ಉಪೇಂದ್ರ ನಟನೆ, ನಿರ್ದೇಶನ, ಕೆಪಿ ಶ್ರೀಕಾಂತ್ ನಿರ್ಮಾಣದ 'ಯುಐ' ಸಿನಿಮಾ ಫಸ್ಟ್ ಲುಕ್ ಇಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಬಗ್ಗೆ ಅವರ ಮಾತುಗಳು ಇಲ್ಲಿವೆ...
ಪ್ರಿಯಾ ಕೆರ್ವಾಶೆ
ಕನ್ನಡ ಸಿನಿಮಾಗಳು ವಿಶ್ವಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಉಪ್ಪಿ ಸಿನಿಮಾ ಯುಐ ಎಲ್ಲಿ ನಿಲ್ಲುತ್ತೆ?
ಕರ್ನಾಟಕದ ಜನರೇ ವರ್ಲ್ಡ್ ಕ್ಲಾಸ್. ಬಹಳ ಚ್ಯೂಸಿ, ಅಷ್ಟೇ ಬುದ್ಧಿವಂತರು. ಅದಕ್ಕೆ ಇಂಡಸ್ಟ್ರಿಯಲ್ಲಿ ಒಂದು ಮಾತಿದೆ. ಕರ್ನಾಟಕದಲ್ಲಿ ಸಿನಿಮಾ ಗೆದ್ದರೆ ಎಲ್ಲಾ ಕಡೆ ಗೆದ್ದ ಹಾಗೆ ಅಂತ. ನಮ್ಮ ಜನ ಸದಾ ಹೊಸತನದ ಪರ. ನಾವು ‘ಎ’ ಸಿನಿಮಾವನ್ನು ‘ಇದು ಬುದ್ಧಿವಂತರಿಗೆ ಮಾತ್ರ’ ಅನ್ನೋ ಟ್ಯಾಗ್ಲೈನ್ನಲ್ಲಿ ಹೊಸತನದೊಂದಿಗೆ ರಿಲೀಸ್ ಮಾಡಿದಾಗ ಗೆಲ್ಲಿಸಿದರು. ಇನ್ನು ನಮ್ಮ ಈ ಯುಐ ಸಿನಿಮಾ ಎಲ್ಲಿ ನಿಲ್ಲುತ್ತೆ ಅನ್ನೋದನ್ನು ಜನರೇ ನಿರ್ಧರಿಸಬೇಕು.
ಉಪೇಂದ್ರ ನಿರ್ದೇಶನ ಅಂದರೆ ನೆಕ್ಸ್ಟ್ ಲೆವೆಲ್ ಅನ್ನೋ ಮಾತಿದೆ..
ಅದನ್ನು ಜನರೇ ನಿರ್ಧರಿಸಿದ್ದು. ಅವರು ನೆಕ್ಸ್ಟ್ ಲೆವೆಲ್ ಅಂತ ಒಪ್ಪಿಕೊಂಡರೆ ನೆಕ್ಸ್ಟ್ ಲೆವೆಲ್ ಅಷ್ಟೇ. ಅದನ್ನು ಅವರು ಹೇಳಬೇಕು.
ಐಶ್ವರ್ಯ-ಆಯುಷ್; ವಿವಾದದ ಬೆನ್ನಲೆ ಉಪೇಂದ್ರ ಮಕ್ಕಳ ಫೋಟೋ ವೈರಲ್
ದಶಕದ ನಂತರ ಆ್ಯಕ್ಷನ್ ಕಟ್ ಹೇಳಿದ, ಎಡಿಟಿಂಗ್ ಟೇಬಲ್ ಮುಂದೆ ಕೂತ ಅನುಭವ?
ಥ್ರಿಲ್ಲಿಂಗ್. ನಿರ್ದೇಶನ ಅಂದಾಗ ಇಡೀ ಸಿನಿಮಾನೇ ನಾವಾಗಿರ್ತೀವಲ್ಲಾ.. ಆ್ಯಕ್ಟಿಂಗ್ ಅಂದರೆ ಶೂಟಿಂಗ್ ಆದ್ರೆ ಮುಗೀತು. ನಿರ್ದೇಶನ ಹಾಗಲ್ಲ. ಸ್ಟೋರಿ ಐಡಿಯಾದಿಂದ ಹಿಡಿದು ಸಿನಿಮಾ ಕೊನೆ ಮುಟ್ಟಿಸಿ ಪ್ರೇಕ್ಷಕನ ಮುಂದಿಡುವ ತನಕ ಎಲ್ಲದರಲ್ಲೂ ತೊಡಗಿಸಿಕೊಳ್ಳಬೇಕು. ನಾವು ಅದೇ ಜಗತ್ತಲ್ಲಿ ಇರ್ತೀವಿ. ಅದೊಂದು ಬೇರೆ ಬಗೆ ಅನುಭವ. ಎಡಿಟಿಂಗ್ ಮಾಡೋದು ಮಾತ್ರ ಸಖತ್ ಚಾಲೆಂಜಿಂಗ್.
ಯುಐನಲ್ಲಿ ಉಪ್ಪಿ ವರ್ಸ್ ಕ್ರಿಯೇಟ್ ಆಗಿದೆಯಂತೆ. ಟೆಕ್ನಾಲಜಿಯಲ್ಲಿ ಅನೇಕ ಅದ್ಭುತಗಳನ್ನು ಸೃಷ್ಟಿಸಿದ್ದೀರಂತೆ?
ಟೆಕ್ನಾಲಜಿಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದೇವೆ. ವಿಎಫ್ಎಕ್ಸ್ಅನ್ನು ಬಹಳ ಕಡೆ ಬಳಸಿದ್ದೇವೆ. ಡೇ ಆ್ಯಂಡ್ ನೈಟ್ ಶಾಟ್ ವಿನ್ಯಾಸವನ್ನ ಬದಲಿಸಿದ್ದೇವೆ.
ಬುದ್ಧಿವಂತ 2 ರಿಲೀಸ್ ತಡವಾಗಿರೋದಕ್ಕೆ ಕಾರಣ?
ನಾನು ಎರಡೆರಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದೆ. ಆ ಕಾರಣಕ್ಕೆ ಬುದ್ಧಿವಂತ 2 ಸಿನಿಮಾಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಳ್ಳೋದು ಕಷ್ಟ ಅನಿಸಿತು. ಅದಕ್ಕೆ ನಾನೇ ರಿಲೀಸ್ ಡೇಟ್ ಮುಂದಕ್ಕೆ ಹಾಕಲು ಹೇಳಿದೆ.
ಇಷ್ಟು ಗ್ಯಾಪ್ ಬಳಿಕ ನಿರ್ದೇಶನಕ್ಕಿಳಿದಿದ್ದೀರಿ. ಇನ್ನು ಮೇಲಿಂದ ಜನ ಉಪ್ಪಿ ನಿರ್ದೇಶನದ ಸಿನಿಮಾಗಳನ್ನು ನಿರೀಕ್ಷಿಸಬಹುದಾ?
ಸದ್ಯಕ್ಕೀಗ ಯುಐ ರಿಲೀಸ್ ಆಗಲಿ. ಅದೆಲ್ಲ ಆಮೇಲಿನ ಮಾತು.