. ತಿಂಗಳಿಂದ ಮೈಸೂರಲ್ಲಿ ಮಡದಿ ಮತ್ತು ಮಗು ಜತೆಗೇನೇ ಇದ್ದೆ. ಶೂಟಿಂಗ್ ಶುರುವಾಗುತ್ತೇನೋ ಎಂದು ಬೆಂಗಳೂರಿಗೆ ಬಂದರೆ ನಮ್ಮ ಸಿನಿಮಾ ಬಹುಶಃ ಮುಂದಿನ ತಿಂಗಳಿನಿಂದ ಶುರುವಾಗುವ ಸಾಧ್ಯತೆ ಇರುವುದಾಗಿ ತಿಳಿಯಿತು. ಹಾಗಾಗಿ ಮತ್ತೆ ತವರಲ್ಲಿರುವ ಮಡದಿ ಮತ್ತು ಮಗುವನ್ನು ನೋಡಲು ಹೋಗುತ್ತಿದ್ದೇನೆ. ಒಂದು ರೀತಿಯಲ್ಲಿ ಲಾಕ್ಡೌನ್ ಕಾರಣದಿಂದಾಗಿ ನನಗೆ ನನ್ನ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿದೆ. 

ಹಾಗಾದರೆ ಲಾಕ್ಡೌನ್ ವೈಯಕ್ತಿಕವಾಗಿ ನಿಮಗೆ ಒಳ್ಳೆಯ ದಿನಗಳನ್ನು ನೀಡಿವೆ ಎನ್ನಬಹುದೇ?

ಹೌದು. ಯಾಕೆಂದರೆ ಆರಂಭ ಎರಡು ತಿಂಗಳನ್ನು ನಾನು ನನ್ನ ಅಕ್ಕ ಮತ್ತು ಬಾವನ ಮನೆಯಲ್ಲಿ ಕಳೆದೆ. ನಾನು ಹುಟ್ಟಿ ಬೆಳೆದಿದ್ದೆಲ್ಲ ಹಾಸನ ಜಿಲ್ಲೆಯ ಗೊರೂರಲ್ಲಿ. ನನ್ನ ವಿದ್ಯಾಭ್ಯಾಸ ಎಲ್ಲ ಅಲ್ಲೇ ಆಯಿತು. ನಮ್ಮನೆಯಲ್ಲೇ ಎಮ್ಮೆ ಸಾಕಿದ್ದ ಕಾರಣ ಹುಲ್ಲು ಕೊಯ್ಯೋದು, ಸೆಗಣಿ ಎತ್ತಿಕೊಂಡು ಬಂದು ಬೆರಣಿ ತಟ್ಟುವ ಕೆಲಸವೆಲ್ಲ ಗೊತ್ತಿತ್ತು. ಆದರೆ ನಿಜಕ್ಕೂ ಓರ್ವ ರೈತನಾಗಿ ಹೇಗೆ ಜೀವನ ಇರುತ್ತದೆ ಎನ್ನುವುದನ್ನು ಅಕ್ಕನ ಮನೆಯಲ್ಲಿ ಕಲಿತೆ. ಅದು ಸಾಲಿಗ್ರಾಮದ ಪಕ್ಕ ಮೇಲೂರು ಅಂತ. ಬಾವ ಸುಮಾರು ಹನ್ನೊಂದು ಟನ್  ಕುಂಬಳಕಾಯಿ ಬೆಳೆದಿದ್ದರು. ಅವುಗಳು ಒಬ್ಬರಿಂದ ಒಂದಕ್ಕಿಂತ ಹೆಚ್ಚು ಎತ್ತಲಾಗದಷ್ಟು ದಪ್ಪಕ್ಕಿದ್ದವು. ಮಾರುಕಟ್ಟೆಗೆ ತಲುಪಿಸಲು ವಾಹನಗಳಿರದೆ, ನನ್ನ ಕಣ್ಣೆದುರಲ್ಲೇ ಅವುಗಳ ಮೇಲೆ ಟ್ರ್ಯಾಕ್ಟರ್ ಓಡಿಸಿದರು!  ಅದನ್ನೇ ಗೊಬ್ಬರವಾಗಿಸಿ ಹೊಗೆ ಸೊಪ್ಪು, ತರಕಾರಿ ಬೆಳೆದೆವು. ನಾನು ಹೋದ ಮೇಲೆ ಹೊಗೆ ಸೊಪ್ಪು ಬೀಜ ಹಾಕಿದರು. ನಾನು ಕೂಡ ಅದನ್ನು ನಾಟಿ ಮಾಡುವ, ನೀರು ಹಾಕುವ ಮತ್ತು ಬೆಳೆಸುವ ಕೆಲಸದಲ್ಲಿ ಭಾಗಿಯಾದೆ. ಒಂದಷ್ಟು ಅಡುಗೆ ಮಾಡುವುದನ್ನು ಕೂಡ ಕಲಿತುಕೊಂಡೆ.

ಹಳ್ಳಿಯಲ್ಲಿ ದೇಸೀ ಶೈಲೀಲಿ ರಾಗಿ ಮುದ್ದೆ ಕೇಕ್ ಕತ್ತರಿಸಿದ ಶಿವರಾಜ್ ಕೆ.ಆರ್ ಪೇಟೆ!

ಹೊಸದಾಗಿ ಅಡುಗೆ ಕಲಿತು ಪತ್ನಿಗೆ ಹೊಸ ರುಚಿ ಮಾಡಿಕೊಡುತ್ತೀರ?

ಶೂಟಿಂಗ್ ಶುರುವಾದಾಗ ನಾನು ಬೆಂಗಳೂರಿಗೆ ಬರುತ್ತೀನಲ್ಲ? ಸದ್ಯಕ್ಕೆ ಪತ್ನಿ ಅವಳ ಮನೆಯಲ್ಲಿರುತ್ತಾಳೆ. ಹಾಗಾಗಿ ನಾನು ಊಟಕ್ಕಾಗಿ ಹೋಟೆಲ್ ಮೊರೆ ಹೋಗಲೇ ಬೇಕಾಗುತ್ತದೆ. ಆದರೆ ನನ್ನ ಬ್ಯಾಚುಲರ್ ಲೈಫಲ್ಲಿ ಹೊರಗಡೆ ಊಟಮಾಡಿ ಗ್ಯಾಸ್ಟಿಕ್, ಮೈಗ್ರೇನ್ ಎಲ್ಲ ಬಂದಿತ್ತು. ಈಗ ಹಳ್ಳಿಯಲ್ಲಿದ್ದ ಎರಡು ತಿಂಗಳಿನಿಂದ ಅನಗತ್ಯವಾಗಿ ತೇಗು ಕೂಡ ಬಂದಿಲ್ಲ! ಹಾಗಾಗಿ ಅಲ್ಲಿನ ಆರ್ಗಾನಿಕ್ ಅಡುಗೆ ಕಲಿಯುವ ಮನಸು ಮಾಡಿದೆ. ನಾನೇ ಕಲ್ಲಲ್ಲಿ ರುಬ್ಬಿಕೊಂಡು, ರಾಗಿಕಲ್ಲಲ್ಲಿ ಬೀಸ್ಕೊಂಡು ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿತಿದ್ದೀನಿ. 

click me!